ಮೂಡುಬಿದಿರೆ: ‘ವ್ಯಕ್ತಿ ಅಸ್ಮಿತೆಯ ಹುಡುಕಾಟದ ಕಥನವನ್ನು ಹಯವದನ ಮಾರ್ಮಿಕವಾಗಿ ಬಿಚ್ಚಿಟ್ಟಿದೆ’ ಎಂದು ಬಂಟ್ವಾಳ ಎಸ್.ವಿ.ಎಸ್. ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಟಿ.ಕೆ. ರವೀಂದ್ರನ್ ಹೇಳಿದರು.
ಅವರು ಆಳ್ವಾಸ್ ಕಾಲೇಜು ಪದವಿ ಇಂಗ್ಲಿಷ್ ವಿಭಾಗವು ಕುವೆಂಪು ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡ ಜ್ಞಾನಪೀಠ ಪುರಸ್ಕೃತ ಡಾ.ಗಿರೀಶ್ ಕಾರ್ನಾಡ್ ಬರೆದ ‘ಹಯವದನ’ ಕುರಿತ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಹಯವನದವು ಅಸ್ಮಿತೆ, ಬೆರಕೆತನ (ಹೈಬ್ರಿಡ್) ಹಾಗೂ ಅಪೂರ್ಣತೆಯ ಸಾರವಾಗಿದೆ. ದೇಹ ಮತ್ತು ಮನಸ್ಸು ವಿಭಿನ್ನವಾಗಿದ್ದಾಗ, ಪೂರ್ಣತೆ ಅಸಾಧ್ಯ ಎಂಬುದನ್ನು ಹೇಳುತ್ತದೆ’ ಎಂದು ವಿವರಿಸಿದರು.
‘ಆನೆ ಮೊಗ, ಬೊಜ್ಜಿನ ಹೊಟ್ಟೆ, ದೊಡ್ಡ ಕಿವಿಯ ಗಣಪತಿ ದೈಹಿಕವಾಗಿ ಪರಿಪೂರ್ಣ ಅಲ್ಲದಿದ್ದರೂ, ನಾವು ಪರಿಪೂರ್ಣತೆಗಾಗಿ ಗಣಪತಿಯನ್ನು ಆರಾಧಿಸುತ್ತೇವೆ. ಇಂತಹ ದ್ವಂದ್ವವನ್ನು ಗಣೇಶನ ಸ್ತುತಿಯಲ್ಲಿ ಭಾಗವತರು ಪ್ರಸ್ತುತ ಪಡಿಸಿರುವುದು ವೈಶಿಷ್ಟ್ಯವಾಗಿದೆ’ ಎಂದು ಉಲ್ಲೇಖಿಸಿದರು.
‘ಇಲ್ಲಿ ಇಬ್ಬರು ಗೆಳೆಯರು ಒಬ್ಬಾಕೆಯನ್ನು ಪ್ರೀತಿಸುವ ತ್ರಿಕೋನ ಕಥನವೂ ಇದೆ. ಮಹಿಳೆಯ ಆಕಾಂಕ್ಷೆಗಳು ಪುರುಷನ ದೇಹ ಮತ್ತು ಮನಸ್ಸಿನ ನಡುವಿನ ದ್ವಂದ್ವಕ್ಕೆ ಎಡೆಯಾಗುತ್ತದೆ. ಆದರೆ, ಮಹಿಳೆ ತನ್ನ ತಾನು ಅರಿತುಕೊಂಡಾಗ ಅಪೂರ್ಣತೆಯೂ ತಿಳಿಯುತ್ತದೆ’ ಎಂದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಮಾತನಾಡಿದರು. ಇಂಗ್ಲಿಷ್ ವಿಭಾಗದ ಮುಖಸ್ಥರಾದ ಮಚ್ಛೇಂದ್ರ ಬಿ., ವಾಣಿಜ್ಯ ವಿಭಾಗದ ಸಂಯೋಜಕರಾದ ಶರ್ಮಿಳಾ ಕುಂದರ್, ಕಾರ್ಯಕ್ರಮದ ಸಂಯೋಜಕರಾದ ಚಂದ್ರಿಕಾ ಕೆ. ಶೆಟ್ಟಿಗಾರ್ ಇದ್ದರು. ವಿದ್ಯಾರ್ಥಿನಿ ಅದ್ವಿತಿ ಹೆಗ್ಡೆ ಸ್ವಾಗತಿಸಿ, ಅಂಕಿತಾ ಪರಾಡ್ಕರ್ ಕಾರ್ಯಕ್ರಮ ನಿರೂಪಿಸಿದರು. ಶ್ರಾವ್ಯ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಪ್ರವೀಕ್ಷಾ ವಂದಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


