ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಗಣೇಶೋತ್ಸವ ಆಚರಣೆಗೆ ಕುಲಪತಿಯವರಿಂದ ವಿರೋಧವಿದೆ ಎಂದು ಕಳೆದ ಕೆಲವು ದಿನಗಳಿಂದ ಮಾಧ್ಯಮದಲ್ಲಿ ವರದಿಯಾಗುತ್ತಿರುವ ವಿಚಾರ ಸತ್ಯಕ್ಕೆ ದೂರವಾದುದು ಹಾಗೂ ವಿಷಾದನೀಯ. ವಿಶ್ವವಿದ್ಯಾನಿಲಯದ ಆವರಣದಲ್ಲಿ ಗಣೇಶೋತ್ಸವ ನಡೆಸಲು ಯಾವುದೇ ನಿರಾಕರಣೆ/ವಿರೋಧ ಇರುವುದಿಲ್ಲ. ಈ ಹಿಂದಿನಂತೆಯೇ ಈ ವರ್ಷವೂ ವಿವಿಯ ಆವರಣದಲ್ಲಿ ಗಣೇಶೋತ್ಸವ ಕಾರ್ಯಕ್ರಮ ನಡೆಯುತ್ತದೆ, ಎಂದು ಕುಲಪತಿಗಳ ಪ್ರಕಟಣೆ ತಿಳಿಸಿದೆ.
ಮಂಗಳೂರು ವಿಶ್ವವಿದ್ಯಾನಿಲಯ ಕೊಣಾಜೆಯ ಮಂಗಳ ಆಡಿಟೋರಿಯಂನಲ್ಲಿ ಪ್ರತಿ ವರ್ಷದಂತೆ ವಿದ್ಯಾರ್ಥಿ ಕ್ಷೇಮಪಾಲನ ವಿಭಾಗದಿಂದ ಆಚರಿಸಿಕೊಂಡು ಬರುತ್ತಿದ್ದ ಗಣೇಶೋತ್ಸವವನ್ನು ಅಲ್ಲಿ ಆಚರಿಸದಂತೆ ಸೂಚಿಸಿ ಕುಲಪತಿಗಳು ಆದೇಶಿಸಿದ್ದರು ಎಂದು ವರದಿಯಾಗಿತ್ತು. ಕುಲಪತಿಗಳ ಆದೇಶಕ್ಕೆ ಮುಖ್ಯಮಂತ್ರಿಗಳ ಕಚೇರಿಯಿಂದ ಬಂದ ಮೌಖಿಕ ಸೂಚನೆಯೇ ಕಾರಣ ಎನ್ನುವ ವದಂತಿಯೂ ಹಬ್ಬಿತ್ತು.
ಈ ಹಿನ್ನೆಲೆಯಲ್ಲಿ, ಮಂಗಳೂರು ದಕ್ಷಿಣದ ಶಾಸಕ ಡಿ. ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ, ಮಾಜಿ ಸಿಂಡಿಕೇಟ್ ಸದಸ್ಯ ರಮೇಶ್ ಕೆ, ಭಾರತೀಯ ಜನತಾ ಪಾರ್ಟಿ ಮುಖಂಡರಾದ ಸಂತೋಷ್ ಬೋಳ್ಯಾರು, ಎಬಿವಿಪಿ ಜಿಲ್ಲಾ ಸಂಚಾಲಕ ಶ್ರೇಯಸ್ ಶೆಟ್ಟಿ, ವಿವಿ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಇಶಿಕ ಮತ್ತು ಉಪಾಧ್ಯಕ್ಷೆ ತ್ರಿವೇಣಿ ಇವರ ನಿಯೋಗವು ಕುಲಪತಿ ಪ್ರೊ ಜಯರಾಜ್ ಅಮೀನ್ ಮತ್ತು ಕುಲಸಚಿವ ಪ್ರೊ. ಕೃಷ್ಣರಾಜು ಚಲನ್ನವರ್ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿ ಮನವಿ ಸಲ್ಲಿಸಿತ್ತು.
ಇದೀಗ ಕುಲಪತಿ ಪ್ರಿ. ಜಯರಾಜ್ ಅಮೀನ್ ಅವರು ಅಧಿಕೃತ ಪ್ರಕಟಣೆ ಹೊರಡಿಸಿ, ವಿಶ್ವವಿದ್ಯಾನಿಲಯದ ಆವರಣದಲ್ಲಿ ಗಣೇಶೋತ್ಸವ ನಡೆಸಲು ಯಾವುದೇ ನಿರಾಕರಣೆ/ವಿರೋಧ ಇರುವುದಿಲ್ಲ. ಈ ಹಿಂದಿನಂತೆಯೇ ಈ ವರ್ಷವೂ ವಿವಿಯ ಆವರಣದಲ್ಲಿ ಗಣೇಶೋತ್ಸವ ಕಾರ್ಯಕ್ರಮ ನಡೆಯುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ