ಇಪ್ಪತ್ತೊಂದನೆಯ ಶತಮಾನದ ಈ ಕಾಲಘಟ್ಟದಲ್ಲಿ ಈ ಭೂಮಿಯಲ್ಲಿ ಜೀವಿಸುವ ಜನಾಂಗ ಪ್ರತಿಯೊಂದು ಕ್ಷೇತ್ರದಲ್ಲೂ ಹೊಸತನವನ್ನು ಅಳವಡಿಸಿಕೊಳ್ಳಲು ತವಕಿಸುತ್ತದೆ ಅಂತೆಯೇ ಮನುಷ್ಯ ಸದಾ ಹೊಸತನಕ್ಕೆ ತನ್ನನ್ನು ಅರ್ಪಿಸಿಕೊಳ್ಳಲು ಯತ್ನಿಸಿರುತ್ತಾನೆ. ಈ ದೇಶದ ಜನರು ಪಾಶ್ಚತ್ಯ ಸಂಸ್ಕೃತಿಯ ಕಡೆಗೆ ಪ್ರಭಾವಿತರಾಗಿರುವವರನ್ನು ಹೆಚ್ಚಾಗಿ ಈಗ ನಾವು ಕಾಣುತ್ತೇವೆ ಇಂತಹ ಸಮಯದಲ್ಲಿ ನಮ್ಮ ನಾಡಿನ ಸಂಸ್ಕೃತಿ, ಕಲೆಯನ್ನು ಆರಾಧಿಸಿ ಪೂಜಿಸಿ ಅದನ್ನು ತನ್ನಲ್ಲಿ ಕರಗತ ಮಾಡಿಕೊಂಡಿರುವ ತೀರ್ಥಹಳ್ಳಿಯ ಕುಮಾರಿ ಅನಘಾ ಆಚಾರ್ಯ ಅಭಿನಂದನಾರ್ಹರು.
ಇತ್ತೀಚೆಗೆ ತೀರ್ಥಹಳ್ಳಿಯ ಶ್ರೀ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಭರತನಾಟ್ಯ ರಂಗ ಪ್ರವೇಶವನ್ನು ಕಿಕ್ಕೇರಿದ ಜನಸ್ತೋಮದ ಎದುರು ಹಾಗೂ ವಿದ್ವತ್ ಜನರ ಮುಂದೆ ಕುಮಾರಿ ಅನಘಾ ಪ್ರದರ್ಶಿಸಿ ಅಪಾರ ಮೆಚ್ಚುಗೆಗೆ ಪಾತ್ರರಾದರು. ಕಳೆದ 18 ವರ್ಷಗಳಿಂದ ಗುರು ಶ್ರೀಲತಾ ಪ್ರೀತಂ ಗಂಧರ್ವ ಇವರಲ್ಲಿ ಭರತನಾಟ್ಯವನ್ನು ಶ್ರದ್ಧೆಯಿಂದ ಅಭ್ಯಾಸ ಮಾಡಿ ವಿದ್ಯುತ್ ಪರೀಕ್ಷೆಯನ್ನು ಉತ್ತಮ ದರ್ಜೆಯಲ್ಲಿ ಪೂರೈಸಿ, ತನಗೆ ನೃತ್ಯ ವಿದ್ಯೆಯನ್ನು ಕಲಿಸಿದ ಗುರುಗಳಿಗೆ ತನ್ನ ಉತ್ತಮ ಮಟ್ಟದ ನೃತ್ಯ ಪ್ರದರ್ಶನದ ಮೂಲಕ ಗುರು ವಂದನೆಯನ್ನು ನೀಡಿದರು.
ಗುರುಗಳ ಮಾರ್ಗದರ್ಶನದಲ್ಲಿ ಕಠಿಣ ಪರಿಶ್ರಮದೊಂದಿಗೆ ನೃತ್ಯವನ್ನು ಕಲಿತ ಅನಘ ಆಚಾರ್ಯ ಅವರ ಅನುಮತಿಯೊಂದಿಗೆ ನಡೆಸಿದ ಈ ರಂಗಪ್ರವೇಶವು ಮುಮ್ಮೇಳ ಹಿಮ್ಮೇಳಗಳ ಹಿತವಾದ ಅನುಸಂಧಾನದೊಂದಿಗೆ ಹಲವು ಕಾಲ ನೋಡುಗರ ಹಾಗೂ ಕಲಾವಿದರ ಮನದಲ್ಲಿ ಉಳಿಯುವ ಕಾರ್ಯಕ್ರಮವಾಗಿ ಪರಿಣಮಿಸಿದ್ದರಲ್ಲಿ ಸಂಶಯವೇ ಇಲ್ಲ. ಒಟ್ಟಿನಲ್ಲಿ ಗುರು ಹಾಗೂ ಶಿಷ್ಯೆ ಕಲೆಯ ಬಗ್ಗೆ ಇರಿಸಿದ ತೀವ್ರ ಆಸಕ್ತಿ ಬದ್ಧತೆ ಹಾಗೂ ಕಠಿಣ ಪರಿಶ್ರಮಗಳು ಎದ್ದು ಕಾಣುವಂತೆ ಮಾಡಿತು. ಒಟ್ಟು 10 ನೃತ್ಯ ಬಂದಗಳಲ್ಲಿ ಎರಡು ವಿಭಾಗಗಳಾಗಿ ಪ್ರದರ್ಶಿಸಿದಳು ಕಲಾವಿದೆ. ಪ್ರಾರಂಭದಲ್ಲಿ ಸಂಪ್ರದಾಯದಂತೆ ವಸಂತರಾಗ ಖಂಡ ಛಾಪು ತಾಳದ ಪುಷ್ಪಾಂಜಲಿಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿದ ಕಲಾವಿದೆ ತನ್ನ ಚುರುಕುತನ ಹಾಗೂ ಮೃದು ಮಂದಹಾಸದೊಂದಿಗೆ ಕಾರ್ಯಕ್ರಮಕ್ಕೆ ಉತ್ತಮ ನಾಂದಿಯನ್ನು ನೀಡಿದಳು.
ಮುಂದಕ್ಕೆ ಪ್ರದರ್ಶಿಸಿದ ಅಲಾರಿಪುವಿನಲ್ಲಿ ನೃತ್ತಕ್ಕೆ ಬೇಕಾದಂತಹ ಅಂಗ ಶುದ್ದಿಯೊಂದಿಗೆ ತನ್ನ ದೇಹವನ್ನು ಹೂವಿನಂತೆ ಅರಳಿಸುತ್ತಾ ದೇವತೆಗಳಿಗೆ ಗುರುಗಳಿಗೆ ಸಭೀಕರಿಗೆ ವಂದಿಸಿ ಸಭಿಕರ ಮನಸ್ಸನ್ನು ತನ್ನ ಕಡೆ ಕೇಂದ್ರೀಕರಿಸುವಲ್ಲಿ ಕಲಾವಿದೆ ಸಫಲತೆಯನ್ನು ಸಾಧಿಸಿದಳು. ಮುಂದಕ್ಕೆ ಕಲಾವಿದೆ ಆರಿಸಿಕೊಂಡದ್ದು ಅಠಾಣ ರಾಗದ ಆದಿತಾಳದ ಜಯ ಚಾಮರಾಜೇಂದ್ರ ಒಡೆಯರ ಗಣೇಶ ಸ್ತುತಿ ಹಾಗೂ ಮುತ್ತು ಸ್ವಾಮಿ ದೀಕ್ಷಿತರ ಸಾಮರಾಗ ಆದಿತಾಳದ 'ಅನ್ನಪೂರ್ಣೆ ವಿಶಾಲಾಕ್ಷಿ 'ಎಂಬ ದೇವಿ ಸ್ತುತಿ, ಇಲ್ಲಿ ಎರಡು ಸ್ತುತಿಗಳನ್ನು ಪ್ರದರ್ಶಿಸಿ ಏಕತಾನತೆಯನ್ನು ಬಿಂಬಿಸುವ ಬದಲು ಒಂದು ನೃತ್ಯಬಂದವಾಗಿ' ಶಬ್ದಂ' ನೃತ್ಯಬಂಧವನ್ನು ಆರಿಸಿಕೊಂಡಿದ್ದರೆ ಉತ್ತಮವಾಗಿರುತ್ತಿತ್ತು. ಆದರೂ 'ಅನ್ನಪೂರ್ಣೇ ವಿಶಾಲಾಕ್ಷಿ' ನೃತ್ಯದಲ್ಲಿ ಕಲಾವಿದೆಯ ಭಾವ ಪೂರ್ಣ ಅಭಿನಯ ಮೆಚ್ಚಬೇಕಾದದು.
ಹಿಮ್ಮೇಳದಲ್ಲಿ ಹಾಡುಗಾರಿಕೆಯಲ್ಲಿ ಸಹಕರಿಸಿದ ವಿದುಷಿ ಡಾಕ್ಟರ್ ಪ್ರಿಯಶ್ರೀ ರಾವ್ ಬೆಂಗಳೂರು ಇವರು ಕಲಾವಿದೆಯ ಅಭಿನಯಕ್ಕೆ ಪುಷ್ಟಿಕೊಡುವಂತೆ ಭಾವಪೂರ್ಣವಾಗಿ ಹಾಡಿ ಅನ್ನಪೂರ್ಣೇಶ್ವರಿ ದೇವಿ ಅಲ್ಲಿ ಸಾಕ್ಷಾತ್ಕರಿಸುವಂತಹ ದೃಶ್ಯ ಅಮೋಘವಾಗಿ ಮೂಡಿ ಬಂತು. ಮುಂದೆ ಕಲಾವಿದೆಯೂ ರಂಗಪ್ರವೇಶದ ಪ್ರಧಾನ ನೃತ್ಯ ಭಾಗವಾದ ಪದವರ್ಣ ಕಲಾವಿದೆ ಆರಿಸಿಕೊಂಡದ್ದು ಜಿ ಗುರುಮೂರ್ತಿ ಬೆಂಗಳೂರು ಇವರು ರಚಿಸಿರುವ ರಾಗ ಮಾಲಿಕೆ ಅದಿತಾಳದ 'ನೀಲ ಮೇಘ ಶಾಮ ಸುಂದರನ'. ನೃತ್ಯಕಲಾವಿದೆಯ ಸತ್ವವನ್ನು ಪರೀಕ್ಷಿಸುವ ಪದವರ್ಣಂ ಪ್ರಭುದ್ಧವಾಗಿ ಪ್ರದರ್ಶಿಸಲ್ಪಟ್ಟಿತು. ಪ್ರಮಾಣ ಬದ್ಧವಾದ ಹಸ್ತಕ್ಷೇತ್ರ ಪ್ರೌಢಿಮೆಯಿಂದ ಕೂಡಿದ ಸಂಚಾರಿ ಭಾವಗಳೊಂದಿಗೆ ಅಭಿನಯಿಸಿ ವಿದ್ವಾಂಸರ ಮೆಚ್ಚುಗೆಗೆ ಪಾತ್ರಳಾದಳು.
ಒಟ್ಟಿನಲ್ಲಿ ಅತ್ಯಂತ ಪ್ರಬುದ್ಧವಾಗಿ ಮೂಡಿಬಂದ ಈ ಪದವರ್ಣದಲ್ಲಿ ನೃತ್ತ ಭಾಗಕ್ಕೆ ಹೆಚ್ಚು ಗಮನವನ್ನು ಕೊಟ್ಟಿದ್ರೆ ಇನ್ನೂ ಉತ್ತಮವಾಗಿರುತ್ತಿತ್ತು. ಸಭಾ ಕಾರ್ಯಕ್ರಮದ ನಂತರದ ಉತ್ತರ ಭಾಗವು ಹೆಚ್ಚಾಗಿ ಅಭಿನಯಗಳಿಗೆ ಸೀಮಿತವಾಗಿತ್ತು ಅಭಿನಯದಲ್ಲಿ ಕಲಾವಿದೆಗೆ ಹಿಡಿತ ಇರುವ ಕಾರಣ ಗುರುಗಳು ಈ ರೀತಿ ಅಳವಡಿಸಿರಬಹುದು. ಖಂಡಿತಾ ನಾಯಿಕಾ ಭಾವದ ಜಾವಳಿ 'ಸಾಕೋ ನಿನ್ನ ಸ್ನೇಹ' ಈ ನೃತ್ಯದಲ್ಲಿ ಕಲಾವಿದೆ ಅರ್ಥಗರ್ಭಿತವಾಗಿ ನಾಯಕನ ಮೇಲಿರುವ ಬೇಸರ ಕೋಪವನ್ನು ತೋರಿಸುತ್ತಾ ತುಂಬು ಪ್ರೌಢಿಮೆಯೊಂದಿಗೆ ತನ್ನ ಅಸಮಾಧಾನವನ್ನು ತೋರಿಸಿ ಸಾಹಿತ್ಯಕ್ಕೆ ನ್ಯಾಯ ಒದಗಿಸಿಕೊಡುವಲ್ಲಿ ಸಫಲಳಾದಳು. ಮುಂದಕ್ಕೆ ಬಾಲಕೃಷ್ಣನಾಗಿ 'ಆಡಹೋದಲ್ಲೇ ಮಕ್ಕಳು ಆಡಿಕೊಂಬರು ನೋಡಮ್ಮ' ದೇವರ ನಾಮದಲ್ಲಿ ಪುಟ್ಟ ಕೃಷ್ಣನ ತುಂಟಾಟ ಮುಗ್ಧತೆಯನ್ನು ಸುಂದರವಾಗಿ ಅಭಿನಯಿಸಿದಳು.
ಅಂತೆಯೇ ತುಳಸಿದಾಸರ ಭಜನ್ 'ಟುಮತ್ ಚಲತ್ ರಾಮಚಂದ್ರ' ಎಂಬ ಕೃತಿಯಲ್ಲಿ ಕೌಸಲ್ಯೆಯಾಗಿ ಶ್ರೀರಾಮನು ಪುಟ್ಟ ಪುಟ್ಟ ಹೆಜ್ಜೆಯನ್ನು ಇಡುವುದನ್ನು ಕಂಡು, ತಾಯಿತನದ ಅಭಿನಯವನ್ನು ಅಷ್ಟೇ ಸೊಗಸಾಗಿ ನಿರ್ವಹಿಸಿದಳು. ಕೊನೆಯಲ್ಲಿ ಡಾ. ಎಂ ಬಾಲಮುರಳಿ ಕೃಷ್ಣ ಇವರ ಕದನ ಕುತೂಹಲ ರಾಗದ ತಿಲ್ಲಾನಕ್ಕೆ ಚುರುಕುಗತಿಯ ತೀವ್ರ ಗತಿಯ ಹೆಜ್ಜೆಗಾರಿಕೆಯೊಂದಿಗೆ, ಲೆಕ್ಕಾಚಾರದೊಂದಿಗೆ ತನ್ನ ರಂಗ ಪ್ರವೇಶಕ್ಕೆ ಸುಂದರ ಮುಕ್ತಾಯವನ್ನು ಕೊಟ್ಟಳು. ಒಟ್ಟಿನಲ್ಲಿ ನೃತ್ಯ ಕ್ಷೇತ್ರದ ಅತ್ಯಂತ ಭರವಸೆಯ ಕಲಾವಿದೆಯಾಗುವುದರಲ್ಲಿ ಕುಮಾರಿ ಅನಘಾ ಆಚಾರ್ಯ ಇವಳು ದೃಢವಾದ ಹೆಜ್ಜೆಯನ್ನು ಇಟ್ಟು ಮುಂದೆ ಸಾಗುವಲ್ಲಿ ದೇವರ ಅನುಗ್ರಹವಿರಲಿ ಎಂದು ಆಶಿಸೋಣ.
ರಂಗಪ್ರವೇಶ ಕಾರ್ಯಕ್ರಮದಲ್ಲಿ ಉತ್ತಮ ನಟವಾಗ ಹಾಗೂ ನೃತ್ಯ ನಿರ್ದೇಶನದೊಂದಿಗೆ ಗುರುಗಳಾದ ಶ್ರೀಲತಾ ಪ್ರೀತಂ ಗಂಧರ್ವ ಇವರು ತನ್ನ ಶಿಷ್ಯೆಯ ಪ್ರೌಢಿಮೆಯನ್ನು ಕಂಡು ಸಂತಸಪಟ್ಟರು. ಅಂತೆಯೇ ಹಾಡುಗಾರಿಕೆಯಲ್ಲಿ ಡಾ. ಪ್ರಿಯ ಶ್ರೀರಾಮ್ ಬೆಂಗಳೂರು, ಮೃದಂಗಂನಲ್ಲಿ ವಿದ್ವಾನ್ ಬಾಲಚಂದ್ರ ಭಾಗವತ ಉಡುಪಿ ವಾಯಲಿನ್ ವಾದನದಲ್ಲಿ ಶ್ರೀ ಗಣರಾಜ್ ಕಾರ್ಲೆ ಕಾಸರಗೋಡು ಕೊಳಲಿನಲ್ಲಿ ವಿದ್ವಾನ್ ದೀಪಕ್ ಹೆಬ್ಬಾರ್ ಬೆಂಗಳೂರು ಇವರೆಲ್ಲರೂ ಉತ್ತಮ ರೀತಿಯಲ್ಲಿ ತಮ್ಮ ತಮ್ಮ ಕರ್ತವ್ಯ ನಿರ್ವಹಿಸಿ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರುಗನ್ನು ಕೊಟ್ಟರು.
ತನ್ನ ಮಗಳ ರಂಗಪ್ರವೇಶ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ ತೀರ್ಥಹಳ್ಳಿಯ ಸ್ವರ್ಣ ಉದ್ಯಮಿಗಳಾದ ಶ್ರೀಮತಿ ಮೋಹಿನಿ ಎ ಆಚಾರ್ಯ ಮತ್ತು ಶ್ರೀ ಅನಂತ ಪದ್ಮನಾಭ ಆಚಾರ್ಯ ದಂಪತಿಗಳು ಅಭಿನಂದನಾರ್ಹರು. ಮಕ್ಕಳು ಯಾವತ್ತೂ ಯಶಸ್ಸಿನ ಬಗ್ಗೆ ಯೋಚಿಸುವವರಾಗಿರಬೇಕು ಪೋಷಕರು ಅವರಿಗೆ ಸದಾ ಪ್ರೋತ್ಸಾಹ ನೀಡುತ್ತಿರಬೇಕು ಯಶಸ್ಸು ಮತ್ತು ಪ್ರೋತ್ಸಾಹಗಳ ಸಮ್ಮಿಳಿತದಿಂದ ಮಕ್ಕಳು ಶ್ರಮಪಟ್ಟಲ್ಲಿ ಯಾವುದೇ ಕಠಿಣತೆಯನ್ನು ಸಾಧಿಸಬಹುದು ಎಂಬುದಕ್ಕೆ ಕುಮಾರಿ ಅನಘಾ ಆಚಾರ್ಯ ನಿದರ್ಶನ.
- ಗುರು ವಿದುಷಿ ಪ್ರತಿಮಾ ಶ್ರೀಧರ್
ಭರತಾಂಜಲಿ
ಕೊಟ್ಟಾರ, ಮಂಗಳೂರು.
9844438436, 9844401834
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ