ಮುಂಬಯಿಯಲ್ಲಿ ತುಳುನಾಡ ಸಂಸ್ಕೃತಿಯನ್ನು ಬಿತ್ತರಿಸುವಲ್ಲಿ ಅಜೆಕಾರು ಬಾಲಕೃಷ್ಣ ಶೆಟ್ಟಿವರ ಪಾತ್ರ ಮಹತ್ತರ: ಮಹೇಶ್ ಎಸ್. ಶೆಟ್ಟಿ
ಮುಂಬಯಿ: ಕಳೆದ 22 ವರ್ಷಗಳಿಂದ ಅಜೆಕಾರು ಬಾಲಕೃಷ್ಣ ಶೆಟ್ಟಿಯವರು ತಮ್ಮ ಮುಂದಾಳತ್ವದ ಅಜೆಕಾರು ಕಲಾಭಿ ಮಾನಿ ಬಳಗದ ಆಶ್ರಯದಲ್ಲಿ ತವರೂರ ಅದೆಷ್ಟೋ ಕಲಾವಿದರನ್ನು ಈ ಮುಂಬಯಿ ಮಾಹಾನಗರಕ್ಕೆ ಆಹ್ವಾನಿಸಿ, ಯಕ್ಷಗಾನ ಮತ್ತು ತಾಳ ಮದ್ದಳೆಯನ್ನು ಪ್ರದರ್ಶಿಸುತ್ತಾ ಬಂದವರಿದ್ದಾರೆ. ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯುವ ಸುಮಾರು ಒಂದು ಸಾವಿರಕ್ಕೂ ಅಧಿಕ ಮಕ್ಕಳಿಗೆ ಯಕ್ಷಗಾನವನ್ನು ಕಲಿಸಿದ ಹಿರಿಮೆ ಇವರೊಂದಿಗಿದೆ.ಕೇವಲ ಮಕ್ಕಳಿಗೆ ಮಾತ್ರವಲ್ಲ ನನ್ನನ್ನು ಸೇರಿಸಿ ಬಂಟರ ಸಂಘದ ಅನೇಕ ಪದಾಧಿಕಾರಿಗಳಿಗೆ ಯಕ್ಷಗಾನವನ್ನು ಕಲಿಸಿ, ಕಾಲಿಗೆ ಗೆಜ್ಜೆ ಕಟ್ಟಿ ಕುಣಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದ್ದಾರೆ. ತುಳುನಾಡಿನ ಆಚಾರ, ವಿಚಾರ ಸಂಸ್ಕೃತಿಯನ್ನು ಯಕ್ಷಗಾನದ ಮೂಲಕ ಈ ಮುಂಬಯಿ ಮಹಾನಗರದಲ್ಲಿ ಬಿತ್ತರಿಸುವಲ್ಲಿ ಅಜೆಕಾರು ಬಾಲಕೃಷ್ಣ ಶೆಟ್ಟಿಯವರ ಯೋಗದಾನ, ಪಾತ್ರ ಮಹತ್ತರವಾಗಿದೆ ಎಂದು ಬಾಬಾಸ್ ಗ್ರೂಫ್ ಆಫ್ ಕಂಪನೀಸ್ ನ ಆಡಳಿತ ನಿರ್ದೇಶಕ ಮಹೇಶ್ ಎಸ್. ಶೆಟ್ಟಿಯವರು ಅಭಿಮಾನದ ನುಡಿಗಳನ್ನಾಡಿದರು.
ಅವರು ಸೆ.10ರ ಭಾನುವಾರ ರಾತ್ರಿ ಕುರ್ಲಾ ಬಂಟರ ಸಂಘದ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಮಧ್ಯಾಹ್ನದಿಂದ ರಾತ್ರಿಯವರೆಗೆ ಯಕ್ಷಗಾನ, ಯಕ್ಷರಕ್ಷಾ ಪ್ರಶಸ್ತಿ ಪ್ರದಾನ, "ಅರುವ ಗ್ರಂಥ" ಬಿಡುಗಡೆ ಇತ್ಯಾದಿ ಕಾರ್ಯಕ್ರಮದೊಂದಿಗೆ ಜರಗಿದ ಅಜೆಕಾರು ಕಲಾಭಿಮಾನಿ ಬಳಗದ 22 ನೇ ವಾರ್ಷಿಕೋತ್ಸವದ ಸಮಾರೋಪ ಸಮಾರಂಭದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಮಾತನಾಡುತ್ತಿದ್ದರು.
ಶಿಕ್ಷಣ ಮತ್ತು ಇನ್ನಿತರ ಸಮಾಜ ಪರ ಸೇವಾ ಕಾರ್ಯಗಳ ಜೊತೆಗೆ ಬಂಟರ ಸಂಘುವು ಯಕ್ಷಗಾನ ಕಲೆಗೂ ಹೆಚ್ಚಿನ ಪ್ರೋತ್ಸಾಹ ವನ್ನು ನೀಡುತ್ತಾ ಬಂದಿದೆ. ಬಂಟರ ಸಂಘದ ಆಶ್ರಯದಲ್ಲಿ ಕಾರ್ಯರೂಪದಲ್ಲಿರುವ ವಿಷ್ಣು ಕಲಾ ಬಂಟ ವೇದಿಕೆಯ ಮುಖಾಂತರ ಪ್ರತೀವರ್ಷ ಯಕ್ಷಗಾನವು ಜರಗುತ್ತಿದೆ. ಎರಡು ದೇವಿ ಮಹಾತ್ಮೆ ಪ್ರಸಂಗವನ್ನು ಪ್ರದರ್ಶಿಸುವಷ್ಟು ವೇಷ ಭೂಷಣಗಳು ಈ ಸಂಸ್ಥೆಯ ಆಶ್ರಯದಲ್ಲಿವೆ ಎನ್ನಲು ಹೆಮ್ಮೆ ಎನಿಸುತ್ತಿದೆ ಎಂದು ಈ ಸಂದರ್ಭದಲ್ಲಿ ಮಹೇಶ್ ಎಸ್. ಶೆಟ್ಟಿಯವರು ನುಡಿಯುತ್ತಾ, ಯಕ್ಷಗಾನ ಕಲೆಗೆ ನಮ್ಮಿಂದಾದ ಸಹಾಯ ಸಹಕಾರ ನಿರಂತರವಿದೆ ಎಂದರು.
ಅತಿಥಿ ಸ್ಥಾನದಲ್ಲಿ ಉಪಸ್ಥಿತರಿದ್ದವರಲ್ಲಿ ಬಂಟರವಾಣಿಯ ಕಾರ್ಯಾಧ್ಯಕ್ಷ ರವೀಂದ್ರನಾಥ್ ಎಂ. ಭಂಡಾರಿಯವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುತ್ತಾ, ಅಜೆಕಾರು ಬಾಲಕೃಷ್ಣ ಶೆಟ್ಟಿಯವರು ಕಳೆದ 22 ವರ್ಷಗಳಿಂದ ತವರೂರ ನಾಮಾಂಕಿತ ಕಲಾವಿದರನ್ನು ನಗರಕ್ಕೆ ಬರಮಾಡಿಸಿ, ಮುಂಬಯಿ ಕನ್ನಡಿಗರಲ್ಲಿ ಯಕ್ಷಗಾನದ ಅಭಿರುಚಿಯನ್ನು ಮೂಡಿಸಿದ್ದಾರೆ. ಮಹಿಳೆಯರಲ್ಲೂ ಯಕ್ಷಗಾನದ ಬಗ್ಗೆ ಆಸಕ್ತಿ ಹುಟ್ಟಿಸಿದ್ದಾರೆ. ಇಂಗ್ಲೀಷ್ ಮಾಧ್ಯಮದ ಮಕ್ಕಳು ಯಕ್ಷಗಾನದ ತಾಳಕ್ಕೆ ಕುಣಿಯುವಂತೆ ಮಾಡಿದ್ದಾರೆ. ಇಂದು ವಾರ್ಷಿಕೋತ್ಸವದ ಸಂದರ್ಭದಲ್ಲಿ ಅವರ ಸಂಸ್ಥೆಯಲ್ಲಿ ದುಡಿದು ಇಹಲೋಕವನ್ನು ತ್ಯಜಿಸಿದ ದಿನೇಶ್ ಶೆಟ್ಟಿಯವರ ಪರಿವಾರಕ್ಕೆ ಅವರ ಸ್ಮರಣಾರ್ಥ ನಿಧಿಯನ್ನು ಅರ್ಪಿಸಿದ್ದಾರೆ. ಅವರ ಈ ಎಲ್ಲಾ ಕಾರ್ಯವೂ ಶ್ಲಾಘನೀಯ ಎಂದರು.
ಬೊಂಬೇ ಬಂಟ್ಸ್ ಅಸೋಸಿಯೇಶನ್ ಇದರ ಅಧ್ಯಕ್ಷ ಸಿಎ.ಸುರೇಂದ್ರ ಶೆಟ್ಟಿಯವರು ತಮ್ಮ ಅಭಿಮತವನ್ನು ವ್ಯಕ್ತಪಡಿಸುತ್ತಾ, ಯಕ್ಷಗಾನ ಅಂದರೆ ಅದು ಆರಾಧನಾ ಕಲೆ, ಸತ್ಯ, ಧರ್ಮ, ನೀತಿ, ಬೋಧನೆಯನ್ನು ಸಾರುವ ಒಂದು ಶ್ರೇಷ್ಠ ಕಲೆ. ಅಂತಹ ಕಲೆಯನ್ನು ಉಳಿಸಿ, ಬೆಳೆಸುವಲ್ಲಿ ಹಾಗೆ ಯುವ ಜನಾಂಗಕ್ಕೆ ಈ ಕಲೆಯ ತಿರುಳನ್ನು ತಿಳಿ ಹೇಳಿ ಆದರ್ಶ ಜೀವನದ ಹಾದಿಯನ್ನು ತೋರಿಸಿದ ಶ್ರೇಯಸ್ಸು ಅಜೆಕಾರು ಬಾಲಕೃಷ್ಣ ಶೆಟ್ಟಿಯವರಿಗೆ ಸಲ್ಲುವಂತಿದೆ ಎಂದರು.
ಮಾತೃಭೂಮಿ ಕೋ. ಆಪರೇಟಿವ್ ಕ್ರೆಡಿಟ್ ಸೊಸೈಟಿ ಇದರ ಕಾರ್ಯದರ್ಶಿ ಪ್ರವೀಣ್ ಭೋಜ ಶೆಟ್ಟಿಯವರು ಮಾತನಾಡುತ್ತಾ, ಯಕ್ಷಗಾನದಲ್ಲಿ ಎಲ್ಲಾ ಕಲೆಯು ಆಡಕವಾಗಿದೆ. ನವರಸ ಭರಿತ ಶ್ರೇಷ್ಠ ಕಲೆಯೊಂದಿದ್ದರೆ ಅದು ಯಕ್ಷಗಾನ ಎಂದು ಅಭಿಮಾನದೊಂದಿಗೆ ಹೇಳ ಬಹುದು. ಇಂತಹ ಕಲೆಯನ್ನು ಅಜೆಕಾರು ಕಲಾಭಿಮಾನಿ ಬಳದ ಮೂಲಕ ಏಕ ವ್ಯಕ್ತಿಯಾಗಿ ಕಳೆದ 22 ವರ್ಷಗಳಿಂದ ಈ ಮಹಾನಗರದಲ್ಲಿ ಉಳಿಸಿ, ಬೆಳೆಸಿದ ಕೀರ್ತಿ ಅಜೆಕಾರು ಬಾಲಕೃಷ್ಣ ಶೆಟ್ಟಿಯವರಿಗೆ ಸಲ್ಲುವಂತಿದೆ ಎಂದರು.
ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿಯವರು ಮಾತನಾಡುತ್ತಾ, ಅಜೆಕಾರು ಬಾಲಕೃಷ್ಣ ಶೆಟ್ಟಿಯವರು ಯಕ್ಷಗಾನ ಸೇವೆಯ ಮೂಲಕ ಬಹಳ ಉತ್ತಮ ಕೆಲಸವನ್ನು ಮಾಡುತ್ತಾ ಎಲ್ಲರ ಪ್ರೀತಿ, ವಿಶ್ವಾಸ, ಅಭಿಮಾನಕ್ಕೆ ಪಾತ್ರರಾಗಿದ್ದಾರೆ. ಅವರ ಈ ಕಾರ್ಯ ನಿರಂತರ ನಡೆಯುತ್ತಿರಲಿ. ಸಂಸ್ಥೆಯು ಬೆಳ್ಳಿ ಹಬ್ಬ, ಸುವರ್ಣ ಸಂಭ್ರಮದೊಂದಿಗೆ ವಿಜೃಂಭಿಸುತ್ತಿರಲಿ ಎಂದರು.
ಈ ಸಂದರ್ಭದಲ್ಲಿ ಕಲಾ ಗೌರವ ಯಕ್ಷರಕ್ಷಾ ಪ್ರಶಸ್ತಿಯನ್ನು ಬಂಟರ ಸಂಘ ಮುಂಬಯಿ ಇದರ ಮಾಜಿ ಗೌ.ಪ್ರ.ಕಾರ್ಯದರ್ಶಿ ಸಿಎ. ಸದಾಶಿವ ಶೆಟ್ಟಿಯವರಿಗೆ, 50 ಸಾವಿರ ನಗದು ಬಹುಮಾನದೊಂದಿಗಿನ ಈ ಬಾರಿಯ ಯಕ್ಷರಕ್ಷ -2023" ಪ್ರಶಸ್ತಿಯನ್ನು ಪತ್ನಿ ದೇವಿಕಾ ಶೆಟ್ಟಿ ಮತ್ತು ಪುತ್ರ ಪ್ರಿಯ ದರ್ಶನ್ ನೊಂದಿಗೆ ಪ್ರಸಿದ್ಧ ಯಕ್ಷಗಾನ ಕಲಾವಿದ ಶಶಿಕಾಂತ್ ಶೆಟ್ಟಿಯವರಿಗೆ ನೀಡಿ ಅಭಿನಂದಿಸಲಾಯಿತು.
ಹದಿನೈದು ಸಾವಿರ ರೂ ನಗದು ಬಹುಮಾನದಿಂದ ಕೂಡಿದ ಮಾತೆ ಶ್ರೀಮತಿ ಸಂಪಾ ಎಸ್. ಶೆಟ್ಟಿ ಸ್ಮರಣಾರ್ಥ ನೀಡಲಾಗುವ ಮಾತೃಶ್ರೀ ಯಕ್ಷರಕ್ಷಾ ಪ್ರಶಸ್ತಿಯನ್ನು ಕಲಾ ಜಗತ್ತು ಮುಂಬಯಿ ಇದರ ರೂವಾರಿ ತೋನ್ಸೆ ವಿಜಯ ಕುಮಾರ್ ಶೆಟ್ಟಿಯವರಿಗೆ ಪ್ರದಾನಿಸಲಾಯಿತು . ಹಾಗೇ ತಲಾ ಹತ್ತು ಸಾವಿರ ನಗದು ಬಹುಮಾನದಿಂದ ಕೂಡಿದ ಸಾಧಕ ಯಕ್ಷರಕ್ಷ ಪ್ರಶಸ್ತಿಯನ್ನು ನಗರದ ಪ್ರಸಿದ್ದ ಯಕ್ಷಗಾನ ಕಲಾವಿದ ವಾಸುದೇವ ಶೆಟ್ಟಿ ಮಾರ್ನಾಡ್, ನಾಮಾಂಕಿತ ಭಾಗವತ ಮುದ್ದು ಅಂಚನ್, ನಾಮಾಂಕಿತ ಭರತ ನಾಟ್ಯ ಗುರು ಡಾ.ಮೀನಾಕ್ಷಿ ಶ್ರೀಯಾನ್, ಕರ್ನಾಟಕ ಮಲ್ಲದ ಉಪಸಂಪಾದಕ ವಿಶ್ವನಾಥ್ ಅಮೀನ್ ನಿಡ್ಡೋಡಿ, ನುರಿತ ಚೆಂಡೆ ವಾದಕ ಪ್ರವೀಣ್ ಶೆಟ್ಟಿ ಎಕ್ಕಾರು ಇವರಿಗೆ ನೀಡಿ ಪುರಸ್ಕರಿಸಲಾಯಿತು. ಈ ಎಲ್ಲಾ ಪುರಸ್ಕಾರವನ್ನು ಅತಿಥಿ ಗಣ್ಯರು ಪೇಟ ತೋಡಿಸಿ, ಶಾಲು ಹೊದಿಸಿ, ಫಲಪುಷ್ಪ, ನೆನಪಿನ ಕಾಣಿಕೆ ಯೊಂದಿಗೆ ಸನ್ಮಾನ ಪತ್ರವನ್ನು ಪ್ರದಾನಿಸಿ ಪ್ರಶಸ್ತಿ ಪುರಸ್ಕಾರದೊಂದಿಗೆ ನೀಡಿ ಎಲ್ಲರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ವಿಶೇಷವಾಗಿ ಅಜೆಕಾರು ಕಲಾಭಿಮಾನಿ ಬಳಗದ ಸದಸ್ಯನಾಗಿ, ಅಜೆಕಾರು ಬಾಲಕೃಷ್ಣ ಶೆಟ್ಟಿಯವರ ಜೊತೆಯಲ್ಲಿ ಎಲ್ಲಾ ರೀತಿಯ ಕಲಾ ಸೇವೆಯಲ್ಲಿ ಸಹಾಯಕನಾಗಿ ಕಾರ್ಯನಿರ್ವಹಿಸಿ, ಕಳೆದ ವರ್ಷ ಇಹಲೋಕವನ್ನು ತ್ಯಜಿಸಿದ ದಿನೇಶ್ ಶೆಟ್ಟಿಯವರ ಸ್ಮರಣಾರ್ಥ ಅವರ ಇರ್ವರು ಹೆಣ್ಣು ಮಕ್ಕಳಾದ ಶೃತಿ ಮತ್ತು ಸ್ವಾತಿ ಇವರ ಜೊತೆಯಲ್ಲಿ ಪತ್ನಿ ಹೇಮಲತಾ ದಿನೇಶ್ ಶೆಟ್ಟಿಯವರಿಗೆ ಐವತ್ತು ಸಾವಿರ ನಿಧಿಯೊಂದಿಗಿನ ಮರೋಣೊತ್ತರ ಪ್ರಶಸ್ತಿಯನ್ನು ನೀಡಿ ನಮನವನ್ನು ಸಲ್ಲಿಸಲಾಯಿತು.
ಇದೇ ವೇಳೆ ರಂಗಸ್ಥಳದ ರಾಜ ಹಿರಿಯ ಯಕ್ಷಗಾನ ಕಲಾವಿದ ಅರುವ ಕೊರಗಪ್ಪ ಶೆಟ್ಟಿಯವರ ಪರಿಚಯಾತ್ಮಕ, ಡಾ.ಎಂ.ಮೋಹನ್ ಆಳ್ವರವರ ಸಂಪಾದಕತ್ವದಲ್ಲಿ ಹೊರ ಹೊಮ್ಮಿದ "ಅರುವ" ಗ್ರಂಥವನ್ನು ಸಮಾರಂಭದ ಅಧ್ಯಕ್ಷ ಮಹೇಶ್ ಎಸ್. ಶೆಟ್ಟಿಯವರು ಬಿಡುಗಡೆಗೊಳಿಸಿದರು .ಮತ್ತು ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಅರುವ ಕೊರಗಪ್ಪ ಶೆಟ್ಟಿಯವರನ್ನು ವೇದಿಕೆಯ ಗಣ್ಯರ ಹಸ್ತದಿಂದ ಪೇಟ ತೋಡಸಿ , ಶಾಲು ಹೊದಿಸಿ , ಫಲಪುಷ್ಪ ನೆನಪಿನ ಕಾಣಿಕೆಯೊಂದಿಗೆ ಸತ್ಕರಿಸಲಾಯಿತು. ಹಾಗೇ ಈ ಬಾರಿಯ ರಾಜ್ಯೋತ್ಸವ ಪುರಸ್ಕೃತ ನಾಮಾಂಕಿತ ಯಕ್ಷಗಾನ ಕಲಾವಿದ ಅಶೋಕ್ ಶೆಟ್ಟಿ ಸರಪಾಡಿಯವರನ್ನು ಪೇಟ ತೊಡಿಸಿ, ಶಾಲು ಹೊದಿಸಿ, ಫಲಪುಷ್ಪ, ನೆನಪಿನ ಕಾಣಿಕೆಯೊಂದಿಗೆ ಗೌರವಿಸಿ ಅಭಿನಂದಿಸಲಾಯಿತು. ಮತ್ತು ಸಸಿಹಿತ್ಲು ಶ್ರೀ ಭಗವತೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಸಂಚಾಲಕ ರಾಜೇಶ್ ಗುಜರನ್ ರವರನ್ನು ಅತಿಥಿ ಗಣ್ಯರ ಹಸ್ತದಿಂದ ಸನ್ಮಾನಿಸಲಾಯಿತು.
ಸಮಾರಂಭದ ವೇದಿಕೆಯಲ್ಲಿ ಅಧ್ಯಕ್ಷ ಮಹೇಶ್ ಎಸ್. ಶೆಟ್ಟಿಯವರ ಜೊತೆಯಲ್ಲಿ ಪ್ರಸಿದ್ದ ಜೋತಿಷ್ಯ, ವಾಸ್ತು ಮತ್ತು ಅನರ್ಘ್ಯ ರತ್ನ ತಜ್ಞ ಅಶೋಕ್ ಪುರೋಹಿತ್, ಬೊಂಬೇ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಸಿಎ.ಸುರೇಂದ್ರ ಶೆಟ್ಟಿ, ಬಂಟರವಾಣಿ ಕಾರ್ಯಾಧ್ಯಕ್ಷ ರವೀಂದ್ರನಾಥ್ ಎಂ.ಭಂಡಾರಿ, ಮಾತೃಭೂಮಿ ಕೋ.ಆಪರೇಟಿವ್ ಸೊಸೈಟಿ ಕಾರ್ಯದರ್ಶಿ ಪ್ರವೀಣ್ ಭೋಜ ಶೆಟ್ಟಿ, ಬಂಟರ ಸಂಘ ಮುಂಬಯಿ ಮಹಿಳಾ ಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ, ಉದ್ಯಮಿ ಉದಯ ಶೆಟ್ಟಿ ಪೆಲತ್ತೂರು, ಅರುವ ಕೊರಗಪ್ಪ ಶೆಟ್ಟಿ, ಪ್ರಶಸ್ತಿಯನ್ನು ಸ್ವೀಕರಿಸಿದ ಸಿಎ. ಸದಾಶಿವ ಶೆಟ್ಟಿ, ವಿಜಯಕುಮಾರ್ ಶೆಟ್ಟಿ, ಶಶಿಕಾಂತ್ ಶೆಟ್ಟಿ, ಅಜೆಕಾರು ಕಲಾಭಿಮಾನಿ ಬಳಗದ ರೂವಾರಿ ಅಜೆಕಾರು ಬಾಲಕೃಷ್ಣ ಶೆಟ್ಟಿ, ಅಜೆಕಾರು ಬಾಲಕೃಷ್ಣ ಶೆಟ್ಟಿಯವರ ಧರ್ಮಪತ್ನಿ ಆಶಾ ಬಾಲಕೃಷ್ಣ ಶೆಟ್ಟಿ, ಡಾ. ಎಂ.ಮೋಹನ್ ಆಳ್ವರವರ ಪ್ರತಿನಿಧಿಯಾಗಿ ಬಂದಿದ್ದ ಡಾ.ಯೋಗೇಶ್ ಕೈರೋಡಿ ಮೊದಲಾದವರು ಉಪಸ್ಥಿತರಿದ್ದರು.
ನಾಮಂಕಿತ ಭಾಗವತ ಹೆಬ್ರಿ ಗಣೇಶ್ ಇವರ ಕಂಠ ಸ್ವರದಲ್ಲಿ ಗಣಪತಿ ಶೃತಿಯೊಂದಿಗೆ ಮತ್ತು ಅತಿಥಿ ಗಣ್ಯರು ದೀಪ ಪ್ರಜ್ವಲಿಸುವುದರೊಂದಿಗೆ ವಾರ್ಷಿಕೋತ್ಸ ಸಮಾರೋಪ ಸಮಾರಂಭದ ಸಭಾಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅಜೆಕಾರು ಬಾಲಕೃಷ್ಣ ಶೆಟ್ಟಿಯವರು ಪ್ರಾಸ್ತವಿಕ ನುಡಿಗಳನ್ನಾಡಿದರು. ಮತ್ತು ವೇದಿಕೆಯ ಎಲ್ಲಾ ಅತಿಥಿ ಗಣ್ಯರನ್ನು ಶಾಲು ಹೊದಿಸಿ, ಹೂ ಗುಚ್ಚ ನೆನಪಿನ ಕಾಣಿಕೆಯೊಂದಿಗೆ ಗೌರವಿಸಿದರು.
ಸನ್ಮಾನಿತರ ಸನ್ಮಾನ ಪತ್ರವನ್ನು ವಾಚಿಸಿ, ಅತಿಥಿ ಗಣ್ಯರನ್ನು ಪರಿಚಯಿಸಿ ಸಂಪೂರ್ಣ ಕಾರ್ಯಕ್ರಮವನ್ನು ಬಂಟರವಾಣಿಯ ಗೌ.ಸಂಪಾದಕ ಅಶೋಕ್ ಪಕ್ಕಳರವರು ನಿರೂಪಿಸಿದರು. ಕಲಾ ಸಂಘಟಕ ಕರ್ನೂರು ಮೋಹನ್ ರೈಯವರು ವಂದಿಸಿದರು.
ಯಕ್ಷರಕ್ಷಾ ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ " ಶ್ರೀ ಭಗವತೀ ಕ್ಷೇತ್ರ ಮಹಾತ್ಮೆ" ಯಕ್ಷಗಾನದ ಉಳಿದ ಭಾಗವನ್ನು ಮುಂದುವರಿಸಲಾಯಿತು.
ಎಲ್ಲರ ಒಮ್ಮತದ ಸಹಕಾರವೇ ನನ್ನ ಪಾಲಿಗೆ ಶ್ರೀರಕ್ಷೆಯಾಗಿದೆ: ಅಜೆಕಾರು ಬಾಲಕೃಷ್ಣ ಶೆಟ್ಟಿ
ಪ್ರತೀ ವರ್ಷ ತವರೂರ ಕಲಾವಿದರ ಕೂಡುವಿಕೆಯಲ್ಲಿ ಸರಣಿ ಯಕ್ಷಗಾನ ಪ್ರದರ್ಶನ, ಸರಣಿ ಯಕ್ಷಗಾನ ತಾಳ ಮದ್ದಳೆ, ಸಾಹಿತ್ಯ ಕ್ಷೇತ್ರದ ಸೇವೆ, ಈ ಬಾರಿ ಸಮಾರು ಎರಡು ಲಕ್ಷ ರೂಗಳಿಗೂ ಅಧಿಕ ಹಣ ಕಲಾವಿದರಿಗೆ ಧನ ಸಹಾಯ, ಸನ್ಮಾನ ಇತ್ಯಾದಿ ಎಲ್ಲಾ ಕಾರ್ಯವು ಯಶಸ್ವಿಯಾಗಿ ಸಂಪನ್ನ ಗೊಂಡಿದ್ದರೆ ಅದರ ಹಿಂದೆ ಕಲಾರಸಿಕರ, ಕಲಾಪ್ರೋತ್ಸಾಹಕರ, ದಾನಿಗಳ ಸಹಕಾರ ಅವಿಸ್ಮರಣೀಯ ಎನ್ನುವಂತಿದೆ. 2002ರಲ್ಲಿ ಪ್ರಾರಂಭಗೊಂಡ ಅಜೆಕಾರು ಕಲಾಭಿಮಾನಿ ಬಳಗ ಇಂದು ಇಪ್ಪತ್ತೇರಡನೇ ವಾರ್ಷಿಕೋತ್ಸವನ್ನು ಅಚರಿಸುವವರೆಗೆ ನಡೆದು ಬಂದಿದ್ದರೆ ಇಲ್ಲಿ ಎಲ್ಲರ ಸಹಕಾರವನ್ನು ನಾನು ಮರೆಯುವಂತಿಲ್ಲ. ತಮ್ಮೆಲ್ಲರ ಒಮ್ಮತದ ಸಹಕಾರ ನನ್ನ ಪಾಲಿಗೆ ಶ್ರೀ ರಕ್ಷೆಯಾಗಿದೆ. ನಾನು ಹಣ ಮಾಡುವ ಉದ್ದೇಶದಿಂದ ಈ ಕೆಲಸವನ್ನು ಮಾಡಿದವನಲ್ಲ. ಬಾಲ್ಯದಿಂದಲೂ ಯಕ್ಷಗಾನದ ಬಗ್ಗೆ ಅಪಾರ ಆಶಕ್ತಿ ಇತ್ತು. ಅದನ್ನು ಉಳಿಸಿ, ಬೆಳೆಸುವ ಪ್ರಯತ್ನವನ್ನು ಮಾಡುತ್ತಿದ್ದೇನೆ ಎಂದು ಅಜೆಕಾರು ಬಾಲಕೃಷ್ಣ ಶೆಟ್ಟಿ ಯವರು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ತಿಳಿಯ ಪಡಿಸುತ್ತಾ ಸಂಸ್ಥೆಯು ನಡೆದು ಬಂದ ದಾರಿ, ಮಾಡಿದ ಎಲ್ಲಾ ಕಲಾ ಸೇವಾ ಕಾರ್ಯಕ್ಕೆ ಬೆಳಕು ಚೆಲ್ಲಿದರು.
ಜನಮಾನಸದ ಮನಗೆದ್ದ ಹಿರಿಮೆ ಬಾಲಕೃಷ್ಣ ಶೆಟ್ಟಿ ಅಜೆಕಾರುರವರಿಗೆ ಸಲ್ಲುವಂತಿದೆ: ಅಶೋಕ್ ಪುರೋಹಿತ್
ಜನರಲ್ಲಿ ಜಾಗ್ರತಿ ಮೂಡಿಸುವ ಅನೇಕ ಪ್ರಕಾರಗಳಿದ್ದರೆ ಅದರಲ್ಲಿ ವಿಶೇಷವಾದ ಗುಣದೊಂದಿಗೆ, ಭಕ್ತಿ ಭಾವದೊಂದಿಗೆ ಜನ ಸಾಮಾನ್ಯರ ಮನಸ್ಸನ್ನು ಪರಿವರ್ತನೆಗೊಳಿಸ ಬಲ್ಲ ಶಕ್ತಿ ಸಾಮರ್ಥ್ಯವನ್ನು ಹೊಂದಿದ ಶ್ರೇಷ್ಠ ಕಲೆಯೊಂದಿದ್ದರೆ ಅದು ಯಕ್ಷಗಾನ ಎಂದು ಹೆಮ್ಮೆಯೊಂದಿಗೆ ಹೇಳಬಹುದು. ಅಂತಹ ಕಲೆಯನ್ನು ಇಂದು ಮುಂಬಯಿ ಮಹಾನಗರದಲ್ಲಿ ಬೆಳಗಿದ, ವಿವಿಧ ಉತ್ತಮ ಸಾಧನಾಯುಕ್ತ ಕಾರ್ಯಗಳ ಮೂಲಕ ಜನಮಾನಸದ ಮನಗೆದ್ದ ಹಿರಿಮೆ ಅಜೆಕಾರು ಬಾಲಕೃಷ್ಣ ಶೆಟ್ಟಿಯವರಿಗೆ ಸಲ್ಲುವಂತಿದೆ. ಅದರಲ್ಲೂ ಇಂದಿನ ಈ ಕಾರ್ಯಕ್ರಮದಲ್ಲಿ ಮರಣೋತ್ತರ ಪ್ರಶಸ್ತಿಯನ್ನು ನೀಡಿ ತಾನೋರ್ವ ಸಜ್ಜನ ಕಲಾರಾಧಕ ಎಂಬುವುದನ್ನು ತೋರಿಸಿ ಕೊಟ್ಟ ಹಿರಿತನವೂ ಅಜೆಕಾರು ಬಾಲಕೃಷ್ಣ ಶೆಟ್ಟಿರವರದ್ದಾಗಿದೆ ಎಂದು ಪ್ರಸಿದ್ಧ ಜ್ಯೋತಿಷ, ವಾಸ್ತು ಮತ್ತು ಅನರ್ಘ್ಯ ರತ್ನ ತಜ್ಞ ಅಶೋಕ್ ಪುರೋಹಿತ್ ರವರು ಆಶೀರ್ವಚನದ ನುಡಿಗಳೊಂದಿಗೆ ಈ ರೀತಿಯ ಅಭಿಮಾನವನ್ನು ವ್ಯಕ್ತಪಡಿಸಿದರು.
ಕಲಾ ಗೌರವ ಯಕ್ಷ ರಕ್ಷಾ ಪ್ರಶಸ್ತಿ ಪುರಸ್ಕೃತರ ಅನಿಸಿಕೆ:
ಪೂಜೆಯಿಂದ ಮೊದಲ್ಗೊಂಡು ಪೂಜೆಯೊಂದಿಗೆ ಕೊನೆಗೊಳ್ಳುವ ಶ್ರೇಷ್ಠ ಮತ್ತುವಿಶೇಷ ಕಲೆ ಅಂದರೆ ಅದು ಯಕ್ಷಗಾನ. ಇಂತಹ ಶ್ರೇಷ್ಠ ಕಲೆಯ ತಿರಳನ್ನು ಅಜೆಕಾರು ವರು ಯುವ ಪೀಳಿಗೆಗೆ ಮುಟ್ಟಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇದು ಒಂದು ಮಹತ್ತರ ಸಾಧನೆ. ಹಾಗೇ ಈ ಪೂಜ್ಯನೀಯ ಯಕ್ಷಗಾನದ ಮತ್ತು ನನ್ನ ಬಹು ಪ್ರೀತಿಯ ಬಂಟರ ಸಂಘದ ವೇದಿಕೆಯಲ್ಲಿ ನನ್ನ ಪಾಲಿಗೆ ದಕ್ಕಿದ ಈ ಸನ್ಮಾನ ಈ ಗೌರವ ನನ್ನ ಪಾಲಿನ ಸೌಭಾಗ್ಯ.
- ಸಿಎ. ಸದಾಶಿವ ಶೆಟ್ಟಿ
(ಮಾಜಿ ಗೌ.ಪ್ರ.ಕಾರ್ಯದರ್ಶಿ, ಬಂಟರ ಸಂಘ ಮುಂಬಯಿ)
"ಅಜೆಕಾರು ಯಕ್ಷರಕ್ಷಾ- 2023" ಪ್ರಶಸ್ತಿ ಪುರಸ್ಕೃತರ ಅನಿಸಿಕೆ:
ಅಜೆಕಾರು ಕಲಾಭಿಮಾನಿ ಬಳಗಕ್ಕೆ 22 ವರ್ಷ ಸಂದರೆ ನನ್ನ ಯಕ್ಷಗಾನ ಕಲಾ ಜೀವನಕ್ಕೂ ಇದು 22ನೇ ವರ್ಷ. ಯಕ್ಷಗಾನ ಕ್ಷೇತ್ರವನ್ನು, ಈ ಬಣ್ಣದ ಬದುಕನ್ನು, ಪವಿತ್ರ ರಂಗವನ್ನು ತಪಸ್ಸಿನ ಹಾಗೇ ಕಾಪಾಡಿ ಕೊಂಡು, ಕಲೆಯನ್ನು ಆರಾಧಿಸಿಕೊಂಡು ಬಾ ಎಂದು ನಾನು ಈ ರಂಗಕ್ಕೆ ಕಾಲಿರಿಸಿದಾಗ ನನಗೆ ಮಾರ್ಗದರ್ಶನ ನೀಡಿದವರು ನಮ್ಮ ಹಿರಿಯರಾದ ಅರುವ ಕೊರಗಪ್ಪ ಶೆಟ್ಟಿಯವರು. ಅಂದಿನಿಂದ ಇಂದಿನ ವರೆಗೆ ಅವರ ಮಾರ್ಗದರ್ಶನದಂತೆ ಈ ಕ್ಷೇತ್ರದಲ್ಲಿ ನಡೆದು ಬಂದಿದ್ದೇನೆ. ಅದರ ಪ್ರತಿಫಲವಾಗಿ ಇಂದು ಯೋಗಾನು ಯೋಗ ಎಂಬಂತೆ ಅವರ ಉಪಸ್ಥಿತಿಯಲ್ಲಿ ಈ ಸನ್ಮಾನವನ್ನು ಸ್ವೀಕರಿದ್ದೇನೆ. ತುಂಬಾ ಖುಷಿಯಾಗುತ್ತಿದೆ. ಹಾಗೇ ನಾನು ಯಕ್ಷಗಾನ ರಂಗದಲ್ಲಿ ವೃತ್ತಿಪರ ಕಲಾವಿದನಾಗಿ ಮೊತ್ತ ಮೊದಲಿಗೆ ಗುರುತಿಸಿ ಕೊಂಡದ್ದು ಇದೇ ಸಸಿಹಿತ್ಲು ಶ್ರೀ ಭಗವತೀ ಪ್ರಸಾದಿತ ದಶಾವತಾರ ಮೇಳದ ಮೂಖಾಂತರ. ಇಂದು ಅದೇ ಮೇಳದ ಯಕ್ಷಗಾನ ಪ್ರದರ್ಶನದ ಸಂದರ್ಭದಲ್ಲಿ ನನಗೆ ಸನ್ಮಾನವನ್ನು ಸ್ಬೀಕರಿಸುವ ಸೌಭಾಗ್ಯ ಪ್ರಾಪ್ತಿಯಾಗಿದೆ ಇದು ನನ್ನ ಪಾಲಿನ ಮತ್ತೊಂದು ಸೌಭಾಗ್ಯ.
- ಶಶಿಕಾಂತ ಶೆಟ್ಟಿ ಕಾರ್ಕಳ
(ಪ್ರಸಿದ್ದ ಯಕ್ಷಗಾನ ಕಲಾವಿದ)
ಮಾತೃಶ್ರೀ ಯಕ್ಷರಕ್ಷಾ ಪ್ರಶಸ್ತಿ ಪುರಸ್ಕೃತರ ಅನಿಸಿಕೆಗಳು:
ಬಂಟರ ಸಂಘದ ಈ ವೇದಿಕೆ ನಿರಂತರ ಕಲಾಮಾತೆಯನ್ನು ಪೂಜಿಸುತ್ತಾ ಬಂದುರುವ ಇಂದು ಪವಿತ್ರ ವೇದಿಕೆ. ಕಲಾವಿದರ ಪಾಲಿಗೆ ಒಂದು ದೇವಸ್ಥಾನ. ನಾನು ಕಲಾ ಜಗತ್ತು ಕಲಾ ಸಂಸ್ಥೆಯ ಆಶ್ರಯದ ಈ ನಲ್ಕೆದಾಯೆ ನಾಟಕ ಪ್ರದರ್ಶನದ ಮೂಲಕ ಈ ರಂಗವನ್ನು ಸ್ವಂದಿಸಿದವನಿದ್ದೇನೆ. ಬಳಿಕ ಅಂದಿನಿಂದ ಇಂದಿನ ವರೆಗೆ ಅನೇಕ ಕಾರ್ಯಕ್ರಮದಲ್ಲಿ ಈ ವೇದಿಕೆಯಲ್ಲಿ ನೀಡಿದ್ದೇನೆ. ಸನ್ಮಾನವನ್ನು ಸ್ಬೀಕರಿಸಿದ್ದೇನೆ. ಇಂದು ಯಕ್ಷಗಾನ ರಂಗದ ರಾಜ, ಮೇರು ಕಲಾವಿದ ಅರುವ ಕೊರಗಪ್ಪ ಶೆಟ್ಟಿಯವರ ಉಪಸ್ಥಿತಿಯಲ್ಲಿ ಈ ಸನ್ಮಾನವನ್ನು ಸ್ವೀಕರಿಸುವ ಸೌಭಾಗ್ಯ ಪ್ರಾಪ್ತಿಯಾಗಿದೆ. ಈ ಸನ್ಮಾನ ಕಲಾಜಗತ್ತಿನ ನನ್ನ ಎಲ್ಲಾ ಕಲಾವಿದರ ಪರವಾಗಿ ಸ್ಬೀಕರಿಸುತ್ತಿದ್ದೇನೆ.
-ತೋನ್ಸೆ ವಿಜಯಕುಮಾರ್ ಶೆಟ್ಟಿ
(ಸಂಸ್ಥಾಪಕರು, ಕಲಾ ಜಗತ್ತು ಮುಂಬಯಿ)
"ಅರುವ" ಗ್ರಂಥ ಆಳ್ವ ಪ್ರತಿಷ್ಠಾನದ ಸರ್ವ ಶ್ರೇಷ್ಠ ಪುಸ್ತಕವಾಗಿದೆ: ಯೋಗೇಶ್ ಕೈರೋಡಿ
ಆಳ್ವ ಪ್ರತಿಷ್ಠಾನ ಹಲವಾರು ಪುಸ್ತಕವನ್ನು ಈವರೆಗೆ ಹೊರತಂದಿದೆ. ಯಕ್ಷಗಾನಕ್ಕೆ ಸಂಬಂಧಪಟ್ಟ ಒಂದು ಪುಸ್ತಕವನ್ನು ಹೊರ ತರಬೇಕು ಎನ್ನುವ ಆಸೆಯನ್ನು ಡಾ.ಎಂ. ಮೋಹನ್ ಆಳ್ವರವರು ಹೊಂದಿದ್ದರು. ಅವರ ಈ ಕನಸು ಈಗ ಯಕ್ಷಗಾನದ ರಾಜ ಎಂಬ ಖ್ಯಾತಿಯನ್ನು ಪಡೆದ ಹಿರಿಯ ಯಕ್ಷಗಾನ ಕಲಾವಿದ ಅರುವ ಕೊರಗಪ್ಪ ಶೆಟ್ಟಿಯವರ ಪರಿಚಯಾತ್ಮಕ "ಅರುವ" ಎನ್ನುವ ಈ ಗ್ರಂಥದ ಮೂಲಕ ನೆನಸಾಗಿದೆ. ಮಾತ್ರವಲ್ಲ ಈ ಗ್ರಂಥ ಆಳ್ವ ಪ್ರತಿಷ್ಠಾನದ ಸರ್ವ ಶ್ರೇಷ್ಠ ಗ್ರಂಥ ಎಂಬ ಅನಿಸಿಕೆಯನ್ನು ಡಾ. ಎಂ.ಮೋಹನ್ ಆಳ್ವರವರು ವ್ಯಕ್ತಪಡಿಸಿದ್ದಾರೆ ಎಂದು ಗ್ರಂಥದ ಬಗ್ಗೆ ಅಭಿನಂದನೆ ಭಾಷಣ ಮಾಡಿದ ಡಾ.ಎಂ. ಮೋಹನ್ ಆಳ್ವರವರ ಪ್ರತಿನಿಧಿಯಾಗಿ ಉಪಸ್ಥಿತರಿದ್ದ ಡಾ.ಯೋಗೇಶ್ ನುಡಿದರು.
ಚಿತ್ರ- ವರದಿ: ಶ್ರೀಧರ್ ಉಚ್ವಿಲ್
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ