ಆನಂದ ಆಳ್ವ 106ನೇ ಹುಟ್ಟುಹಬ್ಬ ಆಚರಣೆ
ವಿದ್ಯಾಗಿರಿ: ಮಿಜಾರುಗುತ್ತು ಆನಂದ ಆಳ್ವ ಅವರ 106ನೇ ಜನ್ಮದಿನವನ್ನು ಆಳ್ವಾಸ್ ಕಾಲೇಜಿನ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಮಂಗಳವಾರ ಶ್ರದ್ಧೆ-ಭಕ್ತಿ, ಸಂಭ್ರಮದಿಂದ ಆಚರಿಸಲಾಯಿತು.
ಆನಂದ ಆಳ್ವರಿಗೆ ಬೆಳ್ಳಿ ಲೋಟದಲ್ಲಿ ಹಾಲು ನೀಡಿ, ಹೂವಿನ ಹಾರ, ಪನ್ನೀರು, ಹೂವಿನ ದಳ, ತಿಲಕದ ಗೌರವ ನೀಡಿ, ಆರತಿ ಬೆಳಗಿ, ನೂರ ಆರು ದೀಪ ಹಚ್ಚಿ ಹುಟ್ಟುಹಬ್ಬ ಆಚರಿಸಲಾಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ.ಎಂ. ಮೋಹನ ಆಳ್ವ ಮಾತನಾಡಿ, ‘ಕೇವಲ ಬದುಕಿದರೆ ಸಾಲದು, ಆ ಬದುಕು ಸಾರ್ಥಕವಾಗಿರಬೇಕು. ಅದಕ್ಕೆ ತಂದೆ ಆನಂದ ಆಳ್ವರ ಬದುಕು ನಿದರ್ಶನ. ಅವರ ಹೋರಾಟ, ಜೀವನ ಕ್ರಮ ನಮಗೆಲ್ಲ ಸ್ಫೂರ್ತಿ ಎಂದರು.
ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ‘ಮಕ್ಕಳು ತಂದೆತಾಯಿ ಹುಟ್ಟು ಹಬ್ಬವನ್ನು ಆಚರಿಸುವುದು ಯೋಗ ಹಾಗೂ ಭಾಗ್ಯ’ ಎಂದರು.
‘106 ವರ್ಷ ಕುಟುಂಬದ ಯಜಮಾನನಾಗಿ, ಊರಿಗೆ ನಾಯಕನಾಗಿ ಬದುಕಿದವರು ಆನಂದ ಆಳ್ವರು. ಕಂಬಳ, ನಾಗಮಂಡಲ, ಕೌಟುಂಬಿಕ ಅಂತಃಕಲಹ ಹಾಗೂ ಊರಿನ ಸಮಸ್ಯೆ ಬಗ್ಗೆ ನ್ಯಾಯೋಚಿತ ಪರಿಹಾರ ನೀಡುತಿದ್ದವರು ಆನಂದ ಆಳ್ವರು ಎಂದರು.
ತಂದೆ-ತಾಯಿಯ ಸಮಾಜ ಸೇವೆಯೇ ಮಕ್ಕಳಿಗೆ ಆಸ್ತಿಯಾಗುತ್ತದೆ. ಡಾ.ಮೋಹನ ಆಳ್ವರ ಸಾಧನೆಯ ಹಿಂದೆ ಅವರ ತಂದೆ-ತಾಯಿಯ ತ್ಯಾಗ ಇದೆ ಎಂದರು. ದೇವರನ್ನು ಪೂಜಿಸದಿದ್ದರೂ, ಪೋಷಕರ ಪಾಲನೆ ಮಾಡಿ. ಹಿರಿಯರು ಮಕ್ಕಳ ಆಶ್ರಯದಲ್ಲಿ ಇರಬೇಕು. ಆಶ್ರಮದಲ್ಲಿ ಅಲ್ಲ ಎಂದರು.
ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ‘ಆನಂದ ಆಳ್ವರು ಮುಂದಾಳತ್ವ ವಹಿಸಿದ್ದ ಕಂಬಳಕ್ಕೆ ಅಂದಿನ ಮುಖ್ಯಮಂತ್ರಿ ಗುಂಡೂರಾಯರು ಬಂದಿದ್ದರು. ಅಡಿಕೆ ತೋಟದ ಮೂಲಕ ಕೃಷಿಕರು ಬದುಕು ಕಂಡಿದ್ದರೆ, ಆನಂದ ಆಳ್ವರ ಸಾಧನೆಯೇ ಮಾರ್ಗದರ್ಶಿ. ಅವರು ಮಹಾವೀರ ಕಾಲೇಜಿನ ಟ್ರಸ್ಟಿ ಆಗಿದ್ದರು ಎಂದರು.
ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯ ಕುಲಾಧಿಪತಿ ಎನ್ ವಿನಯ ಹೆಗ್ಡೆ ಮಾತನಾಡಿ, ಮೋಹನ ಆಳ್ವರ ಸಾಧನೆಗೆ ಅವರ ತಂದೆ ಸಾಧನೆ ಪ್ರೇರಣೆ. ಅವರು 120 ವರ್ಷ ಬಾಳಲಿ ಎಂದರು.
ಕೂಡುಕುಟುಂಬದಲ್ಲಿ ಪ್ರೀತಿ ಹಾಗೂ ಆಶೀರ್ವಾದ ಇರುತ್ತದೆ. ಮೋಹನ ಆಳ್ವರಿಗೆ ಅವರ ಶಿಕ್ಷಣ ಸಂಸ್ಥೆಯ ಮಕ್ಕಳ ಜೊತೆ ಅನ್ಯೋನ್ಯ ಸಂಬಂಧ ಇದೆ. ಅದಕ್ಕಾಗಿಯೇ ಸಿ.ಎ.ಯಲ್ಲಿ ಆಳ್ವಾಸ್ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಜನರ ಪ್ರೀತಿಯೇ ಎಲ್ಲದಕ್ಕಿಂತಲೂ ಶ್ರೇಷ್ಠ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಡಾ. ವಿನಯ್ ಆಳ್ವ ಹಾಗೂ ಆನಂದ ಆಳ್ವರ ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳು ಸೇರಿದಂತೆ ಕುಟುಂಬ ವರ್ಗದವರು ಪಾಲ್ಗೊಂಡರು. ಊರ ನಾಗರೀಕರು, ಅಭಿಮಾನಿಗಳು, ಸಂಸ್ಥೆಯ ಉದ್ಯೋಗಿಗಳು ಶತಾಯುಷಿ ಆನಂದ ಆಳ್ವರಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಚೌಟ ಅರಮನೆಯ ಕುಲದೀಪ್ ಎಂ, ಉದ್ಯಮಿ ಶ್ರೀಪತಿ ಭಟ್, ನಾರಾಯಣ್ ಪಿ ಎಂ, ಜಯಶ್ರೀ ಅಮರನಾಥ್ ಶೆಟ್ಟಿ, ಮೀನಾಕ್ಷಿ ಆಳ್ವ, ಬಾಲಕೃಷ್ಣ ಶೆಟ್ಟಿ, ಪ್ರೇಮಲತಾ ವಿ ಶೆಟ್ಟಿ, ಅಮಿತಾ ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು. ಆಳ್ವಾಸ್ ಪದವಿಪೂರ್ವ ಕಾಲೇಜಿನ ಕಲಾ ನಿಖಾಯದ ಡೀನ್ ವೇಣುಗೋಪಾಲ ಶೆಟ್ಟಿ ನಿರೂಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ