ಪುಟಾಣಿ ಮಕ್ಕಳಿಂದಲೇ ಸಂಪೂರ್ಣ ನಿರ್ವಹಣೆ
ಮಂಗಳೂರು: ಮಂಗಳೂರಿನ ನಿಷ್ಕಾ ಲೇಔಟ್ನಲ್ಲಿ ಇಂದು 77ನೇ ಸ್ವಾತಂತ್ರ್ಯ ದಿನೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ವಿಶೇಷವೆಂದರೆ, ಧ್ವಜಾರೋಹಣದಿಂದ ತೊಡಗಿ ಧನ್ಯವಾದ ಸಮರ್ಪಣೆಯ ವರೆಗೆ ಎಲ್ಲವನ್ನೂ 6 ವರ್ಷದ ಪುಟಾಣಿಗಳಿಂದ 16 ವರ್ಷ ವಯಸ್ಸಿನ ವರೆಗಿನ ಮಕ್ಕಳೇ ನಿರ್ವಹಿಸಿದರು.
ಅವರು ಪ್ರದರ್ಶಿಸಿದ ಉತ್ಸಾಹ, ಅವರು ತೋರಿದ ಶಕ್ತಿಯು ಯಾವುದೇ ವಯಸ್ಕರನ್ನು ನಾಚಿಸುವಂತಿತ್ತು. ಈ ವಿಶೇಷ ದಿನವನ್ನು ಆಚರಿಸುವಾಗ, ಮುಗ್ಧ ಮಕ್ಕಳು ತಮ್ಮ ಸಹಜವಾದ ಚೇಷ್ಟೆ. ಲವಲವಿಕೆಗಳಿಂದ ವಿಶಿಷ್ಟ ಶೈಲಿಯಲ್ಲಿ ನೆರವೇರಿಸಿ ಎಲ್ಲರಲ್ಲೂ ಉತ್ಸಾಹ, ಸಂಭ್ರಮವನ್ನು ಹೆಚ್ಚಿಸಿದವು.
ಇಂತಹ ರಾಷ್ಟ್ರೀಯ ಪ್ರಾಮುಖ್ಯತೆಯ ದಿನಗಳನ್ನು ಆಚರಿಸಲು ಚಿಕ್ಕ ಮಕ್ಕಳನ್ನು ಸೆಳೆಯುವುದು ಚಿಕ್ಕ ವಯಸ್ಸಿನಲ್ಲಿಯೇ ರಾಷ್ಟ್ರೀಯತೆಯ ಭಾವನೆಯನ್ನು ಮೈಗೂಡಿಸಲು ಸಹಾಯ ಮಾಡುತ್ತದೆ. ಕೇವಲ 6 ವರ್ಷ ವಯಸ್ಸಿನ ಕುಮಾರ್ ಶ್ರೇಯಸ್ ಜೋಶಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತ, ರಾಷ್ಟ್ರೀಯ ಹಬ್ಬದ ಜತೆಗೆ ಮಕ್ಕಳ ಸಂಭ್ರಮವನ್ನು ಮೇಳೈಸಿದ್ದ ಅನುಪಮವಾದ ಅನುಭೂತಿಯನ್ನು ಸೃಷ್ಟಿಸಿತು. ಧ್ವಜ ಸ್ತಂಭ ಮತ್ತು ಧ್ವಜವನ್ನು ಸಿದ್ಧಪಡಿಸುವುದರಿಂದ ಆರಂಭವಾಗಿ ಕಾರ್ಯಕ್ರಮದ ಸಿದ್ಧತೆಯವರೆಗೆ ಎಲ್ಲವೂ ಸಂಭ್ರಮದೊಂದಿಗೆ ಮಕ್ಕಳ ಕಲಿಕೆಗೂ ಅವಕಾಶ ನೀಡಿತು.
ಇಡೀ ಕಾರ್ಯಕ್ರಮವನ್ನು ಕುಮಾರಿಗಳಾದ ಅಹಾನಾ ಮತ್ತು ಇಶಾನಿ ನಿರ್ವಹಿಸಿದರು. ಮಕ್ಕಳ ಪರಿಷತ್ತಿನ ಅಧ್ಯಕ್ಷ ಕುಮಾರ ಅಕ್ಷಯ ಪಿ ಭಟ್ ಅಧ್ಯಕ್ಷೀಯ ಭಾಷಣ ಮಾಡಿದರು. ಕುಮಾರಿ ಪ್ರತಿಭಾ, ಕುಮಾರಿ ತನ್ವಿ ಮತ್ತು ಕುಮಾರ್ ಶ್ರೀವತ್ಸ ಜೋಶಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲು ಪ್ರಾರ್ಥನೆಯನ್ನು ನೆರವೇರಿಸಿದರು. ಕುಮಾರ ಸಂವೃತ್, ಕುಮಾರಿ ಮೀರಾ ಮತ್ತು ಕುಮಾರ ಪ್ರಮೋದ್ ಅತಿಥಿಗಳನ್ನು ಸನ್ಮಾನಿಸಿದರು. ಕುಮಾರ ಶ್ರೀವತ್ಸ ಜೋಶಿ ಸ್ವಾಗತಿಸಿ, ಕುಮಾರ ತೇಜಸ್ ಭಟ್ ಅತಿಥಿಗಳನ್ನು ಪರಿಚಯಿಸಿದರು. ಕುಮಾರಿ ಅನೀಶಾ ಪ್ರತಿಜ್ಞಾವಿಧಿ ವಾಚಿಸಿದರು. ಕುಮಾರಿ ಸಾನ್ವಿ, ಅಹಾನಾ ಮತ್ತು ಇಶಾನಿ ಸುಂದರ ದೇಶಭಕ್ತಿ ಗೀತೆಯನ್ನು ಹಾಡಿದರು. ಕಾರ್ಯದರ್ಶಿ ಕುಮಾರ ತನಯ ಕುಳಮರ್ವ ತಮ್ಮದೇ ಆದ ರೀತಿಯಲ್ಲಿ ಧನ್ಯವಾದಗಳನ್ನು ಅರ್ಪಿಸಿದರು.
ಮಕ್ಕಳಿಂದಲೇ ನಡೆದ ಇಡೀ ಕಾರ್ಯಕ್ರಮವು ನಮ್ಮ ದೇಶದ ಭವಿಷ್ಯ ಮುಂದಿನ ಪೀಳಿಗೆಯ ಸುರಕ್ಷಿತ ಕೈಯಲ್ಲಿದೆ ಎಂಬ ಸಂದೇಶವನ್ನು ರವಾನಿಸಿತು.
ಚಿತ್ರ, ಮಾಹಿತಿ: ಡಾ. ಗೌತಮ್ ಕುಳಮರ್ವ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ