pic courtesy: Rediff.com
ಸನ್ಮಾನ್ಯ ಮತದಾರ ಬಂಧುಗಳೆ, ಮುಖ್ಯವಾಗಿ 'ಉಚಿತಗಳ' ಫಲಾನುಭವಿಗಳೆ.....
ಉಭಯ ಕುಶಲೋಪರಿ ಸಾಂಪ್ರತ. ತರುವಾಯ ಈ ಪತ್ರದ ಮೂಲಕ ತಿಳಿಸುವುದೇನೆಂದರೆ.....
ಕಳದ ಕೆಲವು ದಿನಗಳಿಂದ ಬಾರಿ ರಾಜಕೀಯ ಸಂಚಲನೆ ಉಂಟು ಮಾಡುತ್ತಿರುವ ಪತ್ರಗಳ ಮಹತ್ವ ನೋಡಿ, ಮತ ಪತ್ರ ದಲ್ಲಿ ನಮ್ಮನ್ನು ಜಯಶೀಲರನ್ನಾಗಿಸಿದ ನಿಮಗೆ, ನಿಮ್ಮ ಎಡ ತೋರು ಬೆರಳ ತುದಿಯ ಮತ ಶಾಯಿ ಅಳಿಸಿ ಹೋಗುತ್ತಿರುವ ಕಾಲದಲ್ಲಿ, ನಿಮಗೂ ಒಂದು ಬಹಿರಂಗ ಪತ್ರ ಬರೆಯುವ ಮನಸ್ಸಿನಿಂದ ಈ ಪತ್ರ.
ಪತ್ರಗಳು ರಾಜಕೀಯದಲ್ಲಿ ಅಸ್ತಿತ್ವ ಉಳಿಸಿಕೊಳ್ಳುವಲ್ಲಿ, ಮತ್ತು ಬೆಲೆ ಬರುತ್ತಿರುವ ಮಹತ್ತರವಾದ ಅಸ್ತ್ರವಾಗುತ್ತಿರುವ ಹಿನ್ನಲೆಯಲ್ಲಿ, ಮತ ಪತ್ರದ ಮೇಲೆ ಬೆರಳು ಒತ್ತಿದ ಮತದಾರರಿಗೂ ಹೀಗೊಂದು ಉಚಿತ ಪತ್ರ ಬರೆದು ನಮ್ಮ ಅಸ್ತಿತ್ವಕ್ಕೆ ನಿಮ್ಮ ಗಮನ ಹರಿಸುವಂತೆ ಮಾಡುವುದೂ ಉದ್ದೇಶ.
ತೀವ್ರ ರಾಜಕೀಯ ಒತ್ತಡದಿಂದ, ಮತಭೇಟಿ(ಟೆ)ಗೆ ಬಂದವರು ಮತ್ತೆ ಬಂದು ನಿಮ್ಮನ್ನು ಕಾಣಲಾಗಲಿಲ್ಲ. ಮತ್ತೆ ಮುಂದಿನ ಬೇಟೆಗೆ ಬಂದಾಗ ಬೇಟಿ ಆಗೋಣ.
ಪತ್ರಿಕೆಗಳಲ್ಲಿ, ವಾಟ್ಸಪ್ಗಳಲ್ಲಿ, ಫೇಸ್ಬುಕ್ಗಳಲ್ಲಿ, ಇತ್ತೀಚೆಗೆ ಟ್ವಿಟ್ಟರ್ ಗಳ ಮೂಲಕ ಟ್ಯಾಗ್ ಮಾಡಿ, ನೀವೂ ಪತ್ರ ಬರೆಯುತ್ತಿರುವುದು ಸರಿಯಷ್ಟೆ? ಆ ಪತ್ರಗಳ ಮೂಲಕ ನಿಮ್ಮ ಅಳಲುಗಳು ನಮ್ಮನ್ನು ತಲುಪುತ್ತಿವೆ. ನಿಮ್ಮ ಅಳಲು ಯಾವತ್ತಿಗೂ ಮುಗಿಯುವುದಿಲ್ಲ. ನಿಮ್ಮ ಕಷ್ಟ ನಮಗೂ ಅರ್ಥವಾಗುತ್ತದೆ.
ನಿಮಗೆ ಎಲ್ಲ ಉಚಿತಗಳನ್ನು ಕೊಟ್ಟು ನಮಗೂ ಸಂಬಳ ಮನೆಗೆ ತೆಗೆದುಕೊಂಡು ಹೋಗೋಕೆ ಆಗ್ತಾ ಇಲ್ಲ!!. ನಾವೂ ಬಡತನ ರೇಖೆಯ ಬಗ್ಗೆ ಯೋಚಿಸುವಂತಾಗಿದೆ!!
ಏನೋ.... ಬೇರೆ ಗುತ್ತಿಗೆ ವ್ಯವಸ್ಥೆ, ವರ್ಗಾವಣೆ ವ್ಯವಹಾರ ಇರೋದರಿಂದ ನಮ್ಮ ಜೀವನ ನೆಡಿತಾ ಇದೆ. ನಮ್ಮ ಮನೆ ಗೃಹಲಕ್ಷ್ಮಿಯರು ಗಲಾಟೆ ಮಾಡ್ತಾ ಇಲ್ಲ!!.
"ಊಟ ಭಾಗ್ಯದ ಹಣ ಖಾತೆಗೆ ಜಮಾ ಆಗಿಲ್ಲ" ಅಂತ ಪತ್ರದ ಮೂಲಕ ಅನ್ನುತ್ತಿದ್ದೀರಿ, ಅನ್ಯಥಾ ಭಾವಿಸಬೇಡಿ. ಅನ್ಯ ಮಾರ್ಗವಿಲ್ಲದೆ, ಅಕ್ಕಿಯ ಹಣವನ್ನು ವರ್ಗಾಯಿಸಲು ಹೊಸ ಮಾರ್ಗ ಕಂಡು ಹಿಡಿದಿದ್ದೀವಿ!!!. ಹೊಸ ಮಾರ್ಗ ನಿಧಾನ ಮಾರ್ಗ ಅಂತ ಅನಿಸಬಹುದು, ಅದಕ್ಕೆ ನೀವೂ ಅನ್ಯತಾ ಭಾವಿಸಬಾರದು. ಅದು ಬರುವರೆಗೆ ಕೊಟ್ಟ ಉಚಿತ ಅಕ್ಕಿಯಲ್ಲಿ ಊಟ ಮಾಡ್ತಾ ಇರಿ !!!.
ಊಟ ಭಾಗ್ಯ ಹಣಕ್ಕೆ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಬೇಕು. ಆಗಿದ್ದರೂ ಸರ್ಕಾರದಿಂದ ಬರುವ ಹಣ ಜಮಾ ಆಗಬೇಕಾದರೆ NPCI mapping ಆಗಬೇಕು."
NPCI ಅಂದ್ರೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಅಂತ.
ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಒಂದು ಲಾಭರಹಿತ ಸಂಸ್ಥೆಯಾಗಿದೆ. ಇದು ಮುಖ್ಯವಾಗಿ ದೇಶದಲ್ಲಿ ಆನ್ಲೈನ್ ಪಾವತಿ ವ್ಯವಸ್ಥೆಗೆ ಉತ್ತೇಜನ ನೀಡುವ ಉದ್ದೇಶವನ್ನು ಹೊಂದಿದೆ. ಇದು ಭಾರತದ ಹಲವಾರು ಬ್ಯಾಂಕ್ಗಳ ಒಡೆತನದಲ್ಲಿದೆ. ಭಾರತದ ದೇಶೀಯ ಕಾರ್ಡ್ ನೆಟ್ವರ್ಕ್ ಆಗಿರುವ ರುಪೇ ಮತ್ತು ಯುಪಿಐ ಅನ್ನು ಇದು ನಿರ್ವಹಣೆ ಮಾಡುತ್ತದೆ. ಭಾಗಿದಾರರಿಗೆ ಎನ್ಪಿಸಿಐ ನಿಯಮ, ಮಾರ್ಗಸೂಚಿ, ಕರ್ತವ್ಯ, ಜವಾಬ್ದಾರಿ ಮೊದಲಾದವುಗಳನ್ನು ನಿರ್ಧಾರ ಮಾಡುತ್ತದೆ.
ಇದೆಲ್ಲ ಅರ್ಥ ಆಗ್ತಾ ಇಲ್ಲ, ಇಷ್ಟೆಲ್ಲ ಸರ್ಕಸ್ ಏಕೆ ಅಂತ ದಡ್ರ ತರಹ ಕೇಳಬೇಡಿ. ಮತದಾರರು ದಡ್ರಾಗಿ ಇರಬಾರದು, ಇರುವುದೂ ಇಲ್ಲ!!!
ಬ್ಯಾಂಕ್ಗೆ ಹೋಗಿ NPCI Form ಭರ್ತಿ ಮಾಡಿಕೊಡಿ.
ನಿಮಗೆ ಉಚಿತ ಹಣ ಬರುವುದಕ್ಕೆ ಲಾಭ ರಹಿತ ಸಂಸ್ಥೆ ಬ್ಯಾಂಕ್ಗಳ ಮೂಲಕ ಇದನ್ನು ಮಾಡುತ್ತಿರುವುದರಿಂದ, ಬ್ಯಾಂಕ್ ಸಿಬ್ಬಂದಿಗಳಿಗೆ ಕೆಲಸ ಹೆಚ್ಚಾಗಿದ್ದು, ಅವರು ಸಮಯಾವಕಾಶ, ಪುರುಸೊತ್ತು ಮಾಡಿಕೊಂಡು, ತಾಳ್ಮೆ ಇದ್ದಾಗ, ನೋಡಿಕೊಂಡು NPCI ಮ್ಯಾಪಿಂಗ್ ಮಾಡಿ ಕೊಡುತ್ತಾರೆ. ನಿಮಗೂ ತಾಳ್ಮೆ ಇರಲಿ! ದುಡ್ಡು ಕೊಟ್ಟು ತೆಗೆದುಕೊಳ್ಳುವುದೇ ಸಮಯಕ್ಕೆ ಸರಿಯಾಗಿ ಸಿಗುವುದಿಲ್ಲ, ಇನ್ನು ಉಚಿತವಾಗಿ ಸಿಗುವ ಅಕ್ಕಿ, ಹಣ, ಗ್ಯಾಸು, ಹಾಲು, ಪ್ರಯಾಣ, ಶಾದಿ, ಆರೋಗ್ಯ, ಶಿಕ್ಷಣ, ಕರೆಂಟ್ಗಳೆಲ್ಲ ತಕ್ಷಣ ಬೇಕು ಅಂದ್ರೆ ಹೇಗೆ?
ತಾಳಿದವನು ಬಾಳಿದ್ರೂ ಬಾಳಿಯಾನು!
ಮೊನ್ನೆ ಪತ್ರಿಕೆಯ ಓದುಗರ ಓಣಿಗೆ ಪತ್ರ ಬರೆದವರು "NPCI ಮ್ಯಾಪಿಂಗ್ಗಾಗಿ ವಯೋವೃದ್ಧರಾದವರಿಗೆ ಕ್ಯೂ ನಿಂತು ಸಾಕಾಗಿ ಹೋಗಿದೆ" ಅಂತಿದಾರೆ. ಕ್ಯೂ ನಿಲ್ಲಲು ಕಷ್ಟ ಅಂತಾದರೆ, ಆಧಾರ್ ಹಿಡ್ಕೊಂಡು ಅಲ್ಲೇ ಸ್ವಲ್ಪ ಕುಳಿತುಕೊಳ್ಳಿ. ಮಾಡಿ ಕೊಡ್ತಾರೆ. ಊಟದ ಸಮಯಕ್ಕೂ ಕೆಲಸ ಆಗದೇ ಇದ್ರೆ, ಮುಂದಿನ ರಸ್ತೆಯ ಇಂದಿನ ಕ್ಯಾಂಟಿನ್ ಗೆ ಹೋಗಿ ಬನ್ನಿ!
NPCI ಮ್ಯಾಪಿಂಗ್ಗಾಗಿ, ಸಮರ್ಥರಿರುವವರು ಕೆಲಸ ಬಿಟ್ಟು ಬ್ಯಾಂಕ್ಗೆ ಬಂದಿದ್ದೀರಿ. ಕ್ಯೂ ನಿಂತಿದ್ದೀರಿ, ಊಟ ಭಾಗ್ಯದ ಹಣ ಬಂದ ಮೇಲೆ ಹೋಟಲ್ನಲ್ಲಿ ಊಟ ಮಾಡಿಕೊಂಡು ಹೋಗಿ. ಹಣ ಬಂದೇ ಬರುತ್ತೆ!
ಇನ್ನು ಮನೆಲಕ್ಷ್ಮಿ ಯೋಜನೆಗೂ NPCI mapping ಆಗಬೇಕು. ನಿಮ್ಮ ಮನೆಯಲ್ಲಿ ಇರುವ ಮಹಿಳೆಯರಲ್ಲಿ ಯಾರು ಮನೆಲಕ್ಷ್ಮಿ ಅಂತ ಒಂದು ತೀರ್ಮಾನ ಮಾಡಿಕೊಂಡು, ಆಧಾರ್ ಜೊತೆ, ಅಕ್ಕಿ ಪತ್ರ (ರೇಷನ್ ಕಾರ್ಡ್) ತನ್ನಿ. ಎಲ್ಲ ಮನೆ ಲಕ್ಷ್ಮಿಯರಿಗೂ ಡೀ ಮಾನಿಟೈಸ್ ಆದ ₹ 2,000 ಬಣ್ಣದ ಕಾರ್ಡ್ ಕೊಡ್ತೀವಿ. ಅಕೌಂಟಿಗೆ ಹಣ ಹಾಕುವುದಕ್ಕೆ ಈ ಬಣ್ಣದ ಕಾರ್ಡ್ ಏಕೆ ಅಂತ ನೀವೂ ದಡ್ರ ತರಹ ಕೇಳಬೇಡಿ. ಮಹಿಳೆಯರು ಅದರಲ್ಲೂ ಮನೆಲಕ್ಷ್ಮಿಯರು ಬುದ್ದಿವಂತರಿರ್ತಾರೆ.
ನಮ್ಮ ಉಚಿತ ಸ್ಕೀಮ್ಗಳನ್ನು ಅರ್ಥೈಸಿಕೊಂಡು ಓಟು ಹಾಕಿದ ನೀವು ನಿಜವಾಗಿಯೂ ಬುದ್ದಿವಂತರಲ್ಲದೆ ಮತ್ತೇನು? ನಿಮ್ಮ ಅದಮ್ಯ ಬುದ್ದಿಮತ್ತೆಗೆ ವೈಯಕ್ತಿಕವಾಗಿ ನನ್ನ ನಮಸ್ಕಾರ ಇದೆ. ನಿಮ್ಮನ್ನು ಹೊಗಳಿದರೆ ಮುಜುಗರ ಪಡುತ್ತೀರಿ... ಆದರು ನೀವು ಬುದ್ದಿವಂತರು ಎನ್ನುವುದರಲ್ಲಿ ಎರಡು ಮಾತಿಲ್ಲ. ಉಚಿತವಾಗಿ ಕೊಡುವುದರಲ್ಲಿ ನಾವು ಪಕ್ಷಾತೀತವಾಗಿ ಸ್ಪರ್ಧಾತ್ಮಕವಾಗಿ ಬಣ್ಣದ ಆಶ್ವಾಸನೆಗಳನ್ನು ಕೊಟ್ಟಿದ್ದೆವು!. ಬಣ್ಣದ ಆಶ್ವಾಸನೆಗಳು ಮತ್ತು ಆ ನೋಟಿನ ಬಣ್ಣಗಳು 'ಸ್ಮಾರ್ಟ್' ನೆನಪಾಗಿ ಕಾರ್ಡ್ ರೂಪದಲ್ಲಿ ನಿಮ್ಮಲ್ಲಿರಲಿ ಅಂತ. ಸ್ಮಾರ್ಟ್ ಕಾರ್ಡ್ಗಳು ಸ್ಕೀಮಿನ ನೆನಪಾಗಿಯೂ ನಿಮ್ಮಲ್ಲಿ ಇರಲಿ ಅಂತ.
ಬಣ್ಣದ ಕಾರ್ಡ್ ಆದಮೇಲೆ ನಿಮಗೆ ತಿಂಗಳು ತಿಂಗಳು ಅಕ್ಕಿ, ಅಕ್ಕಿ ದುಡ್ಡು, ಮನೆಲಕ್ಷ್ಮಿ ದುಡ್ಡು, ಹಾಲಿನ ದುಡ್ಡು, ಗ್ಯಾಸಿನ ದುಡ್ಡು ಎಲ್ಲ ಬರುತ್ತೆ. ಕಾಯುತ್ತಿರಿ.
ಕಾಯುವಿಕೆಯೇ ಕೈಲಾಸ!!!
ಹಾಂ, ನಿಮಗೆ ಸಿಗುವ ಅಕ್ಕಿ, ಊಟದ ಭಾಗ್ಯದ ಹಣ, ಮನೆ ಲಕ್ಷ್ಮಿ ಮನಿ, ಮಗಳಿಗೆ ಬರುವ ನಿರುದ್ಯೋಗ ಮೊಬೈಲ್ ನಿಧಿ, ಉಚಿತ ಕರೆಂಟ್ ಬಿಲ್, ಮೊಬೈಲ್ ರೀ ಚಾರ್ಜ್ ಬಿಲ್ಲು, ಹಾಲಿನ್ಹಣ, ಗ್ಯಾಸ್ ಕ್ರೆಡಿಟ್ ಮೊತ್ತ ಮತ್ತು ನೀವು ಗಳಿಸುವ ದುಡಿಮೆಯ ಆದಾಯ ಎಲ್ಲ ಸೇರಿದಾಗ, ನಿಮ್ಮ ಒಟ್ಟು ಆದಾಯ BPL ಆದಾಯ ಮಿತಿ ದಾಟಿದರೆ, ನಿಮ್ಮ BPL ಅಟೋಮ್ಯಾಟಿಕ್ ಆಗಿ APL ಆಗುವ ವಿಚಾರವನ್ನು ನಮ್ಮ ಗ್ಯಾರಂಟಿ ಕಂಡಿಷನ್ನಲ್ಲಿ ಸೇರಿಸುವ ಯೋಚನೆ ಚರ್ಚೆಯಲ್ಲಿದೆ! ನೀವು APL ಕಾರ್ಡಿಗೆ ಬಂದರೆ... ನೀವು ಶ್ರೀಮಂತರಾಗಿದ್ದೀರಿ ಅಂತ ಅರ್ಥ ಅಲ್ವಾ? ನಿಮಗೂ ಖುಷಿ, ನಮಗೂ ಖುಷಿ!
ಇನ್ನು, ಚುನಾವಣೆಗೆ ಮತ ಕೇಳಲು ಬರುವ ನಾವೇ ಈ NPCI, ಬಣ್ಣದ ಕಾರ್ಡ್ಗಳನ್ನೆಲ್ಲ ಮುಂದೆ ನಿಂತು ಮಾಡಿಸಲು ಸಧ್ಯಕ್ಕೆ ಸಾಧ್ಯವಾಗುತ್ತಿಲ್ಲ, ನಿಮಗೆಲ್ಲ ಉಚಿತಗಳ ಹಂಚುವಿಕೆಯ ಕೆಲಸದಲ್ಲಿ ಮತ್ತು ಬೇರೆ ಕೆಲವು ಪತ್ರ ಬರೆಯುವುದರಲ್ಲಿ, ವರ್ಗಾವಣೆ, ಗುತ್ತಿಗೆ, ಸದನದ ಬಾವಿಗಳಲ್ಲಿ ಮತ್ತು ಇತರೆ ವ್ಯವಹಾರಗಳಲ್ಲಿ ನಮ್ಮ ಸಮಯ ಕಳೆದು ಹೋಗುತ್ತಿದೆ, ಕ್ಷಮೆ ಇರಲಿ.
ಈಗಲೂ ಮನೆಮನೆಗೆ ಹೋಗಿ ಇಂತಹ ವ್ಯಕ್ತಿಗಳಿಗೆ ಸಹಾಯ ಮಾಡಬೇಕು, ಮಾಡಿದರೆ ನೆನಪು ಇಟ್ಟುಕೊಂಡಿರುತ್ತಾರೆ ಎಂಬ ಭಾವ ಇದೆ, ಆದರೆ ಮಳೆಗಾಲವಿಲ್ಲದೆ, ಬರ ಬಂದಿದ್ದು, ಹೊರಗಡೆ ಉಷ್ಣತೆ ಹೆಚ್ಚಿರುವುದರಿಂದ ನಮಗೆ ನಿಮ್ಮಲ್ಲಿಗೆ ಬರುವಷ್ಟು ತಿರುಗಾಟ ಸಾಧ್ಯವಾಗುತ್ತಿಲ್ಲ!.
ಮತ್ತೊಂದು ಚುನಾವಣೆಯಲ್ಲಿ ಓಟು ಕೇಳಲು ಬಂದಾಗ ಇನ್ನೊಂದಿಷ್ಟು ಸಹಾಯ ಕೊಟ್ಟೇ ಮತ ಕೇಳುತ್ತೇವೆ. ಅಷ್ಟು ನೈತಿಕ ಬಲ ನಿಮ್ಮಿಂದಾಗಿ ನಮ್ಮಲ್ಲಿರುತ್ತದೆ ಎನ್ನುವುದು ನಮ್ಮ ಅಚಲ ವಿಶ್ವಾಸ.
ಇತಿ ನಿಮ್ಮೆಲ್ಲರ ಪ್ರೀತಿಯ ಜನ ಪ್ರತಿನಿಧಿಗಳ ಪರವಾಗಿ
ಶುದ್ದ ಸುಕುಮಾರಯ್ಯ.
(ಇದು ಕೇವಲ ಲಘು ವಿಡಂಬನಾತ್ಮಕ ಕಾಲ್ಪನಿಕ ಬರಹ)
- ಅರವಿಂದ ಸಿಗದಾಳ್, ಮೇಲುಕೊಪ್ಪ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ