ಶ್ರೀರಾಮಾಯನಮ:
ಮಹಾತ್ಮರೆಂದೂ ಸ್ವಾರ್ಥಕ್ಕಾಗಿ ಯಾವುದೇ ಕಾರ್ಯವನ್ನು ಮಾಡುವುದಿಲ್ಲ. ಮೇಲ್ನೋಟಕ್ಕೆ ಸ್ವಹಿತವೆಂದು ಕಂಡರೂ ಅಂತರಾಳದಲ್ಲಿ ಸರ್ವಹಿತವಡಗಿರುತ್ತದೆ. ಇಲ್ಲೂ ಹಾಗೆಯೇ ಆಯಿತು.ವಿಶ್ವಾಮಿತ್ರರ ಯಜ್ಞರಕ್ಷಣೆ ಒಂದು ನೆಪ. ರಾಮನಿಗೆ ಗುರುತರವಾದ ಅಸ್ತ್ರಗಳನ್ನು ಉಪದೇಶಿಸುವುದು,ನಾಡಿನ, ಪ್ರಜೆಗಳ ಬದುಕನ್ನು ಪರಿಚಯಿಸುವ ಉದ್ದೇಶಗಳೂ ಇದರ ಹಿಂದೆ ಅಡಗಿದ್ದವು.
ತಂದೆ ತಾಯಂದಿರ,ಗುರು ವಸಿಷ್ಠರ ಆಶೀರ್ವಾದಗಳನ್ನು ಪಡೆದ ರಾಮ ಲಕ್ಷ್ಮಣರು ವಿಶ್ವಾಮಿತ್ರರನ್ನು ಹಿಂಬಾಲಿಸಿದರು. ಶುಭಶಕುನಗಳು ಇವರು ಪ್ರಯಾಣದುದ್ದಕ್ಕೂ ಗೋಚರಿಸಿದವು. ಸರಯೂನದಿಯ ಬಲದಂಡೆಯಲ್ಲಿ ಒಂದಷ್ಟು ದೂರ ನಡೆದ ಬಳಿಕ ವಿಶ್ವಾಮಿತ್ರರು ರಾಮನಲ್ಲಿ ಶುದ್ಧಾಚಮನ ಮಾಡಲು ಹೇಳಿದರು. ಬಳಿಕ - ಇದೀಗ ನಿನಗೆ ಬಲ-ಅತಿಬಲಾ ಎನ್ನುವ ಎರಡು ಮಹಾವಿದ್ಯೆಗಳನ್ನು ಉಪದೇಶಿಸಲಿರುವ ಹೊತ್ತು. ಈ ಮಹಾವಿದ್ಯೆಗಳ ಮೂಲಮಂತ್ರಗಳನ್ನು ಬೋಧಿಸುತ್ತೇನೆ. ಇವುಗಳ ಸಿದ್ಧಿಯಿಂದ ನೀನು ಅಜೇಯನಾಗುವೆ,ಅಸಮಾನನಾಗುವೆ,ಸಕಲಜ್ಞಾನಗಳ ಗಣಿಯಾಗುವೆ. ಸ್ವೀಕರಿಸು -ಎನ್ನುತ್ತಾ ಅವುಗಳನ್ನು ಉಪದೇಶಿಸಿದನು.ತತ್ಕ್ಷಣದಲ್ಲೇ ಅದರ ಪ್ರಭಾವ ರಾಮನಲ್ಲುಂಟಾಗಿ ಮಹಾನ್ ತೇಜಸ್ವಿಯಾಗಿ ಬೆಳಗತೊಡಗಿದನು. ಬಳಿಕ ಸರಯೂ ದಡದಲ್ಲಿ ಆ ರಾತ್ರಿಯನ್ನು ದರ್ಭೆಯ ಹಾಸುಗೆಯ ಮೇಲೆ ಸುಖವಾಗಿ ಕಳೆದರು.
ಕೌಸಲ್ಯಾ ಸುಪ್ರಜಾ ರಾಮ
ಪೂರ್ವಾ ಸಂಧ್ಯಾ ಪ್ರವರ್ತತೇ|
ಉತ್ತಿಷ್ಠ ನರಶಾರ್ದೂಲ
ಕರ್ತವ್ಯಂ ದೈವಮಾಹ್ನಿಕಮ್||
ದೇಶದೆಲ್ಲೆಡೆ ಮೊಳಗುತ್ತಿರುವ ಈ ಸುಪ್ರಸಿದ್ಧ ಸುಪ್ರಭಾತದ ಶ್ಲೋಕವನ್ನು ಕೇಳದವರಾರು?
"ಕೌಸಲ್ಯೆಯ ಸುಪುತ್ರನೇ ಬೆಳಗಾಗುತ್ತಿದೆ.ಏಳು.ಆಹ್ನಿಕವನ್ನು ಮಾಡಬೇಕಿದೆ.ಕರ್ತವ್ಯದ ಕರೆಗೆ ಓಗೊಡು" ತಾಯಿಯು ಮಗುವನ್ನು ಪ್ರೀತಿಯಿಂದ ಕರೆಯುವಂತೆ ವಿಶ್ವಾಮಿತ್ರರು ರಾಮ ಲಕ್ಷ್ಮಣರನ್ನು ಎಬ್ಬಿಸಿ ಬೆಳಗಿನ ಕಾರ್ಯಗಳನ್ನು ಮುಗಿಸಿ ಮುಂದಿನ ಪ್ರಯಾಣಕ್ಕಾಗಿ ಗಂಗಾಮಾತೆಯ ಒಡಲಿನತ್ತ ನಡೆಯತೊಡಗಿದರು.
ಸಂಕಲನ: ವಿಶ್ವ ಉಂಡೆಮನೆ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ