ವನವಾಸಕ್ಕೆ ತನ್ನನ್ನೂ ಕರೆದು ಕೊಂಡು ಹೋಗಿ ಎಂದು ಲಕ್ಷ್ಮಣನು ಸೀತಾ ರಾಮರಲ್ಲಿ ಪ್ರಾರ್ಥಿಸಿದಾಗ ರಾಮನು ತಂದೆ ತಾಯಂದಿರಾದ ಕೌಸಲ್ಯೆ-ಸುಮಿತ್ರೆಯರ ಸೇವೆ ಮಾಡಿಕೊಂಡು ನನ್ನ ಪರವಾಗಿ ನೀನಿಲ್ಲೇ ಇರು ಎಂದು ರಾಮನು ಹೇಳಿದನು.
ಆದರೆ ವಾಕ್ಚತುರನಾದ ಲಕ್ಷ್ಮಣನು- ಭರತನು ನಮ್ಮಂತೆಯೇ ಅವರನ್ನು ಪ್ರೀತಿ- ಜತನಗಳಿಂದ ನೋಡಿಯಾನು, ನಮ್ಮ ತಾಯಂದಿರಿಗೆ ಸಾವಿರಾರು ಮಂದಿಯನ್ನು ಸಾಕುವಷ್ಟು ಭೂಮಿ ಸಂಪತ್ತುಗಳಿರುವಾಗ ಯಾವುದೇ ಚಿಂತೆ ಬೇಡ.ಅರಣ್ಯದಲ್ಲಿ ನಿನ್ನ ಸೇವಕನಾಗಿ ಹಗಲಿರುಳು ನಿಮ್ಮನ್ನು ಕಾಯುತ್ತಾ ನಿಮ್ಮ ಅವಶ್ಯಕತೆಗಳನ್ನು ಪೂರೈಸುತ್ತಾ ಇರುತ್ತೇನೆ -ಎಂದು ಹೇಳಿದಾಗ ಲಕ್ಷ್ಮಣನನ್ನು ಕ್ಷಣಮಾತ್ರವೂ ಬಿಟ್ಟಿರಲಾರದ ರಾಮನು ಒಪ್ಪಿ ವನವಾಸಕ್ಕೆ ಸಿದ್ಧವಾಗಲು ಹೇಳಿದನು.
ಮೂವರೂ ವನವಾಸಕ್ಕೆ ಸಿದ್ಧರಾದರು.ತಮ್ಮಲ್ಲಿದ್ದ ಎಲ್ಲಾ ಸಂಪತ್ತುಗಳನ್ನು ವಸಿಷ್ಠ-ವಾಮದೇವ-ಅಗಸ್ತ್ಯ-ಕೌಶಿಕರೇ ಮೊದಲಾದ ಮಹರ್ಷಿಗಳಿಗೂ, ವೇದಾಧ್ಯಯನ ನಿರತ ಬ್ರಾಹ್ಮಣರಿಗೂ,ಅವರ ಮನೆಮಂದಿಗೂ,ತಾವು ಅರಣ್ಯವಾಸ ಮುಗಿಸಿ ಬರುವ ತನಕ ನೆಮ್ಮದಿಯಿಂದಿರಲು ತಮ್ಮ ತಮ್ಮ ಅರಮನೆಗಳ ಸೇವಕರಿಗೂ ಸ್ನೇಹಿತರಿಗೂ ದಾನ ಮಾಡಿದರು.ಎಲ್ಲವನ್ನೂ ಎಲ್ಲವನ್ನೂ ರಾಮ ಸೀತೆ ಲಕ್ಷ್ಮಣರು ಸಂತೋಷದಿಂದ ದಾನ ಮಾಡಿ ಕೃತಾರ್ಥರಾದರು.
ಲಕ್ಷ್ಮಣನು ವಸಿಷ್ಠ ಮಹರ್ಷಿಗಳ ಮನೆಗೆ ಹೋಗಿ: ತನಗೂ ರಾಮನಿಗೂ ಜನಕರಾಜನು ಮದುವೆಯ ಸಂದರ್ಭದಲ್ಲಿ ಬಳುವಳಿಯಾಗಿ ನೀಡಿದ್ದ ಅಕ್ಷಯ ಬತ್ತಳಿಕೆ, ಅಪೂರ್ವ ಬಿಲ್ಲು,ರತ್ನ ಖಚಿತ ಖಡ್ಗಗಳನ್ನು ತಂದನು.
ಅವುಗಳೊಂದಿಗೆ ಕಾಡಿಗಾಗಿ ಕೊಡಲಿ ಗುದ್ದಲಿ!
ಕೊಡಲಿ ರಾಮನನ್ನು(ಪರಶುರಾಮ) ಗೆದ್ದ ರಾಮನ ಬಳಿ ಕೊಡಲಿ ಗುದ್ದಲಿ!
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ