ವಿಶ್ವಾಮಿತ್ರ-ರಾಮ ಲಕ್ಷ್ಮಣರನ್ನು ಸತ್ಕರಿಸಿದ ಬಳಿಕ ವಿನೀತ ಜನಕನು ವಿಶ್ವಾಮಿತ್ರರಲ್ಲಿ ತನ್ನಿಂದೇನಾಗಬೇಕು ಆದೇಶಿಸಿರಿ ಎಂದು ಪ್ರಾರ್ಥಿಸಿದನು.ಆಗ ವಿಶ್ವಾಮಿತ್ರರು ನಿನ್ನಲ್ಲಿರುವ ಶಿವಧನುಸ್ಸನ್ನು ಇವರಿಗೆ ತೋರಿಸು ಎಂದು ಜನಕನಿಗೆ ಹೇಳಿದರು.ಶಿವಧನುಸ್ಸನ್ನು ತೋರಿಸುವ ಮೊದಲು ಅದು ತಮ್ಮ ವಂಶಕ್ಕೆ ಬಂದ ಹಿನ್ನೆಲೆಯನ್ನು ಹೇಳುತ್ತೇನೆ ಎಂದು ಜನಕನು ವಿವರಿಸಿದನು- ದಕ್ಷ ಯಾಗದ ಸಂದರ್ಭದಲ್ಲಿ ತಾನು ಹವಿಸ್ಸಿನಿಂದ ವಂಚಿತನಾಗಿದ್ದಾಗ ಸುಮ್ಮನೆ ಇದ್ದ ನಿಮ್ಮಗಳ ತಲೆಗಳನ್ನು ಕತ್ತರಿಸುತ್ತೇನೆ ಎಂದು ಶಿವನು ಬಿಲ್ಲನ್ನೆತ್ತಿ ಬಾಣ ಹೂಡಲು ಸಿದ್ಧನಾದಾಗ ದೇವತೆಗಳು ಅವನನ್ನು ಸ್ತುತಿಸಿ ಸಂತೋಷಪಡಿಸಿ ಬಾಣ ಹೂಡದಂತೆ ಮಾಡಿದರು.ಆಗ ಶಿವನು ಆ ಬಿಲ್ಲನ್ನು ದೇವತೆಗಳಿಗೇ ಕೊಟ್ಟನು.ದೇವತೆಗಳು ಅದನ್ನು ನಮ್ಮ ಹಿರಿಯನಾದ ದೇವರಾತನಲ್ಲಿ ನಿಕ್ಷೇಪರೂಪವಾಗಿಟ್ಟರು.ಅದನ್ನು ನಾವು ಪೂಜ್ಯ ಭಾವನೆಯಿಂದ ಈ ತನಕ ಸುರಕ್ಷಿತವಾಗಿ ಕಾಪಾಡಿಕೊಂಡು ಬಂದಿದ್ದೇವೆ.
ಒಮ್ಮೆ ನಾನು ಭೂಮಿಯನ್ನು ಉಳುಮೆ ಮಾಡುತ್ತಿರುವಾಗ ನೇಗಿಲ ಕುಳದ ತುದಿಗೆ ಸಿಕ್ಕಿ ಹೆಣ್ಣು ಮಗುವೊಂದು ಹೊರಬಂದಿತು.ಅವಳಿಗೆ ಸೀತೆಯೆಂದು ನಾಮಕರಣ ಮಾಡಿ ಮಗಳಂತೆಯೇ ಸಾಕಿ ಸಲಹಿದ ದೊಡ್ಡವಳನ್ನಾಗಿಸಿದೆ.ಇದೀಗ ಮದುವೆಗೆ ಅರ್ಹಳಾಗಿದ್ದಾಳೆ.ಈ ಧನುಸ್ಸಿಗೆ ಶಿಂಜನಿಯನ್ನು ಸೆಳೆದು ಹೆದೆಯೇರಿಸಿ ಬಾಣ ಹೂಡುವ ಅತುಲ ಪರಾಕ್ರಮಶಾಲಿಗೆ ಇವಳನ್ನು ಮದುವೆ ಮಾಡಿ ಕೊಡುತ್ತೇನೆಂಬ ಷರತ್ತು (ವೀರ್ಯ ಶುಲ್ಕ) ನನ್ನದು. ಈ ತನಕ ಗೆದ್ದವರು ಯಾರೂ ಇಲ್ಲ.ಸೋತವರೇ ಎಲ್ಲಾ.ಇದೀಗ ನಿಮ್ಮ ಆಣತಿಯಂತೆ ಈ ವೀರ ಪುತ್ರರಿಗೆ ಇದನ್ನು ತೋರಿಸುತ್ತೇನೆ ಎಂದು ಹೇಳಿ ಸೈನಿಕರಲ್ಲಿ ಶಿವಧನುಸ್ಸು ಇರುವ ಪೆಟ್ಟಿಗೆಯನ್ನು ತರಲು ಹೇಳಿದನು.
ಏಳೆಂಟು ಮಂದಿ ಭಟರು ಅದನ್ನು ತಂದರು.ಮುಚ್ಚಳ ತೆಗೆದು ತೋರಿಸಿದರು.ಸಚಿವರ ಸಲಹೆಯ ಮೇರೆಗೆ ರಾಮ ಲಕ್ಷ್ಮಣರಿಗೆ ಜನಕನು ಬಿಲ್ಲನ್ನು ತೋರಿಸಿದನು.ವಿಶ್ವಾಮಿತ್ರರ ಸೂಚನೆಯಂತೆ ರಾಮನು ಬಿಲ್ಲನ್ನು ನೋಡಿದನು.ರಾಮನಿಗೆ ಬಿಲ್ಲಿಗೆ ಶಿಂಜನಿಯನ್ನು ತೊಡಿಸಿ ಬಾಣ ಹೂಡಬೇಕೆಂಬ ಆಸೆಯಾಯಿತು.ಲೀಲಾಜಾಲದಿಂದ ಬಿಲ್ಲನ್ನೆತ್ತಿದನು.ಬಿಲ್ಲನ್ನು ಬಾಗಿಸಿ ಶಿಂಜನಿಯನ್ನು ಇನ್ನೇನು ತೊಡಿಸುತ್ತಾನೆ ಎನ್ನುವಾಗ ಬಿಲ್ಲಿನ ಮಧ್ಯ ಭಾಗದಿಂದಲೇ ಅದು ಮುರಿದು ಬಿತ್ತು.ಜನಕನ ಸಂತಸಕ್ಕೆ ಪಾರವೇ ಇಲ್ಲ.ರಾಮನ ಅದ್ಭುತ ಪರಾಕ್ರಮವನ್ನು ಕಂಡು ದಂಗಾದನು.ಬಳಿಕ ವಿಶ್ವಾಮಿತ್ರರಲ್ಲಿ-ಇದೀಗ ನಾನು ನನ್ನ ಮಗಳು ಸೀತೆಯನ್ನು ರಾಮನಿಗೆ ಕೊಟ್ಟು ಮದುವೆ ಮಾಡಬೇಕಿದೆ.ನಿಮ್ಮ ಅನುಮತಿಯ ಮೇರೆಗೆ ಸಚಿವರನ್ನು ಅಯೋಧ್ಯೆಗೆ ಮುಂದಿನ ಕಾರ್ಯಗಳಿಗಾಗಿ ಕಳುಹಿಸುತ್ತೇನೆ- ಎಂದು ಹೇಳಿದನು.ವಿಶ್ವಾಮಿತ್ರರು ಸಮ್ಮತಿಸಿದರು.
ವಿಶ್ವಾಮಿತ್ರರು ರಾಮನನ್ನು ಅಯೋಧ್ಯೆಯಿಂದ ಕರೆದುಕೊಂಡು ಬಂದ ಬಹು ಮುಖ್ಯ ಉದ್ದೇಶ ಈಡೇರಿತು!!
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ