ಪ್ರೀತಿಯ ಈ ಬೆಸುಗೆ, ಉನ್ನತಿಯತ್ತ ಸಾಗಲಿ ನಡಿಗೆ - ರಕ್ಷಾಬಂಧನ

Upayuktha
0


ಕ್ಷಾಬಂಧನ ಹಬ್ಬವನ್ನು ಶ್ರಾವಣ ಹುಣ್ಣಿಮೆಯಂದು ಆಚರಿಸಲಾಗುತ್ತದೆ. 2023 ರಲ್ಲಿ ರಕ್ಷಾಬಂಧನವನ್ನು ಬುಧವಾರ, ಅಗಸ್ಟ್ 30 ರಂದು ಆಚರಿಸಲಾಗುವುದು. ಈ ದಿನ ಸಹೋದರಿಯರು ತಮ್ಮ ಸಹೋದರರ ಆರತಿ ಬೆಳಗಿ, ಪ್ರೀತಿಯ ಪ್ರತೀಕವೆಂದು ರಾಖಿಯನ್ನು ಕಟ್ಟುತ್ತಾರೆ. ಸಹೋದರರು ಏನಾದರೂ ಒಂದು ವಸ್ತುವನ್ನು ಉಡುಗೊರೆಯಾಗಿ ನೀಡಿ ಆಶೀರ್ವಾದವನ್ನೂ ನೀಡುತ್ತಾರೆ.


ಇದರ ಹಿಂದೆ ಸಹೋದರನ ಏಳಿಗೆಯಾಗಬೇಕು ಮತ್ತು ಸಹೋದರನು ಸಹೋದರಿಯ ರಕ್ಷಣೆಯನ್ನು ಮಾಡಬೇಕು ಎನ್ನುವ ಉದ್ದೇಶವಿರುತ್ತದೆ. ರಕ್ಷಾಬಂಧನದಿಂದ ಸಹೋದರ-ಸಹೋದರಿಯರ ನಡುವೆ ಪ್ರೀತಿ ಹೆಚ್ಚಾಗುವುದರೊಂದಿಗೆ ಅವರ ನಡುವೆ ಇರುವ ಕೊಡ-ಕೊಳ್ಳುವ ಲೆಕ್ಕಾಚಾರ ಕಡಿಮೆಯಾಗುತ್ತದೆ. ಈ ಹಬ್ಬವು ಇಬ್ಬರಿಗೂ ಈಶ್ವರನತ್ತ ಪ್ರಯಾಣಿಸುವ ಅವಕಾಶ ಒದಗಿಸುತ್ತದೆ.


ಈ ರೀತಿ ಆಚರಿಸಿ ರಕ್ಷಾಬಂಧನ

* ಸಹೋದರನು ಸಹೋದರಿಯ ಮನೆಗೆ ಹೋಗಬೇಕು.

* ಸಹೋದರಿಯು ಸಹೋದರನ ಆರತಿ ಬೆಳಗಿ, ನಿರಪೇಕ್ಷವಾಗಿ ರಾಖಿ ಕಟ್ಟಬೇಕು

* ಸಹೋದರಿಯು ಸಹೋದರನಿಗೆ ನಮಸ್ಕರಿಸಿ ಆಶೀರ್ವಾದ ಪಡೆಯಬೇಕು

* ಈ ದಿನವು ಸಹೋದರ-ಸಹೋದರಿಯರ ನಡುವಿನ ಕೊಡ-ಕೊಳ್ಳುವಿಕೆಯ ಲೆಕ್ಕಾಚಾರ ಕಡಿಮೆ ಮಾಡಲು ಪೂರಕವಾಗಿರುತ್ತದೆ. ಸಹೋದರಿಯು * ನಿಸ್ವಾರ್ಥವಾಗಿ ರಾಖಿಯನ್ನು ಕಟ್ಟಿದರೆ ಈ ಲೆಕ್ಕಾಚಾರ ಇನ್ನಷ್ಟು ವೇಗವಾಗಿ ಕಡಿಮೆಯಾಗುತ್ತದೆ.

* ಸಹೋದರನು ಸಹೋದರಿಗೆ ಸಾತ್ತ್ವಿಕ ಉಡುಗೊರೆಯನ್ನು ನೀಡಬೇಕು

* ರಕ್ಷಾಬಂಧನದಂದು ರಾಖಿ ಕಟ್ಟಿಸಿಕೊಂಡು ಸಹೋದರನು ಸಹೋದರಿಗೆ ಏನಾದರೂ ಉಡುಗೊರೆ ನೀಡುತ್ತಾನೆ. ಇದರಿಂದ ಇಬ್ಬರಿಗೂ ಪರಸ್ಪರರ ನೆನಪಾಗುತ್ತದೆ. ಸಹೋದರಿಯ ಪ್ರೀತಿಗೆ ಬೆಲೆಕಟ್ಟಲು ಸಾಧ್ಯವಿಲ್ಲ ಆದರೆ ಪ್ರೀತಿಯ ಸಂಕೇತವೆಂದು ಉಡುಗೊರೆ ನೀಡಿ ಸ್ವಲ್ಪ ಮಟ್ಟಿಗೆ ಸಹೋದರಿಗೆ ಆನಂದ ನೀಡಬಹುದು. ಉಡುಗೊರೆ ಕೊಡುವಾಗ, ಸಹೋದರನ ಮನಸ್ಸಿನಲ್ಲಿರುವ ಈಶ್ವರನ ಬಗ್ಗೆ ಇರುವ ಭಾವವು ಸಹೋದರಿಯ ಮೇಲೆಯೂ ಪರಿಣಾಮ ಬೀರುತ್ತದೆ. ಆದುದರಿಂದ ಸಹೋದರಿಯು ಉಡುಗೊರೆಯನ್ನು ಕೇಳಿ ಪಡೆದುಕೊಳ್ಳದೆ, ಸಹೋದರನು ಸ್ವೇಚ್ಛೆಯಿಂದ ನೀಡಿರುವುದನ್ನು ಸ್ವೀಕರಿಸಿದರೆ ಒಳ್ಳೆಯದಾಗುತ್ತದೆ.

* ಸಾತ್ತ್ವಿಕ ವಸ್ತುಗಳಿಂದ ಜೀವದ ಮೇಲೆ ವ್ಯಾವಹಾರಿಕ ಪರಿಣಾಮವಾಗುವುದಿಲ್ಲ. ಸಾತ್ತ್ವಿಕ ವಸ್ತುಗಳು ಕೊಡುವ ಜೀವಕ್ಕೆ 20% ಮತ್ತು ಸ್ವೀಕರಿಸುವ ಜೀವಕ್ಕೆ 18% ಲಾಭವಾಗುತ್ತದೆ. ಸಾತ್ತ್ವಿಕ ಕೃತಿಗಳಿಂದ ಕೊಡ-ಕೊಳ್ಳುವ ಲೆಕ್ಕ ಕಡಿಮೆಯಾಗಿ, ಹೊಸ ಲೆಕ್ಕಾಚಾರ ನಿರ್ಮಾಣವಾಗುವುದಿಲ್ಲ.



ಪ್ರಾರ್ಥನೆ ಮಾಡಿ

ಏನ ಬದ್ಧೋ ಬಲೀ ರಾಜಾ ದಾನವೇಂದ್ರೋ ಮಹಾಬಲಃ|

ತೇನ ತ್ವಾಮಪಿ ಬಧ್ನಾಮಿ ರಕ್ಷೇ ಮಾ ಚಲ ಮಾ ಚಲ||

ಅರ್ಥ : ಮಹಾಬಲಿ ಮತ್ತು ದಾನವೇಂದ್ರನಾದ ಬಲಿರಾಜನು ಯಾವುದರಿಂದ ಬದ್ಧನಾದನೋ, ಆ ರಾಖಿಯಿಂದ ನಾನು ನಿನ್ನನ್ನೂ ಕಟ್ಟುತ್ತೇನೆ. ಎಲೈ ರಾಖಿಯೇ, ನೀನು ವಿಚಲಿತಳಾಗಬೇಡ.

ಸಹೋದರಿಯು ಸಹೋದರನ ಕಲ್ಯಾಣಕ್ಕಾಗಿ ಮತ್ತು ಸಹೋದರನು ಸಹೋದರಿಯ ರಕ್ಷಣೆಗಾಗಿ ಪ್ರಾರ್ಥನೆಯನ್ನು ಮಾಡುವುದರೊಂದಿಗೆ ಇಬ್ಬರೂ ‘ರಾಷ್ಟ್ರ ಮತ್ತು ಧರ್ಮರಕ್ಷಣೆಗಾಗಿ ನಮ್ಮಿಂದ ಪ್ರಯತ್ನವಾಗಲಿ’, ಎಂದು ಈಶ್ವರನಲ್ಲಿ ಪ್ರಾರ್ಥನೆಯನ್ನು ಮಾಡಬೇಕು.


ಇವನ್ನು ಮಾಡಬೇಡಿ

* ಸಹೋದರನಿಗೆ ಅಸಾತ್ತ್ವಿಕ ಅಥವಾ ದೇವತೆಗಳ ಚಿತ್ರವಿರುವ ರಾಖಿ ಕಟ್ಟಬೇಡಿ

* ಇತ್ತೀಚೆಗೆ ರಾಖಿಯ ಮೇಲೆ ಓಂ ಅಥವಾ ದೇವತೆಗಳ ಚಿತ್ರಗಳಿರುತ್ತವೆ. ರಾಖಿಯನ್ನು ಉಪಯೋಗಿಸಿದ ನಂತರ ಅದು ಆಚೀಚೆ ಬಿದ್ದು ದೇವತೆಗಳ ಅಥವಾ ಧರ್ಮಪ್ರತೀಕಗಳ ವಿಡಂಬನೆಯಾಗುತ್ತದೆ. ಇದರಿಂದ ಪಾಪ ತಗಲುತ್ತದೆ. ಇದನ್ನು ತಡೆಗಟ್ಟಲು ರಾಖಿಯನ್ನು ನೀರಿನಲ್ಲಿ ವಿಸರ್ಜಿಸಬೇಕು. * ಅದೇ ರೀತಿ ಅಸಾತ್ತ್ವಿಕ ನಕ್ಷೆಯಿರುವ ರಾಖಿಗಳನ್ನೂ ಉಪಯೋಗಿಸಬೇಡಿ.

* ಸಹೋದರಿಯು ‘ತನಗೆ ಇದು ಬೇಕು, ಅದು ಕೊಡಿಸಬೇಕು’ ಎಂಬ ಅಪೇಕ್ಷೆ ಇಟ್ಟುಕೊಳ್ಳಬಾರದು.

* ಇತ್ತೀಚೆಗೆ ಸಹೋದರಿಯರು ರಾಖಿ ಕಟ್ಟಿಸಿಕೊಂಡ ಮೇಲೆ ಇದನ್ನೇ ಕೊಡಬೇಕು ಎಂದು ಮೊದಲೇ ಸಹೋದರನಿಗೆ ತಿಳಿಸಿರುತ್ತಾರೆ. ಈ ರೀತಿ ಸಹೋದರಿಯು ತನ್ನ ಸಹೋದರನಿಂದ ಯಾವುದಾದರೊಂದು ವಸ್ತುವನ್ನು ಪಡೆಯುವ ಅಪೇಕ್ಷೆಯನ್ನು ಇಟ್ಟುಕೊಂಡರೆ, ಆ ದಿನ ಪ್ರಾಪ್ತವಾಗುವ ಆಧ್ಯಾತ್ಮಿಕ ಲಾಭದಿಂದ ವಂಚಿತಳಾಗುತ್ತಾಳೆ. ಮಾತ್ರವಲ್ಲ, ಅಪೇಕ್ಷೆ ಇಟ್ಟುಕೊಂಡು ವಸ್ತು ಪಡೆದರೆ ಅದರಿಂದ 3 ಪಟ್ಟು ಹೆಚ್ಚು ಕೊಡ-ಕೊಳ್ಳುವ ಲೆಕ್ಕ ನಿರ್ಮಾಣವಾಗುತ್ತದೆ. ಈ ದಿನದಂದು ವಾತಾವರಣದಲ್ಲಿರುವ ಪ್ರೇಮ ಮತ್ತು ಆನಂದದ ಲಹರಿಗಳನ್ನು ಅನುಭವಿಸಲು ಆ ಅಪೇಕ್ಷೆ ಅಡ್ಡ ಬರುತ್ತದೆ.

* ಆಧ್ಯಾತ್ಮಿಕ ದೃಷ್ಟಿಯಲ್ಲಿ ಕೊಡುಕೊಳ್ಳುವ ಲೆಕ್ಕವನ್ನು ಕಡಿಮೆ ಮಾಡಲು ಈ ದಿನವು ಮಹತ್ವದ್ದಾಗಿದೆ.

* ಅಶುಭ ಅಥವಾ ಭದ್ರಾಕಾಲದಲ್ಲಿ ರಾಖಿ ಕಟ್ಟಬೇಡಿ

* ಶನಿಯಂತೆಯೇ ಶನಿಯ ಸಹೋದರಿಯಾದ ಭದ್ರೆಯ ದೃಷ್ಟಿಯಿಂದ ಹಾನಿಯುಂಟಾಗುತ್ತದೆ. ಭದ್ರೆಯ ಕುದೃಷ್ಟಿಯಿಂದ ಕುಲಕ್ಕೆ ಹಾನಿಯುಂಟಾಗುವ ಸಾಧ್ಯತೆಯಿದೆ. ಆದುದರಿಂದ ಭದ್ರಾಕಾಲದಲ್ಲಿ ರಾಖಿಯನ್ನು ಕಟ್ಟಬಾರದು (ಆಧಾರ : ಧರ್ಮಸಿಂಧು). ರಾವಣನು ಭದ್ರಾಕಾಲದಲ್ಲಿ ಸೂರ್ಪನಖಿಯಿಂದ ರಾಖಿ ಕಟ್ಟಿಸಿಕೊಂಡನು, ಆದುದರಿಂದ ಅದೇ ವರ್ಷ ಅವನ ಸಂಪೂರ್ಣ ಕುಲದ ನಾಶವಾಯಿತು ಎಂಬ ನಂಬಿಕೆಯಿದೆ.


ಇತರ ಕೃತಿಗಳು

ರಾಖಿಯನ್ನು ಕಟ್ಟಿಸಿಕೊಳ್ಳುವಾಗ ಸಹೋದರನು ಕುಳಿತುಕೊಳ್ಳುವ ಮಣೆಯ ಸುತ್ತಲೂ ಸಾತ್ವಿಕ ರಂಗೋಲಿಯನ್ನು ಬಿಡಿಸಬೇಕು. ಸಾತ್ವಿಕ ರಂಗೋಲಿಯಿಂದ ಸಾತ್ವಿಕ ಸ್ಪಂದನಗಳು ಪ್ರಕ್ಷೇಪಿತವಾಗುತ್ತವೆ. ಅದರಿಂದ ವಾತಾವರಣವು ಸಾತ್ವಿಕವಾಗುತ್ತದೆ.

ರಾಖಿಯನ್ನು ಕಟ್ಟಿದ ನಂತರ ಸಹೋದರನಿಗೆ ತುಪ್ಪದ ನೀಲಾಂಜನದಿಂದ ಆರತಿಯನ್ನು ಬೆಳಗಿಸುತ್ತಾರೆ. ತುಪ್ಪದ ದೀಪವು ಶಾಂತರೀತಿಯಲ್ಲಿ ಉರಿಯುತ್ತದೆ. ಅದರಿಂದ ಸಹೋದರನಲ್ಲಿ ಶಾಂತ ರೀತಿಯಲ್ಲಿ ವಿಚಾರ ಮಾಡುವ ಬುದ್ಧಿಯು ವೃದ್ಧಿಯಾಗುವಲ್ಲಿ ಸಹಾಯವಾಗುತ್ತದೆ.

ಆರತಿಯ ತಟ್ಟೆಯಲ್ಲಿ ದುಡ್ಡು ಅಥವಾ ಇತರ ಬೆಲೆಬಾಳುವ ವಸ್ತುಗಳನ್ನು ಇಡಬಾರದು. ಇಂತಹ ವಸ್ತುಗಳನ್ನು ಇಟ್ಟರೆ ಸಹೋದರಿಯ ಮನಸ್ಸಿನಲ್ಲಿ ಆ ದಿಕ್ಕಿನಲ್ಲಿ ಅಪೇಕ್ಷೆ ನಿರ್ಮಾಣವಾಗಿ ಅದೇ ಸಂಸ್ಕಾರ ಪ್ರಬಲವಾಗುತ್ತದೆ. ಇದರಿಂದ ಅವಳಲ್ಲಿ ರಜ ತಮ ಸಂಸ್ಕಾರಗಳ ಪ್ರಮಾಣ ಹೆಚ್ಚಾಗಿ ಅವಳಲ್ಲಿರುವ ಪ್ರೇಮವು ಕಡಿಮೆ ಆಗಿ ಸಹೋದರನ ಜೊತೆ ಕಲಹ ನಿರ್ಮಾಣವಾಗುತ್ತದೆ.


ಇತಿಹಾಸದ ಪುಟಗಳಲ್ಲಿ ರಕ್ಷಾಬಂಧನ

1. ಪಾತಾಳದಲ್ಲಿನ ಬಲಿರಾಜನ ಕೈಗೆ ಲಕ್ಷ್ಮೀಯು ರಾಖಿಯನ್ನು ಕಟ್ಟಿ ಅವನನ್ನು ತನ್ನ ಸಹೋದರನನ್ನಾಗಿ ಮಾಡಿಕೊಂಡಳು ಮತ್ತು ನಾರಾಯಣನನ್ನು ಮುಕ್ತಗೊಳಿಸಿದಳು. ಆ ದಿನ ಶ್ರಾವಣ ಹುಣ್ಣಿಮೆ ಇತ್ತು.

2. ಇಂದ್ರ ಮತ್ತು ದೈತ್ಯರ ನಡುವೆ 12 ವರ್ಷಗಳಿಂದ ಘೋರ ಯುದ್ಧ ನಡೆದಿತ್ತು. ದೈತ್ಯರು ಗೆಲ್ಲುತ್ತಿದ್ದರು, ಇಂದ್ರನ ಶಕ್ತಿ ಕುಸಿಯುತ್ತಿತ್ತು. ಇಂದ್ರನು ಯುದ್ಧದಿಂದ ಹಿಂದೆ ಸರಿದು ತನ್ನ ಜೀವ ಉಳಿಸಿಕೊಳ್ಳುವ ವಿಚಾರ ಮಾಡುತ್ತಿದ್ದನು. ಇದನ್ನು ನೋಡಿದ ಇಂದ್ರಾಣಿಯು ಗುರು ಬೃಹಸ್ಪತಿಗೆ ಶರಣಾದಳು. ಗುರುಗಳು ಇಂದ್ರಾಣಿಯನ್ನು ಉದ್ದೇಶಿಸಿ, “ನೀನು ನಿನ್ನ ಪಾತಿವ್ರತ್ಯದ ಬಲದ ಮೇಲೆ ಇಂದ್ರನು ವಿಜಯಿಯಾಗಿ ಸುರಕ್ಷಿತನಾಗಿ ಬರಲಿ ಎಂಬ ಸಂಕಲ್ಪ ಮಾಡಿ, ಇಂದ್ರನ ಬಲಗೈಯ ಮಣಿಕಟ್ಟಿಗೆ ಒಂದು ದಾರ ಕಟ್ಟಿದರೆ ಇಂದ್ರನು ಈ ಯುದ್ಧವನ್ನು ಖಂಡಿತವಾಗಿಯೂ ಗೆಲ್ಲುವನು” ಎಂದು ಹೇಳಿದರು. ಇಂದ್ರಣಿಯು ಇದೇ ರೀತಿ ಮಾಡಿದಳು ಮತ್ತು ಇಂದ್ರನು ದೈತ್ಯರ ಮೇಲೆ ಜಯ ಸಾಧಿಸಿದನು.


ಇಂದ್ರಾಣಿಯು ಆ ದಾರವನ್ನು ಕಟ್ಟುವಾಗ ಮಾಡಿದ ಪ್ರಾರ್ಥನೆ ಮುಂದಿನಂತಿದೆ

ಏನ ಬದ್ಧೋ ಬಲೀ ರಾಜಾ ದಾನವೇಂದ್ರೋ ಮಹಾಬಲಃ |

ತೇನ ತ್ವಾಮಪಿ ಬಧ್ನಾಮಿ ರಕ್ಷೇ ಮಾ ಚಲ ಮಾ ಚಲ ||


ಅರ್ಥ : ಮಹಾಬಲಿ ಮತ್ತು ದಾನವೇಂದ್ರನಾದ ಬಲಿರಾಜನು ಯಾವುದರಿಂದ ಬದ್ಧನಾದನೋ, ಆ ರಾಖಿಯಿಂದ ನಾನು ನಿನ್ನನ್ನೂ ಕಟ್ಟುತ್ತೇನೆ. ಎಲೈ ರಾಖಿಯೇ, ನೀನು ವಿಚಲಿತಳಾಗಬೇಡ.

3. ಭವಿಷ್ಯಪುರಾಣದಲ್ಲಿ ಹೇಳಿರುವಂತೆ ರಕ್ಷಾಬಂಧನವು ಮೂಲತಃ ರಾಜರಿಗಾಗಿತ್ತು. ರಾಖಿಯ ಒಂದು ಹೊಸ ಪದ್ಧತಿಯು ಇತಿಹಾಸಕಾಲದಿಂದ ಪ್ರಾರಂಭವಾಯಿತು.

4. ಪ್ರಾಚೀನ ಕಾಲದ ರಾಖಿ : ಅಕ್ಕಿ, ಬಂಗಾರ ಮತ್ತು ಬಿಳಿಸಾಸಿವೆಗಳನ್ನು ಒಂದುಗೂಡಿಸಿ ಗಂಟು ಕಟ್ಟಿದರೆ ರಕ್ಷಾ ಅರ್ಥಾತ್ ರಾಖಿಯು ತಯಾರಾಗುತ್ತದೆ. ಇದನ್ನು ರೇಶ್ಮೆಯ ದಾರದಿಂದ ಕಟ್ಟುತ್ತಿದ್ದರು.


ರಾಖಿ ಕಟ್ಟುವುದರ ಹಿಂದಿರುವ ಉದ್ದೇಶ:

ಸಹೋದರ-ಸಹೋದರಿಯರ ನಡುವಿನ ಕೊಡ-ಕೊಳ್ಳುವಿಕೆಯ ಲೆಕ್ಕಾಚಾರ ಕಡಿಮೆ ಮಾಡಲು ಸಹೋದರ-ಸಹೋದರಿಯರ ನಡುವೆ ಸಾಧಾರಣ 30% ಕೊಡ-ಕೊಳ್ಳುವಿಕೆಯ ಲೆಕ್ಕವಿರುತ್ತದೆ. ರಕ್ಷಾಬಂಧನದಂತಹ ಹಬ್ಬಗಳನ್ನು ಆಚರಿಸುವುದರಿಂದ ಅವರು ಸ್ಥೂಲ ಬಂಧನದಲ್ಲಿ ಸಿಲುಕಿದಂತೆ ಕಂಡರೂ ಸೂಕ್ಷ್ಮ ಸ್ತರದಲ್ಲಿ ಅವರ ನಡುವೆ ಇರುವ ಕೊಡ-ಕೊಳ್ಳುವ ಲೆಕ್ಕಾಚಾರ ಕಡಿಮೆಯಾಗುತ್ತದೆ.


ಭಾವನಾತ್ಮಕ ದೃಷ್ಟಿಕೋನ : 

ಸಹೋದರ-ಸಹೋದರಿಯ ನಿರ್ಮಲ ಪ್ರೇಮದ ಮುಂದೆ ಕಾಮ-ಕ್ರೋಧ ಸೋಲುತ್ತವೆ. ರಕ್ಷಾಬಂಧನವು ವಿಕಾರಗಳಿಗೆ ಬಲಿಯಾಗುವ ಯುವಕ-ಯುವತಿಯರಿಗೆ ಒಂದು ವ್ರತವಿದ್ದಂತೆ. ಸಹೋದರಿಯು ಸಹೋದರನಿಗೆ ರಾಖಿಯನ್ನು ಕಟ್ಟುವುದಕ್ಕಿಂತ ಯಾರಾದರೊಬ್ಬ ಯುವಕನು/ಪುರುಷನು ಯಾರಾದರೊಬ್ಬ ತರುಣಿಯಿಂದ/ಸ್ತ್ರೀಯಿಂದ ರಾಖಿಯನ್ನು ಕಟ್ಟಿಸಿಕೊಳ್ಳುವುದು ಹೆಚ್ಚು ಮಹತ್ವದ್ದಾಗಿದೆ; ಇದರಿಂದ ಯುವತಿಯ ಕಡೆಗೆ/ಸ್ತ್ರೀಯರ ಕಡೆಗೆ ನೋಡುವ ವಿಶೇಷವಾಗಿ ಯುವಕರ ಮತ್ತು ಪುರುಷರ ದೃಷ್ಟಿಕೋನವು ಬದಲಾಗುತ್ತದೆ. ಸಹೋದರ-ಸಹೋದರಿಯ ಈ ಪವಿತ್ರ ಬಂಧನವು ಯುವಕ-ಯುವತಿಯರನ್ನು ವಿಕಾರಗಳ ಕೂಪದಲ್ಲಿ ಬೀಳುವುದರಿಂದ ತಪ್ಪಿಸಲು ಸಮರ್ಥವಾಗಿದೆ. ಈ ನಿರ್ಮಲ ಪ್ರೇಮದ ಮುಂದೆ ಕಾಮ-ಕ್ರೋಧವು ಶಾಂತವಾಗುತ್ತದೆ. ರಕ್ಷಾಬಂಧನದ ಈ ಹಬ್ಬವು ಇಬ್ಭಾಗವಾಗಿರುವ ಸಮಾಜವನ್ನು ಒಗ್ಗೂಡಿಸುವ ಒಂದು ಸಂಧಿಯಾಗಿದೆ. ಇದರಿಂದ ಕುಟುಂಬದಲ್ಲಿರುವ ಕಲಹ ಶಾಂತವಾಗುತ್ತದೆ. ಮನಸ್ತಾಪ ದೂರವಾಗುತ್ತದೆ ಮತ್ತು ಸಾಮೂಹಿಕ ಸಂಕಲ್ಪಶಕ್ತಿ ಕಾರ್ಯನಿರತವಾಗುತ್ತದೆ.


ಆಧಾರ : ಸನಾತನ ನಿರ್ಮಿತ ಗ್ರಂಥ ‘ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರ

ಸಂಗ್ರಹ : ವಿನೋದ್ ಕಾಮತ್


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top