ಓಣಂ ಹಬ್ಬ ಬಂತಂದರೆ ಸಾಕು ದೇವರ ನಾಡು ಕೇರಳದಲ್ಲಿ ಗರಿ ಗೆದರುವ ಹಬ್ಬದ ವಾತಾವರಣ. ಮಾರ್ಗದಲ್ಲಿ ಹೂಮಾಲೆ ಸಂತೆ, ಜನ ಜಂಗುಲಿ, ಓಣಂ ಬಂಪರ್ ಲಾಟರಿ ತೆಗೆಯೋ ಕ್ರೇಜು, ಆಫರ್ ಬಟ್ಟೆಯ ನೋಡು ಗಮ್ಮತ್ತು ,ಶಾಲಾ ದಿನದಲ್ಲಿ ಸಿಗುತ್ತಿದ್ದ ಹತ್ತು ದಿನಗಳ ರಜೆ ಅಬ್ಬಾ ಎಂತಹ ಮಜಾ. ಆ ದಿನಗಳಲ್ಲಂತೂ ಸಂತಸಕ್ಕೆ ಪಾರವೇ ಇರುತ್ತಿರಲಿಲ್ಲ. ಬಿಳಿ ಪಂಚೆಯ ಉಟ್ಟು ದೇವಾಲಯ ಸುತ್ತಿ, ಗೆಳೆಯರ ಜೊತೆಗೂಡಿ ಮಾಡೋ ಓಣಂ ಸದ್ಯ ಅಂದರೆ ಓಣಂ ಭೋಜನವ ಸವಿಯುವುದೆಂದರೆ ಒಂಥರಾ ಖುಷಿ.
ಕೇರಳದಲ್ಲಿ ಹೈಸ್ಕೂಲ್ ವರೆಗೂ ಕಲಿತ ನನಗೆ ಓಣಂ ಆಚರಣೆ ಸವಿದಿದ್ದೆ. ಆದರ ನೆನಪುಗಳು ಪ್ರತೀ ಓಣಂ ಬಂದಾಗಲೂ ಮನದಲ್ಲಿ ಪಸರಿಸುತ್ತದೆ.ಶಾಲೆಯಲ್ಲಿ ಆಚರಿಸುತ್ತಿದ್ದ ಓಣಂ ದಿನದ ಆಟೋಟ ಸ್ಪರ್ಧೆ ಮತ್ತು ಪೂಕ್ಕಳಂ ಅಂದರೆ ಹೂವಿನ ರಂಗೋಲಿಯನ್ನು ಹಾಕುವ ಸ್ಪರ್ಧೆ ಅದಕ್ಕಾಗಿ ನಾವುಗಳು ಮಾಡುವ ತಯಾರಿ ಒಂದಾ-ಎರಡಾ!. ತರಗತಿಯ ಗೆಳೆಯರೆಲ್ಲರೂ ಸೇರಿ ಈ ಸಲ ಪ್ರಥಮ ಸ್ಥಾನ ಗಿಟ್ಟಿಸಲೇಬೇಕೆಂದು ಹಿಂದಿನ ದಿನವೇ ಮಾದರಿ ರಂಗೋಲಿ ನಕ್ಷೆಯನ್ನು ಕಾಗದದಲ್ಲಿ ಬಿಡಿಸುತ್ತಿದ್ದೆವು .ಯಾವುದು ಅದರಲ್ಲಿ ಉತ್ತಮ ಚಂದ ಇದೆ ಅದನ್ನೇ ನಾಳೆ ಪೂಕ್ಕಳಂ ಹಾಕಿ ಬಿಡುವ ನಿರ್ಧಾರಕ್ಕೆ ಬರುತ್ತಿದ್ದೆವು . ಹಾಗೆಯೇ ಯಾವ ಯಾವ ಹೂವು ಬೇಕೆನ್ನುವ ಪಟ್ಟಿ ಕೂಡ ತಯಾರಾಗುತ್ತಿತ್ತು.
ಹೇರಳವಾಗಿತ್ತು .ಅದನ್ನೇ ಚಿಕ್ಕ ಚಿಕ್ಕದಾಗಿ ತುಂಡರಿಸಿ ಮರುದಿನ ತೆಗೆದುಕೊಂಡು ಹೋಗುತ್ತಿದ್ದೆ. ಗೆಳೆಯರು ಪಕ್ಕದ ದೇವಾಲಯದಲ್ಲಿ ಸಿಗುತ್ತಿದ್ದ ಸೇವಂತಿಗೆಯೋ -ಜೀನವು ತರುತ್ತಿದ್ದರು. ಈ ಹೂವನ್ನು ಸಂಗ್ರಸಿ ಹೂವಿನ ರಂಗೋಲಿಯ ಚಿತ್ತಾರ ಮೂಡಿಸುವ ಜೊತೆಗೆ ಹಣ ಖರ್ಚು ಮಾಡದೆ ಗೆಲ್ಲುವ ಯೋಜನೆ ನಮ್ಮದಾಗಿತ್ತು.
ಅಂತೂ ಪೂಕ್ಕಳಂ ಸ್ಪರ್ಧೆ ಆರಂಭವಾಯಿತು. ಒಂದುವರೆ ಗಂಟೆಯ ಕಾಲಾವಕಾಶದಲ್ಲಿ ರಂಗೋಲಿಯನ್ನು ಹಾಕುವ ಷರತ್ತು. ರಂಗೋಲಿಯ ವೃತ್ತ ಬರೆಯುವಾಗ ಅದರ ಲಯವೇ ತಪ್ಪಿ ಹೋಗುತ್ತಿತ್ತು. ಹಾಗೂ ಹೀಗೂ ಮಾಡಿ ಚಿತ್ರವು ಸರಿಯಾಗುವಷ್ಟರಲ್ಲಿ ಸಮಯದ ಗಡಿ ತಲುಪುತಿತ್ತು. ಅದರ ಮೇಲೆ ಹೂವನ್ನು ಹಾಕುವ ಹೊತ್ತಿಗೆ ಉಳಿದದ್ದು ಹತ್ತೇ ನಿಮಿಷ ಎಂಬುದಾಗಿ ಅರಿತು ಗಡಿಬಿಡಿಯಲ್ಲೇ ಹೂವನ್ನು ಹಾಕಿದ್ದು ಇದೆ. ಅಂತೂ ಇಂತೂ ಪೂಕ್ಕಳಂ ಅಂದವಾಗಿ ಚಂದವಾಗಿ ಬಂದಿತ್ತು.ಆರು ತರಗತಿಯಲ್ಲಿ ನಮಗೆ ಮೊದಲ ಸ್ಥಾನ ಎಂಬುದಾಗಿ ಯೋಚಿಸಿದ್ದೆವು. ತೀರ್ಪುಗಾರರು ಬಂದರು ರಂಗೋಲಿ ನೋಡಿ ಸಂತಸ ವ್ಯಕ್ತಪಡಿಸಿದರು. ಫಲಿತಾಂಶವನ್ನು ಚೀಟಿಯಲ್ಲಿ ಬರೆದು ಅಸೆಂಬ್ಲಿಯಲ್ಲಿ ಹೇಳುವುದಾಗಿ ಹೇಳಿದರು.
ಅಸೆಂಬ್ಲಿಗೆ ಗಂಟೆನಾದ ಮೊಳಗಿತು. ಗೆಲುವಿನ ಬರವಸೆಯಲ್ಲಿ ಅಸೆಂಬ್ಲಿಗೆ ಹೋದೆವು. ಪೂಕ್ಕಳಂ ಫಲಿತಾಂಶ ಕೂಡ ಪ್ರಕಟಿಸಿದರು. ಆದರೆ ಮೂರನೇ ಸ್ಥಾನವನ್ನು ನಮಗೆ ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಬೇಸರಪಟ್ಟೆವು. ಮುಂದಿನ ಓಣಂ ಸ್ಪರ್ಧೆಯಲ್ಲಿ ಜಯಿಸಿದರೆ ಆಯಿತು ಎಂದು ನಾನು ಅಂದುಕೊಂಡೆ. ಆದರೆ ಮುಂದೆ! ಕೀಕಾನ ಶಾಲಾ ಜೀವನ ಮುಗಿಯುವ ಹಂತದಲ್ಲಿ ಇತ್ತು. ಏಳನೇ ತರಗತಿಯಲ್ಲಿ ನಾವದಾಗ ವ್ಯಾಸಂಗ ಮಾಡುತ್ತಿದ್ದೆವು.
ಈಗಲೂ ಓಣಂ ಬಂದಾಗ ಪೂಕ್ಕಳಂ ಸ್ಪರ್ಧೆ ನೆನಪಾಗುತ್ತದೆ. ಹಾಗೆಯೇ ಆ ಸ್ಪರ್ಧೆಯಲ್ಲಿ ಗೆಲ್ಲಲು ಆಗಲಿಲ್ಲ ಎನ್ನುವ ಕಹಿ ನೆನಪು ಈಗಲೂ ಕಾಡುತ್ತಿದೆ. ಶಾಲಾ ದಿನದ ಓಣಂ ಸಂತಸ ಸಂಭ್ರಮ ನೆನೆದಾಗ ಹೃದಯ ತುಂಬಿ ಬರುತ್ತದೆ. ಎಲ್ಲರಿಗೂ ಓಣಂ ಹಬ್ಬದ ಶುಭಾಶಯಗಳು. ಹಬ್ಬವು ನೆಮ್ಮದಿ ಸಂತಸವ ಕರುಣಿಸಲಿ.
-ಗಿರೀಶ್ ಪಿಎಂ
ಪ್ರಥಮ ಎಂ ಎ, ಸ್ನಾತಕೋತ್ತರ ಇತಿಹಾಸ ಮತ್ತು ಪುರಾತತ್ವಶಾಸ್ತ್ರ
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ