ಅಮ್ಮಾ ನಿನ್ನ ಹೃದಯಾಳದಲ್ಲಿ...

Upayuktha
0


ದೊಂದು ಕಾಲ, ವಸುಧೈವ ಕುಟುಂಬಕಮ್ ಇಡೀ ಭೂಮಂಡಲವೇ ನನ್ನ ಕುಟುಂಬ ಎಂದು ಉದ್ದಗಲಕ್ಕೂ ಚಾಚಿದ್ದ ಮಮತೆಯ ಹಸ್ತವು ಶೃಂಖಲೆಗಳಿಂದ ಬಂಧಿಸಲ್ಪಟ್ಟಿತ್ತು, ದೇಹಿ ಎಂದು ಬಂದವರಿಗೆ ನಾಸ್ತಿ ಎಂದು ಹೇಳದೇ ಬಂದವರನ್ನೆಲ್ಲಾ ನನ್ನವರು ನನ್ನ ಮಕ್ಕಳು ಎಂದು ಅಪ್ಪಿ ಮುದ್ದಾಡಿದ ಮಾತೃಮಂದಿರವು ತನ್ನ ಬಿಡುಗಡೆಯ ದಿನವನ್ನು ಕಾಯುತ್ತಿತ್ತು. ಪ್ರತಿದಿನ ಪ್ರತಿ, ಕ್ಷಣ ಅವಳು ದಾಸ್ಯದ ಸಂಕೋಲೆ‌ ಕಳಚುವ ದಿನದ‌ ಕನಸನ್ನು ಕಾಣುತ್ತಾ ಕುಳಿತಿರುತಿದ್ದಳು.


ನಿನಗೊಂದು ಇವನಿಗೊಂದು ಎಂದು ಯಾವುದೇ ರೀತಿಯಲ್ಲಿ ಬೇಧ ಮಾಡದೇ ಸರ್ವರನ್ನೂ ಸಮಾನ ಭಾವದಿಂದ ಕಂಡ‌ ಮಹಾಮಾತೆಯ ದಾರುಣ ಸ್ಥಿತಿ ಅವಳ ಮನೆಯಂಗಳದಲ್ಲಿ ಆಡಿ, ಅವಳ ಅಕ್ಕರೆಯಲ್ಲಿ ಬೆಳೆದ ಕೆಲ ಮಕ್ಕಳ ನಿದ್ರೆಗೆಡಿಸಿತ್ತು. ಇನ್ನು ಕೆಲವು ಮಕ್ಕಳು ತಾಯಿಯ ಅಸಹಾಯಕ ಸ್ಥಿತಿಯನ್ನು ಕಂಡೂ ಕಾಣದವರಂತೆ ತಿಂದುಂಡು ಮಲಗುತ್ತಿದ್ದರು. ತಾಯಿಯನ್ನು ದಾಸ್ಯದಿಂದ ಬಿಡಿಸಿಯೇ‌‌ ಸಿದ್ಧ ಎಂದು ಹೊರಟ ಕೆಲವರು  ಕಲ್ಲು ಮುಳ್ಳುಗಳ ಪಥದಲ್ಲಿ‌ ಮುನ್ನಡೆಯಬೇಕಾಗಿತ್ತು. ಆದರೆ ಅವರು ಹಿಂಜರಿಯಲಿಲ್ಲ  ಏನೇ ಆಗಲಿ‌ ತಾಯಿಗೆ ಜಯವಾಗಲಿ ಎಂದು ಸಾಗುತ್ತಲೇ‌ ಇದ್ದರು. ಕೆಲವರು ಶಾಂತಿಯಿಂದ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿದರೆ, ಇನ್ನು ಕೆಲವರು‌ ಮುಳ್ಳಿಗೆ ಮುಳ್ಳೇ ಸೂಕ್ತ ಎಂದು ತೊಡೆ ತಟ್ಟಿ ಕ್ರಾಂತಿಮಾರ್ಗವನ್ನು ಅನುಸರಿಸಿದರು. ಕ್ರಾಂತಿಮಾರ್ಗವು ಯುವ ಮನಗಳಲ್ಲಿ ಸೀಮೋಲ್ಲಂಘನದ ತವಕವನ್ನು ಹುಟ್ಟುಹಾಕಿತು. ಶಾಂತಿಮಾರ್ಗವೂ ಕೂಡಾ ಅನೇಕರನ್ನು ತಾಯಿಯ ಬಂಧವಿಮೋಚನೆಗಾಗಿ ಎದ್ದು ಬರುವಂತೆ ಮಾಡಿತು. ಶಾಂತಿ ಕ್ರಾಂತಿಗಳ ಸಮಾಗಮದಿಂದ ಇಡೀ ಮನೆತುಂಬಾ 'ಸ್ವಾತಂತ್ರ್ಯ ಸ್ವಾತಂತ್ರ್ಯ' ಎಂಬ ಶಬ್ಧ ಬಿಟ್ಟರೆ ಬೇರೆ ಪದಗಳೇ ಕೇಳಿಬರುತ್ತಿರಲಿಲ್ಲ.

 

ಎದುರಾಳಿಗಳ ಮನದಲ್ಲಿ‌ ಧೈರ್ಯವು ದಿನದಿಂದ ದಿನಕ್ಕೆ ಕುಗ್ಗುತ್ತಿತ್ತು. ಕೆಲವೆಡೆ ಮಹಾನ್ ಸಭೆಗಳು ಸೇರುತ್ತಿದ್ದವು. ಇನ್ನು ಕೆಲವೆಡೆ ತಾಯಿಯನ್ನು ಬಂಧಿಸಿದ ವಿಕೃತ ಮನಸ್ಸುಗಳ ಹತ್ಯೆಗಳಾಗುತ್ತಿತ್ತು, ಹತ್ಯೆ ಅಲ್ಲ ಸಂಹಾರವೇ ಸೂಕ್ತ ಶಬ್ಧ! ತಾಯಿಯ ರಕ್ಷಣೆಗೆ ಬಂದವರನ್ನು ಕರುಣೆ ವಿಹೀನರಾಗಿ ಥಳಿಸಿದರು. ಕೆಲವರನ್ನು ಬಂಧಿಸಿ ಕಾರಾಗೃಹದಲ್ಲಿಟ್ಟರು. ಇವರನ್ನು ಬದುಕಲು ಬಿಟ್ಟರೆ ಅಪಾಯವೆಂದು ಕೆಲವರನ್ನು ಗುಂಡಿಕ್ಕಿ ಕೊಂದರು. ಇನ್ನೂ ಕೆಲವರು ನೇಣುಗಂಬಕ್ಕೆ ಕೊರಳೊಡ್ಡಿದರು.‌ ದಿನಗಳುರುಳುತ್ತಿದ್ದವು. ತಾಯಿಯಿದ್ದ ಜಾಗವೆಲ್ಲಾ ನೆತ್ತರಿನಿಂದ ತೊಯ್ದು ಹೋಗಿದ್ದವು. ತನ್ನ ಮಕ್ಕಳ ನೆತ್ತರು ಅವಳ ಪಾದಗಳನ್ನು ತೊಳೆವ ನೀರಾದವು. ಕಣ್ಣುಮುಚ್ಚಿ ತನ್ನ ಮಕ್ಕಳ ಸಾವನ್ನು ಸಹಿಸಿಕೊಂಡಳು. ಮಕ್ಕಳಿಗೆ ತಾಯಿಯ ಚಿಂತೆಯಾದರೆ ತಾಯಿಗೆ ದಿನದಿಂದ ದಿನಕ್ಕೆ ತನ್ನ ಬಿಡುಗಡೆಗಾಗಿ ಪ್ರಾಣಾರ್ಪಣೆ ಗೈಯತ್ತಿರುವ ಮುಗ್ಧ ಮನಸುಗಳ ಚಿಂತೆ. ತಾಯಿಯ ರಕ್ಷಣೆಗಾಗಿ ಕೊಂದವರೆಷ್ಟೋ ಸತ್ತವರೆಷ್ಟೋ‌. ಲೆಕ್ಕ ಮಾಡಲು ಪ್ರಾರಂಭಿಸಿದರೆ ಲಕ್ಷಗಳೇ ದಾಟಿದ್ದವು. 


ಇವರು ಅಬಲರಲ್ಲ ಸಬಲರು ಎಂದು ಎದುರಾಳಿಗಳ ಮನಸ್ಸಿಗೆ ಗೋಚರವಾಗಲು ಪ್ರಾರಂಭಿಸಿತು. ಇವಳು ಸಾಮಾನ್ಯ ಮಾತೆಯಲ್ಲ ಮಹಾಮಾತೆ ಎಂಬುದು ಅವರಿಗೆ ಅರಿವಾಯಿತು. ಇಲ್ಲದಿದ್ದರೆ ಮತ್ತೇನು ಅವಳ ರಕ್ಷಣೆಗಾಗಿ ಲಕ್ಷೋಪಲಕ್ಷ ತರುಣರು ಬಾಲಕರು ವೃದ್ಧಾದಿಗಳು ದೇಹವನ್ನು ಅರ್ಪಿಸುತ್ತಿದ್ದಾರೆ ಎಂದರೆ ಸಾಮಾನ್ಯವೇ? ಇನ್ನು ಇಲ್ಲೇ ಉಳಿದರೆ ಪ್ರಾಣವಾಯು ಹೊರಟು ಹೋಗುವ ಕ್ಷಣ ಸಮೀಪಿಸುತ್ತದೇ ಎಂಬುದನ್ನು ಮನಗಂಡು ಎದ್ದೆನೋ ಬಿದ್ದೆನೋ ಎಂಬಂತೆ ಕಾಲ್ಕಿತ್ತರು.


ಮಕ್ಕಳಿಗೆಲ್ಲಾ ಹರುಷವೋ ಹರುಷ. ನಿತ್ಯ ಬಲೆಗಳಿಂದ ಕೂಡಿರುತ್ತದ್ದ ಕೈಗಳಲ್ಲಿರುವ ಸಂಕೊಲೆಗಳು ನಿಧಾನವಾಗಿ ಕಳಚಿತು, ಮತ್ತದೇ ಹಿಂದಿನ ಚೆಲುವು ನಲಿವಿನಿಂದ ಎದ್ದು ನಿಂತಳು. ತನಗಾಗಿ ಮಡಿದ ತನ್ನ ಮಕ್ಕಳನ್ನು ನೆನೆದು ಕಣ್ಣೀರನ್ನಿಟ್ಟ ತಾಯಿಯ ಕಂಬನಿಯನ್ನು ಮಕ್ಕಳು ತಮ್ಮ ಪುಟ್ಟ‌ ಬೆರಳುಗಳಿಂದ ಒರೆಸಿ ಅವಳ ಪದತಳದಲ್ಲಿ ಹೊರಳಾಡಿದರು. ತಾಯಿ ತನ್ನ ಮಕ್ಕಳ ಪೌರುಷವನ್ನು ನೆನೆದು ಹೆಮ್ಮೆಪಟ್ಟರೆ ಮಕ್ಕಳು" ತಮ್ಮ ತಾಯಿಯ ಹಿರಿಮೆ ಗರಿಮೆಗಳ ಮುಂದೆ ನಾವು ಮಾಡಿದ ಕಾರ್ಯ ನಗಣ್ಯ. ತಾಯಿಯ ರಕ್ಷಣೆ ನಮ್ಮ ಕರ್ತವ್ಯ. ಅದನ್ನೂ ಮಾಡಲು ಅಸಮರ್ಥನಾದವ ಬದುಕಿದ್ದೂ ಸತ್ತಂತೆ ಎಂದು ಮಹಾತಾಯಿಗೆ ಜಯಘೋಷವನ್ನು ಮೊಳಗಿಸಿ‌ ಸ್ವಾತಂತ್ರ್ಯದ ಶುಭಗಳಿಗೆಯನ್ನು ಅತ್ಯಂತ ವಿಜೃಂಭಣೆಯಿಂದ ಕಳೆದರು.


ಈಗವಳು ಸರ್ವಸ್ವತಂತ್ರಳು ಅವಳ ಮಾರ್ಗದರ್ಶನದಿಂದ ಅವಳ ಮಕ್ಕಳಾದ ನಾವೆಲ್ಲರೂ ಸುಂದರ ಜೀವನವನ್ನು ನಡೆಸುತ್ತಿದ್ದೇವೆ. ಅವಳ ಮುಖದಲ್ಲಿ ನಗುವು ಮರೆಯಾಗದಂತೆ ನೋಡಿಕೊಳ್ಳುವುದೇ ನಮ್ಮೆಲ್ಲರ ಆದ್ಯ ಕರ್ತವ್ಯ. ತಾಯಿಯ ಗೌರವವನ್ನು, ಶ್ರೇಷ್ಟತೆಯನ್ನು ಎತ್ತಿ ಹಿಡಿಯೋಣ. ಪ್ರತಿಯೊಂದು ಸಾಧನೆಯನ್ನೂ ಕೂಡಾ ತಾಯಿಗೆ ಮುಡಿಪಾಗಿಡೋಣ. 77 ನೇ ಸ್ವಾತಂತ್ರ್ಯ ದಿನೋತ್ಸವದ ಶುಭಾಶಯಗಳು


- ವಿಕಾಸ್ ರಾಜ್ ಪೆರುವಾಯಿ 

ದ್ವಿತೀಯ ಬಿ ಎಸ್ಸಿ 

ವಿ.ವಿ ಕಾಲೇಜು ಮಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

إرسال تعليق

0 تعليقات
إرسال تعليق (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top