ಮಂಗಳೂರು: ಇತ್ತೀಚೆಗೆ ನಿಧನರಾದ ಬೆಳ್ಳಾರೆ ಘಟಕದ ಗೃಹರಕ್ಷಕರಾದ ಹೂವಪ್ಪ ಗೌಡ ಅವರಿಗೆ ಇಂದು ದ.ಕ.ಜಿಲ್ಲಾ ಗೃಹರಕ್ಷಕ ದಳದ ವತಿಯಿಂದ ಶ್ರದ್ದಾಂಜಲಿ ಅರ್ಪಿಸಲಾಯಿತು.
ಹೂವಪ್ಪ ಗೌಡ (ಮೆ.ನಂ 722) ಇವರು ಇಲಾಖೆಯ ಸದಸ್ಯರಾಗಿ 15 ವರ್ಷಗಳಿಂದ ಸೇವೆ ಸಲ್ಲಿಸಿರುತ್ತಾರೆ. ಅಲ್ಪಕಾಲದ ಅನಾರೋಗ್ಯದಿಂದ ಜುಲೈ 26ರಂದು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಇವರು ನಿಧನರಾದರು. ದ.ಕ. ಜಿಲ್ಲಾ ಗೃಹರಕ್ಷಕದಳ ಬೆಳ್ಳಾರೆ ಹಾಗೂ ಜೇಸಿಐ ಬೆಳ್ಳಾರೆ ಇವರ ಜಂಟಿ ಆಶ್ರಯದಲ್ಲಿ ಬೆಳ್ಳಾರೆಯ ಅಜಪಿಲ ಶ್ರೀ ಮಹಾಲಿಂಗೇಶ್ವರ ಸಭಾ ಭವನದಲ್ಲಿ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಲಾಗಿತ್ತು.
ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ಮಾತನಾಡಿ, ಇವರೋರ್ವ ನಿಷ್ಠಾವಂತ, ಪ್ರಾಮಾಣಿಕ ಮತ್ತು ಮಾದರಿ ಗೃಹರಕ್ಷಕರಾಗಿದ್ದರು. ಇವರು 15 ವರ್ಷಗಳ ಕಾಲ ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಕೆಲಸವ ಮಾಡಿರುತ್ತಾರೆ. ಬಂದೋಬಸ್ತ್ ಕರ್ತವ್ಯ, ಪೊಲೀಸ್ ಇಲಾಖೆ, ಚುನಾವಣಾ ಕರ್ತವ್ಯ, ಅಗ್ನಿಶಾಮಕದಳ, ನೆರೆ ಕರ್ತವ್ಯ ಹೀಗೆ ಹತ್ತು ಹಲವು ಇಲಾಖೆಗಳಲ್ಲಿ ಬಹಳ ಪ್ರಾಮಾಣಿಕವಾಗಿ ತೊಡಗಿಸಿಕೊಂಡಿದ್ದರು. ಬಹಳಷ್ಟು ಜನರ ಪ್ರೀತಿಯನ್ನು ಸಂಪಾದಿಸಿದ್ದರು. ತನ್ನ ನಗುಮೊಗದ ನಿಷ್ಕಾಮ ಸೇವೆಯಿಂದ ಸಾವಿರಾರು ಜನರ ಮನಸ್ಸನ್ನು ಗೆದ್ದು ಜನಾನುರಾಗಿ ಗೃಹರಕ್ಷಕರಾಗಿ ಹೊರಹೊಮ್ಮಿದ್ದರು. ಸಾಮಾಜಿಕವಾಗಿ ಬದ್ಧತೆಯಿಂದ ಕೆಲಸ ಮಾಡುತ್ತಿದ್ದರು. ಅಂತಹ ಹೂವಪ್ಪ ಅವರ ಅಕಾಲಿಕ ಮರಣದಿಂದ ನಮ್ಮ ಇಲಾಖೆಗೆ ಬಹಳ ದೊಡ್ಡ ನಷ್ಟ, ಇವರ ಸಾವಿನಿಂದ ನಮ್ಮ ಇಲಾಖೆ ಬಡವಾಗಿದೆ. ಅವರ ಕೆಲಸವನ್ನು ಮೆಚ್ಚಿ 2019 ರಲ್ಲಿ ಅವರಿಗೆ ಮುಖ್ಯ ಮಂತ್ರಿ ಚಿನ್ನದ ಪದಕವನ್ನು ಸರಕಾರ ನೀಡಿ ಗೌರವಿಸಿತು. ಇವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಸಾವಿನ ನೋವನ್ನು ಭರಿಸುವ ಶಕ್ತಿಯನ್ನು ಅವರ ಹೆಂಡತಿ ಮತ್ತು ಮಕ್ಕಳಿಗೆ ಭಗವಂತ ಕರುಣಿಸಲಿ ಎಂದು ನುಡಿದರು.
ಬೆಳ್ಳಾರೆ ಪೋಲಿಸ್ ಠಾಣೆಯ ಉಪ ನಿರೀಕ್ಷಕ ಸುಹಾಸ್ ಅವರು ಮಾತನಾಡಿ, ಹೂವಪ್ಪ ಅವರ ಸೇವಾತತ್ಪರತೆ, ಪ್ರಾಮಾಣಿಕತೆ ಮತ್ತು ಕರ್ತವ್ಯ ನಿಷ್ಠೆ ಯ ಬಗ್ಗೆ ಕೊಂಡಾಡಿದರು.
ಈ ಸಂದರ್ಭದಲ್ಲಿ ಜೇಸಿ ರವೀಂದ್ರನಾಥ ಶೆಟ್ಟಿ ಅಜಪಿಲ ಅಧ್ಯಕ್ಷರು, ಜೇಸಿಐ ಬೆಳ್ಳಾರೆ, ಬೆಳ್ಳಾರೆ ಘಟಕದ ಪ್ರಭಾರ ಘಟಕಾಧಿಕಾರಿ ವಸಂತ್ ಕುಮಾರ್ ಹಾಗೂ ಗೃಹರಕ್ಷಕ ಗೃಹರಕ್ಷಕಿಯರು ಉಪಸ್ಥಿತರಿದ್ದರು. ಶ್ರೀ ಜೇಸಿ ಲಿಂಗಪ್ಪ ಅವರು ಕಾರ್ಯಕ್ರಮ ನಿರೂಪಿಸಿದರು. ಹೂವಪ್ಪ ಅವರ ಪುತ್ರ ಸಚಿನ್, ಪತ್ನಿ ಲೀಲಾವತಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ