ಕರುನಾಡಿನಲ್ಲಿ ಅದೆಷ್ಟೋ ಸಾಹಿತಿಗಳು ಪ್ರತ್ಯಕ್ಷವಾಗಿ, ಪರೋಕ್ಷವಾಗಿ, ನವ್ಯ ಕನ್ನಡದಲ್ಲಿಯೂ ಉತ್ತುಂಗಕ್ಕೇರಿಸುವ ಸಾಹಿತ್ಯವನ್ನು ನೀಡಿ ಕನ್ನಡ ನುಡಿಯನ್ನು ವಿಶ್ವಮಟ್ಟದಲ್ಲಿ ನಿಲ್ಲುವಂತೆ ಮಾಡಿದ್ದಾರೆ. ಅದೇ ನಿಟ್ಟಿನಲ್ಲಿ, ಸ್ವತಂತ್ರ ಅಮೃತ ಮಹೋತ್ಸವವನ್ನು ನೆನಪಿಸಿಕೊಳ್ಳುವಂತೆ "ಸಾಗುತ ಇದೆ ದೋಣಿ ನದಿಯ ನೀರನು ಸೀಳುತಾ" ಎನ್ನುವಂತಹ, ಗಮನ ಸೆಳೆಯುವ ಶೀರ್ಷಿಕೆ ಹೊತ್ತ ಹಾಸನದ ಖ್ಯಾತ ಸಾಹಿತಿಯೊಬ್ಬರ ವಿಮರ್ಶನ ಕೃತಿಯೊಂದು ಇದೀಗ ಬೆಳಕಿಗೆ ಬಂದಿದೆ.
ಆ ಸಾಹಿತಿಯೇ ಶ್ರೀಯುತ ಗೊರೂರು ಅನಂತರಾಜುರವರು. ಇವರ ಕೈಚಳಕದಿಂದ ಹೊರಬಂದ ನಾನಾ ಪುಸ್ತಕ, ಲೇಖನ, ಸಂಕಲನಗಳಿಗೆ ಹೊಸ ಸೇರ್ಪಡೆ, ಹಾಸನದ ಹೆಸರಾಂತ ಸಾಹಿತಿಗಳನೇಕರು ಬರೆದಿರು ವಂತಹ, ಸುಂದರವಾದ ವಿಮರ್ಶನ ಲೇಖನಗಳನ್ನು ಜೋಡಿಸಿರುವಂತಹ ಹೊತ್ತಿಗೆ "ಸಾಗುತ ಇದೆ ದೋಣಿ ನದಿಯ ನೀರನು ಸೀಳುತಾ".
ಇದೊಂದು ಸಮೃದ್ಧ ಕನ್ನಡ ಸಾಹಿತ್ಯದ ಪ್ರಾತಿನಿಧಿಕ ಬಿಡಿ ಕೃತಿಯೆಂದೇ ಹೇಳಬೇಕು. ಯಾವುದೇ ಪುಸ್ತಕವಿರಲಿ ಅಲ್ಲಿರಬೇಕಿರುವುದು ಜ್ಞಾನಾರ್ಜನೆಯ ಭಂಡಾರ, ಸಮಚಿತ್ತ ಕಾಯುವ ಬರಹಗಳು. ಆ ರೀತಿಯಲ್ಲೇ ಬರೆಯುವಂತಹ ಒಬ್ಬ ಸಾಹಿತಿಯ ಪ್ರಹಸನ, ಲೇಖನ, ನಾನಾ ಕೃತಿಗಳಿತ್ಯಾದಿಗಳಿಗೆ, ಇತರೆ ಸಾಹಿತಿಗಳು ಬಿಡಿಯಾಗಿ ಬರೆದ ಅಭಿಪ್ರಾಯ ಕ್ರೋಢಿಕರಿಸಿ ಪ್ರಕಟಪಡಿಸಲಾಗಿರುವಂತಹದ್ದೇ ಈ ಪುಸ್ತಕದ ವಿಶೇಷತೆ.
ಹಾಸನ ಜಿಲ್ಲೆಯ ಗೊರೂರು ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಾಹಿತಿಗಳ ತವರೂರು ಎಂದೇ ಸುಪ್ರಸಿದ್ಧ. ಅಂತಹ ಊರಿಗೆ ಈ ಶತಮಾನದ ಕಿರೀಟ ಗೊರೂರು ಅನಂತರಾಜು ಅವರು ಎಂದರೆ ತಪ್ಪಾಗದು. ಅವರ ಬಗ್ಗೆ ಅನೇಕ ಹಿರಿಯ ಸಾಹಿತಿಗಳು ಹೇಳುವ ಒಂದು ಸಾಮಾನ್ಯ ಮಾತು ಸರಳ ಸಜ್ಜನಿಕೆಯ ಪಾದರಸದಂತಹ ವ್ಯಕ್ತಿ. ಕನ್ನಡವನ್ನು ನಿತ್ಯ ಲೇಖನಿಯ ಮೂಲಕ ಸುಲಲಿತವಾಗಿ ಹರಿಯಬಿಡುವ ಸಾಹಿತಿ. ಅಂತಹ ಸಾಹಿತಿಗಳ ಕೃತಿಗೆ ನುಡಿ ಪೋಣಿಸುವುದು ಸಣ್ಣ ವಿಚಾರವಲ್ಲ. ಅಂತಹದೊಂದು ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯವೆಂದುಕೊಂಡಿದ್ದೇನೆ.
ಅವರ ಈ ಕೃತಿಯಲ್ಲಿ ಅನೇಕ ಸಾಹಿತಿಗಳು ತಮ್ಮ ಸಾಹಿತ್ಯಿಕ ಚಾತುರ್ಯತೆಯನ್ನು ಹೊರಗೆಡವಿದ್ದಾರೆ ಎಂದರೂ ತಪ್ಪಾಗಲಾರದು. ಅಂತೆಯೇ ಶ್ರೀಯುತ ಚನ್ನೇಗೌಡರು ಗೆಳೆಯರೆಂದೆಣಿಸದೆ ಮಾಡಿದ ವಿಮರ್ಶೆ ಹಾಗೂ ಸಾವಿತ್ರಮ್ಮ ಓಂ ಅವರು ಸಾಂಸ್ಕೃತಿಕ ದಿಗ್ಗಜರ ಕುರಿತು ಮತ್ತು ಆನಂತರಾಜುರವರ ನಲ್ವತ್ತಕ್ಕೂ ಅಧಿಕ ಕೃತಿಗಳ ಕುರಿತು ಸುಂದರವಾಗಿ ಲೇಖನಿ ಹರಿಸಿದ್ದಾರೆ. ಮಾಲಾ ಚೆಲುವನಹಳ್ಳಿಯವರು ಶ್ರೀಯುತರಿಗೆ ಸಂದ ಪ್ರಶಸ್ತಿ ಪುರಸ್ಕಾರಗಳನ್ನೂ ಅವರ ಪ್ರತಿಭೆಯನ್ನು ಅನಾವರಣಗೊಳಿಸಿರುವುದು ಶ್ರೀಮಾನ್ ಗಿರಿರಾಜ್ ಅವರು ನಾಟಕ ಬರವಣಿಗೆಯಲ್ಲಿ ಆನಂತರಾಜುರವರ ಕೈ ಚಳಕ ಕುರಿತು ಬರೆದ ಲೇಖನ, ವಾಣಿ ಮಹೇಶ ರವರು ಬದುಕು ಸಂತೆ ಬಂಡಿ ಶೀರ್ಷಿಕೆಯಡಿ ಆನಂತರಾಜುರವರು ಗೊರೂರು ಅಣೆಕಟ್ಟು ಕಟ್ಟುವುದನ್ನು ನೋಡುತ್ತ ಬೆಳೆದವರು ಎನ್ನುವ ವಿಚಾರವನ್ನೆತ್ತಿ ವಿಮಶೆ೯ ಮಾಡಿರುವಂತಹದೆಲ್ಲ ಗಮನ ಸೆಳೆಯುತ್ತದೆ.
ಶ್ರೀಯುತ ಪ್ರಕಾಶ್ ರವರು ರಂಗಭೂಮಿ ಹಾಗೂ ಜಾನಪದ ಕಲಾವಿದರು ಸಂದಶ೯ನ ಮಾಡಿದಂತಹ ರಂಗ ವೈಭವವನ್ನು ಹೆಸರಿಗೆ ತಕ್ಕಂತೆ ಅರ್ಥಗರ್ಭಿತವಾಗಿ ವಿಮರ್ಶಿಸಿದ್ದಾರೆ. ಶ್ರೀ ಗಗೋಚರವರು ಚೈನಾ ನಾಟಕ ಕುರಿತು ಬರೆದ ಕೃತಿಗೆ ಸೂಕ್ತ ರೀತಿಯಲ್ಲಿ ವಿಷಯ ಎತ್ತಿಹಿಡಿಯುವಂತ ವಿಚಾರ ವಿಮರ್ಶೆ ಬರೆದಿದ್ದಾರೆ. ಶ್ರೀ ಕೃಷ್ಣಸ್ವಾಮಿರವರು ಕಥಾಸಿರಿ ಐಸಿರಿ ಕುರಿತು ಬರೆಯುವಾಗ ಶ್ರೀಯುತರು ಕೈಯಾಡಿಸಿದ ಕ್ಷೇತ್ರಗಳನ್ನೆಲ್ಲ ಪ್ರಕಟ ಪಡಿಸಿದೆ. ಲಲಿತಾರವರು ಅನಂತರಾಜುರವರು ಪ್ರತಿಯೊಬ್ಬರ ಬರವಣಿಗೆ ನೀಡಿದ ಮಾನ್ಯತೆ ಸೇವಾಪರತೆ ಕುರಿತು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತ ವಿಮರ್ಶನ ತೋರಣ ಕಟ್ಟಿದ್ದಾರೆ. ಪುಟ್ಟೇಗೌಡರು ಹೊಯ್ಸಳ ಇತಿಹಾಸ ಕುರಿತು ಬರೆದ ಲೇಖನ ಹೇಮೆಯೊಂದಿಗಿನ ಅನಂತರಾಜು ರವರಿಗಿರುವ ಆತ್ಮೀಯ ನೆಂಟನ್ನು ತಾವೂ ಭಾವನಾತ್ಮಕವಾಗಿ ಬರೆದಿದ್ದಾರೆ. ಸ್ವತಃ ಶ್ರೀಯುತ ಅನಂತರಾಜುರವರು ಇತರರ ಕೃತಿಗಳಿಗೆ ಬರೆದ ವಿಮರ್ಶೆ ಆಸಕ್ತಿದಾಯಕವಾಗಿದೆ. ಒಟ್ಟಿನಲ್ಲಿ ಈ ಹೊತ್ತಗೆಯು ಒಬ್ಬ ಸಕಲಕಲಾವಲ್ಲಭ ಸಾಹಿತಿ ನಾಗರೀಕ ಸಮಾಜವೆಂಬ ನದಿಯಲ್ಲಿ ಬಿಳಿ ಹಾಳೆ ಎಂಬ ನೀರನ್ನು ದೋಣಿ ಎಂಬ ಲೇಖನಿಯ ಮೂಲಕ ಅಕ್ಷರಗಳಿಂದ ಸೀಳುತ ಸಾಗುತ್ತಲೇ ಹೋಗುತ್ತಿದ್ದಾರೆ ಎಂಬುದನ್ನು ವ್ಯಕ್ತ ಪಡಿಸಿದಂತಿದೆ. ಕೊನೆಯಲ್ಲಿ ಇವರ ಸಾಹಿತ್ಯ ಕಲಾ ಸಾಧನೆ ಇನ್ನಷ್ಟು ಭೋರ್ಗರೆದು ಹರಿಯುತ್ತಲೇ ಇರಲಿ ಎಂಬ ಶುಭಕಾಮನೆಯಾಂದಿಗೆ ಆತ್ಮವೂರ್ವಕ ಅಕ್ಷರಗಳಲ್ಲಿ ದಾಖಲಿಸಿದ್ದೇನೆ.
- ಶ್ರೀಮತಿ ಮಾಳೇಟರ ಸೀತಮ್ಮ ವಿವೇಕ್
ಹಾಸನ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
Post a Comment