ಮೇವಾತ್, ದೆಹಲಿ ಮತ್ತು ಮಣಿಪುರದ ಹಿಂಸಾಚಾರ: ಹಿಂದೂಗಳ ಹತ್ಯೆ ಖಂಡಿಸಿ ಬೆಂಗಳೂರಿನಲ್ಲಿ ಹಿಂದೂ ಸಂಘಟನೆಗಳ ಪ್ರತಿಭಟನೆ

Upayuktha
2 minute read
0


ಬೆಂಗಳೂರು: ಮಣಿಪುರದಲ್ಲಿ ಕುಕಿ ಕ್ರೈಸ್ತರು ವ್ಯವಸ್ಥಿತವಾಗಿ ಹಿಂಸಾಚಾರದ ಮೂಲಕ ಮಣಿಪುರದ ಮೂಲ ನಿವಾಸಿಗಳಾದ ಮೈತೇಯಿ ಸಮುದಾಯದ ಮೇಲೆ ಆಕ್ರಮಣ ಮಾಡಿದರು. ಈ ದಾಳಿಗಳು ಖಂಡನೀಯವಾಗಿದ್ದು ಈ ಹಿಂಸಾಚಾರದಿಂದ ಉಂಟಾದ ಆಸ್ತಿಪಾಸ್ತಿಗಾದ ಹಾನಿಗೆ ಗಲಭೆಕೋರರ ಎಲ್ಲಾ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು, ರಾಷ್ಟ್ರ ರಕ್ಷಣಾ ಪಡೆಯ ಪುನಿತ್ ಕೆರೆಹಳ್ಳಿಯವರ ಮೇಲೆ ಗುಂಡಾ ಕಾಯಿದೆಯನ್ನು ರದ್ದು ಮಾಡಬೇಕು ಹಾಗೂ ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜೀ ಮಹಾರಾಜರ ಪ್ರತಿಮೆಯನ್ನು ಪುನರ್ಸ್ಥಾಪನೆ ಮಾಡಬೇಕು` ಎಂದು ಆಗ್ರಹಿಸಿ ಫ್ರೀಡಂ ಪಾರ್ಕ್ ನಲ್ಲಿ ಭಾನುವಾರ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.


ಈ ವೇಳೆ ಚಿಂತಕ ಚಕ್ರವರ್ತಿ ಸೂಲಿಬೆಲೆ, ರಾಷ್ಟ್ರ ಧರ್ಮ ಸಂಘಟನೆಯ ಸಂತೋಷ್ ಕೆಂಚಾಂಬಾ, ಹಿಂದೂ ಜನಜಾಗೃತಿ ಸಮಿತಿ ಮೋಹನ್ ಗೌಡ, ಹಿಂದವೀ ಜಟ್ಕಾ ಮೀಟ್ ನ  ಮುನೇಗೌಡ, ಶಿವಪ್ರಸಾದ್, ಹಿಂದೂ ರಾಷ್ಟ್ರ ರಕ್ಷಣಾ ಪಡೆಯ ಅಧ್ಯಕ್ಷ ರಾಮಕೃಷ್ಣಪ್ಪ, ಶಿವಗರ್ಜನೆ ಸೇನೆ ಅಧ್ಯಕ್ಷ ಪ್ರವೀಣ ಮಾನೆ, ರಾಷ್ಟ್ರ ರಕ್ಷಣಾ ಪಡೆಯ ಪೂರ್ಣಿಮಾ ಬಾರಿಮನಿ, ರಾಷ್ಟ್ರೀಯ ಹಿಂದೂ ಪರಿಷದ್ ಅಧ್ಯಕ್ಷ ವಿಕ್ರಮ ಶೆಟ್ಟಿ, ರಾಷ್ಟ್ರ ರಕ್ಷಾ ಸೇನೆಯ ಸುರೇಶ್ ಗೌಡ, ನ್ಯಾಯವಾದಿ ದೊರೆರಾಜು, ಫೌಂಡೇಶನ್ ಇಂಡಿಯಾ ಹಾಗೂ ವಿವಿಧ ಹಿಂದೂ ಸಂಘಟನೆಗಳ ಮುಖಂಡರು ಸೇರಿದಂತೆ 400 ಕ್ಕೂ ಅಧಿಕ ಹಿಂದೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


ಈ ಸಂದರ್ಭದಲ್ಲಿ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಹರಿಯಾಣದ ಮೇವಾತ ನುಹ್‌ನಲ್ಲಿ ಸಾವಿರಾರು ಹಿಂದೂ ಭಕ್ತರ  ಮೇಲೆ ಆಧುನಿಕ ಶಸ್ತ್ರದಿಂದ ಮತಾಂಧರು ದಾಳಿ ಮಾಡಿ, 7 ಹಿಂದೂಗಳ ಹತ್ಯೆ, ನೂರಾರು ಹಿಂದೂಗಳ ವಾಹನವನ್ನು ಸುಟ್ಟು ಹಾಕುವ ಮೂಲಕ ವ್ಯವಸ್ಥಿತ ಭಯೋತ್ಪಾದನಾ ದಾಳಿ ಮಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಗ್ಯಾರಂಟಿಗಳ ಹೆಸರಿನಲ್ಲಿ ಹಿಂದೂಗಳಿಗೆ ಅನ್ಯಾಯ ಮಾಡಲಾಗುತ್ತಿದೆ. ಈ ಸರಕಾರ ಹಿಂದೂಗಳನ್ನೇ ಗುರಿಯಾಗಿಸಿ ಅವರ ಮೇಲೆ ಸುಳ್ಳು ದೂರುಗಳನ್ನು ದಾಖಲಿಸಿಕೊಂಡು ಬಂಧನ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೇ ಇತ್ತಿಚೆಗೆ ಸರಕಾರ ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜೀ ಮಹಾರಾಜರ ಪ್ರತಿಮೆಯನ್ನು ತೆರವುಗೊಳಿಸಿರುವುದು ಖಂಡನೀಯವಾಗಿದೆ. ಇದು ಸಂಪೂರ್ಣ ಹಿಂದೂ ಸಮುದಾಯಕ್ಕೆ ಮಾಡಿದ ಅಪಮಾನವಾಗಿದ್ದು, ಕೂಡಲೇ ಛತ್ರಪತಿ ಶಿವಾಜೀ ಮಹಾರಾಜರ ಪ್ರತಿಮೆಯನ್ನು ಪುನರ್ಸ್ಥಾಪನೆ ಮಾಡಬೇಕೆಂದು ಆಗ್ರಹಿಸಿದರು. ರಾಷ್ಟ್ರ ರಕ್ಷಣಾ ಪಡೆಯ ಪೂರ್ಣಿಮಾ ಬಾರಿಮನಿ ಮಾತನಾಡಿ, 'ರಾಷ್ಟ್ರ ರಕ್ಷಣಾ ಪಡೆಯ ಪುನಿತ್ ಕೆರೆಹಳ್ಳಿಯವರು ಅನಾಥ ಮಕ್ಕಳ ಶಿಕ್ಷಣಕ್ಕಾಗಿ ಸಹಾಯ ಮಾಡುತ್ತಿದ್ದರು, 5 ಜನ ಕ್ಯಾನ್ಸರ್ ಪೀಡಿತರ ಚಿಕಿತ್ಸೆಯ ಖರ್ಚನ್ನು ಅವರೇ ನೋಡಿಕೊಳ್ಳುತ್ತಿದ್ದರು. ದೇವಸ್ಥಾನಗಳ ಸ್ವಚ್ಚತೆ, ಗೋವುಗಳ ರಕ್ಷಣೆ, ಮುಂತಾದ ರೀತಿಯಲ್ಲಿ ಸಮಾಜ ಸೇವೆಯನ್ನು ಮಾಡುತ್ತಿದ್ದರು. ಅವರ ಮೇಲೆ ದ್ವೇಷದಿಂದ ಗುಂಡಾ ಕಾಯಿದೆಯನ್ನು ಹಾಕಿರುವುದು ಖಂಡನೀಯವಾಗಿದೆ. ಅವರ ಮೇಲಿನ ಗುಂಡಾ ಕಾಯಿದೆಯನ್ನು ರದ್ದು ಮಾಡಿ, ಅವರ ಬಿಡುಗಡೆಗೆ ವ್ಯವಸ್ಥೆಯನ್ನು ಮಾಡಬೇಕು` ಎಂದು ಒತ್ತಾಯಿಸಿದರು.


ಹಿಂದೂ ಜನಜಾಗೃತಿ ಸಮಿತಿಯ ಮೋಹನ್ ಗೌಡ ಮಾತನಾಡಿ, ಮಣಿಪುರದಲ್ಲಿ ನಡೆದ ಗಲಭೆಯಲ್ಲಿ 141 ಜನರ ಹತ್ಯೆ ನಡೆದಿದ್ದು, ಅನೇಕ ಹಿಂದೂಗಳ ಮನೆ, ದೇವಸ್ಥಾನಗಳನ್ನು ಸುಟ್ಟು ಹಾಕಲಾಗಿದ್ದು, ಜೀವಭಯದಿಂದ ಮೈತೇಯಿ ಸಮುದಾಯದವರು ಗ್ರಾಮ ತೊರೆದು ಪಲಾಯನ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ದೆಹಲಿಯಲ್ಲಿ ಮೊಹರಂ ಮೆರವಣಿಗೆಯಲ್ಲಿ ವ್ಯವಸ್ಥಿತವಾಗಿ ಹಿಂಸಾಚಾರದ ಮೂಲಕ ಹಿಂದೂಗಳ ಮೇಲೆ ಹಲ್ಲೆ ನಡೆಯಿತು. ಈ ಗಲಭೆಯ ಬಗ್ಗೆ ಪ್ರಸಾರವಾದ ಎಲ್ಲ ವೀಡಿಯೊಗಳನ್ನು ಸಂಗ್ರಹಿಸಿ ಅದರ ಆಧಾರದ ಮೇಲೆ ಸೂಕ್ಷ್ಮ ಪ್ರದೇಶಗಳಲ್ಲಿ ಕೋಬಿಂಗ್ ಕಾರ್ಯಾಚರಣೆಯನ್ನು ನಡೆಸಬೇಕು, ದಂಗೆಯಲ್ಲಿ ಭಾಗಿಯಾದ ರೋಹಿಂಗ್ಯಾ, ಬಾಂಗ್ಲಾದೇಶಿ ಮುಸಲ್ಮಾನರನ್ನು ಬಂಧಿಸಿ ದೇಶದಿಂದ ಹೊರದಬ್ಬಬೇಕು, ಈ ಪೂರ್ವಯೋಜಿತ ಗಲಭೆ ಅಥವಾ ಹಿಂಸಾಚಾರವನ್ನು ತಡೆಯುವಲ್ಲಿ ಪೋಲೀಸ್-ಆಡಳಿತಾತ್ಮಕ ಅಧಿಕಾರಿಗಳ ಸಂಪೂರ್ಣ ವೈಫಲ್ಯದ ಬಗ್ಗೆ, ಅವರ ವಿರುದ್ಧ ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು, ಗಲಭೆಕೋರರ ಮೇಲೆ ಯುಎಪಿಎ, ‘ಸಂಘಟಿತ ಅಪರಾಧ’, ‘ರಾಷ್ಟ್ರೀಯ ಭದ್ರತಾ ಕಾಯ್ದೆ` ಅಡಿಯಲ್ಲಿ ಅಪರಾಧಗಳನ್ನು ದಾಖಲಿಸಬೇಕು` ಎಂದು ಒತ್ತಾಯಿಸಿದರು.


إرسال تعليق

0 تعليقات
إرسال تعليق (0)
To Top