ಪುತ್ತೂರು: ನನ್ನ ಜ್ಞಾನ ನನ್ನ ಹಣ ಎಲ್ಲಾ ದೇಶಕ್ಕೋಸ್ಕರ ಎಂಬ ಪರಿಕಲ್ಪನೆ ಪ್ರತಿಯೊಬ್ಬರಲ್ಲಿಯೂ ಇರಬೇಕು. ಉದ್ದೇಶದ ಅರಿವಿದ್ದರೆ ವಿದ್ಯಾರ್ಥಿಗಳು ಕರ್ತವ್ಯ ಪ್ರಜ್ಞೆಯಿಂದ ಪ್ರಯತ್ನಿಸಿದಾಗ ಗುರಿ ಮುಟ್ಟುತ್ತಾರೆ. ಫಲ ಸಿಕ್ಕಿಯೇ ಸಿಗುತ್ತದೆ. ದೇಶಪ್ರೇಮ, ಸಂಸ್ಕೃತಿ ಇವೆಲ್ಲಾ ಜೀವನದ ಧ್ಯೇಯೋದ್ದೇಶಗಳಾಗಿರಬೇಕು. ವರ್ತಮಾನದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಾದ ಸಿ.ಇ.ಟಿ., ನೀಟ್ನ ಫಲಿತಾಂಶದ ಅಂಕಿ ಅಂಶಗಳನ್ನು ತಿಳಿಸಿ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಉತ್ತಮ ಕಾಲೇಜಿನಲ್ಲಿ ಮುಂದಕ್ಕೆ ಸೀಟು ಪಡೆದುಕೊಂಡು ತಮ್ಮ ತಮ್ಮ ಕಾಲಮೇಲೆ ತಾವು ನಿಲ್ಲಬೇಕಾದರೆ ಪೋಷಕರು, ಉಪನ್ಯಾಸಕರು ತಮ್ಮ ಹೊಣೆಗಾರಿಕೆಯನ್ನರಿತು ನಿರಂತರ ಮಕ್ಕಳ ಜೊತೆಗೆ ಸಂಪರ್ಕವಿಟ್ಟುಕೊಂಡಿರಬೇಕು. ಬದಲಾವಣೆಯ ಮನೋಭಾವವಿರಬೇಕು. ಇದರಿಂದ ಸಫಲತೆ ಸಾಧ್ಯ ಎಂದು ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ನ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜರು ಹೇಳಿದರು. ಅವರು ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪೋಷಕರ ಸಭೆಯಲ್ಲಿ ಅಧ್ಯಕ್ಷೀಯ ನುಡಿಗಳನ್ನಾಡಿದರು.
ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಈ ವರ್ಷ ಸ್ವಲ್ಪ ಬದಲಾವಣೆ ಇದೆ. ಇದರ ಬಗ್ಗೆ ಪೋಷಕರಿಗೂ ಮನವರಿಕೆ ಮಾಡುವ ದೃಷ್ಟಿಯಿಂದ ಈ ಸಭೆಯನ್ನು ಕರೆಯಾಗಿದೆ. ನಮ್ಮ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾದ ಅನಿಕೇತ್ ಎನ್, ಅಕ್ಷಯ್ ಕೃಷ್ಣ, ಸತ್ಯಪ್ರಸಾದ್ ನಾಯಕ್ ಹಾಗೂ ಶ್ರೀಕೃಷ್ಣ ನಟ್ಟೋಜ ವಿಶ್ವ ಸ್ಕೌಟ್ ಸಮ್ಮೇಳನದಲ್ಲಿ ಭಾಗವಹಿಸಿರುವುದು ಹೆಮ್ಮೆಯ ವಿಷಯ. ಇನ್ನೋರ್ವ ವಿದ್ಯಾರ್ಥಿ ಧನ್ವಿತ್ ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ಆಯ್ಕೆಯಾಗಿ ವಿಶ್ವಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾನೆ ಎಂದು ಕಾಲೇಜಿನ ಪ್ರಾಚಾರ್ಯರಾದ ಸತ್ಯಜಿತ್ ಉಪಾಧ್ಯಾಯರು ಪ್ರಾಸ್ತಾವಿಕ ನುಡಿಗಳನ್ನಾಡಿದರು ಹಾಗೂ ನೆರೆದಿರುವ ಎಲ್ಲರನ್ನೂ ಸ್ವಾಗತಿಸಿದರು.
ಪ್ರಥಮ ಕಿರು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದವರಿಗೆ ನಟ್ಟೋಜ ಫೌಂಡೇಶನ್ ಟ್ರಸ್ಟ್ನ ಕೋಶಾಧಿಕಾರಿ ರಾಜಶ್ರೀ ನಟ್ಟೋಜರು ಸ್ಮರಣಿಕೆ ನೀಡಿ ಗೌರವಿಸಿದರು.
ಉಪಪ್ರಾಚಾರ್ಯರಾದ ಶೈನಿ ಕೆ ಜೆ ಹಾಗೂ ಉಪನ್ಯಾಸಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಸಭೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕಿ ಸಂಧ್ಯಾ ಕುಮಾರಿ ಹಾಗೂ ಉಪನ್ಯಾಸಕ ಸುಬ್ರಹ್ಮಣ್ಯ ಕೆ ಕಾರ್ಯಕ್ರಮ ನಿರೂಪಿಸಿದರು. ಪೋಷಕರು ತಮ್ಮ ಸಲಹೆ ಸೂಚನೆಗಳನ್ನಿತ್ತರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ