ಅಕ್ಷರ ಆರಾಧನೆ- 24: ಕೃಷ್ಣನ ಜಾಣನಡೆಯ ನಿದರ್ಶನ

Upayuktha
0

 || ಸವಿತ್ರಂತರ್ಗತ  ಶ್ರೀ ಶೇಷಶಾಯಿನೇ ನಮಃ ||



ನಘೋರ ಕುರುಕ್ಷೇತ್ರ ಯುದ್ಧ ಆಗ ತಾನೆ ಮುಗಿದಿತ್ತು. ಕೌರವರ ದುಷ್ಟಶಕ್ತಿಯ ಪ್ರತೀಕ ನಾಶವಾಗಿತ್ತು. ಪಾಂಡವರ ಸದಾಚಾರ ಮತ್ತು ಧರ್ಮಕ್ಕೆ ಜಯ ದೊರಕಿತ್ತು. ಧೃತರಾಷ್ಟ್ರನ ಮಕ್ಕಳೆಲ್ಲ ನಾಶವಾಗಿದ್ದರು. ಒಂದು ದಿನ ಕೃಷ್ಣನು ಪಾಂಡವರ ಜೊತೆಗೆ ಧೃತರಾಷ್ಟ್ರನನ್ನು ಭೇಟಿಯಾಗಲು ಬಂದನು. ಪಾಂಡವರನ್ನು ತಂದೆಯ ಸ್ಥಾನದಲಿ ನಿಂತು ರಕ್ಷಿಸಬೇಕೆಂದು ಧೃತರಾಷ್ಟ್ರನಿಗೆ ಹೇಳಿದನು. ಧೃತರಾಷ್ಟ್ರನಿಗೆ ತನ್ನ ಬಹುಪಾಲು ಮಕ್ಕಳ ಸಾವಿಗೆ ಕಾರಣನಾದ ಭೀಮನ ಮೇಲೆ ವಿಪರೀತವಾದ ಕೋಪವಿತ್ತು. ಅದಕ್ಕಾಗಿ ತಕ್ಕ ಸಮಯವನ್ನು ಕಾಯುತ್ತಿದ್ದ. ಪುತ್ರಶೋಕದಿಂದ ನೊಂದಿರುವ ನನ್ನನ್ನು ಬಿಗಿದಪ್ಪಿಕೊಳ್ಳಿ ಎಂದು ಪಾಂಡವರಿಗೆ ಧೃತರಾಷ್ಟ್ರ ಹೇಳಿದ. ಆಯಿತೆಂದು ಪಾಂಡವರು ಅವನ ಹತ್ತಿರ ಬಂದರು. ಎಲ್ಲರಿಗೂ ಮೊದಲು ಭೀಮ ನಿಂತಿದ್ದನು. ಮೊದಲು ಭೀಮನು ಬರುತ್ತಾನೆಂದಾಗ ಧೃತರಾಷ್ಟ್ರನಿಗೆ ಅತೀವ ಸಂತಸವಾಯಿತು. ಆಗ ನಮ್ಮ ಜಾಣ ಶ್ರೀಕೃಷ್ಣನು ಭೀಮನ ಕಂಚಿನ ಪ್ರತಿಮೆಯನ್ನು ಧೃತರಾಷ್ಟ್ರನ ಮುಂದೆ ಇಟ್ಟನು. ಹೀಗೇಕೆ ಎಂದು ಎಲ್ಲರಿಗೂ ಆಶ್ಚರ್ಯವಾಯಿತು. ತಕ್ಷಣ ಕಾರ್ಯಪ್ರವೃತ್ತನಾದ ಧೃತರಾಷ್ಟ್ರನು ಆ ಕಂಚಿನ ಪ್ರತಿಮೆಯನ್ನೇ ಭೀಮನೆಂದು ಭ್ರಮಿಸಿ ತನ್ನ ಪೂರ್ಣ ಶಕ್ತಿ ಸಾಮರ್ಥ್ಯದಿಂದ ಎದೆಗೆ ಅವಚಿಕೊಂಡನು. ಅವನಲ್ಲಿ ಹುದುಗಿದ್ದ ಆ ದ್ವೇಷ ಮತ್ತು ಶಕ್ತಿಗೆ ಕಂಚಿನ ಪ್ರತಿಮೆಯು ಪುಡಿಪುಡಿಯಾಯಿತು. ಎಲ್ಲರಿಗೂ ಆಶ್ಚರ್ಯದ ಜೊತೆ ಗಾಬರಿಯೂ ಆಯಿತು. ಧೃತರಾಷ್ಟ್ರನಿಗೆ ತನ್ನ ತಪ್ಪಿನ ಅರಿವಾಗಿ ಕೃಷ್ಣನಲ್ಲಿ ಕ್ಷಮೆಕೋರಿದ. ಪುತ್ರ ವ್ಯಾಮೋಹಿಯಾಗಿದ್ದ ಧೃತರಾಷ್ಟ್ರನಿಂದ ಆಗಬಹುದಾಗಿದ್ದ ಒಂದು ಅನಾಹುತವು ಕೃಷ್ಣನ ಜಾಣತನದಿಂದ ತಪ್ಪಿತು. 

ಕೃಷ್ಣನಿಗೆ ನೀಲಮೇಘಶ್ಯಾಮ ಎಂಬ ಹೆಸರೂ ಇದೆ. ಅದು ಕೇವಲ ಅದರ ಬಣ್ಣದಿಂದಲ್ಲ. ಆಕಾಶದಲ್ಲಿಯ ನೀಲ ಮೇಘಗಳ ಸಂಕೇತ ಫಲ ಭರಿತ ಸೃಷ್ಟಿಗೆ ಮೂಲವಾದ ಮಳೆಯನ್ನು ಸುರಿಸುವುದು ಅದರಂತೆ ಬೇಡಿದ ಇಷ್ಟಾರ್ಥಗಳನ್ನು ಸುರಿಸುವವನು ನೀಲಮೇಘಶ್ಯಾಮ. ಕೃಷ್ಣ ಎಂಬ ಶಬ್ದಕ್ಕೆ ಅಗ್ನಿ ಎಂಬ ಅರ್ಥವೂ ಇದೆ. ಆ ಅರ್ಥದಲ್ಲಿ ನಮ್ಮ ಪಾಪಗಳನ್ನು ಸುಟ್ಟುಹಾಕುವ ಶಕ್ತಿ ಇದ್ದದ್ದು ಕೃಷ್ಣನಲ್ಲಿ ಅಂತೆಯೇ ದಾಸರು, ಕಲಿಯುಗದಲ್ಲಿ ಕೃಷ್ಣಾ ಎನಬಾರದೆ, ಕೃಷ್ಣನೆಂದರೆ ಕಷ್ಟಗಳೆಲ್ಲ ಪರಿಹಾರ. ಶ್ರೀಕೃಷ್ಣ ಹುಟ್ಟಿದ್ದು ರಾಜಮನೆತನದಲ್ಲಾದರೂ ಗೊಲ್ಲರಕೇರಿಯಲ್ಲಿ ಗೊಲ್ಲನಂತೆ ಬದುಕಬೇಕಾಯಿತು. ತಾನು ರಾಜಕುಮಾರ ಎಂದು ಅರಿತಿದ್ದರೂ ಕೃಷ್ಣನಿಗೆ ಗೊಲ್ಲರ ಕೇರಿಯಲ್ಲೇ ಇರುವುದು ಏನೂ ಕಷ್ಟ ಎನಿಸಲಿಲ್ಲ. ಗೊಲ್ಲಗೊಲ್ಲತಿಯರ ನಿರ್ಮಲ ಮುಗ್ಧ ಸ್ನೇಹಾಶ್ರಯದಲ್ಲಿ ಆನಂದವನ್ನು ಕಂಡುಕೊಂಡ. ಅವರಿಗೆ ಕಷ್ಟಕಾಲದ ಆಪದ್ಭಾಂಧವನಾದ, ಸುಖದಲ್ಲಿ ಸರಸ ಗೆಳೆಯನಾದ, ಗಂಭೀರ ನಿರ್ಣಯಗಳನ್ನು ತೆಗೆದುಕೊಳ್ಳುವಲ್ಲಿ ಮಂತ್ರಿಯಾದ, 'ವೇಣುಗೋಪಾಲ'ನಾಗಿ ಸರಸಸಂಗೀತದ ಹೊಳೆಯನ್ನೇ ಹರಿಯಿಸಿದ, ಗೋಪಗೋಪಿಯರ ಹೃದಯಗಳನ್ನು ಗೆದ್ದ, ಹಸು-ನವಿಲು-ಚರಾಚರಗಳನ್ನೆಲ್ಲ ಮಂತ್ರಮುಗ್ಧಗೊಳಿಸಿದ, ರಾಸ ನೃತ್ಯದ ಲೋಕೋತ್ತರ ಆನಂದವನ್ನು ಸೃಜಿಸಿದ. 


ಶ್ರೀಕೃಷ್ಣ ಎಂದರೆ ಭಾರತೀಯ ಸಂಸ್ಕೃತಿಯ ಪೂರ್ಣರೂಪ. ಭಾರತೀಯ ಸಂಸ್ಕೃತಿಯ ಎಲ್ಲ ಆಯಾಮಗಳನ್ನೂ ಶ್ರೀಕೃಷ್ಣನ ತತ್ತ್ವ ಪ್ರಭಾವಿಸಿದೆ; ಸಾಹಿತ್ಯ-ಸಂಗೀತ-ಶಿಲ್ಪ-ನೃತ್ಯ-ಚಿತ್ರ-ರಾಜಕಾರಣ-ತತ್ತ್ವಶಾಸ್ತ್ರ- ಹೀಗೆ ಭಾರತೀಯ ಜೀವನದ ಎಲ್ಲ ಆಯಾಮಗಳನ್ನೂ ಅವನಷ್ಟು ಸಮೃದ್ಧಗೊಳಿಸಿದವರು ಬೇರೋಬ್ಬರಿಲ್ಲ. ಶ್ರೀಕೃಷ್ಣ ಯುದ್ಧಭೂಮಿಯಲ್ಲಿ ಉಪದೇಶಿಸಿದ ಗೀತೆ ನಮ್ಮ ದೇಶದ ಆಧ್ಯಾತ್ಮಿಕತೆಗೇ ಬುನಾದಿಯಂತಿದೆ. ತಾಯಂದಿರು ಮಕ್ಕಳಿಗೆ ಹೇಳುವ ಕಥೆ ಕೃಷ್ಣನದೇ ಬಾಲ್ಯದ ಯಾವುದಾದರೊಂದು ಸಂಗತಿಗೆ ತಳುಕು ಹಾಕಿಕೊಂಡಿರುತ್ತದೆ; ಮಾತ್ರವಲ್ಲ, ಅವರ ಮಕ್ಕಳನ್ನು ಕೃಷ್ಣನನ್ನಾಗಿಯೂ ಭಾವಿಸಿಕೊಳ್ಳುತ್ತಾರೆ. ಎಲ್ಲ ತರುಣಿಯರ ಆದರ್ಶಪ್ರೇಮಿಯಾಗಿ ಕೃಷ್ಣನು ಕಂಡರೆ ಅಚ್ಚರಿಪಡಬೇಕಿಲ್ಲ; ಹಾಗೆಯೇ, ಸಂಕಷ್ಟದಲ್ಲಿರುವ ಸ್ತ್ರೀಯರ ರಕ್ಷಕನಾಗಿಯೂ ಅವನೇ ಕಾಣುತ್ತಾನೆ. ಮಿತ್ರನೊಬ್ಬನಿದ್ದರೆ ಕೃಷ್ಣನಂತೆ ಇರಬೇಕು ; ನಮಗೆ ಬೆಳಕಾಗಬಲ್ಲ ಗುರುವೂ ಅವನೇ ಎಂದೂ ಅನಿಸದಿರದು. ರಾಜನೀತಿಯಲ್ಲಿ ಅವನಂಥ ಚತುರತೆ ದಕ್ಕಬೇಕೆಂದು ಯಾವ ರಾಜಕಾರಣಿ ತಾನೆ ಬಯಸದಿದ್ದಾನು ? ಯೋಗಿಗಳಿಗೆ ಪರಮ ಯೋಗಿಯೂ, ಭೋಗಿಗಳಿಗೆ ಪರಮಸಖನಾಗಿಯೂ ಏಕಕಾಲದಲ್ಲಿ ಕಾಣಿಸಿಕೊಳ್ಳಬಲ್ಲವನು ಶ್ರೀಕೃಷ್ಣ. ಇಟ್ಟಿನಲ್ಲಿ ನಮ್ಮ ಜೀವನದ ಎಲ್ಲ ರೂಪ-ಸ್ವರೂಪಗಳನ್ನೂ ಆವರಿಸಿರುವವನು ಅವನು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top