ಜನರ ಸಂಶಯ ನಿವಾರಿಸಿ; ಸತ್ಯಾಸತ್ಯತೆ ಬಯಲು ಮಾಡುವ ಬದಲು ಟ್ವೀಟ್ ಮಾಡಿದವರ ಮನೆಯ ಮೇಲೆ ಪೊಲೀಸ್ ದಾಳಿ ಖಂಡನೀಯ
ಸುರತ್ಕಲ್: ಶೌಚಾಲಯದಲ್ಲಿ ಮೊಬೈಲ್ ಇಟ್ಟವರನ್ನು ಪತ್ತೆ ಮಾಡುವುದನ್ನು ಬಿಟ್ಟು ಪೊಲೀಸ್ ಇಲಾಖೆ ಟ್ವೀಟ್ ಮಾಡಿದ ಬಡಪಾಯಿಯ ಮನೆಯ ಮೇಲೆ ತನಿಖೆಯ ನೆಪದಲ್ಲಿ ದಾಳಿ ಮಾಡಿರುವುದು ಅತಿರೇಕದ ವರ್ತನೆಯಾಗಿದೆ. ಕಾಂಗ್ರೆಸ್ ಸರ್ಕಾರ ಹಿಂದೂ ಸಮುದಾಯದ ಮೇಲೆ ದಾಳಿ ನಡೆಸಲು ರಾಜ್ಯದ ಪೊಲೀಸ್ ಪಡೆಯನ್ನು ಬಳಸಲು ಸಜ್ಜಾಗಿರುವಂತಿದೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ವೈ.ಟೀಕಾ ಪ್ರಹಾರ ನಡೆಸಿದ್ದಾರೆ.
ಉಡುಪಿಯ ಕಾಲೇಜು ಒಂದರ ಶೌಚಾಲಯದಲ್ಲಿ ಗುಪ್ತವಾಗಿ ಮೊಬೈಲ್ ಕ್ಯಾಮೆರಾ ಇಟ್ಟು ಚಿತ್ರೀಕರಣ ಮಾಡಲಾಗಿತ್ತು. ಎಂಬ ಬಗ್ಗೆ ಭಾರಿ ಚರ್ಚೆ ನಡೆಯುತ್ತಿರುವಂತೆ, ಇದೀಗ ಪ್ರಕರಣ ತಿರುಚಲು ಹಾಗೂ ಏನೂ ಆಗಿಲ್ಲವೆಂಬತೆ ಮಾಡಲು ಮೊಬೈಲ್ ಅದಲು ಬದಲು ಮಾಡಲಾಗಿದೆ ಎಂಬ ಸಂಶಯ ಜನರಲ್ಲಿ ಉಂಟಾಗಿದೆ. ಮೊದಲು ಇದಕ್ಕೆ ಉತ್ತರ ನೀಡಿ. ಉಡುಪಿ ಪೊಲೀಸರು ಘಟನೆ ನಡೆದಿರುವುದಕ್ಕೆ ಸಾಕ್ಷ್ಯ ಇಲ್ಲ ಎಂದು ಹೇಳುತ್ತಿದ್ದಾರೆ. ಹಾಗಾದರೆ ದಿಢೀರ್ ಆಗಿ ವಿದ್ಯಾರ್ಥಿನಿಯರನ್ನು ವಜಾಗೊಳಿಸಲು ಕಾರಣ ಏನು, ಬೆಂಕಿಯಿಲ್ಲದೆ ಹೊಗೆಯಾಡಲು ಸಾಧ್ಯವಿಲ್ಲ. ಕೇರಳ ಮೂಲದ ವಿದ್ಯಾರ್ಥಿಗಳಾಗಿರುವುದರಿಂದ ಲವ್ ಜಿಹಾದ್ ಸಹಿತ, ವಿವಿಧ ವಿದ್ವಂಸಕ ಕೃತ್ಯ ಎಸಗಲು ಇದೊಂದು ಬ್ಲ್ಯಾಕ್ ಮೈಲ್ ಷಡ್ಯಂತ್ರವಾಗಿರುವ ಸಾಧ್ಯತೆಯಿದೆ. ಈ ಪ್ರಕರಣ ಕುರಿತಂತೆ ರಾಜ್ಯ ಸರ್ಕಾರ ತಕ್ಷಣ ಎಸ್ಐಟಿ ತನಿಖೆಗೆ ಆದೇಶಿಸಬೇಕು ಎಂದು ಶಾಸಕರು ಒತ್ತಾಯಿಸಿದ್ದಾರೆ.
ಪ್ರಕರಣವನ್ನು ಸರಕಾರ ಗಂಭೀರವಾಗಿ ತೆಗೆದುಕೊಳ್ಳುವ ಬದಲು ಉಡಾಫೆಯಾಗಿ ವರ್ತಿಸಿ ಮುಂದೊಂದು ದಿನ ಕಂಟಕಪ್ರಾಯವಾಗಬಹುದು. ಇದರ ಹಿಂದೆ ನಿಷೇಧಿತ ಸಂಘಟನೆ ಪಿಎಫ್ಐ ಕೈವಾಡ ಇದ್ದರೆ ತನಿಖೆ ನಡೆಸಿ, ಹಿಂದೂ ಸಮುದಾಯದ ಯುವತಿಯರು ಬಲಿಪಶುವಾಗದಂತೆ ರಕ್ಷಣೆಯನ್ನು ನೀಡುವ ಕೆಲಸ ಮೊದಲು ಮಾಡಬೇಕಿದೆ ಎಂದು ಒತ್ತಾಯಿಸಿದ್ದಾರೆ.
ಟ್ವೀಟ್ ಮಾಡಿ ಸರಕಾರ, ತನಿಖಾ ಇಲಾಖೆ ಹಾಗೂ ಸಾರ್ವಜನಿಕರನ್ನು ಎಚ್ಚರಿಸುವ ಕೆಲಸ ಮಾಡಿದ ಮಾತ್ರಕ್ಕೆ, ರಾತ್ರಿ ಸಮಯದಲ್ಲಿ ಯುವತಿಯ ಮನೆಗೆ ತೆರಳಿ ತನಿಖೆಯ ನೆಪದಲ್ಲಿ ಕಿರುಕುಳ ನೀಡಿರುವುದು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಾಗದು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ, ಭಾರತೀಯ ಜನತಾ ಪಕ್ಷಯ ಭದ್ರ ಕೋಟೆಯಾಗಿರುವ ಕರಾವಳಿ ಭಾಗವನ್ನು ಗುರಿಯಾಗಿಸಿ ಇರಿಸಿಕೊಂಡು ಹಿಂದೂ ಕಾರ್ಯಕರ್ತರ ಗಡಿಪಾರು, ಸುಳ್ಳು ಕೇಸುಗಳನ್ನು ದಾಖಲಿಸಲು ಪೂರ್ವ ತಯಾರಿ ನಡೆಸಿದೆ.
ಇದರ ಮುಂದುವರಿದ ಭಾಗವಾಗಿ ಟ್ವೀಟ್ ಮಾಡಿದ ರಶ್ಮಿ ಸಮಂತ ಅವರನ್ನು ಕೂಡ ತನಿಖೆ ನೆಪದಲ್ಲಿ ಪ್ರಕರಣ ದಾಖಲಿಸಿ, ಇಡೀ ಪ್ರಕರಣವನ್ನು ತಿರುಚಲು ಮುಂದಾಗಿರುವಂತಿದೆ. ಜಿಲ್ಲೆಯಲ್ಲಿ ಹಾಗೂ ಕರಾವಳಿಯಲ್ಲಿ ಸಂಘರ್ಷಮಯ ವಾತಾವರಣಕ್ಕೆ ಸರಕಾರ ಎಡೆ ಮಾಡಿಕೊಡಬಾರದು. ದ್ವೇಷ ರಾಜಕಾರಣದಿಂದ ಕಾನೂನು ಹದೆಗೆಟ್ಟಲ್ಲಿ ರಾಜ್ಯದ ಆಡಳಿತ ರೂಢ ಕಾಂಗ್ರೆಸ್ ಸರ್ಕಾರವೇ ಜವಾಬ್ದಾರಿಯಾಗಲಿದೆ ಎಂದು ಡಾ. ಭರತ್ ಶೆಟ್ಟಿ ವೈ ಎಚ್ಚರಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ