ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ದೃಢಕಲಶ
ಮಂಗಳೂರು: ಬಡತನ ಹಾಗೂ ಕಷ್ಟದಲ್ಲಿರುವವರಿಗೆ ನಮ್ಮಿಂದಾಗುವ ಸಹಾಯ ಮಾಡುವ ಮೂಲಕ ಮಾನವ ತತ್ವವನ್ನು ಸಹಕಾರ ಗೊಳಿಸಬೇಕು, ನೊಂದಿರುವ ವ್ಯಕ್ತಿಗೆ ಮಾಡುವ ಸೇವೆಯೇ ದೇವರಿಗೆ ನಿಜವಾಗಿ ಮಾಡುವ ಸೇವೆ, ಕುಲಾಲ ಸಮಾಜದ ಒಗ್ಗಟ್ಟಿನ ಶಕ್ತಿ ಕೇಂದ್ರವಾಗಿ ಶ್ರೀ ವೀರನಾರಾಯಣ ಕ್ಷೇತ್ರ ಭವ್ಯವಾಗಿ ನಿರ್ಮಾಣಗೊಂಡಿದೆ. ದೇವಸ್ಥಾನಗಳು ಅಂತರಂಗವನ್ನು ಗಟ್ಟಿಗೊಳಿಸುವ ಆಧ್ಯಾತ್ಮದ ಜಿಮ್ ಸೆಂಟರ್ ಆಗಬೇಕು ಎಂದು ಕೇಮಾರು ಶ್ರೀ ಸಂದೀಪನಿ ಸಾಧನ ಆಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.
ಜುಲೈ 9ರಂದು ಕುಲಶೇಖರ ದೇವಸ್ಥಾನದಲ್ಲಿ ಪ್ರತಿಷ್ಠಾಬಂಧ ಬ್ರಹ್ಮಕಲಶೋತ್ಸವದ ಪರಿಪೂರ್ಣತೆಗಾಗಿ ನಡೆದ ದೃಢ ಕಲಶಾಭಿಷೇಕದ- ಹಿನ್ನೆಲೆಯಲ್ಲಿ ರವಿವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನವಿತ್ತರು.
ಬದುಕುವ ಕಲೆಯನ್ನು ವಿದ್ಯಾರ್ಥಿಯ ಜೀವನ ಸಂದರ್ಭದಲ್ಲಿ ಬೋಧಿಸಬೇಕು. ಹಾಗಾದರೆ ಮಾತ್ರ ಮಕ್ಕಳು ವಿದ್ಯೆಯೊಂದಿಗೆ ಬದುಕನ್ನು ಕೂಡ ಧೈರ್ಯದಲ್ಲಿ ಮುನ್ನಡೆಸುತ್ತಾರೆ. ಮೊದಲು ವಿದ್ಯಾರ್ಥಿಗಳು ಬದುಕುವ ಕಲೆಯನ್ನು ಕರಗತ ಮಾಡಿಕೊಳ್ಳುವುದು ಅಗತ್ಯ. ಪ್ರತಿಯೊಬ್ಬರಿಗೂ ಮೊಬೈಲ್ ಆವಾಂತರ ತಪ್ಪಿಸಿ ಮಾನವ ಸಂಬಂಧ ಬೆಸೆಯುವುದನ್ನು ತಿಳಿಸಬೇಕಾಗಿದೆ ಎಂದು ಕೇಮಾರು ಮಠದ ಶ್ರೀ ಈಶವಿಠಲದಾಸ ಸ್ವಾಮೀಜಿ ಹೇಳಿದರು.
ಅಶೀರ್ವಚನವಿತ್ತ ಶ್ರೀ ಕ್ಷೇತ್ರ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಆಶೀರ್ವಚನ ನೀಡುತ್ತಾ, ಸಾತ್ವಿಕ ಮನೋಬಲದ ಕುಲಾಲ ಸಮಾಜದ ಶ್ರೇಷ್ಠತೆ ಹಾಗೂ ಹಿರಿಯರ ಮಾರ್ಗದರ್ಶನದಂತೆ ಸಮಾಜ ಮುನ್ನಡೆಯಬೇಕು. ಧರ್ಮದ ರಕ್ಷಣೆಗಾಗಿ ನಿರ್ಮಾಣಗೊಂಡಿರುವ ದೇವಸ್ಥಾನಗಳು ಸಮರ್ಥ ರೀತಿಯಲ್ಲಿ ಮುನ್ನಡೆಸುವುದು ಅಗತ್ಯವಿದೆ. ದೇವರ ಮೇಲೆ ನಂಬಿಕೆ ಇದ್ದವನು ಬದುಕಿನಲ್ಲಿ ಎಂದು ಸೋಲನ್ನು ಅನುಭವಿಸುವುದಿಲ್ಲ ಎಂದು ಹಾರೈಸಿದರು.
ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘ ಅಧ್ಯಕ್ಷ ಮಯೂರ್ ಉಳ್ಳಾಲ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಶ್ರೀ ವೀರನಾರಾಯಣ ಕ್ಷೇತ್ರ ನವ ನಿರ್ಮಾಣ ಕಾರ್ಯಕ್ಕೆ ಪಣ ತೊಟ್ಟಿರುವ ಕುಲಾಲ ಸಮಾಜ ಬಂಧುಗಳ ಕನಸು ಸಾರ್ಥಕವಾಗಿದೆ. ಎಲ್ಲಾ ಕ್ಷೇತ್ರಗಳಲ್ಲೂ ಬೆಳದಿ ನಿಂತಿರುವ ಕುಲಾಲರು ಹೃದಯ ಶ್ರೀಮಂತಿಕೆಯ ಗುಣ ಮತ್ತು ಧೈರ್ಯಶಾಲಿ ಛಲದಿಂದ ಸುಮಾರು 10 ಕೋಟಿ ರೂಪಾಯಿ ವೆಚ್ಚದಲ್ಲಿ ದೇವಸ್ಥಾನ ಕಡಿಮೆ ಸಮಯದಲ್ಲಿ ನಿರ್ಮಾಣವಾಗಿದೆ. ಬಡ ಕುಟುಂಬಗಳ ಹೆಣ್ಣು ಮಕ್ಕಳಿಗೆ ಹಾಸ್ಟೆಲ್ ನಿರ್ಮಾಣ ಮಾಡುವ ಯೋಜನೆ ನಮ್ಮದಿದೆ ದೇವಸ್ಥಾನದ ಬ್ರಹ್ಮಕಲಸದ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡ ಭಕ್ತರಿಗೆ ಮತ್ತುದಾನ ನೀಡಿದ ದಾನಿಗಳೆಲ್ಲರಿಗೂ ದೇವರು ಶ್ರೇಯಸ್ಸನ್ನು ತರಲಿ ಎಂದು ನುಡಿದರು.
ಮುಖ್ಯ ಅತಿಥಿ ಮುಂಬೈಯ ಪ್ರಸಿದ್ಧ ಜ್ಯೋತಿಷ್ಯರು ಡಾ.ಎಂ.ಜೆ. ಪ್ರವೀಣ್ ಭಟ್ ಮಾತನಾಡುತ್ತಾ, ಆಧ್ಯಾತ್ಮಿಕದ ಸೌಂದರ್ಯದ ಕೇಂದ್ರವಾಗಿರುವ ಜಿಲ್ಲೆಗೆ ಶ್ರೀ ವೀರನಾರಾಯಣ ದೇವಸ್ಥಾನ ಮುಕುಟ ಪ್ರಾಯವಾಗಿದೆ. ದೇವಸ್ಥಾನದಲ್ಲಿ ನಡೆಯುವ ಪುಣ್ಯ ಕಾರ್ಯಗಳಿಗೆ ದಾನ ನೀಡಿದರೆ ಅದಕ್ಕಿಂತ ಹೆಚ್ಚು ದೇವರು ಹಿಂದಿರುಗಿಸುತ್ತಾರೆ ಎನ್ನುವ ನಂಬಿಕೆ ನಮ್ಮದಾಗಬೇಕು. ಹಿಂದೂ ಧರ್ಮದ ರಕ್ಷಣೆಗಾಗಿ ಸೇವೆ ಮಾಡುವ ಸ್ವಾಮೀಜಿಯವರೊಂದಿಗೆ ನಾವೆಲ್ಲರೂ ಇರಬೇಕು. ಅವರ ಮಾರ್ಗದರ್ಶನದಿಂದ ದೇವಸ್ಥಾನಗಳ ಬೆಳಗುತ್ತಿರಲಿ ಎಂದು ನುಡಿದರು.
ಮುಂಬೈ ಬಂಟರ ಸಂಘದ ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ಗಿರೀಶ್ ಆರ್.ಶೆಟ್ಟಿ ತೆಳ್ಳಾರ್ ಮಾತನಾಡಿ, ದೇವಸ್ಥಾನಗಳು ಕೋಟಿ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿದೆ ಎನ್ನುವುದು ಮುಖ್ಯವಲ್ಲ. ಅದನ್ನು ಮುಂದೆ ಮುನ್ನಡೆಸುವುದು ಮುಖ್ಯ ಭಕ್ತರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಕ್ಷೇತ್ರವನ್ನು ಸಂದರ್ಶಿಸುವಂತಾಗಬೇಕು. ದೇವಸ್ಥಾನದ ಅರ್ಚಕರು, ಆಡಳಿತ ಮಂಡಳಿಯೂ ಭಕ್ತರಲ್ಲಿ ಧಾರ್ಮಿಕತೆಯನ್ನು ಹೆಚ್ಚು ಬೆಳೆಸಿಕೊಳ್ಳುವಂತಾಗಬೇಕು. ಕುಲಾಲ ಸಮಾಜದ ಬಂಧುಗಳ ಸಂಘಟನಾ ಶಕ್ತಿ ಕ್ಷೇತ್ರದಲ್ಲಿ ಮೇಲಾಯಿಸುತ್ತಿದೆ, ಈ ಕ್ಷೇತ್ರವನ್ನು ಸಮರ್ಥ ರೀತಿಯಲ್ಲಿ ಮುನ್ನಡೆಸುವ ಎಲ್ಲಾ ಜವಾಬ್ದಾರಿ ಕುಲಾಲ ಸಮಾಜದಲ್ಲಿದೆ ಎಂದು ನುಡಿದರು.
ವೇದಿಕೆಯಲ್ಲಿ ವೃದ್ಧಿ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ಎಸ್.ಪಿ., ಮುಂಬೈ ಕುಲಾಲ ಸಂಘದ ಮಂಗಳೂರು ಕುಲಾಲ ಭವನದ ನಿರ್ಮಾಣದ ಉಪ ಕಾರ್ಯಾಧ್ಯಕ್ಷ, ಮಹಾದಾನಿ ಸುನಿಲ್ ಆರ್ ಸಾಲಿಯಾನ್, ಮುಂಬೈಯ ಉದ್ಯಮಿ ಕ್ಷೇತ್ರದ ಮಹಾದಾನಿ ಸುರೇಖಾ ರತನ್ ಕುಲಾಲ್, ಮುಂಬೈ ಕುಲಾಲ ಸಂಘದ ಅಧ್ಯಕ್ಷ ರಘು ಮೂಲ್ಯ, ಮುಂಬೈಯ ಜ್ಯೋತಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯ ಧ್ಯಕ್ಷ ಗಿರೀಶ್ ಬಾಬು ಸಾಲ್ಯಾನ್, ಜೀರ್ಣೋದ್ಧಾರ ಬೆಂಗಳೂರು ಸಮಿತಿಯ ಅಧ್ಯಕ್ಷ ಮಾಧವ ಕುಲಾಲ್ ಬೆಂಗಳೂರು, ಶ್ರೀ ವೀರ ನಾರಾಯಣ ದೇವಸ್ಥಾನದ ಅಡಳಿತ ಮೊಕ್ತಸರ ಪುರುಷೋತ್ತಮ ಕುಲಾಲ್ ಕಲ್ಯಾವಿ, ಬ್ರಹ್ಮಕಲಶೋತ್ಸವ ಸಮಿತಿ ಸಮಿತಿ ಅಧ್ಯಕ್ಷ ಬಿ. ಪ್ರೇಮಾನಂದ ಕುಲಾಲ್ ಕೋಡಿಕಲ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಾಮೋದರ ಎ., ಸೇವಾ ಸಮಿತಿ ಅಧ್ಯಕ್ಷ ಕೆ.ಸುಂದರ ಕುಲಾಲ್ ಶಕ್ತಿನಗರ, ಶ್ರೀ ವೀರನಾರಾಯಣ ದೇವಸ್ಥಾನದ ಮಹಿಳಾ ವಿಭಾಗದ ಅಧ್ಯಕ್ಷ ಗೀತಾ ಮನೋಜ್ ಮರಳಿ ಉಪಸ್ಥಿತರಿದ್ದರು.
ಶ್ರೀ ವೀರನಾರಾಯಣ ಸೇವಾ ಟ್ರಸ್ಟಿನ ಅಧ್ಯಕ್ಷ ಬಿ ಪ್ರೇಮಾನಂದ ಕುಲಾಲ್ ಸ್ವಾಗತಿಸಿದರು. ಪುತ್ತೂರು ಕುಲಾಲ ಸಂಘದ ಅಧ್ಯಕ್ಷ ನವೀನ್ ಕುಲಾಲ್ ಪುತ್ತೂರು ಕಾರ್ಯಕ್ರಮವನ್ನು ನಿರೂಪಿಸಿದರು, ಕೊಲ್ಯ ಕುಲಾಲ ಸಂಘದ ಮಾಜಿ ಅಧ್ಯಕ್ಷ ಪ್ರವೀಣ್ ಬಸ್ತಿ ವಂದಿಸಿದರು.
ದೃಢಕಲಶ ಪ್ರಯುಕ್ತ ಬೆಳಿಗ್ಗೆ ಗಣಪತಿ ಸಾನಿಧ್ಯದಲ್ಲಿ ಗಣ ಹೋಮ, ನವಕ, ಪ್ರಧಾನ ಹೋಮ, ಶ್ರೀ ದೇವರಿಗೆ 49 ಕಲಶಾಧಿವಾಸ, ಪ್ರಧಾನ ಹೋಮ, ಭಾಗವತ ಉದ್ಯಾಪನಾ ಹೋಮ, ಕಲಶಾಭಿಷೇಕ, ಮಹಾಪೂಜೆ, ಅನ್ನ ಸಂತರ್ಪಣೆ, ಮಧ್ಯಾಹ್ನ ಸಾಂಸ್ಕೃತಿಕ ಕಾರ್ಯಕ್ರಮ ದ ಅಂಗವಾಗಿಸೌಂದರ್ಯ ಕುಲಾಲ್, ಭಾರ್ಗವಿ ಬಿ.ಜಿ. ಮತ್ತು ಪಿ.ಎಸ್.ಎಸ್.ಇ.ಎಂ.ಆರ್. ಶಾಲೆ ಇದರ ವಿದ್ಯಾರ್ಥಿಗಳಿಂದ ತೋಳಹುಣಸ, ದಾವಣಗೆರೆ ಇವರಿಂದ "ನೃತ್ಯ-ವೈಭವ" ನಡೆಯಿತು.
ಸಂಜೆ ವಿದ್ವಾನ್ ಕುದ್ದಾಡಿ ಶ್ರೀ ಕೃಷ್ಣರಾಜ ಆಚಾರ್ಯ, ಬೆಂಗಳೂರು ಇವರಿಂದ"ಶ್ರೀಮತ್ ಭಾಗವತ "ಸಪ್ತಾಹ ಪ್ರವಚನ ಸಮಾರೋಪ ನಡೆಯಿತು ಆ ಬಳಿಕ ಭಕ್ತಿ ಭಜನಾ ಸಂಕೀರ್ತನೆ ಮಹಾಪೂಜೆ ವಿಶೇಷ ಭಾಗವತ ಪ್ರಸಾದ ವಿತರಣೆ, ರಾತ್ರಿ ರಂಗಪೂಜೆ, ಮಂಗಳ ಮಂತ್ರಾಕ್ಷತೆ, ಭಾಗವತ ವಿಶೇಷ ಪ್ರಸಾದ ವಿತರಣೆ ನಡೆಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ