ಲಹರಿ: ಇಳೆಯ ನಲಿವಿಗೆ ಮಳೆಯೆ ಕಾರಣ

Upayuktha
0

ಳೆಗಿಳಿದ ಮಳೆಯ ಬಲದಿಂದ ಭೂತಾಯ ಮೊಗದಲ್ಲಿ ಚೆಲುವಿನ ನಗುವು . ವಸುಂಧರೆ ನಗುತ್ತಾಳೆ, ನಲಿಯುತ್ತಾಳೆ, ಸಂತಸದಿ ಸಡಗರವ ಸಂಭ್ರಮಿಸಿ ಉತ್ಸಾಹದಿ ಉತ್ಸವಗಳ ಅನುಭವಿಸುತ್ತಾಳೆ. ನುಡಿ ಪೂಜೆ ಗುಡಿಪೂಜೆಗಳ ಘಂಟಾನಾದದಿ ಹರ್ಷವನ್ನು ಪಡುತ್ತಾಳೆ. ಓಡುವ ಮೇಘಗಳು ನಿಂತು ಹರಸಿ ಸುರಿಸಿದ ವರ್ಷಧಾರೆಗೆ ಸಂಪೂರ್ಣ ಧರೆಯ ದೇವಿಯು ಮಿಂದೆದ್ದ ಭವ್ಯ ಸುಂದರಿಯಾಗಿ ಕಾಣುತ್ತಾಳೆ. ನವಿರಾದ ಹಸಿರಲ್ಲಿ ಚೆನ್ನಾದ ಚೆಲುವನ್ನು ಹೊಮ್ಮಿಸುತ್ತ ಪಾವಿತ್ರ್ಯ ಪೂರ್ಣ ಒಲವಿನ ಉಡುಗೊರೆಯ ಸಿರಿಧರೆಯ ಮಡಿಲಲ್ಲಿ ನಲಿದಾಡುತಿರುವ ಕೂಸು ಕಂದಮ್ಮಗಳಿಗೆ ನೀಡುತ್ತಾ ನಭೋ ಮಂಡಲದ ಮಿನುಗು ತಾರೆಗಳಂತೆ ಫಳಫಳನೆ ಹೊಳೆಯುತ್ತಿರಲು ಚೆಲುವಿನ ಸೊಬಗಿಗೇನು ಕಮ್ಮಿ?


ವರ್ಷಧಾರೆಯ ಒಲವಿಗೆ ಹರ್ಷವದು ಹೊಮ್ಮುತ್ತಿದೆ. ಎಲ್ಲೆಡೆಯು ಮೂಡುತ್ತಿದೆ ಚೆಲುವು. ಶೃಂಗಾರ ರಸ ಕಾವ್ಯ ಕಟ್ಟುವಿಕೆಗೆ ಇಳೆಗಿಳಿದ ಮಳೆಯೇ ಕಾರಣವು ಎಂಬುದು ನೆನಪಿರಲಿ. ಇಳೆಗಿಳಿದ ಮಳೆಯ ಬಲದಿಂದ ಪ್ರಕೃತಿ ಮಾತೆಯ ಸೊಬಗು ಇಮ್ಮಡಿಸಿದೆ. ಪ್ರಾಯದ ಹುಡುಗಿಯ ಮನದಲ್ಲಿ ಮೊದಲ ಪ್ರೇಮವು ಅಂಕುರಿಸಿದಂತೆ ನಿಸರ್ಗದ ಎಲ್ಲ ಗಿಡಮರಗಳಲ್ಲಿ ನವಿರಾದ ಹಸಿರು ಅಂಕುರಿಸಿದೆ. ತೂಗಾಡುವ ತೆಂಗು ಕಂಗುಗಳು ಮಾತೆ ನಿಸರ್ಗ ದೇವಿಗೆ ಚಾಮರವ ಬೀಸುವಂತೆ ಕಾಣುತ್ತಿದೆ. ವರ್ಷಧಾರೆಯ ಬಲದಿಂದ ಗಿಡಗಿಡದಲೂ ಮೊಗ್ಗುಗಳು ಹೂವಾಗಿ ಅರಳಿವೆ. ಹೂವುಗಳು ಕಾಯಾಗಿವೆ. ಕಾಯಿಗಳು ಸಿಹಿಯಾದ ಹಣ್ಣಾಗಿವೆ. ರಸಭರಿತ ಹಣ್ಣುಗಳು ಕಣ್ಣುಗಳ ನೋಟಕ್ಕೆ ಆಟವಾಗಿವೆ. ರಸಭರಿತ ಹಣ್ಣುಗಳು ನಾಲಿಗೆಯ ಸವಿರುಚಿಗೆ ಊಟವಾಗಿವೆ. ಹೀಗಿರಲು ಸಂದರ್ಭ, ಉಂಡು ಕೊಂಡಾಡುವ ಜನರಿಗೇನು ಕಮ್ಮಿ ?


ಇಳೆಗಿಳಿದ ಮಳೆಯ ಬಲದಿಂದ ಜಾತ್ರೆ ಜಾಂಬೂರಿಗಳು ನಡೆಯುತ್ತಿವೆ. ಭೂಮಾತೆಯ ಬಲದಿಂದ ಗೋಮಾತೆಯರು ಸವಿಯಾದ ಅಮೃತವನ್ನು ನೀಡುತ್ತಿದ್ದಾರೆ. ಸುಗ್ಗಿಯ ಹಾಡು ಕುಣಿತಗಳು ಮೇಳೈಸಿವೆ. ಇಳೆಯಲ್ಲಿ ಇಮ್ಮಡಿಸಿದ ಇಳುವರಿಯ ಬೆಳೆಯಿಂದ ಜನರ ಮನದಲ್ಲಿ ಮೊಗದಲ್ಲಿ ನಗುವೆಂಬ ಹೂವು ಅರಳಿದೆ. ಕಾಂಚಾಣ ದೇವಿಯು ಎಲ್ಲ ಹಸ್ತಗಳಲ್ಲೂ ಪ್ರತ್ಯಕ್ಷವಾಗಿ ಸಂತಸದ ನಲಿವಿಗೆ ಕಾರಣವಾಗಿಹಳು. ಅಂಗಡಿ ಮುಂಗಟ್ಟುಗಳು, ವಿಧವಿಧದ ಮಾರುಕಟ್ಟೆಗಳು ವ್ಯಾಪಾರ ವಹಿವಾಟುಗಳು ಚೆನ್ನಾಗಿವೆ. ಧರೆಯ ಜನರೆಲ್ಲ ಸಿರಿಯ ಸಂಪನ್ನರಾಗಿ ಬದುಕುತಿರಲು ಸಂತಸದ ನಗುವಿಗೇನು ಕಮ್ಮಿ?


ಇಳೆಗಿಳಿದ ಮಳೆಯ ಬಲದಿಂದ ಮುಂಜಾನೆಯ ಮುಗಿಲ ಮಲ್ಲಿಗೆಯೆನಿಸಿದ ಚೆಂದದ ಸೂರ್ಯೋದಯವು ವೈವಿಧ್ಯಮಯವಾದ ಚೆಲುವಿನಿಂದ ಅನಾವರಣಗೊಂಡಿದೆ. ರವಿಯ ಎಳೆಗಿರಣಗಳ ಹೊಂಬಿಸಿಲ ತಾಪವು ಜೀವಿಗಳ ಮೈ ಮನಗಳಿಗೆ ಹಿತವೆಸಿದೆ. ವರ್ಣಮಯ ಧರೆಯ ಸಿರಿಯ ಸೊಬಗು ಸ್ವರ್ಗವನ್ನೆ ನಾಚಿಸುವಂತಿದೆ. ಮುಂಬೆಳಗಿನ ಹಕ್ಕಿಗಳ ಚಿಲಿಪಿಲಿಯ ಕಲರವವು ಸಂಗೀತ ವಾದ್ಯ ಗೋಷ್ಠಿಗಳನ್ನು ನಡೆಸುವಂತಿದೆ. ಹೀಗಿರಲು ಪಕೃತಿ ಮಾತೆಯು, ಕೋಗಿಲೆಗಳಂತೆ ಹಾಡುವ ಗಾನ ಗಂಧರ್ವರಿಗೇನು ಕಮ್ಮಿ? ಕಾವ್ಯಗಳು ಕಟ್ಟುವ ಜೀವ ಕವಿವರ್ಯರ ಭಾವಗಳಿಗೇನು ಕಮ್ಮಿ?


ಇಳೆಗಿಳಿದ ಮಳೆಯ ಬಲದಿಂದ ಸರ್ವ ಕ್ಷೇತ್ರಗಳಲ್ಲೂ ನವ ಚೇತನವು ಮೂಡಿದೆ. ಬಡತನವ ನೀಗಿಸುವ, ಸಿರಿತನವ ಹೆಚ್ಚಿಸುವ ಶಕ್ತಿ ಇಳೆಗಿಳಿದ ಮಳೆಯ ಬಲದಿಂದ ಮಾತ್ರ ಸಾಧ್ಯ. ಸಿರಿಧರೆಯ ಚೆಲುವಿಗೆ, ಒಲವಿಗೆ, ಗೆಲುವಿಗೆ ಇಳೆಗಿಳಿದ ಮಳೆಯೆ ಕಾರಣವು . ಗುರುವರ್ಯರ ವಿದ್ಯಾ ಸಂಪನ್ನತೆಗೂ, ಬುದ್ಧಿ ವರ್ಯರ ಹಿತ ಚಿಂತನೆಗಳಿಗೂ ಇಳೆಗಿಳಿದ ಮಳೆಯೆ ಕಾರಣವು . ಮನೆಮನೆಗಳಲ್ಲೂ, ಮನಮನಗಳಲ್ಲೂ, ಉಲ್ಲಾಸದ ಉತ್ಸಾಹದ ಹೊಂಬೆಳಕಿನ ಆಶಾಕಿರಣಗಳು ಕುಡಿಯೊಡೆದು ಬೆಳೆಯುತ್ತಿವೆ. ಸರ್ವೇ ಜನಾಃ ಸುಖಿನೋ ಭವಂತು ಎಂಬಾಶಯಕೆ ಇಳೆಗಿಳಿದ ಮಳೆಯ ಬಲವೇ ಕಾರಣವು.

-ಕೆ. ಎನ್. ಚಿದಾನಂದ ಹಾಸನ 

                                                                  

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top