ವಿಜಯವಿಠಲ ಶಿಕ್ಷಣ ಸಂಸ್ಥೆಗಳ 2300 ಮಕ್ಕಳಿಂದ ಮೊಳಗಿದ ಸಾಮೂಹಿಕ ರಾಮಜಪ
ಮೈಸೂರು: ಅಧಿಕ ಮಾಸದ ಪ್ರಯುಕ್ತ ರಾಜ್ಯಾದ್ಯಂತ ಇಂದಿನಿಂದ ಒಂದು ತಿಂಗಳು ಅಯೋಧ್ಯಾ ರಾಮನ ಕೃಪೆಗಾಗಿ ಲೋಕ ಕ್ಷೇಮಾರ್ಥ ದಶಕೋಟಿ ರಾಮಜಪ ಯಜ್ಞಕ್ಕೆ ಶ್ರೀ ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಸೋಮವಾರ ಮೈಸೂರಿನಲ್ಲಿ ಚಾಲನೆ ನೀಡಿದರು.
ಸ್ಥಳೀಯ ವಿಜಯ ವಿಠಲ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆದ ರಾಮಜಪ ಯಜ್ಞವನ್ನು ಶ್ರೀಗಳು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಅನುಗ್ರಹ ಸಂದೇಶ ನೀಡಿ ಒಂದು ತಿಂಗಳ ಪರ್ಯಂತ ನಿತ್ಯ 108 ಬಾರಿ ಶ್ರೀರಾಮಜಪ ಯಜ್ಞವನ್ನು ಸಾಮೂಹಿಕವಾಗಿ ಮಾಡುವುದರಿಂದ ನಮಗೆಲ್ಲ ವೈಯುಕ್ತಿಕವಾಗಿ ಮತ್ತು ಸಾಮೂಹಿಕವಾಗಿ ರಾಮನ ಕೃಪೆಯಾಗುತ್ತದೆ. ಸಮಾಜದಲ್ಲಿರುವ ರಾವಣನಂಥ ದುಷ್ಟ ಪ್ರಭಾವಗಳು ದೂರವಾಗಿ ರಾಮನಂಥ ಸದ್ಗುಣಗಳು ಜಾಗೃತವಾಗಿ ಎಲ್ಲರಿಂದಲೂ ಒಳ್ಳೆಯ ಚಿಂತನೆಗಳು ಒಳ್ಳೆಯ ಕೆಲಸಗಳನ್ನು ಮಾಡಲು ಸ್ಫೂರ್ತಿ ಉತ್ಸಾಹ ದೊರೆತಾಗ ಇಡೀ ನಾಡಿಗೆ ಮಂಗಲವಾಗುತ್ತವೆ. ಒಂದು ತಿಂಗಳು ಮಾತ್ರವಲ್ಲದೇ ಜೀವನವಿಡೀ ರಾಮನ ಸ್ಮರಣೆಯನ್ನು ಪ್ರತಿದಿನ ಕನಿಷ್ಠ ಹತ್ತು ಬಾರಿಯಾದರೂ ತಮ್ಮ ಮನೆಗಳಲ್ಲಿ ಮಾಡುವಂತೆ ಮಕ್ಕಳಿಗೆ ಮಾರ್ಗದರ್ಶನಗೈದರು.
ಮಕ್ಕಳಿಗೆ ರಾಮಜಪವನ್ನು ಬೋಧಿಸಿದರು. 2300 ವಿದ್ಯಾರ್ಥಿಗಳಿಂದ ಸಾಮೂಹಿಕ ರಾಮಜಪಗೈದರು. ಕೊನೆಯಲ್ಲಿ ಲೋಕದ ಶಾಂತಿ ಸುಭಿಕ್ಷೆ ಸಮೃದ್ಧಿ ಸಹಿತ ಒಳಿತಿಗಾಗಿ ಪ್ರಾರ್ಥನೆ ಮಾಡಲಾಯಿತು. ವಿಜಯ ವಿಠಲ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ವಾಸುದೇವ ಭಟ್, ಶಿಕ್ಷಕ ವೃಂದ, ಬೋಧಕೇತರ ಸಿಬಂದಿಗಳೂ ಉಪಸ್ಥಿತರಿದ್ದು ರಾಮಜಪ ಮಾಡಿದರು. ಕಾರ್ಯಕ್ರಮದ ಬಳಿಕ ಪುಟಾಣಿ ಮಕ್ಕಳ ತರಗತಿಗೆ ಶ್ರೀಗಳು ಭೇಟಿ ನೀಡಿದಾಗ ಎಲ್ಲ ಪುಟಾಣಿಗಳೂ ಜೈಶ್ರೀರಾಮ್ ಘೋಷಣೆಯೊಂದಿಗೆ ಶ್ರೀಗಳಿಗೆ ಗೌರವ ಸಲ್ಲಿಸಿದರು.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ