ಧರ್ಮತ್ತಡ್ಕ: ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಮುಳ್ಳೇರಿಯ ಮಂಡಲಾಂತರ್ಗತ ಗುಂಪೆ ವಲಯ ಸಭೆ ಭಾನುವಾರ (ಜು.9) ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರೀ ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆಯಿತು.
ಸಂಧ್ಯಾಕುಮಾರಿ ಮರುವಳ ದೀಪ ಬೆಳಗಿಸಿದರು, ಮಂಗಳೂರು ಪ್ರಾಂತ ಉಪಾಧ್ಯಕ್ಷರು ಹಾಗೂ ಮುಳ್ಳೇರಿಯ ಮಂಡಲ ಅಧ್ಯಕ್ಷರೂ ಆಗಿರುವ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ ಧ್ವಜಾರೋಹಣ ನಡೆಸಿದರು. ಶಂಖನಾದ ಗುರುವಂದನೆ, ಗೋಸ್ತುತಿಯೊಂದಿಗೆ ಆರಂಭವಾದ ಸಭೆಯ ಅಧ್ಯಕ್ಷತೆಯನ್ನು ವಲಯಾಧ್ಯಕ್ಷರಾದ ಬಿ.ಎಲ್. ಶಂಭು ಹೆಬ್ಬಾರ್ ವಹಿಸಿದರು.
ಕಾರ್ಯದರ್ಶಿ ಕೇಶವಪ್ರಸಾದ ಎಡಕ್ಕಾನ ಪ್ರಾಸ್ತಾವಿಕ ನುಡಿಗಳ ಮೂಲಕ ಗೋಕರ್ಣದ ಅಶೋಕೆಯಲ್ಲಿ ನಡೆಯುತ್ತಿರುವ ಸಂಘಟನಾ ಚಾತುರ್ಮಾಸ್ಯದ ಮಾಹಿತಿಗಳನ್ನು ನೀಡಿದರು. ಈ ದಿನ ಪುರಸ್ಕೃತರಾದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಚಾತುರ್ಮಾಸ್ಯದ ಸಂದರ್ಭದಲ್ಲಿ ಶ್ರೀಗುರುಗಳಿಂದ ಅನುಗ್ರಹ ಪುರಸ್ಕಾರ ಸ್ವೀಕರಿಸುವ ಸದವಕಾಶ ಲಭ್ಯವಿದೆ ಎಂದರು. ಹಾಗೂ ವಲಯ ಭಿಕ್ಷೆಯ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಐವರು ಸಾಧಕರಿಗೆ ಶ್ರೀಗುರುಗಳಿಂದ ಪುರಸ್ಕೃತರಾಗುವ ಅವಕಾಶವಿದೆ ಎಂದ ಅವರು ವಲಯದ ಸಾಧಕರನ್ನು ಗುರುತಿಸಲು ಸಹಕಾರ ಕೋರಿದರು.
ಗತಸಭೆಯ ವರದಿ ಮತ್ತು ಮಹಾಮಂಡಲ ಸುತ್ತೋಲೆಯನ್ನು ವಾಚಿಸಿ ವಿಭಾಗವಾರು ವರದಿಗಳನ್ನು ನೀಡಲಾಯಿತು. ಆಗಸ್ಟ್ 28ರಂದು ಗುಂಪೆ ವಲಯದ ಭಿಕ್ಷಾಸೇವೆ ನೆರವೇರಲಿದೆ ಎಂದು ತಿಳಿಸಿ ವಲಯದ ಶಿಷ್ಯಬಂಧುಗಳ ಮನೆಗಳಿಗೆ ವಿತರಿಸಲಿರುವ ಚಾತುರ್ಮಾಸ್ಯದ ಆಮಂತ್ರಣ ಪತ್ರಿಕೆ ಹಾಗೂ ವ್ಯಾಸ ಮಂತ್ರಾಕ್ಷತೆಯನ್ನು ವಲಯದ ಎಲ್ಲಾ ಘಟಕಗಳ ಗುರಿಕ್ಕಾರರಿಗೆ ನೀಡಲಾಯಿತು. ಕೋಶಾಧ್ಯಕ್ಷರಾದ ರಾಜಗೋಪಾಲ ಭಟ್ ಅಮ್ಮಂಕಲ್ಲು ಲೆಕ್ಕಪತ್ರ ಮಂಡನೆ ಮಾಡಿದರು.
ಗುಂಪೆ ವಲಯದಲ್ಲಿ 2022- 23 ರ ಸಾಲಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಅರುಣಾ ಮರುವಳ, ಆದೀಶಕೃಷ್ಣ ಅಮ್ಮಂಕಲ್ಲು, ಸ್ಪೂರ್ತಿಲಕ್ಷ್ಮಿ ಗುಂಪೆ, ಸಿಂಚನಾ ಜಿ.ಎಂ, ಗುಂಪೆ, ಹಿರಣ್ಮಯಿ ಮರುವಳ, ಚಿನ್ಮಯೀ ಬೆಜಪ್ಪೆ, ಪ್ರಬೋಧ ಬಾಯಾಡಿ, ಮನೋಜ್ಞ ಚೆಕ್ಕೆಮನೆ, ಅಕ್ಷಿತ್ ರಾಮ ನೆಕ್ಕಿಗುಳಿ, ಇವರನ್ನು ಶಾಲು ಹೊದೆಸಿ ಫಲಕ, ಹಣ್ಣುಹಂಪಲುಗಳನ್ನಿತ್ತು ಗೌರವಿಸಲಾಯಿತು. ವಿದ್ಯಾರ್ಥಿವಾಹಿನಿ ಪ್ರಧಾನೆ ನಳಿನಿ ಬೆಜಪ್ಪೆ ವಿದ್ಯಾರ್ಥಿಗಳ ಕಿರುಪರಿಚಯ ನೀಡಿದರು.
ಶಾಲಾ ಪ್ರಬಂಧಕರಾದ ಶಂಕರನಾರಾಯಣ ಭಟ್ ನೇರೋಳು ವಿದ್ಯಾರ್ಥಿಗಳಿಗೆ ಶುಭ ಹಾರೈಸುತ್ತಾ, "ಇದೊಂದು ಔಚಿತ್ಯಪೂರ್ಣ ಕಾರ್ಯಕ್ರಮವಾಗಿದ್ದು ಶ್ರೀಗುರುಗಳು ವಿದ್ಯಾರ್ಥಿಗಳ ಪ್ರತಿಭೆಗಳಿಗೆ ಅದೆಷ್ಟು ಮಹತ್ವ ನೀಡುತ್ತಿದ್ದಾರೆ ಎಂಬುದನ್ನು ಇಲ್ಲಿ ಮನಗಾಣಬಹುದು ಎಂದರು. ಧರ್ಮತ್ತಡ್ಕ ಶ್ರೀದುರ್ಗಾಪರಮೇಶ್ವರೀ ವಿದ್ಯಾಸಂಸ್ಥೆಗಳಿಗೆ ಶ್ರೀಗುರುಗಳ ಪಾದಸ್ಪರ್ಶವಾದ ನಂತರ ಇಲ್ಲಿನ ವಿದ್ಯಾರ್ಥಿಗಳ ಸಾಧನೆ ಹೆಚ್ಚಾಗಿದೆ. ಅಂತೆಯೇ ಶ್ರೀಗುರುಗಳ ಅನುಗ್ರಹ ಪಡೆಯಲಿರುವ ಈ ವಿದ್ಯಾರ್ಥಿಗಳ ಭವಿಷ್ಯವೂ ಉಜ್ವಲವಾಗಲಿ" ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಾಲಸುಬ್ರಹ್ಮಣ್ಯ ಭಟ್ ಮಾತನಾಡಿ "ಶ್ರೀಮಠದ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಗುಂಪೆ ವಲಯದ ವಿದ್ಯಾರ್ಥಿಗಳ ಸಾಧನೆ ಶ್ಲಾಘನೀಯ. ಈ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆಗೈಯುವ ಅವಕಾಶ ದೊರಕಲಿ. ಈ ಮೂಲಕ ಅವರ ಕೀರ್ತಿ ದೇಶದಾದ್ಯಂತ ಪಸರಿಸಲಿ. ಅವರ ಸಾಧನೆಗಳಿಗೆ ಶ್ರೀಗುರುಗಳ ಅನುಗ್ರಹ ದೊರಕಲಿ. ಇಂದಿನ ಪುರಸ್ಕಾರ ಅವರ ಮುಂದಿನ ಸಾಧನೆಗಳಿಗೆ ಪ್ರೇರಣೆಯಾಗಲಿ ಎಂದು ಶುಭಹಾರೈಸಿದರು.
ಗುಂಪೆ ವಲಯದ ಸಂಘಟನಾತ್ಮಕ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು "ಪ್ರತಿಯೊಬ್ಬ ಶಿಷ್ಯನ ಸಹಕಾರ ಪ್ರತಿಯೊಂದು ಕಾರ್ಯಕ್ಕೂ ಇರಬೇಕು ಎಂಬ ಶ್ರೀಗುರುಗಳ ಯೋಜನೆ ಕಾರ್ಯಗತವಾಗಲು 'ನಾನು ನನ್ನ ಮಠ' ಎಂಬ ಭಾವ ಅಂತರಂಗದಿಂದಲೇ ಜಾಗೃತವಾಗಬೇಕು" ಎಂದರು.
ಹವ್ಯಕ ಆಚಾರ, ಆಹಾರ ಕ್ರಮಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕಾದ ಅನಿವಾರ್ಯತೆ ಇಂದು ಅತೀ ಅಗತ್ಯವಿದೆ ಎಂದು ನುಡಿದ ಬಾಲಸುಬ್ರಹ್ಮಣ್ಯ ಭಟ್ ಇದಕ್ಕಾಗಿ ಜೀವನಬೋಧ ಶಿಬಿರ, ಹಲಸುಮೇಳಗಳಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಈ ಮೂಲಕ ಸಂಘಟನೆಯೂ ವೃದ್ಧಿಯಾಗುವುದು" ಎಂದರು.
ಸಭಾಧ್ಯಕ್ಷರು ಮಾತನಾಡಿ 'ಚಾತುರ್ಮಾಸ್ಯದ ವಲಯ ಭಿಕ್ಷೆಯ ಸಂದರ್ಭದಲ್ಲಿ ಪ್ರತೀ ಮನೆಯಿಂದಲೂ ಕನಿಷ್ಟ ಒಬ್ಬರಾದರೂ ಭಾಗವಹಿಸಬೇಕೆಂದು' ಕರೆನೀಡಿದರು.
ವಲಯದ ಗುರಿಕ್ಕಾರರು, ಪದಾಧಿಕಾರಿಗಳು, ಕಾರ್ಯಕರ್ತರು, ಶಿಷ್ಯಬಂಧುಗಳು ಸಭೆಯಲ್ಲಿ ಉಪಸ್ಥಿತರಿದ್ದರು. ರಾಮತಾರಕ ಜಪ, ಶಾಂತಿ ಮಂತ್ರದೊಂದಿಗೆ ಸಭೆ ಮುಕ್ತಾಯವಾಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ