ಮಂಗಳೂರು: ನಗರದಲ್ಲಿ ಸೋಮವಾರ ಬೆಳಗಿನಿಂದಲೇ ಸುರಿದ ಭಾರೀ ಮಳೆಗೆ ಸಂಚಾರ ಅವ್ಯವಸ್ಥೆಗೆ ಕುಖ್ಯಾತಿ ಪಡೆದ ಪಂಪ್ವೆಲ್ ಫ್ಲೈಓವರ್ ಸುತ್ತಲಿನ ಪ್ರದೇಶ ಬೃಹತ್ ಕೆರೆಯಂತಾಯಿತು. ಇದರಿಂದಾಗಿ ಈ ಭಾಗದಲ್ಲಿ ಸಂಚರಿಸುವ ವಾಹನಗಳು, ಪಾದಚಾರಿಗಳು ತೀವ್ರ ಸಂಕಷ್ಟ ಅನುಭವಿಸುವಂತಾಯಿತು.
ಫ್ಲೈ ಓವರ್ ನಿರ್ಮಾಣದ ಕಾಮಗಾರಿಯೇ ಅತ್ಯಂತ ಕಳಪೆಯಾಗಿದ್ದು, ಹಲವಾರು ವರ್ಷಗಳ ಕಾಲ ಕುಂಟುತ್ತ ಸಾಗಿ, ಬಹಳಷ್ಟು ಸಾರ್ವಜನಿಕರ ಆಕ್ರೋಶ, ಲೇವಡಿಗೆ ತುತ್ತಾಗಿ, ನಂತರ ಪೂರ್ಣಗೊಂಡಿತ್ತು. ಮೊದಲೇ ತಗ್ಗು ಪ್ರದೇಶವಾದ ಮಹಾವೀರ ಸರ್ಕಲ್ನ ಈ ಭಾಗದಲ್ಲಿ ಫ್ಲೈ ಓವರ್ ನಿರ್ಮಿಸುವಾಗ ಅತಿ ಬುದ್ಧಿವಂತ ಎಂಜಿನಿಯರ್ಗಳು ಮತ್ತಷ್ಟು ತಗ್ಗು ನಿರ್ಮಿಸಿ ಮಳೆಗಾಲದಲ್ಲಿ ಕೃತಕ ನೆರೆಗೆ ಕಾರಣರಾಗಿದ್ದಾರೆ. ಕಾಮಗಾರಿ ನಡೆಯುವಾಗ ಆಗಿಂದಾಗ್ಗೆ ಪ್ರಗತಿ ಪರಿಶೀಲಿಸಿ ಸೂಕ್ತ ಮಾರ್ಪಾಡುಗಳನ್ನು ಮಾಡಿಸಬೇಕಿದ್ದ ಸಂಸದರು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ, ಸಾಮಾಜಿಕ ಜಾಲತಾಣಗಳಲ್ಲಿ ವಿಪರೀತ ಟ್ರೋಲ್ ಆಗಿದ್ದರು. ಹೀಗಾಗಿಯೇ ಇಂದಿಗೂ ಪಂಪ್ವೆಲ್ ಹೆಸರು ಕೇಳಿದಾಕ್ಷಣ ದಕ್ಷಿಣ ಕನ್ನಡದ ಸಂಸದರು ಮತ್ತು ಅವರ ಬಗೆಗಿನ ಟ್ರೋಲ್ಗಳು ನೆನಪಿಗೆ ಬರುವುದು ಸುಳ್ಳಲ್ಲ.
ಪಂಪ್ವೆಲ್ನಲ್ಲಿ ರಸ್ತೆಯಲ್ಲಿ ಕೃತಕ ನೆರೆ ಬರುವುದು ಇದೇ ಮೊದಲಲ್ಲ. ಆದರೆ ಫ್ಲೈ ಓವರ್ ನಿರ್ಮಾಣಕ್ಕೆ ಮೊದಲು ಸ್ವಲ್ಪ ಹೊತ್ತಿನಲ್ಲಿ ನೆರೆ ಇಳಿದು ಹೋಗುತ್ತಿತ್ತು. ಆದರೆ ಈಗ ಫ್ಲೈ ಓವರ್ ಕಾರಣದಿಂದ ಸುತ್ತಲೂ ಎತ್ತರದ ಪ್ರದೇಶವಾಗಿದ್ದು, ಮೊದಲಿನ ಸರ್ಕಲ್ ಇದ್ದ ಪ್ರದೇಶದ ಬಾವಿಯಂತಾಗಿದೆ.
ಪಂಪ್ವೆಲ್ ಕೃತಕ ನೆರೆ ಪರಿಣಾಮ ಮಂಗಳೂರು ನಗರ ಹಾಗೂ ಹೆದ್ದಾರಿ ಸಂಚಾರದ ಮೇಲೆ ತೀವ್ರ ದುಷ್ಪರಿಣಾಮ ಉಂಟಾಗಿದೆ. ನಂತೂರು ಸರ್ಕಲ್, ಕದ್ರಿ, ಹಂಪನಕಟ್ಟೆ, ಕೊಟ್ಟಾರ ಚೌಕಿ ಮುಂತಾದ ಪ್ರದೇಶಗಳಲ್ಲಿ ಸಂಚಾರ ಅಸ್ತವ್ಯಸ್ತವಾಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ