ಕಡಬ: ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದೆ. ಲಗೇಜ್ ಕೊಠಡಿ, ಶೌಚಾಲಯ ಸೇರಿದಂತೆ ಎಲ್ಲವೂ ಮುಳುಗಡೆಯಾಗಿದ್ದು, ಭಕ್ತರಿಗೆ ನದಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಮಂಜೇಶ್ವರ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಗೂ ಪ್ರವಾಹದ ನೀರು ನುಗ್ಗಿದ್ದು, ವಾಹನ ಸಂಚಾರ ನಿಷೇಧ ಹಾಕಲಾಗಿದೆ. ಕೃಷಿ ತೋಟಗಳಿಗೆ ನುಗ್ಗಿದ್ದು, ರೈತರು ನಷ್ಟದ ಸುಳಿಯಲ್ಲಿ ಸಿಲುಕುವಂತಾಗಿದೆ.
ಮುಂಜಾಗ್ರತಾ ಕ್ರಮವಾಗಿ ನದಿ ಸಮೀಪ ತೆರಳದಂತೆ ದೇವಾಲಯದ ಭಕ್ತರಿಗೆ ತಹಶೀಲ್ದಾರ್ ರಮೇಶ್ ಬಾಬು ಸೂಚನೆ ನೀಡಿದ್ದಾರೆ. ಸ್ಥಳದಲ್ಲಿ ಪೊಲೀಸರು, ಗೃಹರಕ್ಷಕ ದಳದಿಂದ ಕಾವಲು ನಿಯೋಜಿಸಲಾಗಿದೆ. ಸ್ಥಳದಲ್ಲಿ ಗೃಹರಕ್ಷಕ, ಎಸ್ ಡಿಆರ್ ಎಫ್ ತಂಡಗಳನ್ನು ನಿಯೋಜನೆ ಮಾಡಲಾಗಿದೆ.
ಸುಬ್ರಹ್ಮಣ್ಯ ಸ್ಥಾನ ಘಟ್ಟಕ್ಕೆ ಸಮಾದೇಷ್ಟರ ಭೇಟಿ:
ಘಟ್ಟದ ಮೇಲ್ಬಾಗದಲ್ಲಿ ಮತ್ತು ಕರಾವಳಿಯಲ್ಲಿ ವಿಪರೀತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂದು (ಜು.23) ಬೆಳಿಗ್ಗೆ ಗೃಹರಕ್ಷಕ ದಳದ ದ.ಕ ಜಿಲ್ಲಾ ಸಮಾದೇಷ್ಟ ಡಾ ಮುರಲಿ ಮೋಹನ್ ಚೂಂತಾರು ಅವರು ಸುಬ್ರಹ್ಮಣ್ಯ ದೇವಳದ ಸ್ಥಾನ ಘಟ್ಟ ಸ್ಥಳಕ್ಕೆ ಭೇಟಿ ನೀಡಿ ಪ್ರವಾಹ ರಕ್ಷಣಾ ತಂಡದ ಸದಸ್ಯರಿಗೆ ಸಲಹೆ ಮತ್ತು ಮಾರ್ಗದರ್ಶನ ನೀಡಿದರು. ಕುಮಾರಧಾರ ನದಿ ತುಂಬಿ ಹರಿಯುತ್ತಿದ್ದು ಯಾವುದೇ ಕಾರಣಕ್ಕೂ ಪ್ರವಾಸಿಗರು ಮತ್ತು ಭಕ್ತರು ನೀರಿಗೆ ಇಳಿಯದಂತೆ ನಿಯಂತ್ರಿಸಲು ಆದೇಶಿಸಿದರು. ಪ್ರವಾಸಿಗರು ಮತ್ತು ಭಕ್ತಾದಿಗಳ ಸುರಕ್ಷತೆಯ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಘಟಕದ ಪ್ರಭಾರ ಘಟಕಾಧಿಕಾರಿ ಹರೀಶ್ ಹಾಗೂ ಪ್ರವಾಹ ರಕ್ಷಣಾ ತಂಡದ ಇತರ ಗೃಹರಕ್ಷಕರು ಜತೆಗಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ