ಮಂಗಳೂರು: ಬೆಳಗಾವಿ ಚಿಕ್ಕೋಡಿಯ ಪರಮಪೂಜ್ಯ ಆಚಾರ್ಯ ಜೈನಮುನಿ ಶ್ರೀ ಕಾಮಕುಮಾರ ನಂದಿಮಹಾರಾಜರ ಬರ್ಬರ ಹತ್ಯೆಯನ್ನು ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ ಎಂ. ಖಂಡಿಸಿದ್ದಾರೆ. ನಮ್ಮ ದೇಶ, ಧರ್ಮ, ಸಂಸ್ಕೃತಿ ಇವತ್ತಿಗೂ ಚಿರಸ್ಥಾಯಿಯಾಗಿ ಉಳಿದಿರುವುದು, ಬೆಳೆದಿರುವುದು ಋಷಿ ಪರಂಪರೆಯಿಂದ. ಋಷಿ ಪರಂಪರೆಗೆ ಜೈನ ಮುನಿಗಳ ಕೊಡುಗೆ ಅನನ್ಯವಾದದು. ಲೌಕಿಕವಾದ ಬದುಕನ್ನು ತ್ಯಜಿಸಿ, ಶರೀರ ನಶ್ವರ ಎಂದು ತಿಳಿದು, ಭಗವಂತ ಎಂಬ ಸತ್ಯದ ಬೆಳಕಿನ ಅನ್ವೇಷಣೆಗಾಗಿ, ಶ್ರೀ ಜಿನನನ್ನು ತನ್ನ ಹೃದಯದಲ್ಲಿ ಸ್ಥಾಪಿಸಿಕೊಂಡು ತಪಸ್ವಿನಲ್ಲಿ ನಿರತರಾಗಿರುವ ಸ್ವಾಮೀಜಿಯ ಹತ್ಯೆ ಅತ್ಯಂತ ಭೀಕರವಾಗಿದ್ದು, ಈ ಪ್ರಕರಣವನ್ನು ಸಿ.ಬಿ.ಐ ತನಿಖೆಗೆ ಒಳಪಡಿಸಬೇಕು ಹಾಗೂ ಸರಕಾರ ತಕ್ಷಣ ಎಚ್ಚೆತ್ತುಕೊಂಡು ಎಲ್ಲಾ ಮುನಿಗಳಿಗೆ ಸೂಕ್ತ ಭದ್ರತೆಯನ್ನು ಒದಗಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಯುವ ಬ್ರಿಗೇಡ್ ಸಂಚಾಲಕನ ಹತ್ಯೆಗೆ ಬಿಜೆಪಿ ಖಂಡನೆ:
ಹಿಂದೂ ಧರ್ಮದ ಕಾರ್ಯವನ್ನು ಸಕ್ರಿಯವಾಗಿ ಮಾಡುತ್ತಿದ್ದ ಯುವ ಬಿ-ಗ್ರೇಡ್ ಸಂಚಾಲಕ ವೇಣುಗೋಪಾಲ ನಾಯಕ ಹತ್ಯೆಯನ್ನು ಬಿಜೆಪಿ ದ.ಕ. ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ. ರವರು ಖಂಡಿಸಿದ್ದಾರೆ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದೆಗೆಟ್ಟಿದ್ದ ಪರಿಣಾಮದಿಂದ ಮತಾಂಧ ಶಕ್ತಿಗಳು, ದುಷ್ಕರ್ಮಿ ಶಕ್ತಿಗಳು ತಲೆ ಎತ್ತಲು ಪ್ರಾರಂಭಿಸಿವೆ. ಸರಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಕೊಲೆಗಡುಕರನ್ನು ತಕ್ಷಣ ಬಂಧಿಸಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ