ಆಳ್ವಾಸ್ನಲ್ಲಿ ‘ಭಿಷಕ್ - 2023' ರಾಷ್ಟ್ರೀಯ ವೈದರ ದಿನ ಆಚರಣೆ
ವಿದ್ಯಾಗಿರಿ: ಪರಿಪೂರ್ಣ ಅಭ್ಯಾಸದಿಂದ ಮಾತ್ರ ಯಶಸ್ವಿ ವೈದ್ಯನಾಗಲು ಸಾಧ್ಯ ಎಂದು ಮಂಗಳೂರಿನ ಕೆ.ಎಂ.ಸಿ ಕಾಲೇಜಿನ ಪ್ರಾಧ್ಯಾಪಕ ಡಾ.ರಾಜೇಶ್ ಬಲ್ಲಾಳ ಹೇಳಿದರು.
ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಶನಿವಾರ ವಿ.ಎಸ್ ಆಚಾರ್ಯ ಸಂಭಾಗಣದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ವೈದರ ದಿನಾಚರಣೆ ‘ಭಿಷಕ್ -2023'ರಲ್ಲಿ ಅವರು ಮಾತನಾಡಿದರು.
ವೈದ್ಯ ವೃತ್ತಿ ಕುರಿತು ಅರಿವು ಮೂಡಿಸಲು ಭಾರತರತ್ನ ಡಾ.ಬಿಧನ್ ಚಂದ್ರ ರಾಯ್ ಅವರ ನೆನಪಿನಲ್ಲಿ ಜುಲೈ 1ರಂದು ‘ರಾಷ್ಟ್ರೀಯ ವೈದರ ದಿನ’ ಆಚರಿಸಲಾಗುತ್ತದೆ. ‘ವೈದ್ಯೋ ನಾರಾಯಣೋ ಹರಿಃ’ ಎಂದು ಜನರ ಮನಸ್ಸಿನಲ್ಲಿರುತ್ತದೆ. ಆದರೆ, ವೈದ್ಯನೂ ಮಾನವನೇ, ಅವನ ಪ್ರಯತ್ನಕ್ಕೂ ಒಂದು ಮಿತಿ ಇದೆ ಎನ್ನುವುದು ಎಲ್ಲರೂ ತಿಳಿದಿರಬೇಕು ಎಂದರು.
ಪ್ರತಿ ರೋಗಿಯು ವೈದ್ಯರನ್ನು ಭಿನ್ನವಾಗಿ ಕಾಣುತ್ತಾರೆ. ಕೆಲವರು ವೈದರನ್ನು ದೇವರೆಂದು ಪೂಜಿಸಿದರೆ, ಸೂಕ್ತ ಚಿಕಿತ್ಸೆ ಕೊಡುವಲ್ಲಿ ಎಡವಿದಾಗ ಮನ ಬಂದತೆ ತರಾಟೆಗೆ ತೆಗೆದುಕೊಳ್ಳುತ್ತಾರೆ. ಪ್ರತಿ ಬಾರಿ ಕೇವಲ ಗೌರವ ನಿರೀಕ್ಷಿಸುವ ಬದಲು ಎರಡಕ್ಕೂ ಸಜ್ಜಾಗಿ ಎಂದರು.
ಪ್ರೊ.ಅಮೃತ ಸೋಮೇಶ್ವರ ವಿರಚಿತ ವೃಕ್ಷ ಸಂರಕ್ಷಣೆಯ ವಸ್ತು ವಿಷಯದ ‘ಮಾರಿಷಾ ಕಲ್ಯಾಣ’ ಯಕ್ಷಗಾನವನ್ನು ವೈದ್ಯರೇ ಅಭಿನಯಿಸಿ ಗಮನ ಸೆಳೆದರು.
ಪ್ರಾಧ್ಯಾಪಕ ಡಾ.ಮಹಾಬಲೇಶ್ವರ್ ರಚಿಸಿದ ಆಳ್ವಾಸ್ ಆರೋಗ್ಯ ಕೇಂದ್ರದ ಲೋಗೊ ಅನಾವರಣಗೊಳಿಸಲಾಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಮೈಸೂರಿನ ಜಿ.ಎ.ಎಂ.ಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಸತ್ಯನಾರಾಯಣ ಭಟ್, ಆಳ್ವಾಸ್ ಆಯುರ್ವೇದ ವೈದ್ಯಕೀಯ ಆಸ್ಪತ್ರೆಯ ಡಾ.ಸದಾನಂದ ನಾಯಕ, ಅಧೀಕ್ಷಕ ಡಾ. ಮಂಜುನಾಥ್ ಭಟ್ ಇದ್ದರು.
ಪ್ರಾಶುಂಪಾಲ ಡಾ. ಸಜಿತ್ ಎಂ. ಸ್ವಾಗತಿಸಿ, ಪ್ರಾಧ್ಯಾಪಕಿ ಡಾ.ಸ್ಮಿತಾ ಭಟ್ ವಂದಿಸಿ, ಪ್ರಾಧ್ಯಾಪಕಿ ಡಾ. ಗೀತಾ ನಿರೂಪಿಸಿದರು.
‘ವೈದನಾದವನು ಹಣಕ್ಕೆ ಮಾತ್ರ ಆದ್ಯತೆ ನೀಡದೆ, ಜ್ಞಾನಕ್ಕೆ ಆದ್ಯತೆ ನೀಡಬೇಕು. ಸರಸ್ವತಿ ಆರಾಧಿಸಿದರೆ ಲಕ್ಷ್ಮೀ ಒಲಿಯುತ್ತಾಳೆ. ವೃತ್ತಿ ಜೀವನದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ನಿಮ್ಮ ತಾಯಿಯ ಹಿತವಚನದ ಬಗ್ಗೆ ಯೋಚಿಸಿ.
- ಡಾ.ರಾಜೇಶ್ ಬಲ್ಲಾಳ,
ಪ್ರಾಧ್ಯಾಪಕ ಕೆ.ಎಂ.ಸಿ. ಕಾಲೇಜು ಮಂಗಳೂರು
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ