ಶ್ರೀಕೃಷ್ಣ ಹುಟ್ಟಿದ್ದು ದೇವಕೀ ಗರ್ಭದಲ್ಲಿ ಬೆಳೆದದ್ದು ಯಶೋದೆಯ ಮಡಿಲಲ್ಲಿ ಇಂದಿಗೂ ಕೃಷ್ಣನ ತಾಯಿಯಾಗಿ ಹೆಚ್ಚು ಗುರುತಿಸಲ್ಪಡುವಳು ಯಶೋದೆ. ಶ್ರೀಕೃಷ್ಣನ ಬಾಲಲೀಲೆಗಳೆಲ್ಲವನ್ನೂ ಯಶೋದೆ ಸೈರಿಸಿಕೊಂಡು ಬಂದವಳು! ಇಂಥ ಪೋಕರಿ ಪೋರನನ್ನು, ಜಗದೋದ್ಧಾರನನ್ನು ಸಹಿಸಿಕೊಳ್ಳುವುದೆಂದರೆ ಸುಲಭದ ಮಾತಲ್ಲ. ಯಾಕೆಂದರೆ ಶ್ರೀಕೃಷ್ಣ ಮಾಡಿದ ಯಾವುದೇ ಕೆಲಸ ಕಾರ್ಯವಾದ - ವಿವಾದಕ್ಕೆ ಕಾರಣವಾಗುತ್ತಿದ್ದರೂ, ಅದರ ಹಿಂದೆ ಒಂದು ಉದ್ದೇಶವಂತೂ ಎದ್ದು ಕಾಣುತ್ತಿತ್ತು. ಅದುವೇ ಧರ್ಮದ ಸಂಸ್ಥಾಪನೆ, ಅಧರ್ಮದ ನಿರ್ಮೂಲನೆ.
ಲೋಕಕ್ಕೆ ಗೀತೆಯ ಬೆಳಕನ್ನು ನೀಡಿದ ಪರಮಪುರುಷ ಶ್ರೀಕೃಷ್ಣ ಶ್ರಾವಣ ಮಾಸದ ಶುಕ್ಲಪಕ್ಷದ ಅಷ್ಟಮಿಯಂದು ಮಥುರೆಯ ಧೂರ್ತ ದೊರೆ ಕಂಸನ ಸೆರೆಮನೆಯಲ್ಲಿ ದೇವಕಿ-ವಸುದೇವರ ಎಂಟನೇ ಮಗುವಾಗಿ ಜನಿಸಿ ಕೃಷ್ಣ. ಚತುರ್ಬಾಹುಗಳನ್ನುಳ್ಳವನಾಗಿ, ಒಂದೊಂದು ಕೈಯಲ್ಲೂ ಶಂಖ, ಚಕ್ರ, ಗದೆ, ಪದ್ಮಗಳನ್ನು ಹಿಡಿದು, ಕೊರಳಲ್ಲಿ ಕೌಸ್ತುಭ ಹಾರ ಧರಿಸಿ, ಹಳದಿ ವಸ್ತ್ರ ತೊಟ್ಟು, ವಜ್ರ ವೈಢರ್ಯಗಳಿಂದ ಅಲಂಕೃತವಾಗಿದ್ದ ಕಿರೀಟಧಾರಿಯಾಗಿ, ನೀಳ ಕೇಶರಾಶಿಯುಳ್ಳವನಾಗಿ, ಅಮೂಲ್ಯ ತೋಳಬಂದಿ, ಕಡಗ, ಕರ್ಣಕುಂಡಲಗಳೇ ಮೊದಲಾದ ಆಭರಣಗಳನ್ನು ಧರಿಸಿ, ಗಗನದಲ್ಲಿ ಝಗಮಗಿಸುವ ಕಾರ್ಮೋಡದಂತೆ ಫಳಪಳಿಸುತ್ತಾ ಭೂಮಿಗೆ ಬಂದ ಶ್ರೀಕೃಷ್ಣ.
ನವಜಾತ ಶಿಶುವಿನ ಈ ದಿವ್ಯ ರೂಪ ಕಂಡು ತಂದೆ ವಸುದೇವ ಆಶ್ಚರ್ಯಚಕಿತನಾದ. ತಾಯಿಗರ್ಭದಿಂದ ಆಗ ತಾನೆ ಹೊರಬಂದ ಮಗುವಿಗೆ ಇಷ್ಟೊಂದು ಸಿಂಗಾರವೇ? ವಸುದೇವ ದಂಗಾದ. ಶ್ರೀಕೃಷ್ಣನೇ ತಮ್ಮ ಮಗುವಾಗಿ ಜನಿಸಿದ್ದಾನೆಂಬುದು ನಿಧಾನವಾಗಿ ಆತನ ಅರಿವಿಗೆ ಬಂತು. `ಸಾಕ್ಷಾತ್ ವಿಷ್ಣುವೇ ತನ್ನ ಮಡದಿ ದೇವಕಿಯ ಒಡಲಲ್ಲಿ ಜನಿಸುವುದೆಂದರೆ ಸಾಮಾನ್ಯ ಸಂಗತಿಯೇ!' ಎಂದು ಆತ ಮುಗ್ಧನಂತೆ ಅಚ್ಚರಿಪಟ್ಟ ಆ ಮಗುವೇ ಮುಂದೆ ಶ್ರೀಕೃಷ್ಣನಾಗಿ ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸಿ, ಧರ್ಮ ಸಂರಕ್ಷಣೆಗೆ ನಿಲ್ಲುತ್ತಾನೆ. ಕುರುಕ್ಷೇತ್ರ ರಣಾಗಂಣದಲ್ಲಿ ಅರ್ಜುನನ್ನು ನೆಪವಾಗಿಟ್ಟುಕೊಂಡು ಇಡೀ ಜಗತ್ತಿಗೆ ಭಗವದ್ಗೀತೆಯನ್ನು ಬೋಧಿಸಿದ. ಬದುಕಿನ ನಿಜವಾದ ಮೂಲ, ಉದ್ದೇಶ, ಅರ್ಥವನ್ನು ವಿವರಿಸಿದ. ಎಲ್ಲರ ಮನದಲ್ಲಿ ಕವಿದಿದ್ದ ಅಂಧಕಾರವನ್ನು ಹೊಡೆದೋಡಿಸಿದ ಶ್ರೀಕೃಷ್ಣನ ಲೀಲೆಗಳನ್ನು ನೋಡುವುದೇ ಚಂದ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ