'ದೇಶದ ಬೆಳವಣಿಗೆಗೆ ವ್ಯಕ್ತಿಗತ ದೃಢಸಂಕಲ್ಪ ಪೂರಕ' - ಡಾ. ಎಂ.ಎಂ. ದಯಾಕರ್

Upayuktha
1 minute read
0

                   ಎಸ್.ಡಿ.ಎಂ ಕಾಲೇಜಿನಲ್ಲಿ ವಿಜ್ಞಾನ ಸಿಂಚನ ಕಾರ್ಯಕ್ರಮ


ಉಜಿರೆ:
ವ್ಯಕ್ತಿಗತ ಬೆಳವಣಿಗೆಯ ಸಂಕಲ್ಪವು ಸಮಾಜ ಮತ್ತು ದೇಶದ ಅಭಿವೃದ್ಧಿಗಾಗಿ ಕೊಡುಗೆಗಳನ್ನು ನೀಡುವ ಉದ್ದೇಶವನ್ನೂ ಒಳಗೊಂಡಿರಬೇಕು ಎಂದು ಸುಳ್ಯದ ಕೆ.ವಿ.ಜಿ ದಂತ ಕಾಲೇಜಿನ ಪೆರಿಯೊಡೆಂಟಾಲಜಿ ಹಾಗೂ ಇಂಪ್ಲ್ಯಾಂಟಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ಎಂ.ಎಂ. ದಯಾಕರ್ ಅಭಿಪ್ರಾಯಪಟ್ಟರು.


ಉಜಿರೆಯ ಎಸ್,ಡಿ.ಎಂ. ಪದವಿ ಕಾಲೇಜಿನ ವಿಜ್ಞಾನ ವಿಭಾಗ ಜೂನ್ 10 ರಂದು ಆಯೋಜಿಸಿರುವ ವಿಜ್ಞಾನ ಸಿಂಚನ ಅಂತರ್ ಕಾಲೇಜು ಮಟ್ಟದ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. 


ಮನುಷ್ಯನಾದವನು ಮೂಲಭೂತವಾಗಿ ತನ್ನ ಬೆಳವಣಿಗೆಯ ಬಗ್ಗೆ ಸ್ಪಷ್ಟತೆ ಹೊಂದಿರಬೇಕು. ಇದರ ಜೊತೆಗೆ ಸಮಾಜ ಮತ್ತು ರಾಷ್ಟ್ರದ ಅಭಿವೃದ್ಧಿಗಾಗಿಯೂ ತುಡಿಯಬೇಕು. ಹಾಗಾದಾಗ ಮಾತ್ರ ಸಾಮಾಜಿಕ, ರಾಷ್ಟ್ರೀಯ ಬೆಳವಣಿಗೆಗೆ ಕೊಡುಗೆಗಳನ್ನು ನೀಡಲು ಸಾಧ್ಯ. ವೈಜ್ಞಾನಿಕ ಚಿಂತನೆಯನ್ನು ಬೆಳೆಸಿಕೊಳ್ಳಬೇಕು. ಇಂತಹ ಆಲೋಚನೆಗಳು ಇಲ್ಲದಿದ್ದರೆ ಮನುಷ್ಯನಾಗಲು ಸಾಧ್ಯವಿಲ್ಲ ಎಂದು ಹೇಳಿದರು. 


ಅವಲೋಕನ ಮತ್ತು ಸಂಶೋಧನೆಗಳನ್ನು ಮಾಡುವುದು ಬಹಳ ಮುಖ್ಯ. ಮನುಷ್ಯನು ಹುಟ್ಟುವ ಮೊದಲೇ ವಿಜ್ಞಾನ ಹುಟ್ಟಿದೆ. ಮನುಕುಲದಿಂದ ವಿಜ್ಞಾನವನ್ನು ವಿಜ್ಞಾನದಿಂದ ಮನುಕುಲವನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದರು.


ವಿಜ್ಞಾನದ ವಿದ್ಯಾರ್ಥಿಗಳು ಯಾವಾಗಲೂ ವೈಜ್ಞಾನಿಕ ಚಿಂತನಾ ಪ್ರಕ್ರಿಯೆಯಲ್ಲಿ ಯೋಚಿಸಿದಾಗ ಮಾತ್ರ ಅದರ ಎಲ್ಲಾ ನಿರ್ದಿಷ್ಟ ನಿಷಯಗಳಿಗೆ ಉತ್ತರವನ್ನು ನೀಡಲು ಸಾಧ್ಯವಾಗುತ್ತದೆ. ವೈಯಕ್ತಿಕ ಜೀವನದಲ್ಲಿ ಸಮಾಜ ಹಾಗೂ ಸಮುದಾಯದಲ್ಲಿ ಎದುರಾಗುವ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುವ ಸಾಮರ್ಥವನ್ನು ಮೈಗೂಡಿಸಿಕೊಳ್ಳಬೇಕು. ಸಮಸ್ಯೆಯನ್ನು ಪರಿಹರಿಸಬೇಕೆ ವಿನಃ ಸಮಸ್ಯೆಯ ಸೃಷ್ಠಿಕರ್ತರಾಗಬಾರದು. ವಿಜ್ಞಾನವನ್ನು ಸಮಾಜದ ಬದಲಾವಣೆಗೆ ಬಳಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. 


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾಲೇಜಿನ ಪ್ರಾಶುಂಪಾಲರಾದ ಡಾ. ಕುಮಾರ್ ಹೆಗಡೆ ಬಿ.ಎ ಮಾತನಾಡಿದರು. ವಿಜ್ಞಾನದ ವಿದ್ಯಾರ್ಥಿಗಳು ಕುತೂಹಲ, ಸೃಜನಾತ್ಮಕತೆ, ಬದ್ಧತೆ, ಏಕಾಗ್ರತೆ, ಆತ್ಮವಿಸ್ವಾಸವನ್ನು ಹೊಂದಿರಬೇಕು. ಕೂತುಹಲವು ಎಲ್ಲಾ ವಿಜ್ಞಾನಗಳ ತಾಯಿಯಾಗಿದೆ. ಪ್ರಕೃತಿಯಲ್ಲಿ ಏನಾಗುತ್ತಿದೆ ಹಾಗೂ ಅದರ ಪರಿಣಾಮವೇನು ಎಂಬುದನ್ನು ಗಮನಿಸಬೇಕು. ಕುತೂಹಲಕಾರಿ ಕಣ್ಣಿರಬೇಕು. ಕುತೂಹಲವಿದ್ದಾಗ ಮಾತ್ರ ಆಸಕ್ತಿಯು ರೂಪುಗೊಳ್ಳುತ್ತದೆ. ಏನನ್ನಾದರು ವಿಭಿನ್ನವಾಗಿ ಯೋಚಿಸಿದಾಗ ಸೃಜನಾತ್ಮಕತೆ ಹುಟ್ಟಿಕೊಳ್ಳುತ್ತದೆ. ಬದ್ಧತೆ ಮತ್ತು ಸತತ ಪರಿಶ್ರಮದಿಂದ ಯಾವುದೇ ಕೆಲಸವನ್ನಾದರೂ ಸಾಧಿಸಲು ಸಾಧ್ಯ. ಏಕಾಗ್ರತೆ ಇದ್ದಾಗ ಮಾತ್ರ ಆತ್ಮವಿಶ್ವಾಸ ಮೂಡುತ್ತದೆ ಎಂದರು.


ಕಾಲೇಜಿನ ಕುಲಸಚಿವರಾದ ಪ್ರೊ.ಎಸ್.ಎನ್.ಕಾಕತ್ಕರ್, ಉಪಪ್ರಾಂಶುಪಾಲ ಪ್ರೊ.ಶಾಂತಿಪ್ರಕಾಶ್, ಕಾರ್ಯಕ್ರಮ ಸಂಯೋಜಕರಾದ ಪೂಜಿತಾ ವರ್ಮ ಜೈನ್ ಉಪಸ್ಥಿತರಿದ್ದರು. ತೇಜಸ್ವಿನಿ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಚಂದ್ರಿಕಾ ವಂದಿಸಿದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top