ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ರಕ್ಷಕ- ಶಿಕ್ಷಕ ಸಂಘದ ಸಭೆ
ಉಜಿರೆ: ಕಾಲೇಜಿನ ಸರ್ವತೋಮುಖ ಬೆಳವಣಿಗೆಯಲ್ಲಿ ವಿದ್ಯಾರ್ಥಿಗಳ ಹೆತ್ತವರ ಪಾತ್ರವೂ ಗಣನೀಯವಾಗಿದ್ದು, ಸಂಸ್ಥೆಯೊಂದಿಗೆ ನಿರಂತರ ಸಂಬಂಧ ಇರಿಸಿಕೊಂಡು ಗುಣಾತ್ಮಕ ಬೆಳವಣಿಗೆಗೆ ಸಹಕರಿಸಬೇಕು ಎಂದು ಉಜಿರೆ ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಡಾ. ಕುಮಾರ ಹೆಗ್ಡೆ ಬಿ.ಎ. ಕರೆ ನೀಡಿದರು.
ಕಾಲೇಜಿನಲ್ಲಿ ಅವರು ರಕ್ಷಕ- ಶಿಕ್ಷಕ ಸಂಘದ ಸಭೆಯನ್ನುದ್ದೇಶಿಸಿ ಮಾತನಾಡಿದರು.
ವಿದ್ಯಾರ್ಥಿಗಳ ಉತ್ತಮ ಭವಿಷ್ಯದ ದೃಷ್ಟಿಯಿಂದ ಕಾಲೇಜಿನಲ್ಲಿ ಪೂರಕ ವಾತಾವರಣ, ವಿವಿಧ ಸೌಲಭ್ಯಗಳಿವೆ. ನವೀನ ತಂತ್ರಜ್ಞಾನದ ಮೂಲಕ ವಿದ್ಯಾರ್ಥಿಗಳ ಹೆತ್ತವರೊಂದಿಗೆ ಕಾಲೇಜು ನಿರಂತರ ಸಂಪರ್ಕದಲ್ಲಿದೆ. ಇದರ ಜತೆಗೆ, ಪಾಲಕರು ಕಾಲೇಜಿನ ಅಭಿವೃದ್ಧಿ ದೃಷ್ಟಿಯಿಂದ ಸಾಂದರ್ಭಿಕ ಸಲಹೆ- ಸೂಚನೆ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ಇಂತಹ ಸಭೆಗಳು ಪೂರಕ ಎಂದು ಅವರು ಹೇಳಿದರು.
ಪಾಲಕರ ಪರವಾಗಿ ಮಾತನಾಡಿದ ಮುಖ್ಯ ಅತಿಥಿ, ವಕೀಲ ಹಾಗೂ ಪ್ರಗತಿಪರ ಕೃಷಿಕ ಸುದರ್ಶನ ರಾವ್ ಗಜಂತೋಡಿ ಅವರು, ಪಾಲಕರು ಹಾಗೂ ಕಾಲೇಜಿನ ಬಾಂಧವ್ಯದ ಬಗ್ಗೆ ಗಮನ ಸೆಳೆದರು. ಅಲ್ಲದೆ, ಸಾಮಾಜಿಕ ಜಾಲತಾಣಗಳ ಉಪಯೋಗ ಮತ್ತು ದುರುಪಯೋಗಗಳ ಬಗ್ಗೆ ಪಾಲಕರಿಗೆ ಇರಬೇಕಾದ ಅರಿವಿನ ಬಗ್ಗೆ ಅವರು ಜಾಗೃತಿ ಮೂಡಿಸಿದರು.
ಬಳಿಕ ನಡೆದ ಸಂವಾದ ಕಾರ್ಯಕ್ರಮದಲ್ಲಿ, ಪಾಲಕರು ನೂತನ ಶಿಕ್ಷಣ ನೀತಿಯ ಕುರಿತಾದ ಗೊಂದಲಗಳ ಬಗ್ಗೆ ಪ್ರಾಂಶುಪಾಲರ ಬಳಿ ಚರ್ಚಿಸಿ ಸಂದೇಹ ಪರಿಹರಿಸಿಕೊಂಡರು.
ನ್ಯಾಕ್ ಮೌಲ್ಯಮಾಪನದಲ್ಲಿ ಕಾಲೇಜಿಗೆ ಅತ್ಯುತ್ತಮ ಗ್ರೇಡ್ ಬಂದಿರುವುದಕ್ಕೆ ಪಾಲಕರು ಸಂತಸ ವ್ಯಕ್ತಪಡಿಸಿದರು. ಕಾಲೇಜಿನ ಏಳಿಗೆಗೆ ಸರ್ವ ಸಹಕಾರ ನೀಡುವ ಭರವಸೆ ನೀಡಿದರು.
ಕಾಲೇಜಿನ ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ. ಶ್ರೀಧರ ಭಟ್ ಪ್ರಸ್ತಾವಿಸಿ, ಸ್ವಾಗತಿಸಿದರು. ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥ ಶೈಲೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ