ಪುತ್ತೂರು: 'ನಮ್ಮ ನಿತ್ಯ ಬದುಕಿನಲ್ಲಿ ಯೋಗವು ಮಿಳಿತವಾಗಿದೆ. ದೇಹ ಮತ್ತು ಮನಸ್ಸನ್ನು ಆರೋಗ್ಯಕರವಾಗಿರಿಸುವುದಕ್ಕೆ ಯೋಗ ಧ್ಯಾನವು ಸಹಕಾರಿ. ಮಕ್ಕಳು ಯೋಗಾಭ್ಯಾಸದಲ್ಲಿ ತೊಡಗಿಸಿಕೊಂಡರೆ ಚೈತನ್ಯಶಾಲೆಗಳಾಗಿ ಬೆಳೆಯುತ್ತಾರೆ. ಸಾತ್ವಿಕರಾಗುತ್ತಾರೆ' ಎಂದು ಆರ್ಟ್ ಆಫ್ ಲಿವಿಂಗ್ ನ ಯೋಗ ಶಿಕ್ಷಕಿ ಶ್ರೀಮತಿ ಶರಾವತಿ ರವಿನಾರಾಯಣ್ ಅಭಿಪ್ರಾಯಪಟ್ಟರು.
ಅವರು ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ ಇಂದು (ಜೂನ್ 21) ನಡೆದ ವಿಶ್ವಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಸಭಾಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಶೋಭಾ ನಾಗರಾಜ್ ರವರು 'ವಿದ್ಯಾರ್ಥಿಗಳು ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಆರೋಗ್ಯವಂತರಾಗಿರಲು ಯೋಗ - ಧ್ಯಾನಗಳ ಅಭ್ಯಾಸವು ಸಹಾಯಕವಾಗಿದೆ. ಎಲ್ಲಾ ವಿದ್ಯಾರ್ಥಿಗಳೂ ನಿರಂತರ ಯೋಗಾಭ್ಯಾಸವನ್ನು ಮಾಡಬೇಕು' ಎಂದು ಕರೆ ನೀಡಿದರು. ದೈಹಿಕ ಶಿಕ್ಷಕಿ ಶ್ರೀಮತಿ ಲೀಲಾವತಿ ಶುಭಾಶಂಸನೆಗೈದರು. ಶಾಲಾ ಕ್ರೀಡಾ ನಾಯಕ, 10ನೇ ತರಗತಿ ವಿದ್ಯಾರ್ಥಿ ಸೃಜನ್ ಎಸ್.ಜಿ ಯೋಗ ದಿನದ ಮಹತ್ವವನ್ನು ತಿಳಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಆರ್ಟ್ ಆಫ್ ಲಿವಿಂಗ್ ನ ಯೋಗ ತರಬೇತುದಾರರಾದ ಶ್ರೀಮತಿ ರಜತ ಹೆಗ್ಡೆಯವರು 5ನೇ ತರಗತಿಯಿಂದ9ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸವನ್ನು ಮಾಡಿಸಿದರು. ಶಾಲೆಯ ದೈಹಿಕ ಶಿಕ್ಷಕರೂ, ಶಕ್ತಿ ಸ್ಪೋರ್ಟ್ಸ್ ಕ್ಲಬ್ ನ ನಿರ್ದೇಶಕರೂ ಆದ ಪುಷ್ಪರಾಜ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ದೈಹಿಕ ಶಿಕ್ಷಕರಾದ ಶ್ರೀಮತಿ ಜೀವಿತಾ ಎನ್.ಕೆ ಸಹಕರಿಸಿದರು. ಕೊಂಬೆಟ್ಟು ಜ್ಯೂನಿಯರ್ ಕಾಲೇಜ್ ಆವರಣದಲ್ಲಿ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ವಿಶ್ವ ಯೋಗ ದಿನಾಚರಣೆಯಲ್ಲಿ ಸುದಾನ ವಸತಿ ನಿಲಯದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಎರಡೂ ಕಾರ್ಯಕ್ರಮವನ್ನು ಶಾಲೆಯ ಶಕ್ತಿ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿತ್ತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ