ಪುತ್ತೂರು ತಾಲೂಕು ಕ.ಸಾ.ಪ ಗ್ರಾಮ ಸಾಹಿತ್ಯ ಸಂಭ್ರಮ ಸರಣಿ -6ನೇ ಕಾರ್ಯಕ್ರಮ
ಪುತ್ತೂರು: ಪುತ್ತೂರು ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಶಾಲಾ ಕಾಲೇಜುಗಳಲ್ಲಿ ಅನೇಕ ಉದಯೋನ್ಮುಖ ಬರಹಗಾರರು ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಾಧಕರಿದ್ದು ಅವರನ್ನು ಗುರುತಿಸಿ ಸಾಹಿತ್ಯ ವೇದಿಕೆ ನೀಡುವ ನಿಟ್ಟಿನಲ್ಲಿ ಗ್ರಾಮ ಗ್ರಾಮದಲ್ಲೂ ಸಾಹಿತ್ಯ ಸಂಭ್ರಮವನ್ನು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಹಾಗೂ ಸಾಹಿತಿಗಳಿಗೆ ಮತ್ತು ಕಲಾವಿದರಿಗೆ ಪ್ರೋತ್ಸಾಹಿಸಿ ವೇದಿಕೆ ನೀಡಿ ಯುವ ಜನತೆಯನ್ನು ಸಾಹಿತ್ಯ ಕ್ಷೇತ್ರಕ್ಕೆ ಬರಮಾಡಿಕೊಳ್ಳುವ ಉದ್ದೇಶ ಇದಾಗಿದೆ ಎಂದು ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ತಿಳಿಸಿದರು.
ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯ ಶ್ರೀ ಷಣ್ಮುಖದೇವ ಪ್ರೌಢಶಾಲೆಯಲ್ಲಿ ಕ.ಸಾ.ಪ ಪುತ್ತೂರು, ಶಿಕ್ಷಣ ಇಲಾಖೆ ಪುತ್ತೂರು, ಗ್ರಾಮ ಪಂಚಾಯತ್ ಕೊಳ್ತಿಗೆ ಮತ್ತು ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ಸಂಯೋಜನೆಯಲ್ಲಿ ಮಿತ್ರಂಪಾಡಿ ಜಯರಾಮ ರೈ ಅವರ ಮಹಾಪೋಷಕತ್ವದಲ್ಲಿ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಎಂಬ ಘೋಷವಾಕ್ಯದಲ್ಲಿ ನಡೆಯುವ ಗ್ರಾಮ ಸಾಹಿತ್ಯ ಸಂಭ್ರಮ-6 ಸರಣಿ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ ಶನಿವಾರ (ಜೂ.24) ಮಾತನಾಡಿದರು.
ಸಮಾರಂಭದ ಉದ್ಘಾಟನೆಯನ್ನು ಶ್ರೀ ಷಣ್ಮುಖದೇವ ಪ್ರೌಢಶಾಲೆಯ ಅಧ್ಯಕ್ಷ ತೀರ್ಥಾನಂದ ದುಗ್ಗಳರವರು ದೀಪ ಪ್ರಜ್ವಲನೆ ಮೂಲಕ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವಸಂತಕುಮಾರ್ ರೈ ಸಂದರ್ಭೋಚಿತವಾಗಿ ಮಾತನಾಡಿದರು.
ಗ್ರಾಮದ 7 ಸಾಧಕರಿಗೆ ಸನ್ಮಾನ ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಎಸ್. ಜಿ. ಕೃಷ್ಣ, ಗಣೇಶ್ ಭಟ್ ಮಾಪಲಮಜಲು, ಹಾ. ಮ. ಸತೀಶ, ಶ್ರೀಮತಿ ಉದಯಗೌರಿ ಬಿರ್ಮುಕಜೆ, ಹಿರಿಯ ಸಹಕಾರಿ ಕುಂಟಿಕಾನ ಲಕ್ಷ್ಮಣಗೌಡ,ಯುವ ಸಾಹಿತಿ ಶ್ರೀಮತಿ ಪೂರ್ಣಿಮಾ ಪೆರ್ಲಂಪಾಡಿ, ಯುವ ಗಾಯಕ ರವಿ ಪಾಂಬಾರುರವರನ್ನು ಕೊಳ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ಯಾಮ ಸುಂದರ ರೈ ಸನ್ಮಾನಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮಧು ಪ್ರಪಂಚ ಪತ್ರಿಕೆಯ ಪ್ರಧಾನ ಸಂಪಾದಕ ನಾರಾಯಣ ರೈ ಕುಕ್ಕುವಳ್ಳಿ ಅವರ ಗೌರವ ಉಪಸ್ಥಿತಿಯಲ್ಲಿ ತ್ರೈಮಾಸಿಕ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ನಾಲ್ಕು ವಿವಿಧ ಗೋಷ್ಠಿಗಳು:
ಸಾಹಿತ್ಯ ವಿಮರ್ಶಕರಾದ ಅಮಲ ಶಿವರಾಮ ಭಟ್ ರವರಿಂದ ಸಾಹಿತ್ಯಕ್ಕೆ ಕೊಳ್ತಿಗೆ ಗ್ರಾಮದ ಕೊಡುಗೆ ಕುರಿತು ಉಪನ್ಯಾಸ ನೆರವೇರಿತು. ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ನಾಗವೇಣಿ ಉಪಸ್ಥಿತರಿದ್ದರು. ಹಿರಿಯ ಸಾಹಿತಿ ಹಾ. ಮ. ಸತೀಶರವರ ಅಧ್ಯಕ್ಷತೆಯಲ್ಲಿ ಬಾಲಕಥಾಗೋಷ್ಠಿ, ಗಣೇಶ್ ಭಟ್ ಮಾಪಲಮಜಲು ಇವರ ಅಧ್ಯಕ್ಷತೆಯಲ್ಲಿ ಬಾಲಕವಿಗೋಷ್ಠಿ, ನಿವೃತ್ತ ಶಿಕ್ಷಕರು ಮತ್ತು ಕಾದಂಬರಿಕಾರರಾದ ಶ್ರೀಮತಿ ಉದಯಗೌರಿ ಬಿರ್ಮುಕಜೆ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ವಿಭಾಗದ ಯುವ ಕವಿಗೋಷ್ಠಿ ನಡೆಯಿತು. ಕವಿಗೋಷ್ಠಿಯಲ್ಲಿ ಶ್ರೀಮತಿ ಸಂಧ್ಯಾ ಪ್ರಶಾಂತ್ ಅರಿಕ್ಕಿಲ, ರವಿ ಪಾಂಬಾರು, ಪೂರ್ಣಿಮಾಗೌಡ ಕುತ್ತಿಮುಂಡ, ಸೌಮ್ಯ ಎರ್ಮೆಟ್ಟಿ ಸುಳ್ಯ, ಆಶಾಮಯ್ಯ ಪುತ್ತೂರು, ಶ್ರೀಕಲಾ ಕಾರಂತ್ ಅಳಿಕೆ, ಅಪೂರ್ವ ಕಾರಂತ್ ದರ್ಬೆ, ಪೂರ್ಣಿಮಾ ಪೆರ್ಲಂಪಾಡಿ, ಕೀರ್ತನ, ಶ್ರೇಯ. ಪಿ. ಭಾಗವಹಿಸಿದ್ದರು.
ವಿವಿಧ ಗೋಷ್ಠಿಗಳಲ್ಲಿ ಕೊಳ್ತಿಗೆ ಗ್ರಾಮದ 9 ಶಾಲೆಯ 80ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ವೃಂದದವರು ಭಾಗವಹಿಸಿದ್ದರು. ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಶಾಲಾ ಸಂಚಾಲಕರಾದ ಶಿವರಾಮ ಭಟ್ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ರುಚಿ ಶುಚಿಯಾದ ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಶಾಲಾ ಆಡಳಿತ ಮಂಡಳಿ ಮತ್ತು ಅಧ್ಯಾಪಕರು ಕಾರ್ಯಕ್ರಮ ಸುಸೂತ್ರವಾಗಿ ನಡೆಯುವಲ್ಲಿ ಸಹಕರಿಸಿದರು.
ಕು. ಅಪೂರ್ವ ಕಾರಂತ್ ದರ್ಬೆ, ಆಶಾಮಯ್ಯ ಪುತ್ತೂರು, ಶ್ರೀಕಲಾ ಕಾರಂತ್ ಅಳಿಕೆ, ಕು. ನವ್ಯ ಪುತ್ತೂರು, ಸೌಮ್ಯರಾಮ್ ಕಲ್ಲಡ್ಕ ಅವರು ವಿವಿಧ ಗೋಷ್ಠಿ ಗಳನ್ನು ನಿರ್ವಹಿಸಿದರು.
ಶ್ರೀ ಷಣ್ಮುಖದೇವ ಪ್ರೌಢಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು, ಶಾಲಾ ಮುಖ್ಯಗುರುಗಳಾದ ಶ್ರೀಮತಿ ಕೃಷ್ಣವೇಣಿ ಸ್ವಾಗತಿಸಿದರು, ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕರಾದ ನಾರಾಯಣ ಕುಂಬ್ರ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಚಂದ್ರಶೇಖರ ಮಾಲೆತ್ತೋಡಿ ನಿರೂಪಣೆ ಗೈದರು, ಕಾರ್ಯಕ್ರಮ ಸಂಯೋಜಕರಾದ ಶ್ರೀಮತಿ ಪೂರ್ಣಿಮಾ ಪೆರ್ಲಂಪಾಡಿ ವಂದನರ್ಪಣೆ ಗೈದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ