ಆದದ್ದೆಲ್ಲಾ ಒಳ್ಳೆಯದಕ್ಕೇ ಆಗಿದೆ ಆಗುವುದೆಲ್ಲಾ ಒಳ್ಳೆಯದೇ ಆಗುತ್ತಿದೆ. ಮುಂದೆ ಆಗಲಿರುವುದು, ಆದೂ ಒಳ್ಳೆಯದೇ ಆಗಲಿದೆ. ರೋಧಿಸಲು ನೀನೇನು ಕಳೆದು ಕೊಂಡಿರುವೆ ? ಕಳೆದುಕೊಳ್ಳಲು ನೀನು ತಂದಿರುವುದಾದರೂ ಏನು? ನಾಶವಾಗಲು ನೀನು ಮಾಡಿರುವುದಾದರೂ ಏನು ? ನೀನೇನು ಪಡೆದಿದ್ದರೂ ಅದನ್ನು ಇಲ್ಲಿಂದಲೇ ಪಡೆದಿರುವೆ. ಏನನ್ನು ನೀಡಿದ್ದರೂ ಅದನ್ನು ಇಲ್ಲಿಗೇ ನೀಡಿರುವೆ. ನಿನ್ನೆ ಬೇರಾರದ್ದೋ ಆಗಿದ್ದದ್ದು, ಇಂದು ನಿನ್ನದಾಗಿದೆ ಮತ್ತು ನಾಳೆ ಇನ್ನಾರದ್ದೋ ಆಗಲಿದೆ.
“ಪರಿವರ್ತನೆ ಜಗದ ನಿಯಮ " - ಮಹಾಕಾವ್ಯ ಮಹಾಭಾರತದ ಭಗವದ್ಗೀತೆಯಲ್ಲಿ ಗೀತೆಯ ಸಾರವಾಗಿ ಶ್ರೀಕೃಷ್ಣನು ಮುತ್ತಿನಂಥ ಮಾತನ್ನು ಹೇಳಿರುವುದು ಬದಲಾವಣೆ ಅಥವಾ ಪರಿವರ್ತನೆಯ ಕುರಿತಾಗಿದೆ. ಆಗಾಗ ನಾವೆಲ್ಲ ಹೇಳಿರುತ್ತೇವೆ ಮತ್ತು ಕೇಳಿರುತ್ತೇವೆ. ಅದೇನೆಂದರೆ " ಈ ಜಗತ್ತು ಬದಲಾಗುತ್ತಿದೆ. ನಾವೂ ಬದಲಾಗಬೇಕು. ಕಾಲಕ್ಕೆ ತಕ್ಕಂತೆ ಹೊಂದಿಕೊಳ್ಳುವುದನ್ನು ಕಲಿಯಬೇಕು. " ಬದಲಾವಣೆಗೆ ತಕ್ಕಂತೆ ಬದಲಾಗದಿದ್ದರೆ ಬದಲಾವಣೆಯೇ ನಮ್ಮನ್ನು ಬದಲಾಯಿಸುತ್ತದೆ ಎಂಬುದು ಅನುಭವಿಗಳ ಮಾತೂ ಆಗಿದೆ, ಬದಲಾವಣೆ ಅಂದರೆ ಪರಿವರ್ತನೆಯು ಎಲ್ಲವನ್ನೂ ಮತ್ತು ಎಲ್ಲರನ್ನೂ ಒಳಗೊಂಡಿರುತ್ತದೆ. ಪರಿವರ್ತನೆಯು ಕಾಲಚಕ್ರದಲ್ಲಿ ಉಂಟಾಗುವ ಮಹತ್ತರ ಘಟ್ಟವಾಗಿದೆ. ಪರಿವರ್ತನೆ ಇಲ್ಲದ ಜಗತ್ತನ್ನು ಊಹಿಸಲು ಸಾಧ್ಯವಿಲ್ಲ. ಜಗತ್ತು ನಿಂತ ನೀರಲ್ಲ. ಸದಾ ಹರಿಯುವ ನೀರಂತಿರುವ ಜಗತ್ತು ಪರವರ್ತನೆಯಾಗುತ್ತಲೇ ಇರುತ್ತದೆ, ಅದಕ್ಕೆ ತಕ್ಕಂತೆ ನಾವೂ ಪರಿವರ್ತಿತರಾಗುತ್ತಲೇ ಇರುತ್ತೇವೆ. ಸದಾ ಪರಿವರ್ತನೆಯನ್ನು ಬಯಸುತ್ತಲೇ ಇರುತ್ತೇವೆ. ಪರಿವರ್ತನೆಯಾಗುತ್ತ ಇರುವುದರಿಂದಲೇ ಜಗತ್ತು ನಡೆಯುತ್ತಿದೆ. ಮುತ್ತು ಕಳೆದರೆ ಸಿಕ್ಕೀತು, ಹೊತ್ತು ಕಳೆದರೆ ಸಿಕ್ಕೀತೆ ? ಎಂಬ ಗಾದೆ ಮಾತಿನಂತೆ ಕಳೆದು ಹೋದ ಕ್ಷಣ ಮತ್ತೆ ಎಂದಿಗೂ ಸಿಗದು, ಕಾಲ ಮುಂದಕ್ಕೆ ಓಡುತ್ತಲೇ ಇರುತ್ತದೆ. ಹರಿಯುವ ನದಿಯಿಂದ ಒಂದು ಬೊಗಸೆ ನೀರು ತೆಗೆದುಕೊಂಡು ಮತ್ತೆ ನದಿಗೆ ಬಿಟ್ಟರೆ, ಆ ಬೊಗಸೆ ನೀರು ಮತ್ತೆ ನಮಗೆ ಬೇಕೆಂದರೂ ಸಿಗದು, ಮುಂದೆ ಹರಿದುಹೋಗಿಬಿಡುತ್ತದೆ. ನಾವೂ ಅಷ್ಟೆ. ನಮ್ಮ ಶರೀರ ಕ್ಷಣ ಕ್ಷಣಕ್ಕೂ ಬದಲಾಗುತ್ತಾ ಹೋಗುತ್ತಿರುತ್ತದೆ. ಶೈಶವ, ಬಾಲ್ಯ, ಯೌವನ, ಪ್ರೌಢ, ಮುಪ್ಪು ಇಂತಹ ಸ್ಥಿತಿಯೆಡೆಗೆ ಅನವರತ ಪರಿವರ್ತನೆಯಾಗುತ್ತಲೇ ಹೋಗುತ್ತದೆ. ಯಾವುದೇ ಒಂದು ಸ್ಥಿತಿಯನ್ನು ಯಥಾವತ್ತಾಗಿ ಉಳಿಸಿಕೊಳ್ಳಲು ಸಾಧ್ಯವಿಲ್ಲ. ನಾವು ಆಗಾಗ್ಗೆ ವಿವಿಧ ಬಗೆಯ ಬದಲಾವಣೆಗಳ ಬಗ್ಗೆ ಮಾತನಾಡುತ್ತಲೇ ಇರುತ್ತೇವೆ. ವೈಯಕ್ತಿಕ, ಮಾನಸಿಕ, ಬೌದ್ಧಿಕ, ಶಾರೀರಿಕ ಅಥವಾ ದೈಹಿಕ, ಕೌಟುಂಬಿಕ, ಸಾಮಾಜಿಕ, ಸಾಮೂಹಿಕ, ಐತಿಹಾಸಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ, ಶೈಕ್ಷಣಿಕ, ಔದ್ಯೋಗಿಕ, ವೈಜ್ಞಾನಿಕ, ತಾಂತ್ರಿಕ, ನೈಸರ್ಗಿಕ, ಕಲಾತ್ಮಕ, ವೃತ್ತಿ- ಪ್ರವೃತ್ತಿಗಳ ಪರಿವರ್ತನೆ ಹೀಗೆ ಪಟ್ಟಿ ಮಾಡಬಹುದಾಗಿದೆ. ಇವೆಲ್ಲಾ ಪರಿವರ್ತನೆಗಳಲ್ಲಿ ಸೂಕ್ಷ್ಮ ಪರಿವರ್ತನೆ ಮತ್ತು ಸಮಗ್ರ ಪರಿವರ್ತನೆಗಳೆಂಬ ಅಂಶಗಳು ಒಂದರೊಳಗೊಂದರಂತೆ ಸೇರಿಕೊಂಡಿವೆ. ಪರಿವರ್ತನೆಗಳನ್ನು ನಾವು ಒಪ್ಪಿಕೊಳ್ಳಲು ಅವು ನಮಗೆ ಅನುಭವ ವೇದ್ಯವಾಗಬೇಕು. ನಮ್ಮ ಸುತ್ತಲ ಪರಿಸರ ಪರಿವರ್ತನೆಯನ್ನು ನಮಗೆ ಅನುಭವಕ್ಕೆ ತರುತ್ತದೆ. ಕೂಡಲೇ ನಮ್ಮ ಮನಸ್ಸು ಪರಿವರ್ತನೆಗೆ ಸಜ್ಜಾಗುತ್ತದೆ. ಕೆಲವರಲ್ಲಿ ಪರಿವರ್ತನೆ ವೇಗವಾಗಿರುತ್ತದೆ. ಮತ್ತೆ ಕೆಲವರಲ್ಲಿ ನಿಧಾನಗತಿಯ ಪರಿವರ್ತನೆ ಇರುತ್ತದೆ.
ಇತ್ತೀಚಿನ ನಮ್ಮ ಸಮಕಾಲೀನ ಜಗತ್ತಿನಲ್ಲಿ ಕೊರೋನ ವ್ಯಾಪಕ ಸಾಂಕ್ರಾಮಿಕ ರೋಗದ ಜೊತೆ ಜೊತೆಗೆ ಬದುಕುವ ಕಾಲ ಬಂದೊದಗಿದೆ. ಕೊರೋನಾ ಒಂದು ವೈರಾಣುವಾಗಿದ್ದು, ನಮ್ಮ ಬರಿಗಣ್ಣಿಗೆ ಕಾಣದ ಸೂಕ್ಷ್ಮಾಣುವಾಗಿದೆ. ವಿಶ್ವವನ್ನೇ ಮೆಟ್ಟಿನಿಂತು ಅಟ್ಟಹಾಸ ಮೆರೆದ ವೈರಾಣು ನಮಗೆ ಪರಿವರ್ತನೆಯ ಪಾಠವನ್ನು ಅರ್ಥವಾಗುವಂತೆ ಮಾಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಂಡ ಕಂಡ ಜಾಗದಲ್ಲಿ ಉಗುಳಬಾರದು. ಸೀನಬಾರದು, ಕೆಮ್ಮುವಂತಿಲ್ಲ ಎಲ್ಲಕ್ಕೂ ಎಚ್ಚರಿಕೆಯ ಕರೆಗಂಟೆಯಿದೆ. ವೈಯಕ್ತಿಕ ಹಾಗೂ ಸಾಮಾಜಿಕ ಪ್ರಜ್ಞೆಯನ್ನು ಜಾಗೃತಗೊಳಿಸಿಕೊಳ್ಳಬೇಕಿದೆ. ಜನರು ಅನವಶ್ಯಕವಾಗಿ ಗುಂಪು ಸೇರುವುದನ್ನು ( ಸಾರ್ವಜನಿಕರು ) ತಡೆದಿಡಲಾಯಿತು. ಅನಗತ್ಯವಾದ ಸಂಚಾರಕ್ಕೆ ಕಡಿವಾಣ ಹಾಕಲಾಗಿತ್ತು.. ಮುಖಗವಸು ( ಮಾಸ್ಕ್ ) ಧರಿಸುವುದು ಕಟ್ಟುನಿಟ್ಟಾಗಿತ್ತು. ಈಗಲೂ ಅಳವಡಿಸಿಕೊಳ್ಳಬೇಕಿದೆ. ಸಾಮಾಜಿಕ ಮತ್ತು ದೈಹಿಕ ಅಂತರ ಕಾಪಾಡಿಕೊಳ್ಳುವುದು , ಸ್ಯಾನಿಟೈಸರ್ ಬಳಸುವುದು ಕಡ್ಡಾಯವೆನಿಸಿತ್ತು. ಮನೆಯಿಂದ ಹೊರಗೆ ಹೋಗಿ ಬಂದ ವ್ಯಕ್ತಿ ನೇರವಾಗಿ ಮನೆಯೊಳಗೆ ಪ್ರವೇಶಿಸುವ ಮೊದಲು ಕೈ ಕಾಲು ಮುಖ ತೊಳೆದುಕೊಂಡು ಒಳಬರುವುದು ರೂಢಿಯಾಗುತ್ತಿದೆ. ಜನರು ತಮಗರಿವಿಲ್ಲದೆಯೇ ಆರೋಗ್ಯದ ಕಡೆ ಗಮನಹರಿಸುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ. ಪರಿವರ್ತನೆಗೆ ಒಗ್ಗಿಕೊಳ್ಳುತ್ತಿರುವ ಸನ್ನಿವೇಶ ವಿಶ್ವದೆಲ್ಲೆಡೆ ಕಾಣಬರುತ್ತಿದೆ. ನಮ್ಮ ಸಮಾಜವು ನೂರಾರು ಸಮಸ್ಯೆಗಳನ್ನು ಒಳಗೊಂಡಿದ್ದು, ಸಂಕೀರ್ಣತೆಗಳಿಂದ ಕೂಡಿದೆ. ಸಂಕೀರ್ಣತೆಗಳಿಲ್ಲದ ಸಮಾಜವನ್ನು ನಾವು ಎಲ್ಲಿಯೂ ನೋಡಲಾಗುವುದಿಲ್ಲ. ಅಂತಸ್ತು, ಅಧಿಕಾರ, ಯಶಸ್ಸು, ಸ್ಥಾನಮಾನ ಪ್ರತಿಯೊಂದನ್ನು ಗಳಿಸುವಾಗ ಅನೇಕ ಪ್ರಯತ್ನಗಳಿರುತ್ತವೆ. ಜೊತೆ ಜೊತೆಗೆ ಪ್ರಮಾದಗಳೂ ಇರುತ್ತವೆ. ಅಂತಿಮವಾಗಿ ಎಲ್ಲವೂ ಕೂಡಾ ಪ್ರಯತ್ನಶೀಲರ ಕೈ ಸೇರುತ್ತವೆ. ಅದು ಯಾರ ಕೈ ಸೇರುತ್ತದೆ ಎಂಬುದು ಆಯಾ ಕಾಲಘಟ್ಟ, ಸಂದರ್ಭ, ವ್ಯಕ್ತಿಗಳನ್ನಾಧರಿಸಿ ಇರುತ್ತದೆ. ಪರಿವರ್ತನೆ ನಿರಂತರ. ಇದರ ಅರಿವು ನಮಗೆ ಇರಬೇಕು. ಆಗ ಮಾತ್ರ ಶಾಂತಿ ಮತ್ತು ಸಾವಧಾನದಿಂದ ನಮ್ಮ ಜೀವನವನ್ನು ಮುನ್ನಡೆಸಿಕೊಂಡು ಹೋಗಬಹುದು. ಮನಪರಿವರ್ತನೆಗೆ ಒಂದು ಚಿಕ್ಕ ಕಥೆಯನ್ನು ಇಲ್ಲಿ ಸಾಕ್ಷಿಕರಿಸಬಹುದು. ರಾಮಣ್ಣ ಮತ್ತು ಗುಂಡಣ್ಣ ಎಂಬ ಇಬ್ಬರು ಆತ್ಮೀಯ ಗೆಳೆಯರಿದ್ದರು. ರಾಮಣ್ಣ, ಗುಂಡಣ್ಣನನ್ನು ತನ್ನ ಜೀವದ ಗೆಳೆಯ ಅಂತ ನಂಬಿ, ಅವನು ಸಾಲ ತೆಗೆದುಕೊಳ್ಳುವ ಸಮಯದಲ್ಲಿ ಅವನಿಗೆ ಸ್ವಲ್ಪ ಹಣವನ್ನು ಕೊಟ್ಟಿದ್ದನು. ಹೆಚ್ಚಿನ ಹಣಕ್ಕಾಗಿ ಗುಂಡಣ್ಣ ತುಂಬಾ ಗೋಗರೆದಾಗ, ರಾಮಣ್ಣ ತನ್ನ ಹಣ ಆಸ್ತಿಯ ಮೇಲೆ , ಜಾಮೀನು ನೀಡಿ ಸಹಕರಿಸಿದ್ದನು. ರಾಮಣ್ಣನಿಗೆ ಗೆಳೆಯರೂ ಹೆಚ್ಚು ಅಂತೆಯೇ ಶತ್ರುಗಳೂ ಹೆಚ್ಚು. ಗುಂಡಣ್ಣ ಸಾಲವನ್ನು ತೀರಿಸಲಾಗದೆ ಊರು ಬಿಟ್ಟು ರಾತ್ರೋರಾತ್ರಿ ತನ್ನ ಗೆಳೆಯ ರಾಮಣ್ಣನಿಗೆ ಮೋಸ ಮಾಡಿ ಓಡಿಹೋದನು. ರಾಮಣ್ಣ ಜಾಮೀನು ಹಾಕಿದ್ದರಿಂದ ಎಲ್ಲಾ ಹಣವನ್ನು ತಾನೇ ಕಟ್ಟಬೇಕಾಯಿತು. ಗುಂಡಣ್ಣನಿಗೆ ಸಾಲಕೊಟ್ಟವನು ರಾಮಣ್ಣನಿಗೆ ಶತೃವಿನಂತೆ ಕಂಡುಬಂದನು. ಹಣವನ್ನು ವಾಪಾಸು ಕೊಡುವ ಜವಾಬ್ದಾರಿ ರಾಮಣ್ಣನಿಗೆ ಸುತ್ತಿಕೊಂಡಿತು. ಮನೆ, ಹಣ, ಆಸ್ತಿ ಎಲ್ಲವನ್ನೂ ಕಳೆದುಕೊಂಡನು ರಾಮಣ್ಣ. ಆದರೆ ರಾಮಣ್ಣನಿಗೆ ತುಂಬಾ ಜನ ಸ್ನೇಹಿರಲ್ಲವೇ? ಅವರು ಯಾರೂ ತನ್ನ ಕಷ್ಟದಲ್ಲಿ ಕೈ ಬಿಡುವುದಿಲ್ಲ ಎಂಬ ಬಲವಾದ ಆಶಯದೊಂದಿಗೆ, ರಾಮಣ್ಣನು ಒಬ್ಬೊಬ್ಬರನ್ನೇ ಕೇಳಿದನು. ಆದರೆ ಒಬ್ಬೊಬ್ಬರದ್ದು ಒಂದೊಂದು ಉತ್ತರ. ಹಣ ಮಾತ್ರ ಎಲ್ಲೂ ಸಿಗಲಿಲ್ಲ. ಬೇರೆ ದಾರಿ ಕಾಣದೇ ನಿರುತ್ತರನಾದನು ರಾಮಣ್ಣ. ಈ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದ ರಾಮಣ್ಣನನ್ನು ನೋಡಿ ಸಂಭ್ರಮಾಚರಣೆ ಮಾಡಬೇಕಿದ್ದವನು, ರಾಮಣ್ಣನ್ನನ್ನು ಅತಿಯಾಗಿ ದ್ವೇಷಿಸುತ್ತಿದ್ದವನು, ಅವನ ಶತ್ರುವಾಗಿದ್ದವನೇ ರಾಮಣ್ಣನ ಪರಿಸ್ಥಿತಿಯನ್ನು ಕಂಡು, ಅವನ ಕುಟುಂಬದ ಗೋಳಾಟವನ್ನು ನೋಡಲಾಗದೆ ರಾಮಣ್ಣನ ಬೆನ್ನಿಗೆ ಬಂದು ನಿಂತನು. ರಾಮಣ್ಣನಿಗೆ ಸಹಾಯ ಮಾಡಿದನು. ರಾಮಣ್ಣನ ಎಲ್ಲ ಕಷ್ಟಗಳೂ ದೂರವಾದವು. ಇದು ಹೇಗೆ ಸಾಧ್ಯವಾಯಿತು ? ರಾಮಣ್ಣನ ಶತೃವಾಗಿದ್ದವನು ಈಗ ತನ್ನ ಮನಪರಿವರ್ತನೆ ಮಾಡಿಕೊಂಡಿದ್ದನು. ಸ್ನೇಹ, ದ್ವೇಷ, ನೋವು, ನಲಿವು, ಸುಖ, ದುಃಖ, ಯಾವುದೂ ಶಾಶ್ವತವಲ್ಲ. ಕಾಲ ಎಲ್ಲದಕ್ಕೂ ಉತ್ತರ ಕೊಡುತ್ತದೆ. ಪರಿವರ್ತನೆ ಜಗದ ನಿಯಮ, ಎಂಬುದು ರಾಮಣ್ಣನ ಶತೃವಾಗಿದ್ದವನ ಅರಿವಿಗೆ ಬಂದಿತ್ತು. ಈಗ ಆತ ರಾಮಣ್ಣನ ಮಿತ್ರನಾಗಿದ್ದನು. ಇದರಿಂದಾಗಿ ಅವರ ಬದುಕಲ್ಲಿ ಸಹಬಾಳ್ವೆ, ಸಂತೋಷ ತುಂಬಿ ಬಂದಿತ್ತು. ಹೀಗೆಯೇ ನಮ್ಮಲ್ಲೂ ಕೊಡುವ ಮನಸ್ಸು ಬಂದಾಗ ಮುಕ್ತ ಹೃದಯದಿಂದ ಕೊಡಬೇಕು. ಈ ಭಾವನೆ ತಾನಾಗಿಯೇ ಬರುತ್ತದೆ. ಅದು ಪ್ರೀತಿಯಾಗಲಿ, ಸಂಪತ್ತಾಗಲಿ, ಗೌರವವಾಗಲಿ, ತೆರೆದ ಮನಸ್ಸಿನಿಂದ ಕೊಡಬೇಕು. ಮನಪರಿವರ್ತನೆ ಅಭಿವೃದ್ಧಿಗೆ ಪೂರಕವಾಗಿರಬೇಕು. ದ್ವೇಷ ಅಸೂಯೆಗಳು ಮರೆಯಾಗಿ ಸ್ನೇಹ ಮೊದಲಾಗಬೇಕು, ಮದ ಮಾತ್ಸರ್ಯಗಳು ನಶಿಸಿ ಪ್ರೀತಿಯ ಭಾವ ಒಡಮೂಡಬೇಕು. ಕಾಮ, ಕ್ರೋಧ, ಲೋಭ, ಮೋಹಗಳ ಮಿತಿಯಿದ್ದು ಶಾಂತಿ, ಸಹಜೀವನ ಎಲ್ಲೆಡೆಯೂ ಕಾಣಬೇಕು. ಜಗದ ಜನರೆಲ್ಲರಿಗೂ ಸುಖ ಶಾಂತಿ ಲಭಿಸುವಂತಾಗಬೇಕು. ಜನರ ಮನಸ್ಸಿನಲ್ಲಿ ಧನಾತ್ಮಕವಾದ ಪರಿವರ್ತನೆಯಿಂದಾಗಿ ದೇಶದ ಮುನ್ನಡೆ ಆಗುತ್ತದೆ. ಧನಾತ್ಮಕ ಮನಃ ಪರಿವರ್ತನೆ ನಮ್ಮ ವ್ಯಕ್ತಿತ್ವದ ಬೆಳವಣಿಗೆಗೆ ಪೂರಕವಾದುದು. ಆ ಮೂಲಕ ವ್ಯಕ್ತಿಯು ಶಕ್ತಿಯಾಗಿ ರಾಷ್ಟ್ರಾಭಿವೃದ್ಧಿಗೆ ಶ್ರಮಿಸುವುದು ಸಾಧ್ಯವಾಗುತ್ತದೆ. ನಿತ್ಯವೂ ಸವಿ ಮಾತುಗಳನ್ನು ಆಡುತ್ತಾ, ಭಾವ-ಬಂಧಗಳನ್ನು ಬೆಸೆಯುತ್ತಾ, ಧನಾತ್ಮಕ ಮನಃ ಪರಿವರ್ತನೆಯ ಹಾದಿಯಲ್ಲಿ ಪ್ರಗತಿಯ ವಿಕಾಸ ಕಾಣೋಣ, ನಾವು ನಮ್ಮವರು ಎಂಬ ಭಾರತೀಯ ಭಾವನೆ ಯೊಂದಿಗೆ ಬಾಳೋಣ, "ಸರ್ವೇ ಜನಃ ಸುಖಿನೋ ಭವಂತು' ಎಂದು ಆಶಿಸೋಣ.
-ಕೆ.ಎನ್.ಚಿದಾನಂದ. ಹಾಸನ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ