ಪಣಜಿ (ವಾಸ್ಕೊ): ಗೋವಾ ಮತ್ತು ಕರ್ನಾಟಕದ ಮಧ್ಯೆ ಬಾಂಧವ್ಯ ಬೆಸೆಯಲು ಕರ್ನಾಟಕ ಸರಕಾರ ಗೋವಾ ರಾಜ್ಯದಲ್ಲಿ ಕನ್ನಡ ಭವನ ನಿರ್ಮಿಸಿ, ನಿರಂತರ ಕನ್ನಡ ಕಾರ್ಯಕ್ರಮಗಳು ನಡೆಯಲು ಸಹಕರಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕು ಅಧ್ಯಕ್ಷ ಬಸವರಾಜ ಖಾನಪ್ಟನವರ ಹೇಳಿದರು.
ಸೋಮವಾರದಂದು ಗೋಕಾಕದ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ 51 ನೇ ಹುಟ್ಟು ಹಬ್ಬದ ಅಂಗವಾಗಿ ಗೋವಾ ರಾಜ್ಯದ ಝರಿ ಜುವಾರಿ ನಗರದಲ್ಲಿ ಇರುವ ಕಾಳಿದಾಸ ಶಿಕ್ಷಣ ಸಂಸ್ಥೆಯ ಯಲ್ಲಾಲಿಂಗ ಕನ್ನಡ ಮಾಧ್ಯಮ ಪ್ರೌಢಶಾಲೆಯ ಎಸ್.ಎಸ್.ಎಲ್ ಸಿಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸತ್ಕರಿಸಿ, ಸ್ಮಾರ್ಟ್ ತರಗತಿ ನಡೆಸಲು ಸ್ಮಾರ್ಟ್ ಟಿ.ವಿ ವಿತರಿಸಿ ಮಾತನಾಡಿದ ಅವರು ಕಳೆದ ಹಲವಾರು ದಶಕಗಳಿಂದ ಗೋವಾ ರಾಜ್ಯದಲ್ಲಿ ಕನ್ನಡಿಗರು ಕನ್ನಡ ಉಳಿಸಿ, ಬೆಳೆಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರಿಗೆ ಇನ್ನಷ್ಟು ಶಕ್ತಿ ತುಂಬಲು ಕರ್ನಾಟಕದ ಸರಕಾರ ಗೋವಾ ರಾಜ್ಯದಲ್ಲಿ ಕನ್ನಡ ಭವನವನ್ನು ನಿರ್ಮಿಸಲು ಸಹಕರಿಸಬೇಕು ಎಂದ ಅವರು ಗೋವಾದಲ್ಲಿ ಕನ್ನಡ ಉಳಿಯಬೇಕೆಂದರೆ ಕನ್ನಡ ಶಾಲೆಗಳು ಉಳಿಯಬೇಕು ಆ ನಿಟ್ಟಿನಲ್ಲಿ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗೋವಾ ಕನ್ನಡ ಪರ ಸಂಘಟನೆಗಳು ಕಾರ್ಯಪ್ರವೃತ್ತವಾಗಿ ಕನ್ನಡ ಶಾಲೆಗಳು ಮುಚ್ಚದಂತೆ ಮುತುವರ್ಜಿ ವಹಿಸಿ ಕಾರ್ಯಮಾಡಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಭಾಗ್ಯಶ್ರೀ ಬಿಸಿರೊಟ್ಟಿ, ಬಿಬಿಆಯಿಶಾ ವಾಲಿಕರ, ನಕುಶಾ ಜಾಧವ ಅವರನ್ನು ಸತ್ಕರಿಸಿ, ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರುಗಳಾದ ಸುಜಾತಾ ಮನ್ನಿಕೇರಿ, ಪಿ.ವಿ ಪಾಟೀಲ, ಮೌನೇಶ ಮೇಟಿ, ಸುಧೀರ ಬೆಂಡೆ, ಯಲ್ಲಾಲಿಂಗ ತಾಳಿಕೋಟಿ, ಜುವಾರಿನಗರ ಕನ್ನಡ ಸಂಘದ ಅಧ್ಯಕ್ಷ ಶಿವಾನಂದ ಬಿಂಗಿ, ಸಾದಿಕ ಹಲ್ಯಾಳ, ಮುಗುಟ ಪೈಲವಾನ, ಯಾಸಿನ್ ಮುಲ್ಲಾ, ಮಹಾದೇವ ಮಕ್ಕಳಗೇರಿ, ಗೋಪಾಲ ಮಿರಜಕರ, ಸುರೇಶ್ ಸಣ್ಣಕ್ಕಿ, ಸುಧೀರ್ ಮೆಣಸಿನಕಾಯಿ, ಆಪ್ತಾಫ ಸೈಯದ್, ಅನಿಲ ಬಡಿಗೇರ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕಿ ಶುಭಾ ಅಮೋನಕರ ನಿರೂಪಿಸಿದರು, ಸ್ವಾತಿ ಲಂಕಡಿ ವಂದಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ