ಹಾಸನ: ಪೌರಾಣಿಕ ನಾಟಕ ಪ್ರದರ್ಶನ ಎಷ್ಟೇ ದುಬಾರಿಯಾಗುತ್ತಿದ್ದರೂ ಅವು ಜನಮನ ಸೆಳೆಯುವಲ್ಲಿ ಪ್ರೇಕ್ಷಕರ ಮನ್ನಣೆ ಪಡೆಯುವಲ್ಲಿ ಹಾರ್ಮೋನಿಯಂ ಮಾಸ್ಟರ್ ಅರ್ಥಾತ್ ನಿರ್ದೇಶಕರ ಪಾತ್ರ ಮಹತ್ವವಾದದ್ದು ಎಂದು ನಾಟಕಕಾರ ಸಾಹಿತಿ ಗೊರೂರು ಅನಂತರಾಜು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅನುದಾನದಡಿ ಶ್ರೀ ಅನ್ನಪೂಣೇಶ್ವರಿ ಕಲಾಸಂಘದ ಕಲಾವಿದರು ಅಧ್ಯಕ್ಷ ಡಿ.ವಿ.ನಾಗಮೋಹನ್ ಸಾರಥ್ಯದಲ್ಲಿ ಹಾಸನಾಂಬ ಕಲಾಕ್ಷೇತ್ರದಲ್ಲಿ ಪ್ರದರ್ಶಿಸಿದ ಕುರುಕ್ಷೇತ್ರ ನಾಟಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ನಿರ್ದೇಶಕರು ಒಂದೇ ಸನ್ನಿವೇಶಕ್ಕೆ ಪೂರಕವಾಗಿ ಹೊಸ ಹೊಸ ಪದಬಳಕೆಯ ಪ್ರಯೋಗದಲ್ಲಿ ರಂಗಗೀತೆಗಳನ್ನು ಪರಿಷ್ಕರಿಸಿ ಕಲಾವಿದರಿಗೆ ಕಲಿಸಿ ತಮ್ಮ ಸಾಮರ್ಥ್ಯ ಒರೆಗಲ್ಲಿಗೆ ಹಚ್ಚುತ್ತಾರೆ ಎಂದರು.
ಇಲ್ಲಿ ಕಲಾವಿದನೊಬ್ಬ ತನ್ನ ಹಾಡು ಅಭಿನಯದಿಂದ ಪ್ರೇಕ್ಷಕರ ಚಪ್ಪಾಳೆ ಒನ್ಸ್ ಮೋರ್ ಗಿಟ್ಟಿಸಿದರೆ ನಿರ್ದೇಶಕ ಗೆದ್ದಂತೆ ಎಂದು ಅನಂತರಾಜು ಕಳೆದ ಹತ್ತಿಪ್ಪತ್ತು ವರ್ಷದಿಂದ ಹಾಸನದಲ್ಲಿ ಕಲಾವಿದರು ಪೌರಾಣಿಕ ರಂಗಕಲೆಯನ್ನು ಆರಾಧಿಸಿ ಪೋಷಿಸಿಕೊಂಡು ಬರುತ್ತಾ ಇಂದು ಬಹಳಷ್ಟು ಕಲಾವಿದರು ಪ್ರಬುದ್ಧ ನಟರಾಗಿದ್ದಾರೆ. ಪ್ರೇಕ್ಷಕರೂ ಬಹುತೇಕ ಕಲಾವಿದರೇ ಆಗಿ ರಂಗದ ಮೇಲಿನ ನಟ ತಾಳ ತಪ್ಪಿದನ್ನು ಗುರುತಿಸಬಲ್ಲವರಾಗಿದ್ದಾರೆ.
ಅದ್ದರಿಂದ ಪ್ರತಿ ಸಂದರ್ಭ ಸನ್ನಿವೇಶದಲ್ಲೂ ಕಲಾವಿದರು ರಂಗದ ಮೇಲೆ ಬರುವಾಗ ಎಚ್ಚರಿಕೆ ಪರಿಶ್ರಮ ಶಿಸ್ತು ಪಾಲನೆಯಲ್ಲಿ ತಮ್ಮ ತಮ್ಮ ಪಾತ್ರವನ್ನು ಉತ್ತಮವಾಗಿ ನಿರ್ವಹಿಸಿ ಪ್ರೇಕ್ಷಕರ ಮನ ಗೆಲ್ಲಬೇಕೆಂದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹಾಸನ ಜಿಲ್ಲಾಧ್ಯಕ್ಷರು ಇ. ಕೃಷ್ಣೇಗೌಡ, ಸಮಾಜ ಸೇವಕರು ಜೆ.ಓ.ಮಹಾಂತಪ್ಪ, ಹೆಚ್.ಎಂ.ಶಿವಣ್ಣ, ಡಿ.ವಿ.ಮೋಹನ್ ವೇದಿಕೆಯಲ್ಲಿದ್ದು ಮಾತನಾಡಿದರು. ಕಡಗ ಶ್ರೀ ಲಕ್ಷ್ಮಣ್ಅವರ ನೂತನ ಸೀನರಿಯಲ್ಲಿ ರವಿಕುಮಾರ್ ನಿರ್ದೇಶನದಲ್ಲಿ ಪ್ರದರ್ಶಿತ ಕುರುಕ್ಷೇತ್ರ ನಾಟಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ಹಾರ್ಮೋನಿಯಂ ಮಾಸ್ಟರ್ ದಿವಂಗತ ಬಿ.ಪಿ.ಸೀತಾರಾಮೇಗೌಡರಿಗೆ ಶ್ರದ್ಧಾಂಜಲಿ ಅರ್ಪಿಸಿ ಇವರ ಧರ್ಮಪತ್ನಿಯನ್ನು ಸನ್ಮಾನಿಸಲಾಯಿತು. ಗ್ಯಾರಂಟಿ ರಾಮಣ್ಣ, ಯೋಗೆಂದ್ರ ದುದ್ದ, ಸುನೀಲ್ ಆಡುವಳ್ಳಿ ರಂಗಗೀತೆ ಜನಪದ ಗೀತೆಗಳಿಂದ ರಂಜಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ