ಬೆಳ್ತಂಗಡಿ: ಕನ್ನಡದಲ್ಲಿ ಸಾಹಿತ್ಯ ರಚನೆ ಮಾಡಿದಕ್ಕೆ ಕುವೆಂಪು ಮಹಾನ್ ಸಾಹಿತಿಯಾಗಿ ಗುರುತಿಸಿಕೊಂಡರು. ಮಾತೃಭಾಷಾ ಶಿಕ್ಷಣವನ್ನು ಕುವೆಂಪು ಪ್ರತಿಪಾದಿಸಿದರು. ಮನುಷ್ಯನಿಗೆ ಯಾಂತ್ರಿಕ ಜಗತ್ತಿನಿಂದ ಹೊರಗಡೆ ಬರಲು ಸಾಹಿತ್ಯ ಸಹಾಯ ಮಾಡುತ್ತದೆ. ಮನುಷ್ಯ ಯಾಂತ್ರಿಕ ಜಗತ್ತಿನಿಂದ ನಿಸರ್ಗದೆಡೆ ವಾಲಬೇಕಾಗಿದೆ. ಪ್ರಕೃತಿಗೆ ಯಾವುದೇ ಜಾತಿ- ಧರ್ಮದ ಗಡಿಯಿಲ್ಲ, ಮನುಷ್ಯನು ಪ್ರಕೃತಿಯಿಂದ ಪಾಠ ಕಲಿಯಬೇಕಾಗಿದೆ ಎಂದು ಡಾ. ಸತ್ಯಮಂಗಲ ಮಹಾದೇವ ಹೇಳಿದರು.
ಬೆಳ್ತಂಗಡಿಯ ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಎಸ್ಡಿಎಂ ಕಾಲೇಜು ಉಜಿರೆಯ ಕನ್ನಡ ವಿಭಾಗ ಹಾಗೂ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕುಪ್ಪಳಿ ಸಹಯೋಗದೊಂದಿಗೆ ಜರುಗಿದ ಹೊಸ ತಲೆಮಾರಿಗೆ ಕುವೆಂಪು ಸಾಹಿತ್ಯ ದರ್ಶನ ವಿಶೇಷೋಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು.
ಕುವೆಂಪು ಸಾಹಿತ್ಯವು ನಿಸರ್ಗದ ಜೊತೆಯಲ್ಲೇ ಮೂಡುತ್ತದೆ. ವೈಚಾರಿಕ ಚಿಂತನೆಯನ್ನು ಯುವಕರಲ್ಲಿ ಬಿತ್ತಲು ಕುವೆಂಪುರವರ ಸಾಹಿತ್ಯ ಸಹಾಯ ಮಾಡುತ್ತದೆ. ವಿಜ್ಞಾನದಲ್ಲಿ ಅಧ್ಯಾತ್ಮ ಸೇರಿದಾಗ ಮನುಷ್ಯನ ಅಭಿವೃದ್ಧಿಯಾಗುತ್ತದೆ. ಯುವ ಜನಾಂಗ ಆ ದಾರಿಯಲ್ಲಿ ಸಾಗಬೇಕಾಗಿದೆ ಎಂದು ಕುವೆಂಪು ಜೀವನ ಮತ್ತು ಸಾಹಿತ್ಯದ ಕುರಿತು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಮತ್ತು ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಯದುಪತಿ ಗೌಡ ಮಾತನಾಡಿ, " ಜಾಗತೀಕರಣದ ಭರಾಟೆಯಲ್ಲಿ ಜಗತ್ತು ತತ್ತರಿಸುತ್ತಿತುವ ಈ ಕಾಲಘಟ್ಟದಲ್ಲಿ ಕುವೆಂಪು ಸಾಹಿತ್ಯ ಪ್ರಸ್ತುತವಾಗಿದೆ. ಮಲೆನಾಡಿನ ಚಿತ್ರಣವನ್ನು ಕುವೆಂಪು ಸಾಹಿತ್ಯ ಚಿತ್ರಿಸಿದೆ. ಪ್ರಕೃತಿಯೊಂದಿಗೆ ಮನುಷ್ಯ ಬದುಕಬೇಕು ಎಂಬುದು ಅವರ ಸಾಹಿತ್ಯದ ಆಶಯ ಎಂದು ನುಡಿದರು.
ಕುವೆಂಪು ವಿಚಾರಗಳನ್ನು ಹೊಸ ತಲೆಮಾರಿಗೆ ತಲುಪಿಸುವ ದೃಷ್ಟಿಯಿಂದ ಈ ರೀತಿಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ಮತ್ತು ಯುವ ಸಮುದಾಯಕ್ಕೆ ಕುವೆಂಪು ಸಾಹಿತ್ಯ ತಲುಪಬೇಕಾದ ಅನಿವಾರ್ಯತೆಯಿದೆ ಎಂದು ಕಾರ್ಯಕ್ರಮ ಸಂಯೋಜಕ ಮತ್ತು ಎಸ್ಡಿಎಂ ಕಾಲೇಜು ಉಜಿರೆಯ ಕನ್ನಡ ಪ್ರಾಧ್ಯಾಪಕ ಡಾ.ರಾಜಶೇಖರ ಹಳೆಮನೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಎಸ್ಡಿಎಂ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ದಿವಾಕರ ಕೊಕ್ಕಡ, ಕನ್ನಡ ವಿಭಾಗ ಮುಖ್ಯಸ್ಥ ಮಹಾಬಲ ಗೌಡ, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಾಧ್ಯಾಪಕ ಬೆಳ್ಳಿಯಪ್ಪ ಕೆ. ನಿರೂಪಿಸಿ, ಪ್ರಾಧ್ಯಾಪಕಿ ಮೀನಾಕ್ಷಿ ವಂದನಾರ್ಪಣೆ ಮಾಡಿದರು.
ವರದಿ - ಸಂಜಯ್ ಚಿತ್ರದುರ್ಗ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ


