ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕಸಾಪ ದತ್ತಿ ಉಪನ್ಯಾಸ
ಮುಡಿಪು: ಆರ್ಯ ದ್ರಾವಿಡ ಚಿಂತನೆ ಬ್ರಿಟಿಷರ ಒಡಕಿನ ರಾಜಕೀಯ ದಾಳದ ಸೃಷ್ಟಿ. ಇದನ್ನು ಭಾರತೀಯ ಪರಂಪರೆ ಮತ್ತು ಇತಿಹಾಸ ಸಾಕ್ಷ್ಯಗಳ ಬೆಳಕಿನಲ್ಲಿ ವಿಶ್ಲೇಷಿಸಿದವರು ಸೇಡಿಯಾಪು ಕೃಷ್ಣಭಟ್ಟರು. ಅವರ ತಥ್ಯದರ್ಶನ ಕೃತಿ ಇದನ್ನು ಅನಾವರಣ ಮಾಡಿದೆ ಎಂದು ಕಾಸರಗೋಡು ಸರಕಾರಿ ಸ್ನಾತಕೋತ್ತರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕಿ ಡಾ. ಯು ಮಹೇಶ್ವರಿ ಹೇಳಿದರು.
ಅವರು ಬುಧವಾರ ಮಂಗಳೂರು ವಿವಿಯ ಯು.ಆರ್ ರಾವ್ ಸಭಾಂಗಣದಲ್ಲಿ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕವು ಮಂಗಳೂರು ವಿಶ್ವವಿದ್ಯಾನಿಲಯದ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಸಹಯೋಗದೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಂಬಲಪಾಡಿ ವ್ಯಾಸ ಬಲ್ಲಾಳ ಜಾನಕಿ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸೇಡಿಯಾಪು ಕೃಷ್ಣ ಭಟ್ಟರ ಬದುಕು ಮತ್ತು ಸಾಹಿತ್ಯದ ಕುರಿತು ಅವರು ಮಾತನಾಡಿದರು. ಸೇಡಿಯಾಪು ಅವರು ಗಾಂಧೀವಾಧಿಯಾಗಿ ಜೀವನದುದ್ದಕ್ಕೂ ಅವರು ನಡೆದು ಬಂದ ಹಾದಿ ವಿಶೇಷವಾದುದು. ದೇಶೀಯತೆಗೆ ಒತ್ತುಕೊಟ್ಟು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅವರ ಚಿಂತನೆ ನಮಗೆ ದಾರಿದೀಪ, ಎಂದರು.
ಗಡಿಪ್ರದೇಶದಲ್ಲಿ ಕನ್ನಡದ ಚಟುವಟಿಕೆಗಳಿಗೆ ಸಕ್ರಿಯತೆಯನ್ನು ಒದಗಿಸಿದ ಗೋವಿಂದ ಪೈ, ಮುಳಿಯ ತಿಮ್ಮಪ್ಪಯ್ಯರ ಬಳಿಕ ಸೇಡಿಯಾಪು ಅವರು ಮುಂದುವರಿಸಿ, ಈ ಪ್ರದೇಶಕ್ಕೆ ಹಿರಿಮೆಯ ಘನತೆಯನ್ನು ಹೆಚ್ಚಿಸಿದವರಾಗಿದ್ದಾರೆ. ಅವರು ದೃಷ್ಟಿಯನ್ನು ಬೇಗ ಕಳೆದುಕೊಂಡರೂ ತಮ್ಮ ಅಗಾಧ ನೆನಪಿನ, ಜ್ಞಾನದ ಶಕ್ತಿಯಿಂದ ಅನೇಕ ತಳಸ್ಪರ್ಷಿ ಕೃತಿಗಳನ್ನು ಹೊರತಂದಿರುವುದು ಅವರ ವಿದ್ವತ್ ಶಕ್ತಿಗೆ ಸಾಕ್ಷಿಯಾಗಿದೆ, ಎಂದರು.
ಗಾಯಕಿ ಶ್ರೀದೇವಿ ಕಲ್ಲಡ್ಕ ಸೇಡಿಯಾಪು ಕವಿತೆಗಳನ್ನು ಹಾಡಿದರು. ಮಂಗಳೂರು ವಿವಿ ಕನ್ನಡ ವಿಭಾಗದ ಅಧ್ಯಕ್ಷ ಡಾ.ಸೋಮಣ್ಣ ಹೊಂಗಳ್ಳಿ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಸೇಡಿಯಾಪು ಅವರ ಬಗ್ಗೆ ಹೆಚ್ಚು ಅಧ್ಯಯನಗಳು ನಡೆಯದಿರುವುದು ವಿಷಾದನೀಯ. ಸೇಡಿಯಾಪು ಅವರು ಸ್ವಾತಂತ್ರ್ಯದ ಕಾಲಘಟ್ಟದ ಹೋರಾಟದ ಸಂದರ್ಭದಲ್ಲಿ ಕನ್ನಡಕ್ಕಾಗಿ ಹೋರಾಡಿದವರು. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅನೇಕ ಕೊಡುಗೆ ನೀಡಿದ ಇವರ ಬಗ್ಗೆ ಹೆಚ್ಚೆಚ್ಚು ಅಧ್ಯಯನಗಳು ನಡೆಯಬೇಕಿದೆ, ಎಂದರು.
ಉಳ್ಳಾಲ ಕಸಾಪ ಅಧ್ಯಕ್ಷ ಡಾ.ಧನಂಜಯ ಕುಂಬ್ಳೆ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಚಂದ್ರಹಾಸ ಶೆಟ್ಟಿ ವಂದಿಸಿದರು. ಉಳ್ಳಾಲ ಕಸಾಪ ಹೋಬಳಿ ಅಧ್ಯಕ್ಷರಾದ ವಿಜಯಲಕ್ಷ್ಮಿ ರೈ ಕಲ್ಲಿಮಾರ್, ಕಸಾಪ ಪದಾಧಿಕಾರಿಗಳಾದ ರಾಧಾಕೃಷ್ಣ ರಾವ್, ತ್ಯಾಗಂ ಹರೇಕಳ,ಅಮರ್ ಪೂಪಾಡಿಕಲ್ಲ್, ಪ್ರಸಾದ್ ರೈ ಕಲ್ಲಿಮಾರ್, ಕನ್ನಡ ವಿಭಾಗದ ಡಾ.ಯಶುಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರ್ ಅವರು ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ