ಮಂಗಳೂರು: ಪ್ರಚಲಿತ ವಿದ್ಯಮಾನದಲ್ಲಿ ಮಾನವೀಯ ಸಂಸ್ಕೃತಿಕ ಮೌಲ್ಯಗಳು ಕುಸಿಯುತ್ತಿರುವ ಈ ಸಂದರ್ಭದಲ್ಲಿ ಜನರಲ್ಲಿ ಅಭಿರುಚಿ ಕಲಾಸಕ್ತಿ ಬೆಳೆಸುವ ಕಾರ್ಯಕ್ರಮಗಳು ಹೆಚ್ಚಾಗಬೇಕಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ) ಬೆಂಗಳೂರು ಇದರ ರಾಜ್ಯ ಸಹ ಸಂಚಾಲಕಿ ಚೇತನ ದತ್ತಾತ್ರೇಯ ಅಭಿಪ್ರಾಯ ಪಟ್ಟರು.
ಅವರು ಇತ್ತೀಚೆಗೆ ಭರತಾಂಜಲಿ ಕೊಟ್ಟಾರ ಮಂಗಳೂರು ಇವರು ವಿಪ್ರವೇದಿಕೆ (ರಿ) ಕೊಟ್ಟಾರ ಇವರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಬೆನಕ ಸಭಾಭವನ ಕೋಡಿಕಲ್ ಇಲ್ಲಿ ಹಮ್ಮಿಕೊಂಡಿರುವ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ ಕಾಸರಗೋಡು ಇವರ ಬೊಂಬೆಯಾಟ ಪ್ರದರ್ಶನವನ್ನು ಉದ್ಘಾಟಿಸಿದರು.
ಮನುಷ್ಯ ಇಂದು ಒತ್ತಡದ ನಡುವೆ ಬದುಕುವಂತಾಗಿದೆ ಬದುಕಿನ ಜಂಜಾಟದಲ್ಲಿ ಸಂಬಂಧ ಮೌಲ್ಯಗಳು ದೂರವಾಗುತ್ತಿವೆ. ಕಳಚುತ್ತಿರುವ ಸಂಬಂಧಗಳ ಕೊಂಡಿಯನ್ನು ಭಾರತೀಯ ಪುರಾತನ ಲಲಿತ ಕಲೆಗಳಿಂದ ಬೆಳೆಸಲು ಸಾಧ್ಯವಿದೆ. ಯಕ್ಷಗಾನ ಬೊಂಬೆ ಆಟವು ಇಂದು ಅಳಿವಿನ ಅಂಚಿನಲ್ಲಿದೆ ಇಂತಹ ಸಾಧಕ ಕಲೆಯನ್ನು ಪ್ರೋತ್ಸಾಹಿಸಬೇಕಾದ್ದು ಪ್ರತಿಯೊಬ್ಬರ ಕರ್ತವ್ಯ ಎಂದರು.
ತನ್ನ ಸಮಾಜಮುಖಿ ಚಿಂತನೆಯಿಂದ ಕಲಾ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡುತ್ತಿರುವ ಭರತಾಂಜಲಿಯ ಕಾರ್ಯ ಶ್ಲಾಘನೀಯ ಎಂದರು ವೇದಿಕೆಯ ಗೌರವಾಧ್ಯಕ್ಷ ನ್ಯಾಯವಾದಿ ಜಯರಾಮ ಪದಕಣ್ಣಾಯ ಅಧ್ಯಕ್ಷತೆ ವಹಿಸಿದ್ದು ನಿಕಟ ಪೂರ್ವ ಅಧ್ಯಕ್ಷೆ ವಿದ್ಯಾ ರಾವ್ ಮುಖ್ಯ ಅತಿಥಿಯಾಗಿದ್ದರು.
ಸ್ಥಾಪಕ ಸದಸ್ಯರಾದ ವೇದಮೂರ್ತಿ ವಿಶುಕುಮಾರ್ ಜೋಯಿಸ್, ಯಕ್ಷ ಗುರು ರವಿ ಅಲೆವೂರಾಯ ಭರತಾಂಜಲಿಯ ನೃತ್ಯ ಗುರು ವಿದುಷಿ ಪ್ರತಿಮಾ ಶ್ರೀಧರ್, ಗೋಪಾಲಕೃಷ್ಣ ಯಕ್ಷಗಾನ ಬೊಂಬೆ ಯಾಟ ಸಂಘ ಇದರ ನಿರ್ದೇಶಕ ಕೆ ವಿ ರಮೇಶ್, ವಿಪ್ರ ವೇದಿಕೆಯ ಜತೆ ಕಾರ್ಯದರ್ಶಿ ನಯನ ಹರೀಶ್ ರಾವ್ ಕೋಶಾಧಿಕಾರಿ ಕಿಶೋರ್ ಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.
ಸಂಘಟಕ ವಿಪ್ರ ವೇದಿಕೆಯ ಅಧ್ಯಕ್ಷ ಶ್ರೀಧರ ಹೊಳ್ಳ ಸ್ವಾಗತಿಸಿ ವಂದಿಸಿದರು. ಕೊನೆಯಲ್ಲಿ ನರಕಾಸುರ ವಧೆ- ಗರುಡ ಗರ್ವಭಂಗ ಎಂಬ ಯಕ್ಷಗಾನ ಬೊಂಬೆಯಾಟ ಪ್ರದರ್ಶನವು ವೀಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ