ಸಮಾಜ ಸುಜ್ಞಾನದ ಬೆಳಕಿನಲ್ಲಿ ಸಾಗಲಿ-ಭಂಡಾರಕೇರಿ ಶ್ರೀ ಅಭಿಮತ
ಮೈಸೂರು: ಅಜ್ಞಾನ ಎಂಬ ಕತ್ತಲೆ ದೂರವಾಗಿ ಸಮಾಜ ಜ್ಞಾನದ ಬೆಳಕಿನಲ್ಲಿ ಸಾಗಬೇಕು ಎಂಬುದೇ ನರಸಿಂಹ ಅವತಾರದ ಪ್ರಮುಖ ಆಶಯ ಎಂದು ಉಡುಪಿ ಭಂಡಾರಕೇರಿ ಮಠದ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಹೇಳಿದರು.
ಚಾಮರಾಜ ಜೋಡಿ ರಸ್ತೆಯ ವೆಂಕಟಾಚಲ ಧಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನರಸಿಂಹ ಜಯಂತಿ ವಿಶೇಷ ಕಾರ್ಯಕ್ರಮ ದಲ್ಲಿ ಅವರು ಆಶೀರ್ವಚನ ನೀಡಿದರು.
ಭೌತಿಕವಾದ ಕಣ್ಣುಗಳಿಗೆ ದೇವರು ಕಾಣುವುದಿಲ್ಲ. ನಾಸ್ತಿಕರು ಇದನ್ನೇ ಇಟ್ಡುಕೊಂಡು ದೇವರೇ ಇಲ್ಲ ಎನ್ನುತ್ತಾರೆ. ಇದನ್ನು ಸುಳ್ಳು ಮಾಡಲಿಕ್ಕಾಗಿ ನರಸಿಂಹನ ಅವತಾರ ಆಗಿದೆ. ದಶಾವತಾರದಲಿ ಇದು ಬಹಳ ವಿಶಿಷ್ಠವಾದ ಅವತಾರ ಎಂದು ಶ್ರೀ ಗಳು ವಿವರಿಸಿದರು.
ಲೋಕದ ಸಕಲ ವಸ್ತು ಗಳಲ್ಲೂ ದೇವರು ಇದ್ದಾನೆಂದು ಭಕ್ತನಾದ ಪ್ರಹ್ಲಾದ ನಂಬಿದ್ದ. ಇದಕ್ಕೆ ನಾರದರು ನೀಡಿದ ಗರ್ಭ ಸಂಸ್ಕಾರ ಶಿಕ್ಷಣವೇ ಕಾರಣ. ಈ ಪರಮ ನಂಬಿಕೆಯನ್ನು ವಿಶ್ವಕ್ಕೆ ತೋರಿಸಲು ದೇವರು ನರಸಿಂಹ ಅವತಾರ ಮಾಡಿದ. ನಮ್ಮಲ್ಲಿ ಇರುವ ಅಪನಂಬಿಕೆ, ಅನುಮಾನಗಳು ದೂರವಾಗಲು ಇಂದು ನಮ್ಮ ದೇಹವೆಂಬ ಕಂಬದಲ್ಲಿ ನರಸಿಂಹನ ಅವತಾರ ಆಗಬೇಕು. ನರತ್ವ ಮತ್ತು ಸಿಂಹತ್ವ ನಮ್ಮಲ್ಲಿ ಮೂಡಬೇಕು ಎಂದು ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಆಶಿಸಿದರು.
ಅನನ್ಯ ಭಕ್ತಿಗೆ ಪ್ರಹ್ಲಾದ ಪ್ರತೀಕನಾಗಿದ್ದಾನೆ.
ಮಗನಾಗಿ ಜನಿಸಿದಪ್ರಹ್ಲಾದನಿಂದಲೇ ಹಿರಣ್ಯಕಶಪುವಿನ ಅಹಂಕಾರ ದಮನ ಆಯಿತು. ಚೇತನರಾದ ಮಾನವರಲ್ಲಿ ಅನೇಕ ದೋಶಗಳು ಇವೆ. ಆದರೆ ನರಸಿಂಹ ಸಕಲ ಗುಣ ಪರಿಪೂರ್ಣ. ನಮ್ಮೆಲ್ಲರ ಹೃದಯದಲಿ ನರಸಿಂಹ ನಿತ್ಯವೂ ನೆಲೆಸಲಿ. ಈ ಮೂಲಕ ಸಮಾಜ ಸರಿ ದಾರಿಯಲಿ ಸಾಗಿ ಸ್ವಾಸ್ಥ್ಯ ರಕ್ಷಣೆಯಾಗಲಿ ಎಂದು ಅವರು ಸಲಹೆ ನೀಡಿದರು.
ನಮಗೆ ಕಾಣದ ಅನೇಕ ಸಂಗತಿಗಳು ಲೋಕದಲ್ಲಿ ಇದೆ. ವಿಶ್ವಾಸ, ನಂಬಿಕೆ, ಶ್ರದ್ಧೆ ಮತ್ತು ಭಕ್ತಿಯ ನೆಲೆಯಲ್ಲಿ ಜೀವನ ಸಾರ್ಥಕತೆ ಎಡೆಗೆ ಸಾಗಬೇಕು. ಜ್ಞಾನದ ಬಲದಿಂದ ನಾವು ಸಾಧನೆಯನ್ನು ಮಾಡಬೇಕು. ಇದಕ್ಕೆಲ್ಲ ನರಸಿಂಹ ಜಯಂತಿ ಪ್ರೇರಕ ಮತ್ತು ಪೂರಕ ಆಗಬೇಕು ಎಂದು ಸ್ವಾಮೀಜಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಶ್ರೀ ಗಳು ಸಂಸ್ಥಾನ ಪ್ರತಿಮೆ ಶ್ರೀ ಕೋದಂಡ ರಾಮದೇವರ ಮತ್ತು ನರಸಿಂಹ ದೇವರ ಪೂಜೆ ನೆರವೇರಿಸಿದರು. ನೂರಾರು ಭಕ್ತರು ಇದಕ್ಕೆ ಸಾಕ್ಷಿಯಾದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ