ಗಾನಲೋಕ: ಮಧ್ಯಮಾವತಿ ಎಂಬ ಸಂಭ್ರಮಾಚರಣೆ

Upayuktha
0



ಯಾರೇ ಆಗಲಿ ಸುಲಭವಾಗಿ ಹಾಡಿ, ಪಾಡಿ ತಣಿಯಬಹುದಾದ ರಾಗವೊಂದು ಇದೆಯೆಂದರೆ ಅದು ನಿಶ್ಚಿತವಾಗಿ ಮಧ್ಯಮಾವತಿ. ಅದ್ಭುತ ಪ್ರಯೋಗಶೀಲತೆ ಅದರದು. ಶಾಸ್ತ್ರೀಯ ರಾಗವಾದರೂ ಮಧ್ಯಮಾವತಿಗೆಲ್ಲಿದೆ ಮಡಿ?  ಹಾಗಾಗಿ ಎಲ್ಲಾ ಪ್ರಕಾರ, ಪದ್ಧತಿ, ಶೈಲಿಗಳಲ್ಲೂ ಅದಕ್ಕೆ ಸ್ಥಾನ ಕಲ್ಪಿಸಬಹುದು. ಮಧ್ಯಮಾವತಿಯು ಅಣು, ರೇಣು, ತೃಣವನ್ನೂ ಸಚೇತನಗೊಳಿಸುವಂತಹುದು. ಸಮರ್ಥ ಹಾಡುಗಾರನೊಬ್ಬ ಹಾಡುತ್ತಾ, ಹಾಡುತ್ತಾ ತಾನೇ ಧುಮ್ಮಿಕ್ಕುವ ಝರಿಯಾಗಬಹುದು. ಹರಿವ ತೊರೆಯ ಜುಳುವಾಗಬಹುದು. ಸಂಪ್ರದಾಯದ ಕೋಟೆ, ಕೊತ್ತಲಗಳಿಂದ ಹೊರಜಿಗಿದು ಸ್ವಚ್ಛoದದಲಿ ವಿಹರಿಸಬಹುದು.    ಮಧ್ಯಮಾವತಿ ಎಂಬುದು ಒಂದು ದಿವ್ಯಾನುಭೂತಿ. ಅದೊಂದು ಸಂಗೀತ ಚಿಕಿತ್ಸೆ. ಅದು ಸಂಕಟ ಮತ್ತು ಯಾತನೆಗೆ ಪೂರ್ಣವಿರಾಮ ನೀಡುತ್ತದೆ.  ಸಂಭ್ರಮಾಚರಣೆಯ ಸ್ಥಿತಿಗೆ ತಾನಾಗಿ ಕೈಹಿಡಿದು ನಡೆಸಬಲ್ಲದು.

ಧ್ಯಮಾವತಿ ರಾಗವೆಂದರೆ ಹೀಗೆಯೇ. ಅದೊಂದು ಮರೆಯಲಾಗದ ಮಧುರಾನುಭೂತಿ. ಜತೆಜತೆಗೆ ಚಂದದ ಸಂಭ್ರಮಾಚರಣೆ. ಅದಕ್ಕೇ ಅದು ಮಂಗಳರಾಗ. ಹಾಗಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಕಛೇರಿಗಳಲ್ಲಿ ಕಟ್ಟಕಡೆಯ ಕೃತಿಯಾಗಿ ಹಾಡಲಾಗುತ್ತದೆ.

ಇಲ್ಲಿನ ಗೀತೆಗೆ ಹಿತಮಿತವಾದ ಹಿನ್ನೆಲೆ ಸಂಗೀತವಿದೆ. ರಾಗದಲೆಗೆ ಭಾವಬೆಸುಗೆಯಿದೆ. ಹಾಗಾಗಿ ಅದು ಸುವ್ವೀ ಸುವ್ವೀ ಸುವ್ವಾಲಮ್ಮ ಆಯಿತು. ನಮ್ಮೂರ ಮಂದಾರ ಹೂವೇ ನನ್ನೊಲುಮೆ ಬಾಂದಳದ ಚೆಲುವೆಯೂ ಆಯಿತು. ಮುನಿಸು ತರವೇ ಮುಗುದೇ ಹಿತವಾಗಿ ನಗಲೂ ಬಾರದೆ ಎಂಬ ರಾಜಿ ಸಂಧಾನದ ಗೀತೆಯಾಯಿತು‌. ವಾರ ಬಂತಮ್ಮ ಗುರುವಾರ ಬಂತಮ್ಮ ಹೀಗೆ ಏನೇನೆಲ್ಲ ಸಾಧ್ಯವಾಗಿ, ತೆಲುಗಿನಲ್ಲಿ ಮಳ್ಳೀ ಮಳ್ಳೀ ಇದಿ ರಾನಿ ರೋಜು಼ ಎಂದೆನಿಸಿಕೊಂಡಿತು. ಇದೇ ಧಾಟಿಯಲ್ಲಿ ಕನ್ನಡದಲ್ಲಿ ಹೃದಯವೇ ನಿನ್ನ ಹೆಸರಿಗೆ ಬರೆದೇ ನನ್ನೆ ನಾನು ಎಂದಾಯಿತು. 


ಶ್ರೀರಾಗಕ್ಕೂ ಮಧ್ಯಮಾವತಿಗೂ ಜನ್ಮಜನ್ಮದ ಅನುಬಂಧ! ಮೇಳಕರ್ತ ರಾಗದ ನಂಟು. ಹಾಗಾಗಿ ಭಾಗ್ಯದಾ ಲಕ್ಷ್ಮೀ ಬಾರಮ್ಮ ಎಂದು ಎರಡೂ ರಾಗಗಳಲ್ಲಿ ಹಾಡಬಹುದು. ಭಾಗ್ಯಾದ ಬಳೆಗಾರ ಹೋಗಿ ಬಾ ನನ್ ತವರೀಗೆ ಸಹ ಇದೇ ಮಧ್ಯಮಾವತಿಗೆ ಋಣಿ. ಮೈಯೆಲ್ಲ ಹೂವಾಗುವಂತಹ ಭಾವ. ಎದೆಯು ಕಡಲಾಗುವಂತಹ ಅನುಭಾವ ಇನ್ನೆಲ್ಲಿ ಸಾಧ್ಯ? ಈ ಗೀತೆ ಕೇಳಿ ಹರಿವ ನದಿ ಚಲನೆ ಮರೆತು ಭಾವದ ಬೆಸುಗೆ ಹಾಕಿಸಿಕೊಂಡು ಮತ್ತೆ ತನ್ನ ಪಯಣವನ್ನು ಮುಂದುವರೆಸುವಂತಹ ಮೋಡಿಯುಂಟು. ಮಧ್ಯಮಾವತಿಗೆ ಜಾನಪದೀಯ ನಂಟುಂಟು. ಶಾಸ್ತ್ರೀಯದ ಗುಣವುಂಟು. ಹಾಗಾಗಿ ಅದು ಏಕಕಾಲಕ್ಕೆ ಗಾಂಧೀ ಕ್ಲಾಸೂ ಹೌದು; ಬಾಲ್ಕನಿ ಕ್ಲಾಸೂ ಹೌದು. 


ಹಾಗಾಗಿ ಮಧ್ಯಮಾವತಿಗೆ ನಾನೂ ಫಿ಼ದಾ ಆಗಿ ಬರೆದದ್ದು:  

ಚೆಲಿ ಜ಼ಂಟ ಕೋರಿ, ಚೆಲಿಕೈ ವೇಚಿ

ಚಲಿಗಾಲಿಲೋ ಮೇನು ಅದಿರೆ. 

ಆಕಾಶಮಂತಾ, ಆಷಾಢಮಂತಾ 

ಚೆಲಿ ಪ್ರೇಮ ಸಂದೇಶಮೇಲೇ.

ಮೇಘಮೈ, ಓಘಮೈ ಮುತ್ಯಾಲ ಜ಼ಲ್ಲೈಪೋವೇ. 

ಆ ಹರಿವಿಲ್ಲು ರಂಗೈಪೋವೇ.  


ಮಧ್ಯಮಾವತಿ ಮೈಮನ ಪುಳಕಗೊಳಿಸುವಂತಹ ರಾಗ. "ಹೂಬನ ಕುಸುಮಿಸಿ ಪುಳಕಿಸಿ ಮರಳಿಸಿ ಕೋಟಿ ಕೋಟಿ ಸಲ ಹೊಸೆಯಿಸಿತು" ಎಂಬ ಬೇಂದ್ರೆ ಸಾಲುಗಳಲ್ಲಿನ ಸಂಭ್ರಮಾಚರಣೆ. ನಿಜಕ್ಕೂ ಮಧ್ಯಮಾವತಿ ಡಾ. ರಾಜ್ ಹಾಡಿದಂತೆ "ಆಲಾಪದೇರಿಳಿತದಲಿ ನಾ ಕಂಡೆ ಮೋಹನ ಮುರಳಿ!"

-ಕೆ. ರಾಜಕುಮಾರ್, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top