74 ವರ್ಷಗಳ ಬಳಿಕ ಕ್ಷೇತ್ರದ ಜೀರ್ಣೋದ್ಧಾರ, ಅಷ್ಠಬಂಧ ಬ್ರಹ್ಮಕಲಶೋತ್ಸವದ ಸಂಭ್ರಮಕ್ಕೆ ದಿನಗಣನೆ
ಕುಲಶೇಖರ: ಮಂಗಳೂರು-ಮೂಡಬಿದಿರೆ ರಾಷ್ಟ್ರೀಯ ಹೆದ್ದಾರಿಯ ಪದವು ಕುಲಶೇಖರದಲ್ಲಿರುವ ಶ್ರೀ ವೀರನಾರಾಯಣ ದೇವಸ್ಥಾನವು ಸರಿಸುಮಾರು ಎಂಟುನೂರು ವರುಷಗಳ ಇತಿಹಾಸ ಇರುವ ಅತೀ ಪುರಾತನ ದೇವಾಲಯ. ನಮ್ಮ ಕುಲಾಲ ಸಮುದಾಯದ ಆಡಳಿತದಲ್ಲಿರುವ ಈ ಕ್ಷೇತ್ರಕ್ಕೆ ಈಗ ಬರೋಬ್ಬರಿ 74 ವರ್ಷಗಳ ಬಳಿಕ ಇದೀಗ ಜೀರ್ಣೋದ್ಧಾರದ ಪರ್ವಕಾಲ ಕೂಡಿಬಂದಿದೆ.
ವಿಷ್ಣುಸ್ವರೂಪಿ ಶ್ರೀ ವೀರನಾರಾಯಣ ದೇವರ ಸಾನಿಧ್ಯವು ದಕ್ಷಿಣ ಭಾರತದಲ್ಲಿಯೇ ಅತ್ಯಂತ ವಿರಳವಾಗಿರುವ ದೇವಸ್ಥಾನವಾಗಿದೆ. ಕುಲಶೇಖರ ಕ್ಷೇತ್ರದ ಕ್ಷೇತ್ರದ ಆರಾಧ್ಯ ಮೂರ್ತಿ ನಿಂತ ಭಂಗಿಯಲ್ಲಿ, ನಾಲ್ಕು ಹಸ್ತಗಳಲ್ಲಿ ಶಂಖ, ಚಕ್ರ, ಗದಾ ಮತ್ತು ಕುಂಭ (ಅಕ್ಷಯಪಾತ್ರೆ) ಧಾರಿಯಾಗಿ ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ಅನುಗ್ರಹಕಾರಿ ಯಾಗಿದ್ದಾರೆ. ಆಡಳಿತ ಸಮಿತಿ, ಸೇವಾ ಟ್ರಸ್ಟ್, ಜೀರ್ಣೋದ್ಧಾರ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಜೊತೆಯಾಗಿ ಶ್ರೀ ದೇವಸ್ಥಾನದ ಜೀರ್ಣೋದ್ದಾರದಲ್ಲಿ ಸಕ್ರೀಯವಾಗಿ ತೊಡಗಿಕೊಂಡಿದ್ದು, ಇದಕ್ಕೆಲ್ಲ ಮಾಣಿಲ ಶ್ರೀಧಾಮದ ಯೋಗಿಕೌಸ್ತುಭ ಕರ್ಮಯೋಗಿ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಮಾರ್ಗದರ್ಶನ ನೀಡುತ್ತಿದ್ದಾರೆ.
ಕ್ಷೇತ್ರದ ಇತಿಹಾಸ
ಶ್ರೀ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವು 1946 - 48ರಲ್ಲಿ ನೆರವೇರಿದ್ದು, ಈಗಾಗಲೇ ಎಪ್ಪತ್ತನಾಲ್ಕು ವರುಷಗಳು ಕಳೆದಿರುತ್ತದೆ. ಶ್ರೀ ಕ್ಷೇತ್ರದಲ್ಲಿ ಜಳಕದ ಕೆರೆ, ಉಂಬಳಿ ಬರುತ್ತಿದ್ದ ಕೃಷಿಭೂಮಿ ಹಾಗೂ ಕನಕಾಭರಣಗಳು ಇದ್ದವು ಎಂದು ಕಂಡುಬಂದಿರುತ್ತದೆ. ಕಾಲಘಟ್ಟದಲ್ಲಿ ಈ ದೇವಾಲಯವು ಶಿಥಿಲಾವಸ್ಥೆಗೆ ತಲುಪಿ ಕ್ಷೇತ್ರವು ಪಾಳು ಬಿದ್ದಿತ್ತು. ಈ ಪಾಳುಜದ್ದ ದೇವಾಲಯವು ಹಲವಾರು ವರ್ಷಗಳಿಂದ ಜೀರ್ಣಾವಸ್ಥೆಯಲ್ಲೇ ಉಳಿದುಕೊಂಡಿತ್ತು. ಇದನ್ನು ಮನಗಂಡು ಮೂಲ್ಯ-ಕುಲಾಲ-ಕುಂಬಾರ ಸಮಾಜದವರು ದೇವಸ್ಥಾನದ ಆಡಳತವನ್ನು ವಹಿಸಿಕೊಂಡು, ಪಾಳುಬಿದ್ದ ಕ್ಷೇತ್ರದ ಗರ್ಭಗುಡಿ ಮತ್ತು ಸುತ್ತುಪೌಳಿಯನ್ನು 1946-48ನೇ ಇಸವಿಯಲ್ಲಿ ನೂತನವಾಗಿ ನಿರ್ಮಿಸಿ, ವೈದಿಕ ವಿಧಿವಿಧಾನಗಳೊಂದಿಗೆ ಬ್ರಹ್ಮಕಲಶವನ್ನು ವಿಜೃಂಭನೆಯಿಂದ ನೆರವೇರಿಸಿದ್ದಾರೆ. ಇದರ ಜೊತೆಯಲ್ಲಿ ಶ್ರೀ ಕ್ಷೇತ್ರಕ್ಕೆ ಸಂಬಂಧಿಸಿದ ನಾಗಸಾನಿಧ್ಯ, ಪರಿವಾರ ದೈವಗಳ ಪ್ರತಿಷ್ಠಾಪನೆ, ಆರಾಧ್ಯ ಮೂರ್ತಿಗೆ ಚಿನ್ನಾಭರಣ, ಚಂದ್ರಮಂಡಲ ರಥ, ಎರಡು ಅಂತಸ್ತಿನ ಸುಸಜ್ಜಿತ ಸಮುದಾಯ ಭವನ, ಅರ್ಚಕರ ವಸತಿಗೃಹ ಮೊದಲಾದ ಆವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ.
ಜೀರ್ಣೋದ್ಧಾರದ ಪರ್ವಕಾಲ
ಇದರ ಜೊತೆಯಲ್ಲಿ ಶ್ರೀ ಕ್ಷೇತ್ರದಲ್ಲಿ ನಿರಂತರ ವೈದಿಕ ವಿಧಿವಿಧಾನಗಳಿಂದ ಶ್ರೀ ವೀರನಾರಾಯಣ ದೇವರಿಗೆ ಹಾಗೂ ಪರಿವಾರ ದೇವರುಗಳಿಗೆ ಪೂಜೆ, ಪುರಸ್ಥಾರ, ಉತ್ಸವಗಳನ್ನು ಸದಾ ನಿರ್ವಹಿಸುತ್ತಾ ಬಂದಿರುವುದು ಮಾತ್ರವಲ್ಲದೆ, ಶ್ರೀ ಕ್ಷೇತ್ರವು ಉತ್ತಮ ಧಾರ್ಮಿಕ ಕ್ಷೇತ್ರವಾಗಿ ಬೆಳೆದು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ದೇವಾಲಯದ ಗರ್ಭಗುಡಿ ಹಾಗೂ ಸುತ್ತುಪೌಳಿಯ ಶಿಥಿಲಾವಸ್ಥೆಯನ್ನು ತಲುಪಿದುದರಿಂದ ಭಕ್ತಾದಿಗಳ ಆಶಯದಂತೆ ಸಾನಿಧ್ಯವನ್ನು ಜೀರ್ಣೋದ್ದಾರಗೊಳಿಸುವ ಸದುದ್ದೇಶದಿಂದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀಧಾಮ ಮಾಣಿಲ ಇವರ ಮಾರ್ಗದರ್ಶನದಲ್ಲಿ ಜರಗಲಿದ ಅಷ್ಟಮಂಗಲ ಪ್ರಶ್ನೆಯಲ್ಲಿ ಸಮಗ್ರ ಜೀರ್ಣೋದ್ಧಾರ ಆಗಬೇಕೆಂದು ಕಂಡು ಬಂದಿತ್ತು. ಇದರ ಅಂಗವಾಗಿ ರಾಜರ್ಷಿ ಪದ್ಮವಿಭೂಷಣ ಡಾ.ಡಿ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಇವರ ಪೂರ್ಣ ಆಶೀರ್ವಾದದೊಂದಿಗೆ ೨೦೧೮ರ ಅಕ್ಟೋಬರ್ ತಿಂಗಳ ವಿಜಯ ದಶಮಿಯ ಶುಭದಿನದಂದು ಶ್ರೀ ಕ್ಷೇತ್ರದ ಶಿಲಾ ಮುಹೂರ್ತವು ನೆರವೇರಿರುತ್ತದೆ. 2021ರ ಡಿಸೆಂಬರ್ ತಿಂಗಳಲ್ಲಿ ಬಾಲಾಲಯದಲ್ಲಿ ಶ್ರೀ ದೇವರ ಬಿಂಬ ಪ್ರತಿಷ್ಠೆಯನ್ನು ವೈದಿಕ ವಿಧಿವಿಧಾನಗಳೊಂದಿಗೆ ಪ್ರತಿಷ್ಢಾಪಿಸಲಾಯಿತು.
ಗರ್ಭಗುಡಿಯ ಶಿಲಾನ್ಯಾಸ
೨೦೨೨ರ ಜನವರಿ ತಿಂಗಳಲ್ಲಿ ಗರ್ಭಗುಡಿಯ ಶಿಲಾನ್ಯಾಸ ಕಾರ್ಯಕ್ರಮವನ್ನು ಉಡುಪಿಯ ಶ್ರೀ ಪೇಜಾವರ ಅಧೋಕ್ಷಜ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿವರ ದಿವ್ಯ ಹಸ್ತದಿಂದ ಹಾಗೂ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾಣಿಲ ಇವರ ಉಪಸ್ಥಿತಿಯಲ್ಲಿ ನೆರವೇರಿಸಲಾಯಿತು. ಶ್ರೀ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥಸ್ವಾಮೀಜಿಯವರ ದಿವ್ಯ ಹಸ್ತದಲ್ಲಿ, ಶ್ರೀ ಪರಮಹಂಸ ಮೋಹನದಾಸ ಸ್ವಾಮೀಜಿ, ಶ್ರೀರಾಮ ಮಾಣಿಲ ಇವರ ಉಪಸ್ಥಿತಿಯಲ್ಲಿ ವೈಥಿಕ ವಿಧಿವಿಧಾನದೊಂದಿಗೆ ೨೦೨೨ರ ಮಾರ್ಚ್ ತಿಂಗಳಲ್ಲಿ ನಿಧಿಕುಂಭ ಮತ್ತು ಷಡಾಧಾರ ಪ್ರತಿಷ್ಠೆ ಕಾರ್ಯಕ್ರಮವು ಸಮಾಜ ಬಂಧುಗಳ ಮತ್ತು ಊರ ಪರವೂರ ಭಕ್ತರ ಸಮ್ಮುಖದಲ್ಲಿ ವಿಜೃಂಭನೆಯಿಂದ ನಡೆಯಿತು.
ಸುಮಾರು ಹತ್ತು ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ
ಉದ್ದೇಶಿತ ಜೀರ್ಣೋದ್ಧಾರದ ಅಂಗವಾಗಿ ನೂತನ ಶಿಲಾಮಯ ಗರ್ಭಗುಡಿ, ಮುಖಮಂಟಪ, ಸುತ್ತುಪೌಳಿ, ನಮಸ್ಕಾರ ಮಂಟಪ, ಜ್ಞಾನ ಮಂದಿರ, ರಾಜಗೋಪುರ ಹಾಗೂ ವಸಂತ ಮಂಟಪದ ನಿರ್ಮಾಣ ವೆಚ್ಚವು ಸುಮಾರು ರೂಪಾಯಿ ಹತ್ತು ಕೋಟಿ ತಗಲಬಹುದೆಂದು ಅಂದಾಜಸಲಾಗಿದೆ. ನೂತನ ಶಿಲಾಮಯ ಗರ್ಭಗುಡಿ, ಸುತ್ತುಪೌಳಿ ಹಾಗೂ ರಾಜಗೋಪುರದ ಕಾಮಗಾರಿಗಳು ಪೂರ್ಣಗೊಂಡಿದೆ. ನಮಸ್ಕಾರ ಮಂಟಪ, ವಸಂತ ಮಂಟಪ, ನಾಗದೇವರ ಸಾನಿಧ್ಯ, ಪಲವಾರ ಶಕ್ತಿಗಳು, ರಂಗಮಂಟಪ ಮತ್ತು ಇತರ ಕಾಮಗಾರಿಗಳು ಅಂತಿಮ ಹಂತದಲ್ಲಿದೆ.
ಅಷ್ಠಬಂಧ ಬ್ರಹ್ಮಕಲಶದ ಅವಕಾಶ ನಮ್ಮ ಸೌಭಾಗ್ಯ
ನಮ್ಮ ಸಮುದಾಯದ ಆಡಳಿತದಲ್ಲಿರುವ ಈ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶದಲ್ಲಿ ಪಾಲ್ಗೊಂಡು ಕಣ್ತುಂಬಿಕೊಳ್ಳುವ ಸೌಭಾಗ್ಯ ನಮ್ಮ ಪಾಲಿಗೆ ಒದಗಿ ಬಂದಿದೆ. ಈ ಅವಕಾಶವನ್ನು ನಮಗೆ ಶ್ರೀ ವೀರನಾರಾಯಣ ದೇವರೇ ಒದಗಿಸಿದ್ದಾರೆ ಎಂದರೆ ತಪ್ಪಾಗಲಾರದು.
ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಹಾಗೂ ಅರಾಧ್ಯ ಮೂರ್ತಿಯ ಪುನರ್ ಪ್ರತಿಷ್ಠಾಪನೆಯಂತಹ ಪುಣ್ಯ ಕಾರ್ಯವು ಯಶಸ್ವಿಯಾಗುವಂತೆ ಭಕ್ತಾದಿಗಳಾದ ನಾವೆಲ್ಲರೂ ಧನು-ಮನ-ಧನದ ಸಹಕಾರವನ್ನು ನೀಡೋಣ. ಅಲ್ಲದೆ ವಸ್ತುರೂಪದ ಕಾಣಿಕೆಗಳನ್ನು, ಪೂರ್ಣರೂಪದ ಮತ್ತು ಅಂಶಿಕ ರೂಪದ ನಿರ್ಮಾಣ ಕಾಮಗಾರಿಗೆ ಧನರೂಪದ ದೇಣಿಗೆಯನ್ನು ನೀಡಿ ಪುಣ್ಯ ಕಾರ್ಯದಲ್ಲಿ ಪಾಲು ಪಡೆಯೋಣ. ಮೇ 14ರಿಂದ ಮೊದಲ್ಗೊಂಡು ಮೇ 25ರವರೆಗೆ ವಿಜೃಂಭಣೆಯಿಂದ ಜರಗಲಿರುವ ಸಂಪೂರ್ಣ ನವೀಕೃತ ಶಿಲಾಮಯ ದೇಗುಲದ ಪುನರ್ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವದಲ್ಲಿ ನಾವೆಲ್ಲರೂ ಸಕ್ರಿಯವಾಗಿ ಪಾಲ್ಗೊಂಡು ಪುಣ್ಯಭಾಗಿಗಳಾಗೋಣ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ