ಒಮಾನ್: ಬಿರುವ ಜವನೆರ್ ಮಸ್ಕತ್ ಇವರು 19 ಮೇ ಶುಕ್ರವಾರ ಮಸ್ಕತ್ ಒಮಾನ್ ನಲ್ಲಿ "ಸ್ವಾಮಿ ಕೊರಗಜ್ಜ" ಹಾಗೂ "ಶ್ರೀ ಶನೀಶ್ವರ ಮಹಾತ್ಮೆ" ತುಳು ಯಕ್ಷಗಾನ ತಾಳ ಮದ್ದಳೆಯನ್ನು ಆಯೋಜಿಸಿದ್ದಾರೆ. ದಾರ್ ಸೈಟ್ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಶ್ರೀ ಶನೀಶ್ವರ ಭಕ್ತ ವೃಂದ ಪಕ್ಷಿಕೆರೆ ಮಂಗಳೂರು ಇವರಿಂದ ನವರಸ ಭರಿತ ಎರಡು ತುಳು ಯಕ್ಷಗಾನ ಪ್ರಸಂಗ ಗಳು ಒಂದೇ ದಿನ ಪ್ರದರ್ಶನ ಕಾಣಲಿದೆ ಎಂದು ಬಿರುವ ಜವನೆರ್ ಸಂಘಟನೆಯ ಶ್ರೀಮತಿ ಮಾಧುರಿ ಸುವರ್ಣ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಸ್ಕತ್ ನ ಬಿರುವ ಜವನೆರ್ ಸಂಘಟನೆಯು ಕಳೆದ ಒಂದು ದಶಕದಿಂದ ಮಸ್ಕತ್ ನಲ್ಲಿ ಸಾಮಾಜಿಕ, ಧಾರ್ಮಿಕ, ಸೇವಾ ಚಟುವಟಿಕೆ ಗಳನ್ನು ನಡೆಸಿಕೊಂಡು ಬಂದಿದ್ದು, ಈ ಮೊದಲು ಇದೇ ತಂಡವನ್ನು ಆಹ್ವಾನಿಸಿ ಒಮಾನ್ ರಾಷ್ಟ್ರದಲ್ಲಿ ಪ್ರಪ್ರಥಮ ಪೂಜಾ ಸಹಿತ "ಶನೀಶ್ವರ ಮಹಾತ್ಮೆ ಯಕ್ಷಗಾನ ತಾಳಮದ್ದಳೆಯನ್ನು ಆಯೋಜಿಸಿದ ಕೀರ್ತಿಗೆ ಭಾಜನವಾಗಿದೆ.ಒಮಾನ್ ಬಿಲ್ಲವಾಸ್, ಬಂಟ್ಸ್ ಓಮನ್, ವಿಶ್ವಕರ್ಮ, ಗೌಡ ಸಾರಸ್ವತ ಬ್ರಾಹ್ಮಣ, ಮೊಗವೀರ ಒಮಾನ್ ಹಾಗೂ ತುಳು ಭಾಷಾ ಸಂಘಟನೆ ಗಳ ಸಹಕಾರ, ಸಹಭಾಗಿತ್ವ ದಲ್ಲಿ ಈ ಕಾರ್ಯಕ್ರಮ ಸಂಯೋಜನೆ ಮಾಡಲಾಗಿದೆ.
ಮೇ 19 ರಂದು ಬೆಳಿಗ್ಗೆ 8.30 ರಿಂದ 12.30 ರ ತನಕ ಹರೀಶ್ ಶೆಟ್ಟಿ ಸೂಡಾ ರಚನೆಯ "ಅಜ್ಜ ಕೊರಗಜ್ಜ" ತುಳು ತಾಳಮದ್ದಳೆ, ನಂತರ ಪ್ರಸಾದ ಭೋಜನ. ಮಧ್ಯಾಹ್ನ 2.30 ರಿಂದ ಸಂಜೆ 7 ರ ತನಕ ಚಿನ್ಮಯ ದಾಸ ವಿರಚಿತ " ಶ್ರೀ ಶನೀಶ್ವರ ಮಹಾತ್ಮೆ" ವಿಕ್ರಮಾದಿತ್ಯ ಚರಿತ್ರೆ ಎಂಬ ಪುಣ್ಯ ಪ್ರಸಂಗ ಪೂಜಾ ಸಹಿತ ಯಕ್ಷಗಾನ ತಾಳಮದ್ದಳೆ ಸ್ವರೂಪ ದಲ್ಲಿ ನಡೆಯಲಿದೆ.
ಕಳೆದ ಮೂರು ದಶಕ ಗಳಿಂದ ಶನಿ ಪೂಜಾ ಸಹಿತ ತಾಳಮದ್ದಳೆಯನ್ನು ಮಸ್ಕತ್, ದುಬೈ, ಅಬುದಾಬಿ, ಮುಂಬಯಿ, ಸಾಂಗ್ಲಿ ಸೇರಿ ದೇಶ ವಿದೇಶ ಗಳಲ್ಲಿ ನೂರಾರು ಕಾರ್ಯಕ್ರಮ ಗಳನ್ನು ನೀಡಿರುವ ಕರಾವಳಿಯ ಪ್ರಸಿದ್ದ ಯಕ್ಷಗಾನ ತಂಡ ಶ್ರೀ ಶನೀಶ್ವರ ಭಕ್ತ ವೃಂದ ಪಕ್ಷಿಕೆರೆ ಇದೀಗ ಎರಡನೇ ಬಾರಿ ಮಸ್ಕತ್ ನಲ್ಲಿ ಖ್ಯಾತ ಅರ್ಥಧಾರಿಗಳ ಸಮ್ಮಿಲನ ದೊಂದಿಗೆ ಕಾರ್ಯಕ್ರಮ ನೀಡಲು ಸನ್ನದ್ದವಾಗಿದೆ.
ತೆಂಕು ತಿಟ್ಟಿನ ಪ್ರಸಿದ್ದ ಭಾಗವತ ರವಿಚಂದ್ರ ಕನ್ನಡಿಕಟ್ಟೆ ಅವರ ಭಾಗವತಿಕೆ ಯಲ್ಲಿ ಎರಡೂ ಪ್ರಸಂಗಗಳು ಮಿಂಚಲಿವೆ. ಹಿಮ್ಮೆಳದಲ್ಲಿ ಪದ್ಮನಾಭ ಶೆಟ್ಟಿಗಾರ್ ಪಕ್ಷಿಕೆರೆ, ಭಾಸ್ಕರ ಭಟ್ ಕಟೀಲು ಸಹಕರಿಸಲಿದ್ದಾರೆ. ಪಕ್ಷಿಕೆರೆ ಪದ್ಮನಾಭ ಶೆಟ್ಟಿಗಾರ್ ಅವರು ತಂಡದ ಪ್ರಧಾನ ಸಂಚಾಲಕರು.
ಅರ್ಥಧಾರಿಗಳಾಗಿ ಕದ್ರಿ ನವನೀತ ಶೆಟ್ಟಿ, ಶ್ರೀಪತಿ ಭಟ್ ಸಸಿಹಿತ್ಲು, ವಿಜಯ ಕುಮಾರ್ ಶೆಟ್ಟಿ ಮೊಯಿಲೊಟ್ಟು,ಸೀತಾರಾಮ್ ಕುಮಾರ್ ಕಟೀಲ್,ಸದಾಶಿವ ಆಳ್ವ ತಲಪಾಡಿ,ಕಾವಳಕಟ್ಟೆ ದಿನೇಶ್ ಶೆಟ್ಟಿ , ದಯಾನಂದ ಜಿ ಕತ್ತಲ್ ಸ್ಸಾರ್, ಪ್ರಸನ್ನ ಶೆಟ್ಟಿ ಅತ್ತೂರು, ಪುಷ್ಪರಾಜ ಕುಕ್ಕಾಜೆ, ರಾಮಚಂದ್ರ ಮುಕ್ಕ ಪಾಲ್ಗೊಳ್ಳ ಲಿದ್ದಾರೆ.
ಇದು ತುಳು ಭಾಷೆಯ ಸೊಗಡು, ಅಜ್ಜ ಕೊರಗಜ್ಜನ ಸಂದಿ ಪಾರ್ದನದ ತಿರುಳು, ಪುರಾಣ ಪುಣ್ಯ ಕಥಾನಕಕ್ಕೆ ಹೊಸ ಮೆರುಗು ನೀಡುವ ನವರಸ ಭರಿತ ಕಾರ್ಯಕ್ರಮವಾಗಿದೆ.
ಮಸ್ಕತ್ ನಲ್ಲಿ ನೆಲೆಸಿರುವ ಎಲ್ಲಾ ಸಮುದಾಯದ ಕಲಾಸಕ್ತರು ಪಾಲ್ಗೊಳ್ಳುವಂತೆ ಬಿರುವ ಜವನೆರ್ ಮಸ್ಕತ್ ವಿನಂತಿಸಿದ್ದಾರೆ. ದಾಮೋದರ್ ಕುಂದರ್ ಮಸ್ಕತ್, ಸುಹಾನ್ ಸುವರ್ಣ ಮಸ್ಕತ್, ಕದ್ರಿ ನವನೀತ ಶೆಟ್ಟಿ, ಪದ್ಮನಾಭ ಶೆಟ್ಟಿಗಾರ್ ಪಕ್ಷಿಕೆರೆ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ವರದಿ: ದಾಮೋದರ್ ಕುಂದರ್
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ