ಏನಿದು ಹಿಂದೂ ಮತ್ತು ಹಿಂದುತ್ವ.?

Upayuktha
0

ಪಾಕಿಸ್ತಾನದಲ್ಲಿರುವವರು ಪಾಕಿಸ್ತಾನಿಯರು, ಅಪ್ಘಾನಿಸ್ತಾನದಲ್ಲಿರುವವರು ಅಪ್ಘಾನಿಸ್ತಾನೀಯರು, ಇಂಗ್ಲೆಂಡಿನಲ್ಲಿರುವವರು ಇಂಗ್ಲೀಷರು, ಅಮೇರಿಕಾದಲ್ಲಿರುವವರು ಅಮೇರಿಕನ್ನರು, ಆಫ್ರಿಕಾದಲ್ಲಿರುವವರು ಆಫ್ರಿಕನ್ನರು ಅದೇ ರೀತಿ ಹಿಂದೂಸ್ತಾನದಲ್ಲಿರುವವರು ಹಿಂದೂಸ್ತಾನಿಯರು. ಇದು ಸ್ಥೂಲವಾಗಿ ಎಲ್ಲರೂ ಒಪ್ಪಿಕೊಂಡಂಥ ಸಿದ್ಧಾಂತ. ಇನ್ನು ಹಿಂದುಸ್ತಾನದಲ್ಲಿರುವವರು ಎಲ್ಲರೂ ಹಿಂದುಗಳಾದರೂ ಧರ್ಮ ಎಂಬಲ್ಲಿಗೆ ಬರುವಾಗ ಎಲ್ಲರೂ ಹಿಂದೂ ಧರ್ಮೀಯರೇ ಆಗಬೇಕಿಲ್ಲ. ಹಿಂದುಸ್ತಾನದೊಳಗೆ ಹಿಂದೂ ಧರ್ಮದ ಹೊರತಾಗಿ ಹಲವಾರು ಮತಗಳಿವೆ. ಆದರೂ ಇವರೆಲ್ಲರೂ ಹಿಂದೂಸ್ತಾನದವರೆ ಆಗಿರುವುದೂ ಅಷ್ಟೆ ಸತ್ಯ. ಒಂದುವೇಳೆ ಹಿಂದೂಸ್ತಾನ ಎಂದು ಒಪ್ಪಿಕೊಳ್ಳಲಾಗದು ಎಂಬ ಮನೋಭಾವವಿದ್ದರೆ ಭಾರತೀಯರು ಎನ್ನುವುದಕ್ಕೆ ಯಾವ ಅಡ್ಡಿಯೂ ಇಲ್ಲವಷ್ಟೆ. ಆ ದೃಷ್ಟಿಯಿಂದ ನೋಡಿದಾಗ ಮತಗಳು ಸಾವಿರವಿದ್ದರೂ ಭಾರತದೊಳಗೆ ಇರುವವರೆಲ್ಲರೂ ಭಾರತೀಯರೇ. ಹೇಗೆ ಭಾರತದ ಸಂವಿಧಾನಕ್ಕೆ ಬದ್ಧರಾಗಿರಬೇಕಾದರೆ ಭಾರತದ ಅಸ್ಮಿತೆಯನ್ನು ಅಥವಾ ಭಾರತೀಯತ್ವವನ್ನು ಮೈಗೂಡಿಸಿಕೊಳ್ಳಲೇಬೇಕು. ಭಾರತೀಯತೆ ಬೇರೆ ಭಾರತ ಬೇರೆ ಎನ್ನಲಾಗದು. ಅದೇರೀತಿ ಹಿಂದೂ ಧರ್ಮವನ್ನು ಅನಾದಿ ಕಾಲದಿಂದ ನಂಬಿಕೊಂಡು, ಆರಾಧಿಸಿ, ಅನುಸರಿಸಿ, ತಾದಾತ್ಮ್ಯತೆಯಿಂದ ಒಪ್ಪಿಕೊಂಡು ಬದುಕಿ ಬಂದಂಥವರಿಗೆ ಹಿಂದೂಗಳು ಎನ್ನುವುದು ಸರಿ ತಾನೆ. ಇದನ್ನೇ ಹಿಂದುತ್ವವೆನ್ನುವುದು. ಇಲ್ಲಿ ಹಿಂದೂ ಎನ್ನುವಂಥ ಸಂಸ್ಕೃತಿ ಇತ್ತೀಚಿನ ಶತಮಾನಗಳಲ್ಲಿ ಸೇರಿಕೊಂಡ ಅನ್ಯ ಮತಗಳ ರೀತಿ ರಿವಾಜುಗಳಿಗೆ ಹೊಂದಿಕೊಳ್ಳಲು ಬಹಳ ಸಮಯ ಬೇಕಾಯಿತು. ಭಾರತವೆಂದರೆ ಎಲ್ಲವನ್ನೂ ತನ್ನೆಡೆಗೆ ಸೆಳೆದುಕೊಂಡು ಎಲ್ಲರ ಸಾತ್ವಿಕ ಅವಶ್ಯಕತೆಗಳನ್ನು ಸದಾ ಪೂರೈಸುತ್ತಿರುವ ಭೂಮಿ ಎನ್ನುವ ಸತ್ಯವನ್ನು ಎಲ್ಲ ಮತಗಳ ಅನುಯಾಯಾಯಿಗಳೂ ಕಂಡುಕೊಂಡ ಸತ್ಯ. ಇಲ್ಲಿ ಒಂದು ಎಚ್ಚರ ಬೇಕು ಎಲ್ಲರ ಅವಶ್ಯಕತೆಗಳೆಂದರೆ ದುರಾಸೆಗಳಲ್ಲ ಬದಲಾಗಿ ಅತ್ಯಾವಶ್ಯಕವಾದ ಬದುಕಿನ ಬೇಕುಗಳಷ್ಟೆ. 


ಈ ಹಿನ್ನೆಲೆಯಿಂದ ನೋಡಿದಾಗ ಇಲ್ಲಿರುವ ಹಿಂದೂಗಳು ಎಂದರೆ ಹಿಂದೂ ಧರ್ಮದಂತೆ ಇದ್ದು ಅವರವರದೇ ಆದಂಥ ಅಥವಾ ಅವರವರಿಗೆ ತೋಚಿದಂತೆ ದೇವತಾರಾಧನೆಗಳನ್ನೋ, ಭೂತಾರಾಧನೆಗಳನ್ನೋ, ನಾಗಾರಾಧನೆಗಳನ್ನೋ, ನಾಸ್ತಿಕ ವಾದಗಳನ್ನೋ ನಂಬಿಕೊಂಡು ಹಿಂದುಗಳಾಗಿಯೇ ಇದ್ದು ಒಂದು ಚೌಕಟ್ಟಿನೊಳಗೆ ಇರುವವರು ಎನ್ನಬಹುದು. ಅಂದರೆ ಇವರೆಲ್ಲರೂ ಹಿಂದೂಗಳೂ ಹೌದು ಅದೇ ವೇಳೆ ಹಿಂದುತ್ವವನ್ನು ಒಪ್ಪಿಕೊಂಡವರೂ ಹೌದು. (ನಾಸ್ತಿಕ ವಾದವೂ ಹಿಂದು ಧರ್ಮ ಅಲ್ಲಗೆಳೆಯುವುದಿಲ್ಲ. ಅವರವರ ಭಾವಕ್ಕೆ ಅವರವರ ಬದುಕನ್ನು ರೂಪಿಸಿಕೊಳ್ಳಲು ಹಿಂದೂ ಧರ್ಮದಲ್ಲಿ ಮಾತ್ರ ಅವಕಾಶವಿರುವುದೂ ಒಂದು ವಿಶೇಷವಲ್ಲವೇ?) ಯಾರು ಹಿಂದುತ್ವವನ್ನರಿತು ಒಪ್ಪಿ ಅದರಂತೆ ಬದುಕನ್ನು ಕಟ್ಟಿಕೊಂಡಿರುವರೋ ಅವರೆಲ್ಲರೂ ಹಿಂದುಗಳೇ. ಹಿಂದೂಗಳೆಲ್ಲರೂ ಹಿಂದುತ್ವ ಬಲ್ಲವರಾಗಿರಬೇಕಿಲ್ಲ. ಅದರಂತೆ ಹಿಂದುತ್ವ ಬಲ್ಲವರೆಲ್ಲ ಹಿಂದೂ ಧರ್ಮದ ಅನುಯಾಯಿಗಳಾಗಿರುವಲ್ಲಿ ಯಾವ ಸಂಶಯವೂ ಇಲ್ಲ. ( ಕುತೂಹಲಕ್ಕಾಗಿ ಅನ್ಯ ಮತಗಳವರು ಹಿಂದೂ ಧರ್ಮವನ್ನು ಅಭ್ಯಾಸ ಮಾಡಿದವರ ಹೊರತು) ಆದರೆ ಹಿಂದುತ್ವ ಬಲ್ಲಂಥ ಹಿಂದೂ ಎಂದರೆ ಅದು ಪರಿಪೂರ್ಣತೆ ಎನ್ನಬಹುದು. ಉದಾಹರಣೆಗೆ ಒಬ್ಬ ಸೈನಿಕನಿರುತ್ತಾನೆ. ಆತನಿಗೆ ಸೈನಿಕತ್ವ ಇದ್ದಾಗ ಮಾತ್ರ ಪರಿಪೂರ್ಣನಾಗುತ್ತಾನೆ. ಬರಿದೆ ಸೈನಿಕನಾದರೆ ಹುದ್ದೆ ಸೈನಿಕನದ್ದಾಗಿರಬಹುದು. ಆದರೆ ಸೈನಿಕತ್ವ ಇದ್ದಾಗ ಆತನಲ್ಲಿರುವ ಶೂರತ್ವ, ಧೀರತ್ವ, ಪೌರುಷತ್ವ ಪ್ರಕಟವಾಗಿ ಆತನಿಂದ ದೇಶಕ್ಕೆ ಪರಿಪೂರ್ಣ ರಕ್ಷಣೆ ಸಿಗುವುದರಲ್ಲಿ ಎರಡು ಮಾತಿಲ್ಲ. ಅದೇರೀತಿ ಒಬ್ಬ ಕೃಷಿಕನಾದವನಲ್ಲಿ ಕೃಷಿಕತ್ವದ ಅವಶ್ಯಕತೆ ಇದೆ. ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇದ್ದಲ್ಲಿ ಮಾತ್ರ ಆತ ಕೃಷಿಕನಾಗುತ್ತಾನೆ. ಅದಿಲ್ಲದಿದ್ದರೆ ಏನೂ ತಿಳಿಯದ ಕೃಷಿಕನಾಗುತ್ತಾನೆ. ಒಬ್ಬ ಪ್ರಾಧ್ಯಾಪಕನಾದವನಿಗೆ ಆತನಲ್ಲಿ ಪ್ರಾಧ್ಯಾಪಕತ್ವ ಇರಲೇಬೇಕು. ನಾನು ಬರಿದೆ ಪ್ರಾಧ್ಯಾಪಕ ನನ್ನಲ್ಲಿ ಪ್ರಾಧ್ಯಾಪಕತ್ವ ಇಲ್ಲವೆಂದರೆ ಹಾಸ್ಯಾಸ್ಪದವಲ್ಲವೇ. ಅಂತಹ ಪ್ರಾಧ್ಯಾಪಕ ಏನನ್ನು ಬೋಧಿಸಿಯಾನು? ಒಬ್ಬ ವಾಹನ ಚಾಲಕನಿಗೆ ಆತನ ಕಾಯಕದಲ್ಲಿ ಪರಿಪೂರ್ಣತೆ ಬೇಕು. ನಾನು ವಾಹನ ಚಾಲಕ ಆದರೆ ನನಗೆ ಚಾಲಕತ್ವವು ಬೇಕಿಲ್ಲವೆಂದರೆ ಆತನನ್ನು ನಂಬಿ ವಾಹನದಲ್ಲಿ ಕೂತವನು ನೆಮ್ಮದಿಯಿಂದ ಇರಬಹುದೇ? ಅದೇರೀತಿ ಹಿಂದುತ್ವ ಬಲ್ಲವನೇ ಹಿಂದುವಾಗಬಲ್ಲ ಅದರ ಹೊರತು ಹಿಂದು ಎಂದೆನಿಸದರೂ ಹಿಂದು ಎನ್ನುವ ವಿಷಯದಲ್ಲಿ ಆತ ಏನನ್ನೂ ತಿಳಿಯದೆ ಮುಗ್ಧನಾಗಿರುತ್ತಾನೆ. ಅಂತಹ ಮುಗ್ಧನಾದವನನ್ನು ಯಾರು ಕೂಡ ಯಾಮಾರಿಸಬಹುದು. ಬರಿದೆ ಹಿಂದೂ ಮಾತ್ರವಲ್ಲ ಯಾವ ಮತಾನುಯಾಯಿಗಳಾದರೂ ಸರಿ ಅವರವರ ಮತಗಳನ್ನು ಸರಿಯಾದ ರೀತಿಯಲ್ಲಿ ತಿಳಿದುಕೊಂಡಾಗಲೇ ಅವರವರ ಮತಗಳಿಗೆ ನ್ಯಾಯ ಒದಗಿಸಿದಂತೆ. ಆದ್ದರಿಂದ ಹಿಂದು ಎನಿಸಿದವನು ಹಿಂದುತ್ವ ತಿಳಿಯಲೇಬೇಕು. ಅದೇರೀತಿ ಹಿಂದುತ್ವವನ್ನು ಸರಿಯಾಗಿ ತಿಳಿದುಕೊಂಡವನು ಹಿಂದುವಾಗಿಯೇ ಇರುತ್ತಾನೆ. ಯಾರೋ ಒಬ್ಬ ಹಿಂದು ಬೇರೆ ಹಿಂದುತ್ವ ಬೇರೆ ಎಂಬ ಅಪ್ರಬುದ್ಧವಾದಂಥ ಹೇಳಿಕೆಯನ್ನು ಕೊಟ್ಟರೆ ಆತನ ಅಜ್ಞಾನಕ್ಕೆ ಪಶ್ಚಾತ್ತಾಪ ಪಟ್ಟುಕೊಳ್ಳಬೇಕಷ್ಟೆ. ಬೆಂಕಿಯಲ್ಲಿ ಬೆಂಕಿಯ ತತ್ವವಿರಬೇಕು. ಗಾಳಿಯಲ್ಲಿ ಗಾಳಿಯ ತತ್ವವಿರಬೇಕು. ಭೂಮಿಯಲ್ಲಿ ಭೂತತ್ವವಿರಬೇಕು. ಆಕಾಶದಲ್ಲಿ ಆಕಾಶತತ್ವವಿರಬೇಕು. ನೀರಿನಲ್ಲಿ ಜಲತತ್ವವಿರಬೇಕು. ಅಂತೆಯೇ ಹಿಂದೂಗಳಲ್ಲಿ ಹಿಂದುತ್ವವಿರಬೇಕು. 


-ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top