ವಿವೇಕ ರೈ ವಿದ್ವತ್ತಿಗೆ ಮಾದರಿ: ಪ್ರೊ.ಯಡಪಡಿತ್ತಾಯ
ಮುಡಿಪು: ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಬಳಿಕ ಎರಡೆರಡು ವಿವಿಗಳ ಕುಲಪತಿಯಾದ ಪ್ರೊ.ಬಿ.ಎ ವಿವೇಕ ರೈಗಳು ತಮ್ಮ ಪಾಠ, ಆಡಳಿತ, ಆತ್ಮೀಯ ಸರಳ ಸಜ್ಜನಿಕೆಯ ವ್ಯಕ್ತಿತ್ವದಿಂದ ಸರ್ವಮಾನ್ಯರಾದವರು. ಅವರು ವಿದ್ವತ್ತಿಗೆ ಮಾದರಿಯಾದವರು. ಈಗ ತಮ್ಮ ಸಂಗ್ರಹದ ಅಮೂಲ್ಯ ಕೃತಿಗಳನ್ನು ಮಂಗಳೂರು ವಿವಿ ಗ್ರಂಥಾಲಯಕ್ಕೆ ನೀಡಿ ಮುಂದಿನ ತಲೆಮಾರಿನ ಆಸಕ್ತರಿಗೆ ಒದಗಿಸಿದ್ದಾರೆ. ಇದು ಶ್ಲಾಘನೀಯ ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್ ಯಡಪಡಿತ್ತಾಯ ಹೇಳಿದರು.
ಅವರು ಮಂಗಳೂರು ವಿಶ್ವವಿದ್ಯಾನಿಲಯದ ಗ್ರಂಥಾಲಯಕ್ಕೆ ಸುಮಾರು 5400ಕ್ಕಿಂತಲೂ ಹೆಚ್ಚು ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ ಪ್ರೊ.ಬಿ.ಎ ವಿವೇಕ ರೈ ಇವರಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಹಾಗೂ ಗ್ರಂಥಾಲಯದ ವತಿಯಿಂದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪ್ರೊ. ಬಿ.ಎ ವಿವೇಕ ರೈಯವರು ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟಿ ಮಂಗಳೂರು ವಿ.ವಿ ಯ ವಿದ್ಯಾರ್ಥಿಯಾಗಿ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಿದ್ದೇನೆ. ಈ ಒಂದು ಪ್ರೀತಿ ಅಭಿಮಾನಕ್ಕೆ ಪ್ರತಿಯಾಗಿ ತಾನು ತನ್ನಲ್ಲಿರುವ ಅಪಾರ ಸಂಖ್ಯೆಯ ಪುಸ್ತಕಗಳನ್ನು ಮ.ವಿ.ವಿ. ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದ್ದೇನೆ.ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಸಂಶೋಧಕರು ಹಾಗೂ ಯುವಜನತೆ ಪಡೆದುಕೊಳ್ಳಬೇಕು.ಜೊತೆಗೆ ಮಂಗಳೂರು ವಿ.ವಿ.ಅಭಿವೃದ್ದಿ ಪಥದಲ್ಲಿ ಮುಂದುವರೆಯಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಯೂತ್ ರೆಡ್ ಕ್ರಾಸ್ ಸಂಸ್ಥೆಯವರ ಸೇವಾ ಕಲಿಕೆ ಎಂಬ ವಿನೂತನ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಕುಲಪತಿಗಳು ಸಮಾಜಕ್ಕೆ ನಮ್ಮಿಂದ ಆಗುವಂತಹ ಸಹಾಯ ಸಹಕಾರ ಮಾಡೋಣ ಎಂದು ನುಡಿದರು.
ಕಾರ್ಯಕ್ರಮದ ಸಂಯೋಜಕರಾದ ಮಂಗಳೂರು ವಿ.ವಿ.ಗ್ರಂಥಪಾಲಕರಾದ ಡಾ.ಎಂ. ಪುರುಷೋತ್ತಮ ಗೌಡ ಇವರು ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಮಂಗಳೂರು ವಿ. ವಿ ಗ್ರಂಥಾಲಯದ ಸಿಬ್ಬಂದಿಗಳು, ವಿವಿಧ ವಿಭಾಗದ ಮುಖ್ಯಸ್ಥರು, ಪ್ರಾದ್ಯಾಪಕರು, ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಗ್ರಂಥಾಲಯ ಸಿಬ್ಬಂದಿಗಳಾದ ವೀಣಾರವರು ಪ್ರಾರ್ಥನೆಗೈದರು, ಉಷಾ ವಂದನಾರ್ಪಣೆ ಮಾಡಿದರು ಹಾಗೂ ಸವಿತಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ