ಬದುಕು ಸುಲಲಿತವಾದ ನಡಿಗೆಗೆ ಸ್ಪೂರ್ತಿಯಾಗುವುದು .......

Upayuktha
0

 ದೃಷ್ಟ್ವೇದಂ  ಮಾನುಷo   ರೂಪಂ ತವ ಸೌಮ್ಯಂ ಜನಾರ್ದನ//

ಇದಾನೀಮಸ್ಮಿ ಸಂವೃತ್ತ:   ಸಚೇತಾ: ಪ್ರಕೃತಿಂ ಗತಃ //11- 51//

 


ಗವಂತನ ಸೌಮ್ಯ ಮಾನವ ರೂಪವನ್ನು ನೋಡಿ ಅರ್ಜುನನು ಶಾಂತ ಚಿತ್ತ ನಾಗಿ ಹೇ ಜನಾರ್ದನಾ, ನಿನ್ನ ಈ ಅತಿಶಯ ಶಾಂತವಾದ ಮನುಷ್ಯ ರೂಪವನ್ನು ನೋಡಿ ನನ್ನ ಮನಸ್ಸು ಸ್ಥಿರವಾಗಿ ನಾನು ಸ್ವಾಭಾವಿಕ ಸ್ಥಿತಿಯನ್ನು ಈಗ  ಹೊಂದಿರುವೆನು ಎಂಬುದಾಗಿ ನುಡಿಯುತ್ತಾನೆ. ಭಗವಂತನ ಚತುರ್ಭುಜ ರೂಪದ ದರ್ಶನವು ಅತಿ ದುರ್ಲಭವೇ ಆಗಿರುವುದು. ಆದರೆ ಮನುಷ್ಯನು ಇಂದು ಮನದಲ್ಲಿಯೇ ನಾನಾ ರೂಪಗಳನ್ನು ತೋರಿಸುತ್ತಿರುತ್ತಾನೆ. ಅದು ಕಪಟ ಮುಖವಾಡಗಳಿಂದ ತುಂಬಿದ್ದು ಸಮಯ ಸಂದರ್ಭಗಳು ಒದಗಿದಾಗ ಬಣ್ಣ ಬಯಲಾಗುತ್ತದೆ,  ಅಲ್ಲಲ್ಲ ಬಯಲಾಗುವಂತೆ ಆ ದೇವರೇ ಅದಕ್ಕೆ ಆಸ್ಪದ ಕೊಡುತ್ತಾನೆ. ತಿಳಿದೂ  ತಿಳಿದೂ  ತಪ್ಪು ಮಾಡಿದವರಿಗೆ ಅದು ಒಂದು ಕುಟಿಲ ನೀತಿಯೇ  ಆಗಿರುವುದು. ನೋಟ ಒಂದು ಭಾವ ಹಲವು ಎಂಬಂತೆ ಈ ಮುಖವಾಡದ ಮುಖಗಳಾಗಬಾರದು. ಹೊರಗಿನ ಕುರೂಪವನ್ನು ಅಳಿಸಲು ಒಳ್ಳೆಯ ಸ್ವರೂಪವನ್ನು ಅಂತರಂಗದಲ್ಲಿ ಇರಿಸಿಕೊಳ್ಳಬೇಕು. ಆಗ ಮುಖವಾಡದ ಅಗತ್ಯತೆಯೇ ಬಾರದು. 


ಏಕೋ ಏನೋ ಮರ ಕಡಿದು, ಧರಾಶಾಯಿಯಾಗಿ ಬಿದ್ದುದರದೇ ನೆನಪು. ಕಡಿದುರುಳಿದ ಮರವೇನೋ ಬಿತ್ತು! ಆದರೆ ಸಾವಿರಾರು ಉಪಯೋಗಗಳನ್ನೇ ಕೊಟ್ಟಿದ್ದ ಅದರ ನೆನಪುಗಳು ಒಂದೊಂದಾಗಿ ಮೊಳಕೆಯೊಡೆಯಲು ಪ್ರಾರಂಭಿಸಿತು. ಮೊಳಕೆ ಒಡೆದು ಚಿಗುರಿ ತಾನೂ  ಮುಂದೆ ಮರವಾಗಿ ಬಾಳಬೇಕೆನ್ನುವ ಒತ್ತಾಸೆ ಸಾವಿರದ ಪಟ್ಟು ಹೆಮ್ಮರವಾಗಿ ಬೆಳೆಯಲಾರಂಭಿಸಿತು. ಅಂತಹ ಕಾಲಕ್ಕೆ ಅಂತಹುದೇ ಉಪಕಾರವಾದ ಮರಕ್ಕೆ ಈಗ ಯಾರೂ  ಗುರುತೇ ಇಲ್ಲದಂತೆ ಬದಲಾಯಿಸಿದ ಆ ಬದಲಾವಣೆ ಯಾತರದ್ದು ಎಂದು ತಿಳಿಯದೇ  ರೋದನವೇ ಆಗುವಂತಾಯಿತು. ಹಾಗೆಂದು ಆ ಮರಕ್ಕೆ ಯಾವುದೇ ಗುರುತರವಾದ ಆಸೆಗಳಿರಲಿಲ್ಲ. ಹಾಗಾಗಿ ಅದು ಶ್ರೀಮಂತವಾಗಿ ಬೆಳೆದಿತ್ತು. ಅದರ ಶಾಖೆಗಳ ತುದಿಗಳಲ್ಲಿ ಹಕ್ಕಿಗಳು ಗೂಡು ಕಟ್ಟಿ ಅದೆಷ್ಟೋ ಬಾಳ ಬದುಕು ಸವೆಸಲು ಕಾರಣವಾಗಿತ್ತು.  ಮಣ್ಣಿಗೆ, ನೀರಿಗೆ ಆಶ್ರಯವೆನಿಸಿತ್ತು. ಬಿದ್ದ ಕಾರಣವೋ ಏನೋ ಈಗೀಗಲಂತೂ  ಮಣ್ಣು ಬಿಸಿ,  ಗಾಳಿ ಬಿಸಿ ಇಡೀ ಲೋಕವೇ ಬಿಸಿ ಬಿಸಿ ಅನುಭವ. ಮಾಡಿದ್ದುಣ್ಣೋ ಮಹಾರಾಯ.


ಎಷ್ಟೇ ನಿದ್ದೆ ಬರಲಿ,  ಬಾರದಿರಲಿ ಬೆಳಗಿನ ಮುಹೂರ್ತಕ್ಕೆ ಏಳುವ ಈ ದೇಹಕ್ಕೆ ನಿಜವಾಗಿಯೂ ಒಂದು ವಂದನೆಗಳನ್ನು ತಿಳಿಸಲೇಬೇಕು. ಹಾಸಿಗೆಯಲ್ಲಿಯೇ ಹೊರಳಾಡುತ್ತಾ ಹಾಸಿಗೆಗೆ ಹೇಸಿಗೆಯಾಗುವ ರೀತಿಯಲ್ಲಿ ವರ್ತಿಸುವವರೂ  ಇಲ್ಲದಿಲ್ಲ. ಅಲಾರಂ ಇಡದೇ ಏಳುವವರೆಂದ ಮೇಲೆ

 

ಸಾಧನೆಯ ಬಿಲ್ಲೆ ಮನದೊಳಗೆ ಹಲ್ಲೆ ಮಾಡಿದೆಯೆಂದೇ ಅರ್ಥ. ಗೊಣಗುತ್ತಾ ಎದ್ದೇಳುವ ಪರಿಪಾಠವೂ ಕೆಲವರಿಗಿರುತ್ತದೆ. ಆದರೆ ಏಳುವಿಕೆ ಎಂಬುದು ಅದ್ಭುತ ಶಕ್ತಿಯನ್ನು ಹೊಂದುವ ಅಥವಾ ಪಡೆಯುವ ಕ್ರಿಯೆಯಾಗಬೇಕು. ಆಗ ಆ ಹೊತ್ತು ಬಂದಾಗ ಏನೇ ಗಾಢ  ನಿದ್ದೆಯೇ ಇರಲಿ, ಬಲಗಡೆಗೆ ತಿರುಗಿ ಎದ್ದೇಳುವ ಮುನ್ನ ಮರೆಯದೇ ಕೈಯೊಳಗಿನ ಅಮೃತ ಸಮಾನ ಅಂಗೈಗಳನ್ನು ಮುಖಕ್ಕೆ ಆನಿಸಿ ನೋಡಲೇಬೇಕು ಎಲ್ಲಾ.  ಪಾದವನ್ನಂತೂ ಎತ್ತಿ ಇಡುವ ಮೊದಲು ಮೆಲ್ಲನೆ ಮೃದುವಾಗಿ ಸ್ಪರ್ಶಿಸಿಡುವುದೇ ಹತ್ತಿಯನ್ನು ಮುಟ್ಟಿದ ರೀತಿಯಲ್ಲಿ ಅಪ್ಯಾಯಮಾನವಾಗಿರುತ್ತದೆ. ನಮ್ಮೊಳಗಿನ ಕೃಷಿ ಇಳುವರಿಯನ್ನು ಹೆಚ್ಚಿಸಿಕೊಳ್ಳುವ ಮೂಲ ಮಂತ್ರಗಳು ಬಾಯಿಯ ತುಂಬಾ ಹರಿದಾಡುತ್ತಿರಬೇಕು. ಗುರು ಮಂತ್ರದಿಂದ ತೊಡಗಿ ಎಲ್ಲಾ ಮಂತ್ರಗಳು ನಾಲಿಗೆಯಲ್ಲಿ ಸುಲಲಿತವಾಗಿ ನಲಿದಾಡಿದಾಗಲೇ ನಾವು ಮಾಡುವ ಪ್ರತಿಯೊಂದು ಆಸನಗಳು ಫಲಪ್ರದವಾಗುತ್ತವೆ. ಆ ದೇವರೊಡನೆ ನಮ್ಮ ಆಯಾಮ, ವ್ಯಾಯಾಮ ಎಲ್ಲವೂ ಸ್ವೀಕಾರಾರ್ಹವಾಗುತ್ತದೆ. 


ಈಗೀಗ ಸಿಟ್ಟು ಕೋಪ ಬರಲು ಕಾರಣಗಳೇ ಬೇಕಿಲ್ಲ. ವಿನಾಕಾರಣ ಅವುಗಳ ಪ್ರದರ್ಶನ ಆಗುತ್ತಲೇ ಇರುತ್ತದೆ. ಹೊರಗೆ ತೋರಿಸಿಕೊಂಡ ಸಿಟ್ಟು, ಕೋಪ ಇದರ ಪರಿಣಾಮ ದೇಹದ ಒಳಗಿನ ನಿರಂತರ ಕ್ರಿಯೆಗಳನ್ನು ಕ್ಷೀಣಿಸುತ್ತದೆ. ಉಸಿರಿನ ಗತಿ ಏರುಪೇರು ಆಗುತ್ತದೆ. ರಕ್ತ ಬಿಸಿಯಾಗುತ್ತದೆ. ನಾಲಿಗೆ ತೊದಲಿ ಗಂಟಲು ಉಬ್ಬುತ್ತದೆ. ಆಲೋಚನೆ ಸ್ಥಗಿತವಾಗುತ್ತದೆ. ದ್ವೇಷವೆಂಬ ದಳ್ಳುರಿ   ಹೃದಯದಲ್ಲಿ ಭುಗಿಲೇಳುತ್ತದೆ. ಇದರಿಂದಾಗಿ  ಸಣ್ಣ ಸಣ್ಣ ವಿಷಯಗಳಿಗೂ ಮಾರಣಾಂತಿಕ ಗಾಯಗಳನ್ನೇ ಮಾಡಿಕೊಳ್ಳುವವರು ಹೆಚ್ಚಾಗಿದ್ದಾರೆ. ಸಾಮ, ದಾನ,  ಭೇದ, ದಂಡ ಎಂಬ ಚತುರೋಪಾಯಗಳಡಿ  ಮೊದಲಾಗಿ ಕಲಿಸುತ್ತಿದ್ದ ವಿದ್ಯೆಯಲ್ಲಿ ಬದಲಾವಣೆ ಬಂದ ಮೇಲೆ  ಇಂತಹ ಸಿಟ್ಟು, ಸೆಳಹು, ಕೋಪ, ಅವಮಾನಗಳು ಜಾಸ್ತಿಯಾಗತೊಡಗಿದೆಯೇನೋ ಎಂಬಂತಾಗಿದೆ. ಯಾವುದಕ್ಕೂ ನಿಯಂತ್ರಣ ಎಂಬುವುದಿಲ್ಲವಾಗಿದೆ. ಅಡ್ಡಾದಿಡ್ಡಿಯಾಗಿ ರಸ್ತೆಯಲ್ಲಿ ವಾಹನಗಳನ್ನು ಚಲಾಯಿಸಿದರೆ ಬೇಕಾದ ಕಡೆಗೆ ತಲುಪಲು ಎಂದೂ ಸಾಧ್ಯವಾಗುವುದಿಲ್ಲ. ಹಾಗೆಯೇ ಮನಸ್ಸಿಗೂ ನಿಯಂತ್ರಣ ಎಂಬ ಬ್ರೇಕ್ ಒತ್ತದಿದ್ದರೆ ಅನಾಹುತಗಳೇ ಸಂಭವಿಸುವುದು ಆಘಾತಕಾರಿ  ವಿಷಯವಾಗಿದೆ.


ಹಾಗಾಗಿ ನಮ್ಮೊಳಗಿನ ಅರಮನೆಯನ್ನು ಸುಂದರವಾಗಿರಿಸಿಕೊಳ್ಳಲು ಹೊರಗಿನ ಸೌಂದರ್ಯಕ್ಕೆ ಮಾರು ಹೋಗಬಾರದು. ಅದೇನೇ ಇರಲಿ ಧೂಳು ಕಸದಿಂದ ಹಿಡಿದು ದೊಡ್ಡ ದೊಡ್ಡ ಬುಲ್ಡೋಜರುಗಳೇ ಇರಲಿ, ಯಾವುದಕ್ಕೂ ಅಪೇಕ್ಷೆ ಪಡದೆ ಒಳಗಿನ ತುಡಿತಕ್ಕೆ, ಹೃದಯದ ಮಿಡಿತಕ್ಕೆ ಸದಾ ಸಾತ್ ನೀಡುತ್ತಿರಬೇಕು.   ನಾವು ನಮ್ಮೊಳಗಿನ  ಉಸಿರಿಗೆ ಹೊಂದಿಕೊಂಡು ಹೋದಾಗ,  ಆ ಉಸಿರು ನಮ್ಮನ್ನು ಉಳಿಸುತ್ತದೆ. ನಮ್ಮೊಳಗಿನ ತುಡಿತಕ್ಕೆ ಹೊಂದಿಕೊಳ್ಳಲು ಕಷ್ಟವಾದರೆ  ಹೊರ ಪ್ರಪಂಚದ ಯಾವುದು ಸರಿ ಹೋಗಲು ಸಾಧ್ಯವಿದೆ? ನಿಂತ ನೀರಿನಂತೆ ತಟಸ್ಥತೆ ಇರಬಾರದು. ಕಳೆದುಕೊಳ್ಳುವ ಭೀತಿ ಇದೆ. ಬೀಸುವ ಮಂದಾನಿಲದಂತೆ ಈ ಬದುಕನ್ನು ಹರಿಯ ಬಿಡಬೇಕು. ಸಾದಾ ಗಾಳಿಯಿಂದಲೇ ಬೀಜ ಒಂದು ಇಣುಕಿ ನೋಡಿ ಮೊಳಕೆ ಒಡೆಯಲು ಪ್ರಾರಂಭಿಸುತ್ತದೆ. ಬೇಸತ್ತ ಮನಸ್ಸಿಗೆ ಹೃದಯದಿಂದಲೇ ಸಾಂತ್ವನದ ನುಡಿಗಳನ್ನು ಅರ್ಪಿಸುತ್ತಿರಬೇಕು. ಆಗ  ಸುಪ್ತ  ಮನಸ್ಸಿನ ಬೇರುಗಳಿಗೆ ಆಶ್ರಯವು ದೊರಕುತ್ತದೆ. ಶಾಂತಿ ಸಮಾಧಾನಗಳೆಂಬ ರೆಂಬೆ ಕೊಂಬೆಗಳು, ಮನಸ್ಸನ್ನು ಗಟ್ಟಿಯಾಗಿರಿಸುವಂತೆ ಮಾಡುತ್ತವೆ.


ಶುಭ ಕಾರ್ಯಕ್ರಮಗಳಿಗೆ ಹೋಗುವ ಮೂಲಕ ಮನಸ್ಸು ಹೊಸ ಹೊಸ ಆಲೋಚನೆಗಳಿಗೆ ಸಾಕ್ಷಿಯಾಗುತ್ತದೆ. ಈ ಸಾಕ್ಷಿಗಳು ಮನ ಪಟಲದಲ್ಲಿ  ಚಿತ್ರಗಳಂತೆ ಬಂದು ಮತ್ತೆ ಮರೆಯಾಗುತ್ತವೆ. ಹಾಗಾಗಿ ಒಮ್ಮೊಮ್ಮೆ ಬೇಡವೆಂದು ಹಠ ಮಾಡುವ ಮೂಲಕ ಮನಸ್ಸು ದೇಹಕ್ಕೆ ಇನ್ನಷ್ಟು ತೊಂದರೆ ಕೊಡುತ್ತದೆ. ಆಗ  ಆಯಾಸಗೊಂಡ ದೇಹ ದುರ್ಬಲವಾಗುತ್ತದೆ. ಹಾಗಾಗಿ ಮನಸ್ಸು ವಿಟಮಿನ್ ನಂತೆ ಸತ್ವಯುತವಾದದ್ದನ್ನೇ ದೇಹಕ್ಕೆ ನೀಡುವಂತಾಗಬೇಕು.

 

ಆಸನ ಕ್ರಿಯೆಗಳು ದೇಹವನ್ನು ಪೋಷಣೆ ಮಾಡುತ್ತವೆ. ಹಾಗಿದ್ದುದರಿಂದಲೇ ಮನಸ್ಸು ಕೆಲವೊಮ್ಮೆ ಬೇಡವಾದ ವಿಚಾರಕ್ಕೆ ತಲೆ ಹಾಕಿದರೂ ಸಕಾರಾತ್ಮಕ ಯೋಚನೆಗಳು ಅದನ್ನು ಪುಷ್ಠಿಗೊಳಿಸಲು ಅಪೇಕ್ಷಿಸದೇ ಮೂಲೆಗುಂಪು ಮಾಡಿಬಿಡುತ್ತವೆ. ಆಗ ಸಕಾರಾತ್ಮಕತೆ   ತನ್ನ ದ್ವಾರವನ್ನು ತೆರೆದುಕೊಂಡು  ಆ ಮೂಲಕ ಸಂಕುಚಿತ ದೌರ್ಬಲ್ಯಗಳನ್ನು ತೊಡೆದು,  ಬೇಕೆನಿಸುವ ಉನ್ನತ ಕಾರ್ಯಗಳಿಗೆ ದಾರಿ ಬಿಟ್ಟು ಕೊಡುತ್ತವೆ. ಕೊಂಚ ತಡೆಯಾದರೂ ಆ ಮೇಲಿನ ಕಾರ್ಯಗಳೆಲ್ಲ ಸುಂದರ ನೆನಪುಗಳನ್ನೇ ತರುತ್ತ ಬದುಕಿಗೆ ಆಶಾ ಗೋಪುರಗಳಾಗಿ ಭದ್ರಕೋಟೆಯಾಗುತ್ತದೆ. ಗೈರು ಹಾಜರಿಯನ್ನು ತಪ್ಪಿಸಿ ಹಾಜರಾತಿಯನ್ನು ಪಡೆಯುತ್ತಾ ಆದರ್ಶಗಳ ಮೂಟೆಗಳನ್ನು ಹೊತ್ತುಕೊಳ್ಳಲು ಮುಂದಡಿ ಇಡುತ್ತೇವೆ. ಇದುವೇ ಸಕಾರಾತ್ಮಕ ಯೋಚನೆಯ ಧನಾತ್ಮಕ ಬೆಳವಣಿಗೆಯಾಗುತ್ತದೆ. ಹೋದ ಕಡೆ ಬಂದ ಕಡೆ ನಮ್ಮೊಳಗಿನ ಅಂತರಾತ್ಮ ಹಿತವನ್ನೇ ಕಾಣುತ್ತಿದೆ ಎಂದಾದರೆ ಬದುಕು ಸುಲಲಿತವಾದ ನಡಿಗೆಗೆ ಸ್ಪೂರ್ತಿಯಾಗುವುದು. ಹೊರಗಡೆ ಕಾಣುವುದನ್ನು ಒಳನೋಟವು ಕೆಲವೊಮ್ಮೆ ಗಣನೆಗೆ ತೆಗೆದುಕೊಳ್ಳುವುದಿಲ್ಲ. ದೇಹದ ಬೇಡವಾದ ಕಶ್ಮಲಗಳನ್ನು ತ್ಯಜಿಸುವಂತೆ ಈ ರೀತಿಯ ಅನುಭವಗಳು ಸೂಕ್ತವಾದವುಗಳೇ ಆಗಿವೆ. 


-ಮಲ್ಲಿಕಾ ಜೆ ರೈ ಗುಂಡ್ಯಡ್ಕ                                                                           

                                                                                                          

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top