ಮಂಗಳೂರು: ಲಲಿತಕಲೆ ಹಾಡು, ನೃತ್ಯಕ್ಕೆ ಸೀಮಿತವಾಗದೆ, ಮಿಮಿಕ್ರಿ, ಸ್ಕಿಟ್ ನಂತಹ ವಿಶಿಷ್ಟ ಪ್ರತಿಭೆಗಳಿಗೂ ಅವಕಾಶ ಸಿಗಬೇಕು. ಲಲಿತಕಲೆಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕ, ಎಂದು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲೆ ಡಾ.ಅನಸೂಯ ರೈ ಅಭಿಪ್ರಾಯಪಟ್ಟಿದ್ದಾರೆ.
ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಲಲಿತಕಲಾ ಸಂಘದ ವತಿಯಿಂದ ಮಂಗಳವಾರ ನಡೆದ ಸಾಂಸ್ಕೃತಿಕ ಪ್ರತಿಭಾ ಆಯ್ಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಲಲಿತಕಲಾ ಸಂಘದ ಸಂಯೋಜಕಿ ಡಾ. ಮೀನಾಕ್ಷಿ ಎಂಎಂ, ತಮ್ಮ ಉದ್ಘಾಟನಾ ಭಾಷಣದಲ್ಲಿ ಕಲೆ ವ್ಯಕ್ತಿತ್ವ ರೂಪಿಸುತ್ತದೆ. ವಿದ್ಯಾರ್ಥಿಗಳಲ್ಲಿ ಲವಲವಿಕೆ ಮೂಡಿಸುವ ಲಲಿತಕಲೆಗಳು ಶೈಕ್ಷಣಿಕ ಬೆಳವಣಿಗೆಗೆ ಪೂರಕ, ಎಂದರು.
ವಿದ್ಯಾರ್ಥಿ ಸಂಘದ ಉಪನಿರ್ದೇಶಕಿ ಡಾ. ಲತಾ ಎನ್ ಪಂಡಿತ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಜನ್ವಿ. ಶೆಟ್ಟಿ, ಕಾರ್ಯದರ್ಶಿ ತಶ್ವಿತ್ಎಂ.ಬಿ, ಸಹ ಕಾರ್ಯದರ್ಶಿ ಯಶಸ್ವಿಕೆ, ಲಲಿತಾಕಲಾ ಸಂಘದ ಕಾರ್ಯದರ್ಶಿನಿ ಪ್ರತೀಕ್ಷಾ ಪಿ, ಸಹ ಕಾರ್ಯದರ್ಶಿನಿ ಶರಣ್ಯ ಪಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ. ಆಶಾಲತಾ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಅಧ್ಯಾಪಕ- ಅಧ್ಯಾಪಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಾಂಸ್ಕೃತಿಕ ವೈಭವ
ರವೀಂದ್ರಕಲಾ ಭವನ ಮತ್ತು ಡಾ. ಶಿವರಾಮ ಕಾರಂತ ಸಭಾಭವನದಲ್ಲಿ ಏಕಕಾಲದಲ್ಲಿ ನಡೆದ ಪ್ರತಿಭಾ ಪ್ರದರ್ಶದಲ್ಲಿ ನೂರಾರು ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿದರು. ವೈಯಕ್ತಿಕ ಮತ್ತು ಗುಂಪು ವಿಭಾಗಗಳೆರಡರಲ್ಲೂ ಭಾರೀ ಪೈಪೋಟಿ ಕಂಡುಬಂತು. ಶಾಸ್ತ್ರೀಯ, ಈಸ್ಟರ್ನ್, ಜಾನಪದ, ನೃತ್ಯ-ಗಾಯನ, ಯಕ್ಷಗಾನ ಭಾಗವತಿಗೆ, ಪಾಶ್ಚಾತ್ಯ ಸಂಗೀತ ಸೇರಿದಂತೆ ಸುಮಾರು 14 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು. ಸಾಮೂಹ ನೃತ್ಯ ಮತ್ತು ಕಿರುಪ್ರಹಸನ ವಿಭಾಗಗಳಲ್ಲಿ ಹಲವು ಪ್ರದರ್ಶನಗಳು ನೋಡುಗರ ಗಮನ ಸೆಳೆದವು.
ಇಂದು ಪ್ರತೀ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಮೊದಲ ಮೂರು ಸ್ಪರ್ಧಿಗಳಿಗೆ ಪ್ರತಿಭಾ ದಿನಾಚರಣೆಯಂದು ಬಹುಮಾನ ವಿತರಿಸಲಾಗುವುದು, ಅಲ್ಲದೆ ಈ ಸ್ಪರ್ಧಿಗಳು ಅಂತರ್ ಕಾಲೇಜು ಸ್ಪರ್ಧೆಗಳಲ್ಲಿ ಸ್ಪರ್ಧಿಸುವ ಅವಕಾಶ ಪಡೆಯಲಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ