ಉಡುಪಿ: ಡಾ. ಜಿ. ಶಂಕರ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ. ಅಜ್ಜರಕಾಡು, ಉಡುಪಿ ಇಲ್ಲಿ ಇಂದು (ಏ. 19, ಬುಧವಾರ) ಮತದಾರರ ಸಾಕ್ಷರತಾ ಸಂಘ, ಐಕ್ಯೂಎಸಿ, ವಿದ್ಯಾರ್ಥಿ `ಕ್ಷೇಮವಾಲನಾ ಸಮಿತಿ ಮತ್ತು ರಾಷ್ಠ್ರೀಯ ಸೇವಾ ಯೋಜನೆಯ ಜಂಟಿ ಆಶ್ರಯದಲ್ಲಿ ವಿದ್ಯಾರ್ಥಿಗಳಲ್ಲಿ ಮತದಾನದ ಅರಿವು ಮೂಡಿಸುವ ನಿಟ್ಟಿನಲ್ಲಿ ಮತದಾನದ ಮಹತ್ವದ ಕುರಿತು ವಿಶೇಷ ಉಪನ್ಯಾಸ ನೀಡಲಾಯಿತು.
ಎಂ.ಜಿ.ಎಂ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ್ ಶೆಟ್ಟಿಯವರು ಮತದಾನದ ಮಹತ್ವದ ಕುರಿತು ಮಾತನಾಡುತ್ತಾ, ಚುನಾವಣೆ ಪ್ರಜಾಪ್ರಭುತ್ವದ ಮಾನದಂಡ, ಇಲ್ಲಿ ಮತದಾನವು ಪ್ರಜೆಗಳ ಅಸ್ತಿತ್ವವನ್ನು ಎತ್ತಿಹಿಡಿಯುತ್ತದೆ. ಭಾರತವು ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಕಳೆದ 75 ವರ್ಷಗಳಿಂದ ಮತದಾನದ ಪ್ರಮಾಣವನ್ನು ನೋಡಿದರೆ ಬೇಸರವಾಗುತ್ತದೆ. ಅದರಲ್ಲಿಯೂ, ವಿದ್ಯಾವಂತರಲ್ಲಿ ಮತ್ತು ಪಟ್ಟಣಗಳಲ್ಲಿ ಮತದಾನದ ಪ್ರಮಾಣ ಕಡಿಮೆಯಾಗಿರುವುದು ವಿಷಾದನೀಯ. ಇತ್ತೀಚಿನ ದಿನಗಳಲ್ಲಿ ಮತದಾನದ ಜಾಗ್ರತಿ ಕಾರ್ಯಕ್ರಮಗಳಿಂದ ಯುವ ಮತದಾರ ಸಂಸ್ಯೆ ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ಸದೃಢ ಪ್ರಶಾಪ್ರಭುತ್ವ ಸ್ಥಾಪಿಸುವಲ್ಲಿ ಯುವಕರ ಪಾತ್ರ ಮುಖ್ಯ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಪ್ರೊ. ಭಾಸ್ಗರ ಶೆಟ್ಟಿ ಎಸ್ ಮಾತನಾಡುತ್ತಾ. ಮತದಾನ ದಲ್ಲಿ ಬದುಕಿನ ಹಕ್ಕಿದೆ, ಅದನ್ನು ಉಳಿಸಿಕೊಳ್ಳಲು ಮತದಾರರು ಜಾಗೃತರಾಗಿ ಮತದಾನ ಮಾಡಬೇಕು ಎಂದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ, ಡಾ. ವಾಣಿ ಆರ್ ಬಲ್ಲಾಳ್ ಮತದಾರರ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಅದೇ ಸಂದರ್ಭದಲ್ಲಿ ಕಾಲೇಜಿನ ಎಲ್ಲಾ ತರಗತಿಗಳಲ್ಲಿ ಹಾಜರಿದ್ದ ಉಪನ್ಯಾಸಕರು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಮತದಾರರ ಸಾಕ್ಷರತಾ ಸಂಘದ ಸಂಚಾಲಕರಾದ ಮಂಜುನಾಥ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.
ಐಕ್ಯೂಎಸಿ ಸಂಚಾಲಕರಾದ ಸೋಜನ್ ಕೆ.ಜಿ, ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ಅಶೋಕ್ ಭಂಡಾರಿ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ರಾಜೇಂದ್ರ ಕೆ, ಉಪನ್ಯಾಸಕರಾದ ಡಾ. ರಾಮದಾಸ ಪ್ರಭು, ಶ್ರೀಮತಿ ಸುಚಿತ್ರಾ, ನಾಗರಾಜ ಹೆಗ್ಗಡೆ, ಶ್ರೀಮತಿ ಪ್ರಮೀಳಾ ಮೊದಲಾದವರು ಉಪಸ್ಥಿತರಿದ್ದರು. ಕಾಲೇಜಿನ ಎಲ್ಲಾ ವಿದ್ಯಾರ್ಥಿ ಪ್ರತಿನಿಧಿಗಳು ಹಾಜರಿದ್ದರು. ಕ್ಯಾಂಪಸ್ ಅಂಬಾಸಿಡರ್ ಕು. ರೇಷ್ಮಾ ವಂದಿಸಿದರು. ಇನ್ನೋರ್ವ ಕ್ಯಾಂಪಸ್ ಆಂಬಾಸಿಡರ್ ಕು. ದಿವೀಕ್ಷಾ ಕಾರ್ಯಕ್ರಮ ನಿರೂಪಿಸಿದರು.