ಯೋಗ ಆರೋಗ್ಯ ವರ್ಧಕ, ರೋಗ ನಿರೋಧಕ- ಸ್ವಾಮಿ ರಘುರಾಮಾನಂದಜೀ

Upayuktha
1 minute read
0



ಮಂಗಳೂರು: ಇಲ್ಲಿನ ರಾಮಕೃಷ್ಣ ಮಠದಲ್ಲಿ ಇತ್ತೀಚೆಗೆ ಯೋಗ ತರಗತಿಯ ಶಿಬಿರವನ್ನು ಉದ್ಘಾಟಿಸಿದ ಸ್ವಾಮಿ ರಘುರಾಮಾನಂದಜೀ ಅವರು ಮಾತನಾಡಿ, ಪ್ರತಿಯೊಂದು ಆಸನಗಳನ್ನು ಗುರು ಮುಖೇನ ಕಲಿತು ಉಸಿರಿನ ಗತಿಯೊಂದಿಗೆ ಅಭ್ಯಾಸ ಮಾಡಬೇಕು. ಸ್ವಾಮಿ ವಿವೇಕಾನಂದರ ವಿಚಾರಧಾರೆ ಹಾಗೂ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.


ವಿವೇಕಾನಂದರು ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಒಂದು ಮಾತು ಹೇಳಿದ್ದಾರೆ. “To me the very essence of education is the concentration of the minds” ಅಂದರೆ,  “ಶಿಕ್ಷಣದ ಮುಖ್ಯ ಉದ್ದೇಶ ಮನಸ್ಸಿನ ಏಕಾಗ್ರತೆ”. ನಮ್ಮಲ್ಲಿ 3 ಜಾತಿಗಳಿವೆ. ಪ್ರಾಣಿ ಜಾತಿ, ಸಸ್ಯ ಜಾತಿ ಮತ್ತು ಮನುಷ್ಯ ಜಾತಿ.  ಮನುಷ್ಯರಾಗಿ ಹುಟ್ಟಿದ ಮೇಲೆ ಕೆಲವು ನಿಯಮಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸತತ ಅಭ್ಯಾಸ ಮತ್ತು ಪ್ರಯತ್ನದಿಂದ ನಮ್ಮ ಗುರಿ ತಲುಪಲು ಸಾಧ್ಯ. ಆಗ ಸಿಗುವ ಆನಂದ ಅವರ್ಣನೀಯ. ಪಂಚೇಂದ್ರಿಯಗಳ ಹತೋಟಿಯಿಂದ ದಿವ್ಯತೆಯನ್ನು, ಏಕಾಗ್ರತೆಯನ್ನು ಪಡೆಯಲು ಸಾಧ್ಯ. ಅತಿಯಾದ ನಡಿಗೆ, ಅನಿಯಮಿತವಾದ ಆಹಾರ ಪದ್ಧತಿ, ಅತಿಯಾದ ನಿದ್ರೆ ಇವುಗಳಿಂದ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಯೋಗದಿಂದ ಅದನ್ನು ಸಮತೋಲನದಲ್ಲಿ ಇರಿಸಲು ಸಾಧ್ಯ. ಆದ್ದರಿಂದ ಗುರು ಸಮ್ಮುಖದಲ್ಲಿ ಯೋಗ ಕಲಿತು ಆರೋಗ್ಯವಂತರಾಗಿ ಎಂದು ತಿಳಿಸಿದರು.


ಯೋಗ ರತ್ನ ಗೋಪಾಲಕೃಷ್ಣ ದೇಲಂಪಾಡಿಯವರು ಶಿಬಿರಾರ್ಥಿಗಳಿಗೆ ಪತಂಜಲಿ ಋಷಿ ಮುನಿಗಳು ತಿಳಿಸಿದ ಅಷ್ಟಾಂಗ ಯೋಗದ ಬಗ್ಗೆ ಮಾಹಿತಿಯನ್ನು, ಯೋಗದ ನಿಯಮಗಳನ್ನು ತಿಳಿಸಿದರು. “ಸಮತ್ವಂ ಯೋಗ ಉಚ್ಯತೇ”, ಮನಸ್ಸಿನ ಸಮಸ್ಥಿತಿಯನ್ನು ಸಾಧಿಸುವುದೇ ಯೋಗ, ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ವಿಕಸನಕ್ಕೆ ಯೋಗ ಸಹಕಾರಿ, ಇದರಿಂದ ಶಾಂತಿ, ನೆಮ್ಮದಿ ದೊರಕುತ್ತದೆ ಎಂದು ತಿಳಿಸಿದರು. 


ಯೋಗಾಭ್ಯಾಸವು ದೇಹದ ಸ್ನಾಯುಗಳನ್ನು ಬಲಪಡಿಸುತ್ತದೆ. ಬೆನ್ನುಮೂಳೆ, ತೋಳುಗಳು, ಷೃಷ್ಠಗಳು, ತೊಡೆಗಳು ಹಾಗೂ ಕಾಲುಗಳು ಬಲಯುತವಾಗುತ್ತದೆ. ಭುಜಗಳು, ಎದೆ, ಹೊಟ್ಟೆ, ಕಿಬ್ಬೊಟ್ಟೆಯ ಅಂಗಗಳು ಮತ್ತು ಬೆನ್ನಿನ ಸ್ನಾಯುಗಳಲ್ಲಿ ವಿಸ್ತರಿಸುವುದನ್ನ ಅಭ್ಯಾಸಮಾಡಲು ಉತ್ತಮ ಭಂಗಿಯಾಗಿದೆ. ಕೆಳ ಬೆನ್ನಿನ ಸ್ನಾಯುಗಳು ಬಲಗೊಳ್ಳುತ್ತದೆ. ಸಿಯಾಟಕ ನರಗಳು ಬಲಯುತವಾಗುತ್ತದೆ. ಸೊಂಟನೋವು, ಬೆನ್ನುನೋವು ಸಾಕಷ್ಟು ನಿಯಂತ್ರಣಗೊಳ್ಳುತ್ತದೆ. ಹೊಟ್ಟೆ, ಕರುಳಿನ ಕಾಯಿಲೆಗಳ ಪ್ರತಿಕೂಲ ಪರಿಸ್ಥಿತಿಗಳನ್ನು ನಿವಾರಿಸುತ್ತದೆ. ಬೆನ್ನು ಮೂಳೆಯ ಮತ್ತು ದೇಹದ ಕೆಳಗಿನ ಭಾಗದ ಎಲ್ಲಾ ಅಂಗಗಳನ್ನು ಅನುಕೂಲಕರವಾಗಿ ಸಕ್ರಿಯಗೊಳಿಸುತ್ತದೆ. ಮುಟ್ಟಿನ ಸಮಯದಲ್ಲಿ ಬೆನ್ನುನೋವನ್ನು ನಿವಾರಿಸಬಹುದು ಎಂದು ವಿವರಿಸಿದರು. ದೇಲಂಪಾಡಿಯವರ ಶಿಷ್ಯರಾದ ಸುಮ, ಭಾರತಿ, ಸ್ಕಂದ ಹಾಗೂ  ಚಂದ್ರಹಾಸ ಇವರು ಸಹಕರಿಸಿದರು.


ಶಿಬಿರದಲ್ಲಿ ಸರಳ ವ್ಯಾಯಾಮ, ಸೂರ್ಯನಮಸ್ಕಾರ, ಆಸನಗಳು, ಪ್ರಾಣಾಯಾಮ, ಧ್ಯಾನ ಹಾಗೂ ಮಂತ್ರ ಮುದ್ರೆಗಳನ್ನು ತಿಳಿಸಿಕೊಡಲಾಗುವುದು. ಹೆಚ್ಚಿನ ವಿವರಗಳಿಗೆ- ಮೊಬೈಲ್ : 9448394987


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter





Post a Comment

0 Comments
Post a Comment (0)
To Top