ಮಂಗಳೂರು: ಪ್ರಜಾ ಪ್ರಭುತ್ವದ ಆಡಳಿತ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ನಮ್ಮ ದೇಶದಲ್ಲಿ ಹಳ್ಳಿಯಿಂದ ದಿಲ್ಲಿಯವರೆಗೆ ವಿವಿಧ ಮಟ್ಟದಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಹಾಗೂ ಕೆಲವೊಮ್ಮೆ ಅನಿವಾರ್ಯವಾಗಿ ಅವಧಿಗೆ ಮುನ್ನ ಜರುಗುತ್ತಿರುವ ಚುನಾವಣೆಗಳಲ್ಲಿ ಒಂದರ ನಂತರ ಮತ್ತೊಂದರಲ್ಲಿ ಜನಬಲ, ಜಾತಿಬಲ, ತೋಳ್ಬಲ, ಅನೈತಿಕತೆ ಮುಂತಾದ ಅಪಮೌಲ್ಯಗಳ ಹಾಗೂ ಕೇವಲ ಅಧಿಕಾರ ದಾಹದಿಂದ ಪಕ್ಷಾಂತರ ಮಾಡುವ ತತ್ವ ರಹಿತ ಪಕ್ಷಾಂತರಿಗಳ ಪ್ರಭಾವ ಹೆಚ್ಚಾಗುತ್ತಾ ಬಂದಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ವಿಶ್ರಾಂತ ಹೈಕೋರ್ಟ್ ನ್ಯಾಯಾಧೀಶ ಅರಳಿನಾಗರಾಜ್ ಅಭಿಪ್ರಾಯ ಪಟ್ಟರು.
ಅವರು ನಿನ್ನೆ (28-04-2023) ಮಂಗಳೂರಿನ ಹೊಟೇಲ್ ಉತ್ಸವ ಸಭಾಂಗಣಲ್ಲಿ ರಾಷ್ಟ್ರೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ದಿ ಪ್ರತಿಷ್ಠಾನ (NSCDF) ಮತ್ತು ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ (KSSAP) ಜಂಟಿಯಾಗಿ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಸದ್ಯದಲ್ಲಿಯೇ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದೆ ಮೇಲೆ ಹೇಳಿದಂತಹ ವಿಚಾರಗಳಿಂದ ಮುಕ್ತವಾಗಿ ಚುನಾವಣೆಗಳು ನಡೆಯುವಂತೆ ಮಾಡುವ ಜವಾಬ್ದಾರಿ ಪ್ರಜ್ಞಾವಂತ ಪ್ರಬುದ್ಧ ದೇಶಾಭಿಮಾನಿ ನಾಗರಿಕರ ಕರ್ತವ್ಯವಾಗಿದೆ. ರಾಜಕಾರಣಿಯ ಋಣ ಭಾರವಿಲ್ಲದೆ ಆಮಿಷ ಕ್ಕೊಳಗಾಗದೆ ಮತದಾರ ತಮ್ಮ ಮತವನ್ನು ಮಾರಿಕೊಳ್ಳದೆ ಜವಾಬ್ಧಾರಿಯುತವಾಗಿ ನಡೆಯಬೇಕು ಎಂದು ಹೇಳಿದರು. ಈ ಕರ್ತವ್ಯಗಳಿಂದ ಮತದಾರ ನುಣುಚಿಕೊಂಡರೆ ಮುಂದಿನ ಪೀಳಿಗೆಯವರ ಜೀವನ ನರಕ ಸದೃಶವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದ ಅವರು ಈ ಕರ್ತವ್ಯಗಳನ್ನು ಮರೆತ ಮತದಾರರನ್ನು ದೇವರು ಮತ್ತು ಮುಂದಿನ ಪೀಳಿಗೆ ಎಂದೂ ಕ್ಷಮಿಸುವುದಿಲ್ಲ ಎಂದು ಹೇಳಿದರು.
* ಆಮಿಷಕ್ಕೆ ಒಳಗಾಗಿ ಕ್ಷಣಿಕ ಲಾಭಕ್ಕಾಗಿ ತಮ್ಮ ಅತ್ಯಮೂಲ್ಯ ಮತವನ್ನು ಮಾರಿಕೊಳ್ಳದಿರಿ
* ಋಣಮುಕ್ತತೆಯ ಪರಿಕಲ್ಪನೆಗೆ ಒಳಗಾಗಿ ಅನರ್ಹರಿಗೆ ಮತ ನೀಡಬೇಡಿ.
* ಒಂದು ಸಾರ್ವಜನಿಕ ಸ್ಥಾನಕ್ಕೆ ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡುವ ಅವಕಾಶ ಮತ್ತು ಸ್ವಾತಂತ್ರ್ಯ ನಿಮಗೆ ಲಭಿಸಿದಾಗ ಅತ್ಯುತ್ತಮ ಮತ್ತು ಅರ್ಹ ವ್ಯಕ್ತಿಯನ್ನೇ ಆಯ್ಕೆ ಮಾಡುವುದು ನಿಮ್ಮ ಕರ್ತವ್ಯವಾಗಬೇಕು.
ಇದೇ ಸಂದರ್ಭದಲ್ಲಿ ಎಚ್ಚೆತ್ತ ಮತದಾರ ಪ್ರಜಾತಂತ್ರಕ್ಕಾದಾರ ಎಂಬ ಕಿರು ಹೊತ್ತಿಗೆಯನ್ನು ಬಿಡುಗಡೆಗೊಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಡ್ಯದ ನ್ಯಾಯವಾದಿ ಗುರುಪ್ರಸಾದ್, NSCDF ಅಧ್ಯಕ್ಷ ಗಂಗಾಧರ ಗಾಂಧಿ ಹಾಗೂ KSSAP ಅಧ್ಯಕ್ಷೆ ರಾಣಿ ಪುಷ್ಪಲತಾದೇವಿ ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ