ಎಸ್‌ಡಿಪಿಐ ಜತೆ ಕಾಂಗ್ರೆಸ್ ನಂಟು ನಾಡಿನ ಜನತೆಗೆ ಮಾಡಿದ ದ್ರೋಹ: ಬಿಜೆಪಿ

Upayuktha
0

ಮಂಗಳೂರು: ಕಾಂಗ್ರೆಸ್ ಪಕ್ಷವು ನಿಷೇಧಿತ ಭಯೋತ್ಪಾದಕ ಸಂಘಟನೆ ಪಿಎಫ್‌ಐ ಮತ್ತು ಅದರ ರಾಜಕೀಯ ಅಂಗಪಕ್ಷವಾದ ಎಸ್‌ಡಿಪಿಐ ಜತೆಗೆ ಹೊಂದಿರುವ ಅಪವಿತ್ರ ನಂಟನ್ನು ಚುನಾವಣೆಯ ಸಂದರ್ಭದಲ್ಲಿ ದುರ್ಬಳಕೆ ಮಾಡಿಕೊಳ್ಳುವ ಅಪಾಯವಿದೆ ಎಂದು ಬಿಜೆಪಿ ಹೇಳಿದೆ.


ಬಿಜೆಪಿಯ ರಾಜ್ಯ ವಕ್ತಾರರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಿಎಫ್‌ಐ-ಎಸ್‌ಡಿಪಿಐ-ಕಾಂಗ್ರೆಸ್‌ ನಡುವೆ ನಂಟಿನ ಕುರಿತು ತೀವ್ರ ವಾಗ್ದಾಳಿ ನಡೆಸಿದರು.


ನೂರಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್, ಸೈದ್ಧಾಂತಿಕವಾಗಿ, ರಾಜಕೀಯವಾಗಿ ದಿವಾಳಿ ಎದ್ದಿದೆ ಎಂದರೆ, ದೇಶದ್ರೋಹಿ ಸಂಘಟನೆಗಳ ಜತೆಗೆ ನಂಟು ಹೊಂದಿಯಾದರೂ ಅಧಿಕಾರಕ್ಕೆ ಮರಳಲೇಬೇಕು ಎಂಬ ಹತಾಶ ಮನಸ್ಥಿತಿಗೆ ತಲುಪಿದೆ ಎಂದು ಕ್ಯಾಪ್ಟನ್ ಕಾರ್ಣಿಕ್ ಟೀಕಿಸಿದರು.


ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ನಡೆದ ಹಿಂದೂ ಕಾರ್ಯಕರ್ತರ ಕಗ್ಗೊಲೆಗಳು, ಈ ಕೃತ್ಯಗಳಲ್ಲಿ ಭಾಗಿಯಾಗಿ ಜೈಲು ಸೇರಿದ್ದ 1,700ಕ್ಕೂ ಹೆಚ್ಚು ಪಿಎಫ್‌ಐ ಕಾರ್ಯಕರ್ತರ ಮೇಲಿನ ಕೇಸುಗಳನ್ನು ರದ್ದುಗೊಳಿಸಿದ ಕ್ರಮವನ್ನು ಅವರು ಈ ಸಂದರ್ಭದಲ್ಲಿ ನೆನಪಿಸಿದರು.


ಸ್ವತಃ ಮುಸ್ಲಿಂ ಸಮುದಾಯವೇ ಆಚರಣೆ ಮಾಡದಿರುವ ಟಿಪ್ಪು ಜಯಂತಿಯನ್ನು ಸರಕಾರಿ ಖರ್ಚು ವೆಚ್ಚದಲ್ಲಿ ಆಚರಿಸುವ ಮೂಲಕ ಕೆಟ್ಟ ಪರಂಪರೆ ಹಾಕಿಕೊಟ್ಟಿರುವ ಸಿದ್ದರಾಮಯ್ಯ, ತಮ್ಮ ಆಡಳಿತಾವಧಿಯ ಉದ್ದಕ್ಕೂ ಹಿಂದೂ ವಿರೋಧಿ ನೀತಿಯನ್ನೇ ಅನುಸರಿಸಿದರು. ಅಲ್ಲದೆ ದೇಶದ್ರೋಹಿ ಶಕ್ತಿಗಳು ಸರಕಾರದ ವ್ಯವಸ್ಥೆಗಳ ಮೇಲೆ ದಾಳಿ ನಡೆಸುವುದಕ್ಕೂ ಅವಕಾಶ ಮಾಡಿಕೊಟ್ಟರು. ಸಿಎಎ ವಿರುದ್ಧ ಮಂಗಳೂರು, ಹುಬ್ಬಳ್ಳಿಗಳಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ಪಿಎಫ್‌ಐ-ಎಸ್‌ಡಿಪಿಐ ಕಾರ್ಯಕರ್ತರು ಪೊಲೀಸ್ ಠಾಣೆಗಳ ಮೇಲೆ ಮತ್ತು ಹುಬ್ಬಳ್ಳಿಯ ಮಾರುತಿ ದೇವಸ್ಥಾನದ ಮೇಲೆ ದಾಳಿ ನಡೆಸಿದರೂ ಕ್ರಮ ಕೈಗೊಳ್ಳದೆ ಸುಮ್ಮನಿದ್ದರು ಎಂದು ಕ್ಯಾಪ್ಟನ್ ಕಾರ್ಣಿಕ್ ಹೇಳಿದರು.


ಬೆಂಗಳೂರಿನ ಕೆಜಿಹಳ್ಳಿ- ಡಿಜೆಹಳ್ಳಿ ಗಲಭೆಗಳ ಆರೋಪಿಗಳನ್ನು, ಕುಕ್ಕರ್ ಬಾಂಬ್‌ ಸ್ಫೋಟಿಸಿದ ಮೊಹಮ್ಮದ್ ಶಾರೀಕ್‌ನಂತಹ ಭಯೋತ್ಪಾದಕ ಶಕ್ತಿಗಳನ್ನು 'ನನ್ನ ಬ್ರದರ್ಸ್' ಎಂದು ಹೇಳುವ ಕಾಂಗ್ರೆಸ್‌ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಹೇಳಿಕೆಯೇ ಕಾಂಗ್ರೆಸ್‌ನ ವಿದ್ರೋಹಿ ಮಾನಸಿಕತೆಯನ್ನು ಬಿಂಬಿಸುತ್ತದೆ ಎಂದು ಅವರು ನುಡಿದರು.


2047ರ ವೇಳೆಗೆ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವಾಗಿ ಬದಲಾಯಿಸುವ ದುರಾಲೋಚನೆ ಹೊಂದಿರುವ ಪಿಎಫ್‌ಐ-ಎಸ್‌ಡಿಪಿ ನಂತಹ ಸಂಘಟನೆಗಳ 'ಮಿಷನ್‌ 2047'ಗೆ ಕಾಂಗ್ರೆಸ್ ನೇರವಾಗಿಯೇ ಸಹಾಯ, ಸಹಕಾರ ಮತ್ತು ಬೆಂಬಲವನ್ನು ಒದಗಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು 2047ರ ಹೊತ್ತಿಗೆ ಸಂಪನ್ನಗೊಳ್ಳುವ ಅಮೃತಕಾಲದಲ್ಲಿ ಭಾರತವನ್ನು ವಿಶ್ವದಲ್ಲೇ ಅಗ್ರಗಣ್ಯ ರಾಷ್ಟ್ರವನ್ನಾಗಿ ಮಾಡುವ ಉದಾತ್ತ ಧ್ಯೇಯದಿಂದ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದರೆ, ಕಾಂಗ್ರೆಸ್ ದೇಶದ್ರೋಹಿ ಶಕ್ತಿಗಳ ಮಿಷನ್ 2047'ಗೆ ಬೆಂಬಲ ನೀಡುತ್ತದೆ. ಬರಲಿರುವ ಚುನಾವಣೆಯಲ್ಲಿ ರಾಜ್ಯದ ಜನತೆ ಇಂತಹ ಶಕ್ತಿಗಳಿಗೆ ಸರಿಯಾದ ಪಾಠ ಕಲಿಸಬೇಕು ಎಂದು ಮನವಿ ಮಾಡುವುದಾಗಿ ಕ್ಯಾಪ್ಟನ್ ಕಾರ್ಣಿಕ್ ಹೇಳಿದರು.

ಜಿಲ್ಲಾ ಬಿಜೆಪಿ ವಕ್ತಾರ ಜಗದೀಶ್ ಶೇಣವ,  ಜಿಲ್ಲಾ ಮಾಧ್ಯಮ ಸಂಚಾಲಕ ರಂದೀಪ್ ಕಾಂಚನ್, ಜಿಲ್ಲಾ ವಕ್ತಾರರು ಮತ್ತು ಕಾರ್ಪೊರೇಟರ್ ರಾಧಾಕೃಷ್ಣ ಉರ್ವ ಹಾಗೂ ಬಿಜೆಪಿ ಮುಖಂಡರಾದ ಸಂಜಯ್ ಪ್ರಭು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

********


ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದ ಪ್ರಮುಖ ಅಂಶಗಳು ಇಲ್ಲಿವೆ:

ಕಾಂಗ್ರೆಸ್ ಪಕ್ಷದ ವರಿಷ್ಠ ನಾಯಕರಾದ ಸನ್ಮಾನ್ಯ ಜಿ. ಪರಮೇಶ್ವರ್ ಅವರು ರಾಜಕೀಯ ಬೆಂಬಲಕ್ಕಾಗಿ ಎಸ್‌ಡಿಪಿಐಗೆ ಮಾಡಿರುವ ಬಹಿರಂಗ ಮನವಿ, ಕಾಂಗ್ರೆಸ್ ಪಕ್ಷದ ಪಿಎಫ್‌ಐ ಪರ ನಿಲುವು, ಭಯೋತ್ಪಾದಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಮಾನಸಿಕತೆ ಮತ್ತು ಮುಂದುವರಿದ ಓಲೈಕೆ ರಾಜಕಾರಣಕ್ಕೆ ಜೀವಂತ ಸಾಕ್ಷಿಯಾಗಿದೆ. ಅತ್ಯಂತ ಪ್ರಮುಖವಾದ ಈ ಕಾಲಘಟ್ಟದಲ್ಲಿ, ರಾಜ್ಯದ ಜನತೆ ತಮ್ಮ ಮತ್ತು ತಮ್ಮ ಮುಂದಿನ ಜನಾಂಗಗಳ ಭವಿಷ್ಯವನ್ನು ನಿರ್ಣಯಿಸುವ ಚುನಾವಣೆಯ ಈ ಸಂದರ್ಭದಲ್ಲಿ, ನಿಷೇಧಿತ ಭಯೋತ್ಪಾದಕ ಸಂಘಟನೆ ಪಿಎಫ್‌ಐ ನೊಂದಿಗೆ ಎಸ್‌ಡಿಪಿಐ ಗಿರುವ ನಿಕಟ ಸಂಬಂಧವನ್ನು ತಿಳಿದೂ ತಿಳಿದೂ ಈ ಸಂಘಟನೆಗಳಿಂದ ಕಾಂಗ್ರೆಸ್ ಪಕ್ಷ ರಾಜಕೀಯ ಬೆಂಬಲ ಕೋರಿರುವುದು ರಾಜ್ಯದ ಜನತೆಗೆ ತೀವ್ರ ಆಘಾತ ನೀಡಿದೆ. ಭಾರತೀಯ ಜನತಾ ಪಾರ್ಟಿಯು ಕಾಂಗ್ರೆಸ್ ಪಕ್ಷದ ರಾಷ್ಟ್ರ ವಿರೋಧಿ ಸಂಘಟನೆಗಳ ಜತೆಗಿನ ಸ್ವಾರ್ಥದ ರಾಜಕಾರಣದ ನಿಲುವನ್ನು ತೀವ್ರವಾಗಿ ಖಂಡಿಸುತ್ತದೆ.


ಕಾಂಗ್ರೆಸ್ ಪಕ್ಷ ತನ್ನ ಸ್ವಾರ್ಥದ ರಾಜಕಾರಣಕ್ಕಾಗಿ ಕರ್ನಾಟಕವನ್ನು ತಮ್ಮ ಪ್ರಯೋಗಾಲಯವನ್ನಾಗಿ ಮಾಡಿರುವುದು ಸರ್ವಥಾ ಖಂಡನೀಯ. ಸನ್ಮಾನ್ಯ ಸಿದ್ದರಾಮಯ್ಯರವರ ಸರಕಾರದ ಅವಧಿಯಲ್ಲಿ ನಡೆದ ರುದ್ರೇಶ್, ಪ್ರಶಾಂತ್ ಪೂಜಾರಿ, ಶರತ್ ಮಡಿವಾಳ, ದೀಪಕ್ ರಾವ್ ಸೇರಿದಂತೆ 23 ಹಿಂದೂ ಕಾರ್ಯಕರ್ತರ ಹತ್ಯೆ ಮತ್ತು ಆ ಸಮುದಾಯವೇ ಒಪ್ಪದಿರುವ ಜಯಂತಿಯ ಆಚರಣೆಯ ನೆಪದಲ್ಲಿ ಓಲೈಕೆಯ ಮುಂದುವರಿದ ಭಾಗವಾಗಿ ಸರಕಾರಿ ಖರ್ಚು ವೆಚ್ಚದಲ್ಲಿ ಟಿಪ್ಪು ಜಯಂತಿ ಆಚರಣೆಯ ನಿರ್ಣಯ ಕಾಂಗ್ರೆಸ್ ಪಕ್ಷದ ಮಿತಿಮೀರಿದ ತುಷ್ಟೀಕರಣದ ರಾಜಕೀಯಕ್ಕೊಂದು ಜ್ವಲಂತ ಉದಾಹರಣೆ. ಕರ್ನಾಟಕದ ಜನತೆ ಕಾಂಗ್ರೆಸ್‌ನ ಈ ಅಪಾಯಕಾರಿ ಪ್ರಯೋಗಗಳ ಬಲಿಪಶುಗಳಾಗಿರುವುದು ದೊಡ್ಡ ದುರಂತ.


ಸುಮಾರು 1700ಕ್ಕೂ ಮಿಕ್ಕಿ ಪಿಎಫ್‌ಐ ಕಾರ್ಯಕರ್ತರ ಬಿಡುಗಡೆ, ಪಿಎಫ್‌ಐ ಮತ್ತು ಕೆಎಫ್‌ಡಿ ನಡುವಿನ ಸಂಬಂಧ ಹಾಗೂ ಅನೇಕ ವಿಧ್ವಂಸಕ ಕೃತ್ಯಗಳಲ್ಲಿ ಈ ಎರಡೂ ಸಂಘಟನೆಗಳ ಕೈವಾಡವಿದ್ದರೂ ಕಾಂಗ್ರೆಸ್ ಈ ಸಂಘಟನೆಗಳಿಗೆ ನೀಡುತ್ತಿರುವ ಬೆಂಬಲ, CAA ಕಾಯ್ದೆಯ ವಿರುದ್ಧದ ಪಿಎಫ್‌ಐ ಮತ್ತು ಎಸ್‌ಡಿಪಿಐ ಸಂಘಟನೆಗಳಿಂದ ಪ್ರಾಯೋಜಿತವಾದ ಹಿಂಸಾಚಾರ ಮತ್ತು ಪೂರ್ವ ಯೋಜಿತ ಧಾಳಿಯ ಸಂದರ್ಭದಲ್ಲಿ ಕಾಂಗ್ರೆಸ್‌ ನೀಡಿದ ಬೆಂಬಲ, ಡಿಜೆ ಹಳ್ಳಿ- ಕೆಜಿ ಹಳ್ಳಿ ಘಟನೆಗಳ ಸಂದರ್ಭದಲ್ಲಿ ದಲಿತ ಶಾಸಕರ ಮನೆಯ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ಕಾಂಗ್ರೆಸ್‌ನ ಪ್ರಶ್ನಾರ್ಹ ಮೌನ, ಮಂಗಳೂರಿನಲ್ಲಿ ನಡೆದ ಸಿಎಎ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸ್ ಮತ್ತು ಪೊಲೀಸ್ ವಾಹನಗಳ ಮೇಲೆ ದಾಳಿ, ಹುಬ್ಬಳ್ಳಿಯಲ್ಲಿ ನಡೆದ ಪೊಲೀಸ್ ಠಾಣೆಗಳ ಮೇಲೆ ಮತ್ತು ಪೊಲೀಸ್‌ ವಾಹನಗಳ ಮೇಲೆ ನಡೆದ ದಾಳಿ ಹಾಗೂ ಮಾರುತಿ ಗುಡಿ ಧ್ವಂಸ- ಈ  ಸಂದರ್ಭಗಳಲ್ಲಿ ಕಾಂಗ್ರೆಸ್ ಪಕ್ಷದ ನಿಲುವು  ಪ್ರಶ್ನಾರ್ಹ. ಕೆಜಿ ಹಳ್ಳಿ- ಡಿಜೆಹಳ್ಳಿಯಲ್ಲಿ ನಡೆದ ವಿಧ್ವಂಸಕ ಕೃತ್ಯಗಳ ದಾಳಿಕೋರರನ್ನು "ನನ್ನ ಸಹೋದರರು" ಎಂದು ಕರೆದಿರುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಭಂಡತನ ಹಾಗೂ ಕುಕ್ಕರ್ ಬಾಂಬ್ ಸ್ಪೋಟದ ಸಂಚು ಹೂಡಿದ ಐಸಿಸ್‌ ಸಂಪರ್ಕ ಇರುವ ಶಾರೀಕ್‌ನನ್ನು ಅಮಾಯಕ ಎಂದು ಕರೆಯುವ ಕಾಂಗ್ರೆಸ್‌ ಪಕ್ಷದ ನಿಲುವು ದೇಶದ ಜನತೆಗೆ ಆಘಾತ ನೀಡಿದೆ.  ಈ ಸಂಘಟನೆಗಳ ಪ್ರಜಾಪ್ರಭುತ್ವ ವಿರೋಧಿ ಮತ್ತು ರಾಷ್ಟ್ರ ವಿರೋಧಿ ಮಾನಸಿಕತೆಯನ್ನು ಕಾಂಗ್ರೆಸ್‌ ಪಕ್ಷ ತಿಳಿದಿದ್ದೂ, ಕೇವಲ ತನ್ನ ಸ್ವಾರ್ಥಕ್ಕಾಗಿ ಎಸ್‌ಡಿಪಿಐನ ಬೆಂಬಲ ಕೋರಿ ಹೊಂದಾಣಿಕೆಯ ರಾಜಕೀಯಕ್ಕೆ ಮುಂದಾಗಿರುವುದು ಚುನಾವಣೆಯ ಸಂದರ್ಭದಲ್ಲಿ ರಾಜ್ಯದ ಜನತೆಯಿಂದ ತಿರಸ್ಕರಿಸಲ್ಪಡುವ ಎಲ್ಲಾ ಸಾಧ್ಯತೆಗಳನ್ನು ಮನಗಂಡು ಹತಾಶರಾಗಿರುವುದಕ್ಕೆ ಸಾಕ್ಷಿಯಾಗಿದೆ.


ನಮ್ಮ ರಾಜ್ಯದ ಮಹಾಜನತೆ ಕಾಂಗ್ರೆಸ್‌ನ ಒಡೆದಾಳುವ ನೀತಿ, ರಾಷ್ಟ್ರ ವಿರೋಧಿ ಚಿಂತನೆ, ತುಷ್ಟೀಕರಣದ ರಾಜಕಾರಣ, ಹಾಗೂ ವೋಟ್ ಬ್ಯಾಂಕ್ ರಾಜಕೀಯವನ್ನು ಚೆನ್ನಾಗಿ ತಿಳಿದಿದ್ದು, ಈಗಾಗಲೇ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಲು ನಿರ್ಣಯಿಸಿದ್ದರಿಂದ ಹತಾಶ ಕಾಂಗ್ರೆಸ್ ಈ ಒಡಂಬಡಿಕೆಯ ಮತ್ತು ಓಲೈಕೆಯ ರಾಜಕಾರಣಕ್ಕೆ ಮುಂದಾಗಿರುವುದು ಸ್ಪಷ್ಟ. 2047ರ ವೇಳೆಗೆ ಭಾರತದಲ್ಲಿ ಇಸ್ಲಾಮಿಕ್ ಸರಕಾರವನ್ನು ಸ್ಥಾಪಿಸುವ 'ಪಿಎಫ್‌ಐ ನ ಮಿಷನ್ 2047' ಅನ್ನು ಕಾಂಗ್ರೆಸ್ ಪಕ್ಷ ಅನುಮೋದಿಸುತ್ತಿರುವುದು ಇದರಿಂದ ಸ್ಪಷ್ಟವಾಗಿದೆ. 


ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 2047ಕ್ಕೆ ಕೊನೆಗೊಳ್ಳಲಿರುವ ಅಮೃತ ಕಾಲದಲ್ಲಿ ನಮ್ಮ ದೇಶವನ್ನು ವಿಶ್ವದ ಅಗ್ರಮಾನ್ಯ ರಾಷ್ಟ್ರವನ್ನಾಗಿಸಲು ಪ್ರಯತ್ನಿಸುತ್ತಿದ್ದರೆ, ಕಾಂಗ್ರೆಸ್ ಪಕ್ಷವು ನಿಷೇಧಿತ ಪಿಎಫ್‌ಐ ಬೆಂಬಲಿತ ಎಸ್‌ಡಿಪಿಐ ಜತೆ ಕೈಜೋಡಿಸಿ ಅವರ ಮಿಷನ್ 2047ಕ್ಕೆ ಬೆಂಬಲ ನೀಡುತ್ತಿರುವುದು ಅತ್ಯಂತ ವಿಷಾದನೀಯ.


********

ಕರಾವಳಿ ಕರ್ನಾಟಕದಲ್ಲಿನ ಭಯೋತ್ಪಾದನೆಗೆ ಸಂಬಂಧಿಸಿದ ಕೆಲವು ಮುಖ್ಯ ಘಟನೆಗಳು


2008- ಬಾಂಬ್ ತಯಾರಿಕೆಯಲ್ಲಿ ತೊಡಗಿದ್ದ ಐದು ಜನರನ್ನು ಉಳ್ಳಾಲದಲ್ಲಿ ಬಂಧಿಸಲಾಯಿತು.

2013- ರಿಯಾಝ್ ಭಟ್ಕಳ್, ಆತನ ಸಹೋದರ ಮತ್ತು ಇತರ ಮೂವರನ್ನು ಮಂಗಳೂರಿನ ಅತ್ತಾವರದ ಫ್ಲಾಟ್‌ ಒಂದರಲ್ಲಿ ಬಾಂಬ್ ತಯಾರಿಸಲು ಅಗತ್ಯವಿರುವ ಸಾಮಗ್ರಿಗಳೊಂದಿಗೆ ಬಂಧಿಸಲಾಯ್ತು,

2013- ಬಿಹಾರದ ಪಾಟ್ನಾದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟ್ಯಂತರ ರೂ ಹಣಕಾಸು ವಹಿವಾಟು ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಆಯೇಶಾ ಮತ್ತು ಜುಬೈರ್‍‌ನನ್ನು ಬಿಹಾರದ ಪೊಲೀಸರು ಮಂಗಳೂರಿನಿಂದ ಬಂಧಿಸಿದರು.

2015- ಮಂಗಳೂರು ವಿಮಾನ ನಿಲ್ದಾಣದಲ್ಲಿ ಎನ್‌ಐಎ ಅಧಿಕಾರಿಗಳು ಭಟ್ಕಳದ ರಿಯಾಜ್‌ ಸಿದ್ಧಿಕಿಯನ್ನು ಬಂಧಿಸಿದ್ದರು.

2016- ಎನ್‌ಐಎ ಅಧಿಕಾರಿಗಳು ಅಜ್ಮಲ್‌ ಹೂಡಾನನ್ನು ಮಂಗಳೂರು ಪರಿಸರದಲ್ಲಿ ಬಂಧಿಸಿದ್ದರು.

2020- ಕುಕ್ಕರ್ ಬಾಂಬ್ ಸ್ಫೋಟದ ಮೊಹಮ್ಮದ್ ಶಾರೀಕ್‌ನನ್ನು ಐಸಿಸ್‌ಗೆ ಸಂಬಂಧಿಸಿದ ದೇಶವಿರೋಧಿ ಗೋಡೆ ಬರಹಕ್ಕಾಗಿ ಬಂಧಿಸಲಾಗಿತ್ತು.

2021- ಹಿಂದಿನ ಉಳ್ಳಾಲ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರ ಸೊಸೆ ಮರಿಯಂ ಳನ್ನು ಐಸಿಸ್‌ ಜತೆಗಿನ ನಿಕಟ ಸಂಪರ್ಕಕ್ಕಾಗಿ ಎನ್‌ಐಎ ಬಂಧಿಸಿತ್ತು.

2022- ಉಡುಪಿ ಜಿಲ್ಲೆಯ ಕಾಂಗ್ರೆಸ್ ಘಟಕವೊಂದರ ಅಧ್ಯಕ್ಷ ತಾಜುದ್ದೀನ್‌ ಶೇಖ್‌ ಅವರ ಮಗ ರಿಶಾನ್‌ ಶೇಖ್‌ನನ್ನು ಭಯೋತ್ಪಾದಕ ಸಂಘಟನೆಯ ನಂಟಿನೊಂದಿಗೆ ಬಂಧಿಸಲಾಗಿತ್ತು. ತೊಕ್ಕೊಟ್ಟಿನ ಮಾಝೀನ್‌ ಅಬ್ದುಲ್ ರಹಿಮಾನ್ ಹಾಗೂ ಮಾಝೀನ್ ಮುನೀರ್‍‌ ನನ್ನು ಟ್ರಯಲ್ ಬಾಂಬ್‌ ಕೇಸಿನಲ್ಲಿ ಬಂಧಿಸಲಾಗಿತ್ತು.

***********


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top